ನೆಲದ ಮಾತು

ಬೆಂಗಳೂರಲ್ಲೂ ಜಾಗೋ ಭಾರತ್!

Posted in ನಮ್ಮ ನಮ್ಮ ನಡುವೆ by Chakravarty on January 31, 2009

ವಿಜಯನಗರದಲ್ಲಿ ವಿಶೇಷ ಕಾರ್ಯಕ್ರಮಗಳು…

ದಿನಾಂಕ : ೦೬.೦೨.೨೦೦೯ರ ಶುಕ್ರವಾರ
ಸಮಯ: ಸಂಜೆ ೬ರಿಂದ ೯ರವರೆಗೆ
ಸ್ಥಳ : ರಾಮಕೃಷ್ಣ ಶಾರದಾ ಶಕ್ತಿ ಕೇಂದ್ರ
೧೪೩೬, ಕಾಳೀಮಂದಿರ ರಸ್ತೆ, ಚಂದ್ರಾ ಬಡಾವಣೆ.
ಕಾರ್ಯಕ್ರಮ: ರಾಮಕೃಷ್ಣ ಸ್ಮರಣೋತ್ಸವದ ಪ್ರಯುಕ್ತ ‘ಜಾಗೋ ಭಾರತ್’ ‘ಮಾತು- ಗೀತೆ’ಯ ಕಾರ್ಯಕ್ರಮ.

ದೇಶ ಭಕ್ತಿ ಕನ್ನಡ/ ಹಿಂದೀ ಗೀತೆಗಳು ಮತ್ತು ದೇಶ ಭಕ್ತಿ ಸಾರುವ ಚಲನ ಚಿತ್ರ ಗೀತೆಗಳ ಗಾಯನ- ಖ್ಯಾತ ಗಯಕರಾದ ಗಣೇಶ್ ದೇಸಾಯಿ, ಮಾಲಿನೀ ಕೇಶವ ಪ್ರಸಾದ್ ಮತ್ತು ಸಂಗಡಿಗರಿಂದ.
ಕಥನ- ನಿರೂಪಣೆ- ಚಕ್ರವರ್ತಿ ಸೂಲಿಬೆಲೆ.
~
ದಿನಾಂಕ : ೦೭.೦೨.೨೦೦೯ರ ಶನಿವಾರ
ಸಮಯ: ಬೆಳಗ್ಗೆ ೧೦ ಗಂಟೆಗೆ
ಸ್ಥಳ : ರಾಮಕೃಷ್ಣ ಶಾರದಾ ಶಕ್ತಿ ಕೇಂದ್ರ
೧೪೩೬, ಕಾಳೀಮಂದಿರ ರಸ್ತೆ, ಚಂದ್ರಾ ಬಡಾವಣೆ.
ಕಾರ್ಯಕ್ರಮ: ಸ್ವಾಮಿ ವಿವೇಕಾನಂದ ಸ್ಮರಣೋತ್ಸವದ ಪ್ರಯುಕ್ತ ಚಕ್ರವರ್ತಿ ಸೂಲಿಬೆಲೆಯವರಿಂದ ಉಪನ್ಯಾಸ- ವಿಶೇಷ ಕಾರ್ಯಕ್ರಮ

ಕಾಶ್ಮೀರವಿಂದು ಹೊತ್ತುರಿಯುತ್ತಿರುವುದು ಏಕೆ ಗೊತ್ತೆ?

Posted in ದಿಲ್ ಹೈ ಹಿಂದೂಸ್ಥಾನಿ by Chakravarty on January 15, 2009

ನೆಹರೂ `ಜಾತ್ಯತೀತ’ ಮನಸಿನ ಬಗ್ಗೆ ಈಗಾಗಲೇ ತಿಳಿದಿದ್ದಾಗಿದೆ.  ಪರಧರ್ಮ ಸಹಿಷ್ಣುತೆ ಹಿಂದೂವಿನ ಪರಮಗುಣ. ಆದರೆ ಜಾತ್ಯತೀತತೆಯ ಹಿನ್ನೆಲೆಯಲ್ಲಿ ಅವರ ಮನದಲ್ಲಿ ಹಿಂದೂ ದ್ವೇಷ ಮನೆ ಮಾಡಿತ್ತಲ್ಲ ಅದನ್ನು ಮಾತ್ರ ಸಹಿಸುವುದು ಸಾಧ್ಯವೇ ಇಲ್ಲ. ಕಾಶ್ಮೀರದ ವಿಚಾರದಲ್ಲಾದದ್ದೂ ಅದೇ. ನೆಹರೂರ ಮೊಂಡುತನ ಇಡೀ ಕಾಶ್ಮೀರವನ್ನು ಉರಿಯುವ ಕುಂಡವಾಗಿಸಿಬಿಟ್ಟಿತು. ಸ್ವಾತಂತ್ರ್ಯಾನಂತರ ಸರ್ದಾರ ಪಟೇಲರು ರಾಜ್ಯವಿಲೀನ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡು ಅದನ್ನು ಯಶಸ್ವಿಯಾಗಿ ಮುಗಿಸಿದರು. ಹೈದರಾಬಾದ್‌ನ ನಿಜಾಮ ಕೂಡ ಮಿಸುಕಾಡದೇ ಶರಣಾಗುವಂತೆ ಮಾಡಿದ್ದು ಪಟೇಲರ ಬುದ್ಧಿಮತ್ತೆಗೆ ಸಾಕ್ಷಿ. ನೆಹರೂ ಕಾಶ್ಮೀರದ ವಿಲೀನವನ್ನು ತಾನೇ ಮಾಡುವುದಾಗಿ ಪಣತೊಟ್ಟು ಅದನ್ನು ಉತ್ತರಿಸಲಾಗದ ಪ್ರಶ್ನೆಯಾಗಿ ಉಳಿಸಿಬಿಟ್ಟರು! ಕಾಶ್ಮೀರ ಮಹಾರಾಜ ಹರಿಸಿಂಗರ ರಾಜ್ಯವಾಗಿತ್ತು. ಅಲ್ಲಿನ ಪ್ರಜೆಗಳಲ್ಲಿ ಬಹುಪಾಲು ಮುಸಲ್ಮಾನರೇ. ಮುಸಲ್ಮಾನರನ್ನು ಆಳುವ ಹಿಂದೂ ರಾಜ ಎಂದರೆ ನೆಹರೂರ ಜಾತ್ಯತೀತ ಮನಸ್ಸು ಸಹಿಸುವುದು ಹೇಗೆ ಹೇಳಿ. ಅವರು ಮೊದಲಿನಿಂದಲೂ ರಾಜನ ವಿರೋಧಿ ಬಣದಲ್ಲೇ ನಿಂತಿದ್ದರು. ಅತ್ತ ಕಾಶ್ಮೀರದಲ್ಲಿ ಮಹಾರಾಜರನ್ನು ಪಟ್ಟದಿಂದಿಳಿಸಿ, ರಾಜ್ಯವನ್ನೇ ಪಾಕಿಸ್ಥಾನದೊಂದಿಗೆ ವಿಲೀನಗೊಳಿಸಬೇಕೆಂಬ ತವಕ ನೆಹರೂರ ಆಪ್ತಮಿತ್ರ ಶೇಕ್ ಮೊಹಮ್ಮದ್ ಅಬ್ದುಲ್ಲಾರಿಗಿತ್ತು. ನ್ಯಾಶನಲ್ ಕಾನ್ಫರೆನ್ಸ್ ಎಂಬ ಪಾರ್ಟಿಯನ್ನು ಹುಟ್ಟುಹಾಕಿ ಅದರ ಮೂಲಕ ಮಹಾರಾಜರಿಗೆ ‘ಕಾಶ್ಮೀರ ಬಿಟ್ಟು ತೊಲಗಿ’ ಎನ್ನುವ ಆದೇಶ ನೀಡುವ ಚಳವಳಿಯನ್ನು ಶೇಕ್ ಸಾಹೇಬರು ಆರಂಭಿಸಿದ್ದರು. ‘ನಾವು ಈವರೆಗೂ ನೊಂದಿದ್ದು ಸಾಕು. ಪ್ರತಿಭಟಿಸುವ ಸಮಯ ಬಂದೇಬಿಟ್ಟಿದೆ. ನಾವೆಲ್ಲ ಗುಲಾಮಿತನದ ವಿರುದ್ಧ ಹೋರಾಡಲು ಜಿಹಾದಿನ ಸೈನಿಕರಾಗಬೇಕು. ಗಂಡು-ಹೆಣ್ಣು-ಮಕ್ಕಳು-ವೃದ್ಧರು ಯಾವೊಂದೂ ಭೇದವಿಲ್ಲದೇ ಪ್ರತಿಯೊಬ್ಬರೂ ಕಾಶ್ಮೀರ ಬಿಟ್ಟು ತೊಲಗುವ ಘೋಷಣೆ ಕೂಗಬೇಕು. ಕಾಶ್ಮೀರ ರಾಷ್ಟ್ರ ನಿರ್ಮಾಣವಾಗಬೇಕು’ ಎಂಬ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ್ದರು! ಈ ಮಾತುಗಳಿಂದ ಕುಪಿತರಾದ ಮಹಾರಾಜರು, ರಾಜದ್ರೋಹದ ಆಪಾದನೆಯ ಮೇಲೆ ಶೇಕ್ ಅಬ್ದುಲ್ಲಾ ಮತ್ತು ಅವರ ಪಕ್ಷದ ಇತರ ಸದಸ್ಯರನ್ನು ಬಂಧಿಸಿ ಸೆರೆಮನೆಗೆ ತಳ್ಳಿದರು. ನೆಹರೂ ಕೋಪಾವಿಷ್ಟರಾದರು. ಗೆಳೆಯನನ್ನು ಜೈಲಿಗೆ ಅಟ್ಟುವುದನ್ನು ಸಹಿಸುವುದಾದರೂ ಹೇಗೆ? ಕೂಡಲೇ ನೆಹರೂ ಮಹಾರಾಜರಿಗೆ ಪಂಥಾಹ್ವಾನವಿತ್ತರು! ಈ ಬಂಧನದ ವಿರುದ್ಧ ಪ್ರತಿಭಟಿಸಲಿಕ್ಕಾಗಿಯೇ, ಕಾಶ್ಮೀರ ಗಡಿಯನ್ನು ದಾಟುತ್ತೇನೆಂದು ಘೋಷಿಸಿಬಿಟ್ಟರು. ಮಹಾರಾಜರು ನಿಷೇಧ ಹೇರಿದ ನಂತರವೂ ಕಾಶ್ಮೀರ ಗಡಿ ದಾಟಿದ ಉದ್ಧಟತನಕ್ಕಾಗಿ ಅವರು ನೆಹರೂರನ್ನು ಬಂಧಿಸಲೇಬೇಕಾಯಿತು.

ಮೊದಲೇ ವೈಮನಸ್ಸುಗಳ ಆಗರವಾಗಿದ್ದ ನೆಹರೂ – ಮಹಾರಾಜರ ಸಂಬಂಧ ಈಗ ಮತ್ತಷ್ಟು ಹದಗೆಟ್ಟಿತು. ಆದರೆ ಕಾಂಗ್ರೆಸ್ಸಿನ ಕಾರ್ಯಕಾರಿ ಸಮಿತಿ ನೀಡಿದ ತೀಕ್ಷ್ಣ ಆದೇಶದಿಂದಾಗಿ ನೆಹರೂ ಕಾಶ್ಮೀರದಿಂದ ಅನಿವಾರ್ಯವಾಗಿ ಮರಳಬೇಕಾಯಿತು. ದೇಶದ ಮಹಾನಾಯಕರುಗಳ ಕೃಪಾಕಟಾಕ್ಷವಿದ್ದ ನೆಹರೂರ ಆಟವೇ ಮಹಾರಾಜರ ಮುಂದೆ ಸಾಗದಿದ್ದಾಗ ಇನ್ನು ತನ್ನದೇನು ಲೆಕ್ಕ? ಎಂದರಿತ ಶೇಕ್ ಅಬ್ದುಲ್ಲಾ ಮಹಾರಾಜರಿಗೊಂದು ಕ್ಷಮಾಪಣಾ ಪತ್ರ ಬರೆದರು. ‘ನಾನು ಮಹಾರಾಜರಿಗೆ ವೈಯಕ್ತಿಕವಾಗಿ ಅಥವಾ ಸಿಂಹಾಸನಕ್ಕೆ ಯಾವುದೇ ದ್ರೋಹ ಬಗೆದಿಲ್ಲವೆಂದು ಈ ಮೂಲಕ ದೃಢಪಡಿಸುತ್ತೇನೆ. ಇನ್ನು ಮುಂದೆ ‘ನನ್ನ ಮತ್ತು ಸಂಘಟನೆಯ ಸಂಪೂರ್ಣ ಸಹಕಾರವನ್ನು ನಿಮಗೆ ನೀಡುತ್ತೇನೆ. ಯಾವುದೇ ವ್ಯಕ್ತಿ ಅಥವಾ ಸಂಘಟನೆ ಮಹಾರಾಜರ ಅಥವಾ ರಾಜ್ಯದ ವಿರುದ್ಧ ಕೆಲಸ ಮಾಡಿದರೆ ಅಂತಹವರನ್ನೇ ನಮ್ಮ ಬದ್ಧವೈರಿಗಳೆಂದು ಭಾವಿಸುತ್ತೇವೆ’ ಎಂದೂ ಹೇಳಿಕೊಂಡರು. ಇತ್ತ ಕಾಶ್ಮೀರಿಗಳೇ ಗೌರವಿಸದ ನ್ಯಾಶನಲ್ ಕಾನ್ಫರೆನ್ಸ್‌ನ್ನು ರಾಷ್ಟ್ರೀಯ ಸ್ತರಕ್ಕೇರಿಸುವ ಮೂರ್ಖ ಸಾಹಸವನ್ನು ನೆಹರೂ ಶುರುವಿಟ್ಟಿದ್ದರು. ‘ಶೇಕ್ ಅಬ್ದುಲ್ಲಾರ ನ್ಯಾಶನಲ್ ಕಾನ್ಫರೆನ್ಸ್ ನಿಜವಾಗಲೂ ರಾಷ್ಟ್ರೀಯ ಸಂಸ್ಥೆ. ಹೀಗಾಗಿಯೇ ಕಾಶ್ಮೀರಿ ಪಂಡಿತರು ಶೇಕ್ ಅಬ್ದುಲ್ಲಾರೊಂದಿಗೆ ಕೈಜೋಡಿಸಿದರೆ ಮಾತ್ರ ಅವರ ಮಾತಿಗೆ ಬೆಲೆ ಬರುತ್ತದೆ.ಇಲ್ಲವಾದಲ್ಲಿ ಅವರನ್ನು ರಕ್ಷಿಸುವವರು ಯಾರೂ ಇರುವುದಿಲ್ಲ’ ಎಂದು ಆಗಾಗ ಹಲುಬುತ್ತಲೇ ಇರುತ್ತಿದ್ದರು. ಸ್ವತಃ ಪಂಡಿತರ ಕುಲದವರಾಗಿ, ಕಾಶ್ಮೀರದಲ್ಲಿ ಪಂಡಿತರ ಮೇಲೆ ಮುಸಲ್ಮಾನರು ನಡೆಸಿದ್ದ ಅತ್ಯಾಚಾರವನ್ನು ಕಂಡಿದ್ದ ನೆಹರೂಗೆ ಈ ಮಾತು ಹೇಳುವ ಮನಸ್ಸಾದರೂ ಎಲ್ಲಿಂದ ಬಂತೋ? ದೇವರೇ ಬಲ್ಲ. ಆದರೆ ಅವರ ಇಂತಹ ಮಾತುಗಳಿಂದಾಗಿಯೇ ಮಹಾರಾಜಾ ಹರಿಸಿಂಗರು ಅಕ್ಷರಶಃ ತುಮುಲಕ್ಕೆ ಬಿದ್ದುದು. ಹಿಂದೂಗಳ ಪವಿತ್ರ ದೇಶ ಭಾರತವನ್ನು ಬಿಟ್ಟು ಪಾಕಿಸ್ಥಾನವನ್ನು ಸೇರಿಬಿಡುವ ಆಲೋಚನೆ ಅವರ ಮನ ಹೊಕ್ಕಿದ್ದು!, ನಾಲ್ಕಾರು ತಿಂಗಳುಗಳ ಕಾಲವಂತೂ ಮಹಾರಾಜರು ಅಕ್ಷರಶಃ ಚಿಂತಾಮಗ್ನರಾಗಿಯೇ ಇದ್ದುಬಿಟ್ಟಿದ್ದರು.

ಒಂದೆಡೆ ಮಾತೃಧರ್ಮದ ಸೆಳೆತ, ಇನ್ನೊಂದೆಡೆ ವಿಲೀನಕ್ಕೆ ಒಪ್ಪಿಗೆ ಕೊಟ್ಟರೂ ಕಾಡುವ ನೆಹರೂರ ದರ್ಪ, ಮತ್ತೊಂದೆಡೆ ಮೌಂಟ್‌ಬ್ಯಾಟನ್ ಮೂಲಕ ಪಾಕಿಸ್ಥಾನ ಸೇರ್ಪಡೆಗೆ ಬರುತ್ತಿರುವ ಆಮಿಷ. ಯಾವುದನ್ನು ಒಪ್ಪಬೇಕು, ಯಾವುದನ್ನು ಬಿಡಬೇಕು ಎಂಬುದೇ ಅವರಿಗೆ ತಿಳಿಯದಾಯಿತು. ನೆಹರೂರ ನಂಬಿಕಸ್ತ ಗೆಳೆಯ ಮೌಂಟ್‌ಬ್ಯಾಟನ್ ಸಾಧ್ಯವಾದಷ್ಟು ಕಾಶ್ಮೀರ ಪಾಕಿಸ್ಥಾನಕ್ಕೆ ಸೇರುವಂತೆ ಪ್ರಯತ್ನ ನಡೆಸಿದ್ದ. ಮಹಾರಾಜನನ್ನು ಒಲಿಸಿಕೊಳ್ಳಬಹುದಾದ ಹೆಜ್ಜೆಯನ್ನು ಜಿನ್ನಾರಿಗೆ ಹೇಳಿಕೊಡುತ್ತಿದ್ದ. ಅಷ್ಟೇ ಅಲ್ಲ. ನಿಮ್ಮ ಯಾವುದೇ ನಿರ್ಧಾರವನ್ನು ಆಗಸ್ಟ್ ೧೪ರ ವರೆಗೆ ತಿಳಿಸಲೇಬೇಡಿ ಎಂದು ಮಹಾರಾಜರಿಗೆ ತಾಕೀತು ಮಾಡಿದ್ದ. ತೆರೆ-ಮರೆಯ ಹಿಂದೆ ಮೌಂಟ್‌ಬ್ಯಾಟನ್ ಈ ರೀತಿಯ ನಾಟಕ ಆಡುತ್ತಿರಬೇಕಾದರೆ, ನೆಹರೂ ಮಾತ್ರ ಮೌಂಟ್‌ಬ್ಯಾಟನ್‌ನ ಕುತಂತ್ರ ಅರಿಯದೇ ಮಂಕಾದವರಂತಿದ್ದರು ! ಕಾಶ್ಮೀರವನ್ನು ಭಾರತದೊಂದಿಗೆ ವಿಲೀನಗೊಳಿಸಲು ಮೌಂಟ್‌ಬ್ಯಾಟನ್ ಅಪಾರ ಶ್ರಮವಹಿಸುತ್ತಿದ್ದಾರೆ ಎಂದೇ ನಂಬಿದ್ದರು. ಇತ್ತ ಮೌಂಟ್‌ಬ್ಯಾಟನ್ ತನ್ನ ಎಲ್ಲ ಪ್ರಯತ್ನಗಳೂ ವಿಫಲವಾಗುವ ಹಂತಕ್ಕೆ ಬಂದಾಗ ಮಹಾರಾಜರಿಗೂ-ನೆಹರೂಗೂ ನಡುವಣ ಸಂಬಂಧ ಸರಿಯಿಲ್ಲ ಎಂಬುದನ್ನೇ ಮುಂದಿರಿಸಿಕೊಂಡು ಕಾಶ್ಮೀರ, ಪಾಕಿಸ್ಥಾನದೊಂದಿಗೆ ವಿಲೀನಗೊಂಡುಬಿಡುತ್ತಿದೆ ಎಂದು ಘೋಷಿಸಿದ. ಒತ್ತಡಕ್ಕೆ ಬಿದ್ದ ಮಹಾರಾಜರು ಪಾಕಿಸ್ಥಾನದೊಂದಿಗೆ ತಾತ್ಕಾಲಿಕ ಒಪ್ಪಂದ ಮಾಡಿಕೊಂಡುಬಿಟ್ಟರು. ಆದರೆ ಸಂಪೂರ್ಣ ಸ್ವಾತಂತ್ರ್ಯ ಹೊಂದುವ ಆಕಾಂಕ್ಷೆಯನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದರು. ಇತ್ತ ನ್ಯಾಶನಲ್ ಕಾನ್ಫರೆನ್ಸ್ ಕೂಡ ಪಾಕಿಸ್ಥಾನಕ್ಕೆ ಸೇರುವ ವಿಧೇಯಕವನ್ನು ಅಂಗೀಕರಿಸಿಯೇ ಬಿಟ್ಟಿತು. ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸುವ ಹೊಣೆಯನ್ನು ಸರ್ದಾರ ಪಟೇಲರಿಗೆ ಕೊಡದೇ, ತಮ್ಮ ಬಳಿಯೇ ಇಟ್ಟುಕೊಂಡಿದ್ದ ನೆಹರೂಗೆ ಇದ್ಯಾವುದರ ಅರಿವೇ ಇರಲಿಲ್ಲ. ತಮ್ಮ ಗೆಳೆಯರೆಲ್ಲ ತಮ್ಮೊಂದಿಗೇ ಇರುತ್ತಾರೆ ಎಂಬ ದೃಢ ನಂಬಿಕೆ ಅವರದು.

ಬರಿ ಈ ವಿಚಾರವಷ್ಟೇ ಅಲ್ಲ. ದೇಶದ ರಕ್ಷಣೆಯ ದೃಷ್ಟಿಯಲ್ಲಿ , ಅಖಂಡ ಭಾರತದ ಕನಸು ಕಟ್ಟುವಲ್ಲಿ ನೆಹರೂ ಯಾವಾಗಲೂ ಹಿಂದೆಯೇ! ಗಿಲ್ಗಿಟ್ ಪ್ರದೇಶ ರಕ್ಷಣಾ ದೃಷ್ಟಿಯಿಂದ ಆಯಕಟ್ಟಿನ ಪ್ರದೇಶ. ರಷ್ಯಾದ ಮತ್ತು ಚೀನಾದ ರಕ್ಷಣಾ ತಲೆಹರಟೆಗಳ ಮೇಲೆ ಸ್ಪಷ್ಟ ನಿಗಾ ಇಡಬಹುದಾದ ಪ್ರದೇಶ. ಹೀಗಾಗಿಯೇ ಬ್ರಿಟಿಷ್ ಸರಕಾರ ಗಿಲ್ಗಿಟ್ ಏಜೆನ್ಸಿಯಿಂದ ಆ ಪ್ರದೇಶವನ್ನು ೬೦ವರ್ಷಗಳ ಕಾಲ ಗುತ್ತಿಗೆಗೆ ಪಡೆದಿತ್ತು. ಸ್ವಾತಂತ್ರ್ಯ ಬಂದ ನಂತರ ಆ ಗುತ್ತಿಗೆಗೆ ಯಾವುದೇ ಮಹತ್ವ ಇರುತ್ತಿರಲಿಲ್ಲ. ಹೀಗಾಗಿಯೇ ಮೌಂಟ್ ಬ್ಯಾಟನ್‌ನ ಮೇಲೆ ಒತ್ತಡ ಹೇರಿ ನೆಹರೂ ಅದನ್ನು ಕಸಿಯುವ ಕೆಲಸ ಮಾಡಬೇಕಿತ್ತು. ಮಾಡಲಿಲ್ಲ. ಮಹಾರಾಜಾ ಹರಿಸಿಂಗರು ಆ ಪ್ರದೇಶದಲ್ಲಿ ತಮ್ಮ ಅಧಿಕಾರಿಗಳನ್ನು ನೇಮಿಸುವ ಮುನ್ನವೇ, ಗಿಲ್ಗಿಟ್ ಸ್ಕೌಟ್ಸ್ ಆ ಪ್ರದೇಶವನ್ನು ವಶಪಡಿಸಿಕೊಂಡಿತ್ತು. ಸ್ಕೌಟ್ಸ್‌ನ ಅಧಿಕಾರಿ ಮೇಜರ್ ಚ್ರಾನನ್ನು ಸರ್ಕಾರ ಬಂಧಿಸಿತು. ಕುಪಿತಗೊಂಡ ಸ್ಕೌಟ್ಸ್ ದಂಗೆಯೆದ್ದರು. ಸ್ವಾತಂತ್ರ್ಯದ ಸುದ್ದಿ ತಿಳಿದೊಡನೇ ಪಾಕಿಸ್ಥಾನಕ್ಕೆ ಸೇರಿಕೊಂಡುಬಿಟ್ಟರು. ರಕ್ಷಣಾ ದೃಷ್ಟಿಯಿಂದ ಮಹತ್ವವಾಗಿದ್ದ ಪ್ರದೇಶವೊಂದು ಈ ರೀತಿ ಅನಾಯಾಸವಾಗಿ ಪಾಕಿಗಳ ಕೈ ಸೇರಿಹೋಯಿತು. ನೆಹರೂರಿಂದಾಗಿ ಭಾರತೀಯರು ಕೈ-ಕೈ ಹಿಸುಕಿಕೊಳ್ಳುವುದು ಮಾತ್ರ ಉಳಿಯಿತು!

ಇದೇ ರೀತಿ ಕಾಶ್ಮೀರದೊಂದಿಗೂ ನೆಹರೂ ಮೌಢ್ಯತೆಯ ಪ್ರದರ್ಶನ ಮಾಡಿದರು. ಕಾಶ್ಮೀರವನ್ನು ವಿಲೀನಗೊಳಿಸಿಕೊಳ್ಳಬೇಕೆಂಬ ಆತುರ ಅವರೆಂದಿಗೂ ತೋರಲೇ ಇಲ್ಲ. ಸ್ವಾತಂತ್ರ್ಯ ಬಂದ ಮೂರು ದಿನದ ನಂತರ ಈ ದೇಶದ ಗಡಿಯನ್ನು ಬ್ರಿಟಿಷರು ನಿರ್ಧಾರ ಮಾಡಿ ಪ್ರಕಟಪಡಿಸಿದ್ದರು. ಕಾಶ್ಮೀರಕ್ಕೆ ಭಾರತದ ಇತರ ಭಾಗವನ್ನು ಬೆಸೆಯುವ ಏಕೈಕ ದ್ವಾರ ದೊರೆತಿದ್ದು ದುರಂತ. ಗುರುದಾಸಪುರ. ಆ ನಗರದ ಮೂಲಕ ಜಮ್ಮುವಿಗೆ ಹೋಗಿ ಅಲ್ಲಿಂದ ಕಾಶ್ಮೀರದ ಕಣಿವೆಗಳಿಗೆ ಸೇರಬೇಕಿತ್ತು. ಆ ರಸ್ತೆಯೂ ಅಯೋಮಯವಾಗಿತ್ತು. ಅದೇ ವೇಳೆಗೆ ಕಾಶ್ಮೀರವನ್ನು ಸೇರಬಹುದಾದ ಎರಡು ಪುಟ್ಟ-ಪುಟ್ಟ ಚೆಂದದ ರಸ್ತೆಗಳು ಪಾಕಿಗಳ ಪಾಲಿಗಿತ್ತು. ಈ ಅವಕಾಶವನ್ನೇ ಬಳಸಿಕೊಂಡ ಜಿನ್ನಾ ಲಾಹೋರಿನಿಂದ ಹಾಗೂ ರಾವಲ್‌ಪಿಂಡಿಯಿಂದ ಕಾಶ್ಮೀರಕ್ಕೆ ಸೇರುತ್ತಿದ್ದ ನಿತ್ಯ ಬಳಕೆಯ ವಸ್ತುಗಳನ್ನು ತಡೆಹಿಡಿದುಬಿಟ್ಟ. ಕಾಶ್ಮೀರಿಗಳು ತಹತಹಿಸಿಬಿಟ್ಟರು. ಅಲ್ಲಿಯವರೆಗೂ ಈ ವಿಚಾರಗಳ ಬಗ್ಗೆ ಆಲೋಚನೆಯೂ ಮಾಡಿರದಿದ್ದ ನೆಹರೂ ತಲೆ ಕೆಟ್ಟುಹೋಯಿತು. ವಿಮಾನಗಳನ್ನು ಬಳಸಿ ಆಹಾರಪೂರೈಕೆಗೆ ಶುರುವಿಟ್ಟರು. ಅದು ಬಕಾಸುರನ ಪಾಲಿಗೆ ಅರೆಕಾಸಿನ ಮಜ್ಜಿಗೆಯಂತಾಯಿತು.

ಈ ವಿಚಾರದ ಬಗ್ಗೆ ಸೂಕ್ಷ್ಮ ನಿರ್ಧಾರಗಳನ್ನು ಕೈಗೊಂಡ ಪಟೇಲರು ಮಾತ್ರ ಪಠಾಣ್‌ಕೋಟ್‌ನಿಂದ ಜಮ್ಮುವರೆಗಿನ ೧೧೨ ಕಿ.ಮೀ.ರಸ್ತೆಯನ್ನು ದುರಸ್ತಿಗೊಳಿಸುವ ಕೆಲಸ ಆರಂಭಿಸಿದರು. ಪಾಕೀಗಳು ಭಾರತೀಯ ಮುಸಲ್ಮಾನರನ್ನು ಎತ್ತಿಕಟ್ಟಿ ರಸ್ತೆ ಕಾರ್ಯ ತಡೆಯುವ ಎಷ್ಟೇ ಪ್ರಯತ್ನ ಮಾಡಿದರೂ ಎಲ್ಲವೂ ವ್ಯರ್ಥವಾಯಿತು. ಪಟೇಲರ ಇಚ್ಛಾಶಕ್ತಿಯಿಂದ ಸಮರೋಪಾದಿಯಲ್ಲಿ ಶುರುವಾದ ಕಾರ್ಯ ದಾಖಲೆಯ ಸಮಯದಲ್ಲಿ ಮುಕ್ತಾಯವಾಯಿತು. ಆದರೆ ಈ ರಸ್ತೆಯನ್ನು ಕಾಶ್ಮೀರದವರೆಗೂ ಒಯ್ಯುವ ಹಕ್ಕು ಅವರಿಗಿರಲಿಲ್ಲ. ಏಕೆಂದರೆ ಕಾಶ್ಮೀರ ಸಮಸ್ಯೆಯನ್ನು ತಾನೇ ಪರಿಹರಿಸಬೇಕೆಂಬ ಹಠ ನೆಹರೂಗಿತ್ತು. ಬೇರೆ ಯಾರೂ ಪರಿಹಾರಕಾರ್ಯದಲ್ಲಿ ಮೂಗುತೂರಿಸುವುದನ್ನು ಅವರು ಒಪ್ಪುತ್ತಿರಲಿಲ್ಲ. ಅದು ಬಿಡಿ. ಪಟೇಲರು ಅಂದು ದೂರದೃಷ್ಟಿಯಿಂದ ಆ ರಸ್ತೆ ನಿರ್ಮಾಣ ಮಾಡಿದರಲ್ಲ, ಆ ರಸ್ತೆ ಇಂದಿಗೂ ಭಾರತವನ್ನು ಕಾಶ್ಮೀರದೊಂದಿಗೆ ಬೆಸೆಯುವ ರಸ್ತೆಯಾಗಿ ಉಳಿದಿದೆ! ಪಂಜಾಬ್‌ನಲ್ಲಿ ಕೋಮುಗಲಭೆ ತೀವ್ರವಾಗಿ ಉರಿಯುತ್ತಿದ್ದಾಗಲೂ, ಜಮ್ಮು ಕಾಶ್ಮೀರಗಳು ಶಾಂತವಾಗಿಯೇ ಇದ್ದವು. ಪಾಕಿಸ್ಥಾನದಿಂದ ನಿರಾಶ್ರಿತರಾಗಿ ಬರುತ್ತಿದ್ದ ಹಿಂದೂಗಳು ಕಾಶ್ಮೀರದ ಮೂಲಕ ಕಾಲ್ನಡಿಗೆಯಲ್ಲೇ ಹಾದು ಭಾರತ ಸೇರುತ್ತಿದ್ದರು. ಮಾರ್ಗದುದ್ದಕ್ಕೂ ಮುಸಲ್ಮಾನರು ಯಾವುದೇ ತೊಂದರೆ ಮಾಡದೇ ಸುಮ್ಮನಿರುತ್ತಿದ್ದರು. ಒಮ್ಮೆ ಕಾಶ್ಮೀರದ ಮಹಾರಾಜರು ಪಾಕಿಸ್ಥಾನದೊಂದಿಗೆ ವಿಲೀನವಾಗದಿರುವ ವಿಚಾರ ಪ್ರಕಟಿಸಿದರು ನೋಡಿ, ಎಲ್ಲವೂ ತಲೆಕೆಳಗಾಯಿತು. ಜಿನ್ನಾ ಇದನ್ನು ವಿಶ್ವಾಸದ್ರೋಹವೆಂದು ಭಾವಿಸಿದ. ಕಾಶ್ಮೀರದಲ್ಲಿ ತೀವ್ರ ಪ್ರಮಾಣದ ದಂಗೆಗಳಾಗುವಂತೆ ನೋಡಿಕೊಂಡ. ಜಮ್ಮು-ಕಾಶ್ಮೀರಗಳೂ ಕೋಮುಗಲಭೆಗಳ ಕೇಂದ್ರಗಳಾಗಿಬಿಟ್ಟವು. ಇತ್ತ ಪಾಕಿಸ್ಥಾನ ಒಂದಿನಿತೂ ತಡಮಾಡದೇ ಕಾಶ್ಮೀರದ ಮೇಲೆ ದಾಳಿ ಮಾಡಿಯೇ ಬಿಟ್ಟಿತು.

೧೯೪೭ರ ಅಕ್ಟೋಬರ್ ೨೧ರ ರಾತ್ರಿ ಪಾಕಿಸ್ಥಾನ ದಾಳಿಗೆ ಶುರುವಿಟ್ಟಿತು. ಸ್ವತಂತ್ರಗೊಂಡ ಎರಡೇ ತಿಂಗಳಲ್ಲಿ ಪಾಕಿಸ್ಥಾನ ಭಾರತದ ಮೇಲೆ ಯುದ್ಧ ಘೋಷಿಸಿದಂತಾಗಿತ್ತು. ರಾವಲ್ಪಿಂಡಿಯಿಂದ ಆರಂಭವಾದ ಸೈನ್ಯದ ಯಾತ್ರೆ ಮುಜಪ್ಫರಾಬಾದ್‌ಗೆ ಬಂದಿತು. ಡೈನಮೈಟ್‌ಗಳ ಕೊರತೆಯಿಂದಾಗಿ ಮುಜಪ್ಫರಾಬಾದ್‌ನ ಕೃಷ್ಣಾ ಗಂಗಾ ಸೇತುವೆಯನ್ನು ಸ್ಫೋಟಿಸಲಾಗದಿದ್ದುದಕ್ಕೆ ಆ ನಗರದ ಬೆಲೆ ತೆತ್ತಿದ್ದಾಯ್ತು. ಪಠಾಣ ಮತ್ತು ಅರೆ ಸೈನಿಕರ ಪಡೆಯ ನೇತೃತ್ವ ಹೊಂದಿದ್ದ ಮೇಜರ್ ಜನರಲ್ ಅಕ್ಬರ್ ಖಾನ್ ಶ್ರೀನಗರದತ್ತ ವೇಗವಾಗಿ ಧಾವಿಸಲಾರಂಭಿಸಿದರು. ಬಾರಮುಲ್ಲಾ ವ್ಯಾಪ್ತಿಯಲ್ಲಿ ವ್ಯಾಪಕ ಅತ್ಯಾಚಾರಗಳು ನಡೆದವು. ಪಾಪಿ ಸೈನಿಕರು, ಹಿಂದೂ – ಮುಸಲ್ಮಾನ ಭೇದವೆಣಿಸದೇ ಮಾತಾ-ಭಗಿನಿಯರ ಮಾನಹರಣಗೈದರು. ಅವ್ಯಾಹತವಾಗಿ ಲೂಟಿಗಳಾದವು. ನೆಹರೂ ಆಕಾಶವಾಣಿಯ ಮೂಲಕ ಜನತೆಗೆ ಕರೆ ಇತ್ತರು. ಅದು ಹೋರಾಟದ ಕೆಚ್ಚಿನ ಸ್ವಾಭಿಮಾನದ ಕರೆಯಾಗಿರಲಿಲ್ಲ. ಅದು ಎಲ್ಲವನ್ನು ಕಳೆದುಕೊಂಡವನ ಪ್ರಲಾಪದಂತಿತ್ತು, ಅಸಹಾಯಕನೊಬ್ಬನ ರೋದನದಂತಿತ್ತು ! ಚರ್ಚಿಲ್‌ನ ಸಿಂಹದ ಎದೆ ನೆಹರೂಗಿರಲಿಲ್ಲ. ಆತನದು ಕ್ಷೀಣ ಪ್ರತಿರೋಧವಾಗಿತ್ತು ಅಷ್ಟೆ! ಆದರೆ ಪಟೇಲರು ಕೈಕಟ್ಟಿ ಕುಳಿತುಕೊಳ್ಳಲಿಲ್ಲ. ಪರಿಸ್ಥಿತಿಯನ್ನು ನಿಭಾಯಿಸುವ ಕೆಲಸಕ್ಕೆ ಶುರುವಿಟ್ಟರು. ದೆಹಲಿಯಿಂದ ಎಲ್ಲ ವಿಮಾನಗಳೂ ಶ್ರೀನಗರಕ್ಕೆ ಧಾವಿಸುವಂತೆ ನೋಡಿಕೊಂಡರು. ಆ ಮೂಲಕ ಜಮ್ಮು ಮತ್ತು ಪಠಾಣ್‌ಕೋಟ್‌ಗಳ ನಡುವೆ ವೈರ್‌ಲೆಸ್ ಸಂಪರ್ಕ ಸಾಧಿಸಿದರು. ಪಂಜಾಬ್ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಮೇಹರ್ ಚಂದ್ ಮಹಾಜನರನ್ನು ತುರ್ತು ರಜೆಯ ಮೇಲೆ ಕಾಶ್ಮೀರಕ್ಕೆ ಕಳಿಸಿಕೊಟ್ಟರು. ರಾಜಾ ಹರಿಸಿಂಗರ ಮೇಲೆ ಒತ್ತಡ ಹೇರುವ ಕೆಲಸ ಶುರುವಿಟ್ಟರು. ಕಾಶ್ಮೀರ ಭಾರತದೊಂದಿಗೆ ವಿಲೀನವಾದರೆ ಅದನ್ನು ರಕ್ಷಿಸುವ ಹೊಣೆ ತಮ್ಮದೆಂದರು. ಮಹಾರಾಜರೂ ಅಷ್ಟೇ. ಅವರಿಗೆ ನೆಹರೂರ ಮೇಲೆ ದ್ವೇಷವಿತ್ತು. ಆದರೆ ಪಟೇಲರ ಮೇಲೆ ಗೌರವವಿತ್ತು. ಅವರ ಸಾಹಸದ ಬಗ್ಗೆ ಹೆಮ್ಮೆಯಿತ್ತು. ನೆಹರೂ ಜಾಗದಲ್ಲಿ ಪಟೇಲರು ಭಾರತದ ಪ್ರಧಾನಿಯಾಗಿದ್ದರೆ ಅವರು ಯಾವುದೇ ದ್ವಂದ್ವಕ್ಕೆ ಒಳಗಾಗದೇ ಭಾರತದೊಂದಿಗೆ ವಿಲೀನವಾಗಿ ಬಿಡುತ್ತಿದ್ದರು. ಆದರೆ ಈಗ ಅವೆಲ್ಲ ಯೋಚಿಸಲಿಕ್ಕೆ ಪುರುಸೊತ್ತಿಲ್ಲ. ಮೊದಲು ಪಾಕಿಸ್ಥಾನದ ಆಕ್ರಮಣವನ್ನು ತಡೆಯಬೇಕು. ಮಹಾರಾಜರು ತಮ್ಮ ಸೈನ್ಯವನ್ನು ಯುದ್ಧ ಸನ್ನದ್ಧವಾಗಿಸಿದರು. ಆದರೆ ಪರಿಸ್ಥಿತಿ ಕೈಮೀರುವ ಹಂತ ತಲುಪಿದಾಗ, ಭಾರತದ ಸಹಾಯ ಕೇಳಲು ಒಪ್ಪಿಕೊಂಡರು.

ಅಕ್ಟೋಬರ್ ೨೬ರ ಮಧ್ಯಾಹ್ನ ನೆಹರೂ ಮನೆಯಲ್ಲಿ, ಮಹತ್ವದ ಸಭೆ ನಡೆಯಿತು. ಮೌಂಟ್ ಬ್ಯಾಟನ್, ಶೇಕ್ ಅಬ್ದುಲ್ಲಾ , ಮಹಾಜನರಾದಿಯಾಗಿ ಅತಿಮುಖ್ಯ ಮುತ್ಸದ್ದಿಗಳು ಪಾಲ್ಗೊಂಡಿದ್ದರು. ಮಹಾಜನರು ಕಡ್ಡಿ ಮುರಿದಂತೆ ಹೇಳಿದರು. ‘ಭಾರತ ಸರಕಾರ ನಮಗೆ ಸಹಕರಿಸಲಿಲ್ಲವೆಂದಾದರೆ, ಅನಿವಾರ್ಯವಾಗಿ ಪಾಕಿಸ್ಥಾನದ ತೆಕ್ಕೆಗೆ ಹೋಗಬೇಕಾಗಬಹುದು’. ಅವರು ಹಾಗೆ ಹೇಳಿದ್ದರಲ್ಲಿ ತಪ್ಪಿರಲಿಲ್ಲ. ಮೊದಲಿನಿಂದಲೂ ಮಹಾರಾಜರ ವಿರುದ್ಧ ಕುದಿಯುತ್ತಿದ್ದ ನೆಹರೂ ಇಂತಹ ಸಂದರ್ಭಗಳಲ್ಲೂ ಅತಿ ಕೆಟ್ಟದಾಗಿ ವರ್ತಿಸುತ್ತಿದ್ದರು. ತಮ್ಮ ದ್ವೇಷ ಸಾಧನೆಗೆ ದೇಶದ ಹಿತವನ್ನು ಬಲಿಕೊಡುವ ಪ್ರಯತ್ನ ನಡೆಸುತ್ತಿದ್ದರು. ಮೌಂಟ್‌ಬ್ಯಾಟನ್ ಮಾತು ಕೇಳಿ ಕಾದು ನೋಡುವ ಕಹಳೆಯನ್ನೇ ಊದುತ್ತಿದ್ದರು. ಹೀಗಾಗಿ ಎಲ್ಲರ ಮುಂದೆ ಮಹಾಜನರು ತೀಕ್ಷ್ಣವಾಗಿ ಹೇಳಿದ್ದು ನೆಹರೂಗೆ ಹಿಡಿಸಿರಲಿಲ್ಲ. ಸಭೆಯಿಂದ ಹೊರನಡೆಯುವಂತೆ ಮಹಾಜನರಿಗೆ ಆದೇಶ ನೀಡಿದರು. ಕುಪಿತರಾಗಿ ಹುಬ್ಬುಗಳನ್ನು ಗಂಟಿಕ್ಕಿ ಹೊರಟಿದ್ದ ಮಹಾಜನರನ್ನು ಬಾಗಿಲ ಬಳಿ ತಡೆದು ನಿಲ್ಲಿಸಿದ ಪಟೇಲರು ‘ಖಂಡಿತ ಮಹಾಜನರೇ, ಪಾಕಿಸ್ಥಾನದೊಂದಿಗೆ ಹೋಗುವ ಅಗತ್ಯ ನಿಮಗಿಲ್ಲ ’ ಎಂದರು.

ಈ ಸಂದರ್ಭದ ಒಂದು ಚರ್ಚೆಯನ್ನು ಫೀಲ್ಡ್‌ಮಾರ್ಶಲ್ ಮಾಣಿಕ್‌ಶಾ ಮುಂದೆ ತಮ್ಮ ಭಾಷಣದಲ್ಲಿ ಹೇಳಿದ್ದರು. “ಪಟೇಲರು ಸಹನೆ ಕಳೆದುಕೊಂಡು, ‘ಜವಾಹರಲಾಲರೇ ನಿಮಗೆ ಕಾಶ್ಮೀರ ಬೇಕೇ? ಬೇಡವೇ? ಎನ್ನುವವರೆಗೆ ನೆಹರೂ ರಷ್ಯಾ, ಆಫ್ರಿಕಾ, ವಿಶ್ವಸಂಸ್ಥೆ, ದೇವರು-ದಿಂಡರು ಎಲ್ಲರ ಬಗ್ಗೆಯೂ ಮಾತನಾಡುತ್ತಿದ್ದರು. ಅನಂತರ ತಣ್ಣಗಾದ ನೆಹರೂ ಖಂಡಿತ, ನನಗೆ ಕಾಶ್ಮೀರ ಬೇಕು ಎಂದರು. ಹಾಗಿದ್ದರೆ ಆದೇಶ ಕೊಡಿ ಎಂದವರೇ ನೆಹರೂರ ಪ್ರತಿಕ್ರಿಯೆ ಹೊರಬೀಳುವ ಮೊದಲೇ, ‘ನಿಮಗೆ ಆದೇಶ ಸಿಕ್ಕಿದೆ’ ಎಂದು ನನಗೆ ಹೇಳಿದರು”. ಹೌದು. ಪಟೇಲರ ಧೈರ್ಯ-ಸ್ಥೈರ್ಯಗಳು ಅಂದು ಕೆಲಸ ಮಾಡದಿದ್ದರೆ ನೆಹರೂ ಮೌಂಟ್ ಬ್ಯಾಟನ್‌ನ ಮಾತಿಗೆ ತಲೆದೂಗಿ ಇಡಿಯ ಜಮ್ಮು ಕಾಶ್ಮೀರವನ್ನು ಪಾಕೀಯರಿಗೆ ತಟ್ಟೆಯಲ್ಲಿಟ್ಟು ಕೊಡುತ್ತಿದ್ದರು!

ಪಟೇಲ್ ಸ್ವತಃ ತಾವೇ ವಿಲ್ಲಿಂಗ್ಟನ್ ನಿಲ್ದಾಣಕ್ಕೆ ಹೋಗಿ ಒಂದೊಂದೇ ವಿಮಾನ ಶ್ರೀನಗರದತ್ತ ನೆಗೆಯುವುದನ್ನು ನೋಡಿ ಬಂದರು. ಅವರ ಒಂದೊಂದು ಮಾತೂ ಸೈನಿಕರಿಗೆ ಅಪಾರ ಸ್ಫೂರ್ತಿ ತುಂಬುತ್ತಿದ್ದವು. ಭಾರತದ ಮೇಲೆ ಆಕ್ರಮಣ ಮಾಡಿರುವ ಅನಾಗರಿಕ ಪಾಕಿಸ್ಥಾನಿಯರಿಗೆ ಬುದ್ಧಿ ಕಲಿಸಲೇಬೇಕೆಂಬ ತುಡಿತ ಹೆಚ್ಚಿಸುತ್ತಿದ್ದವು. ನೋಡುತ್ತ-ನೋಡುತ್ತಲೇ ಭಾರತೀಯ ಸೈನ್ಯ ಶ್ರೀನಗರ ತಲುಪಿತು. ಅಲ್ಲಿಯವರೆಗೂ ಶ್ರೀನಗರದ ಮೇಲೆ ಪಾಕಿಸ್ಥಾನಿ ಬಾವುಟ ಹಾರಿಸುವ ಕನಸು ಕಾಣುತ್ತಿದ್ದ ಜಿನ್ನಾ ಈಗ ದಂಗಾದ. ಇಷ್ಟು ದಿನ ನೆಹರೂರನ್ನೇ ವಿರೋಧಿ ಎಂದುಕೊಂಡು ಮೆರೆಯುತ್ತಿದ್ದವನಿಗೆ, ದಾಳಿಯ ನೇತೃತ್ವ ವಹಿಸಿರುವುದು ಪಟೇಲರು ಎಂದು ಗೊತ್ತಾದೊಡನೆ ಸೋಲು ಖಚಿತವಾಯಿತು. ನವೆಂಬರ್ ೮ರ ವೇಳೆಗೆ ಬಾರಾಮುಲ್ಲಾ ಭಾರತೀಯ ಸೈನಿಕರ ಕೈಸೇರಿತು. ಹೊಸ ಹೊಸ ಯುದ್ಧನೀತಿ, ಅನಿರೀಕ್ಷಿತ ಯೋಜನೆಗಳ ಮೂಲಕ ಪಾಕಿಸ್ಥಾನಿ ಸೈನಿಕರನ್ನು ದಂಗುಬಡಿಸಿದ ನಮ್ಮ ಸೈನಿಕರು ಒಂದೊಂದೇ ಪ್ರದೇಶಗಳನ್ನು ವಶಪಡಿಸಿಕೊಳ್ಳುತ್ತಾ ಸಾಗಿದರು. ರಜೌರಿ, ಪೂಂಛ್‌ಗಳೆಲ್ಲ ಸುಲಭದ ತುತ್ತಾಗಿಬಿಟ್ಟವು. ನಮ್ಮ ಸೈನಿಕರು ವೀರಾವೇಶದಿಂದ ಹೋರಾಡುತ್ತಾ ಪಾಕಿಸ್ಥಾನ ಗಡಿ ದಾಟುತ್ತಿರಬೇಕಾದರೆ, ಜಿನ್ನಾರ ಎದೆಯಲ್ಲಿ ಅವಲಕ್ಕಿ ಕುಟ್ಟಿದಂತಾಗುತ್ತಿತ್ತು. ಇನ್ನು ತನ್ನದೇ ಸಿಂಹಾಸನ ಹೋದಂತೇ ಎಂದು ರೋದಿಸುತ್ತಾ ಕುಳಿತ.

ಅದೇ ವೇಳೆಗೆ ನೆಹರೂ ತಮ್ಮ ಜೀವನದ ಮಹಾನ್ ಮೂರ್ಖ ಕೆಲಸ ಮಾಡಿದ್ದು. ಕಾಶ್ಮೀರವನ್ನು ನಿರಂತರ ಬೆಂಕಿಯ ಉಂಡೆಯಾಗಿ ಮಾಡಿದ್ದು . ಮೌಂಟ್ ಬ್ಯಾಟನ್‌ನ ಮಾತು ಕೇಳಿದ ನೆಹರೂ, ನಮ್ಮ ಸೈನಿಕರು ವಿಜಯದ ಹೊಸ್ತಿಲಲ್ಲಿರುವಾಗಲೇ ವಿಶ್ವಸಂಸ್ಥೆಯ ಬಾಗಿಲು ಬಡಿದರು. ಕಾಶ್ಮೀರದ ವಿಚಾರದಲ್ಲಿ ಮಧ್ಯಸ್ತಿಕೆ ವಹಿಸಬೇಕು ಎಂದು ಗೋಗರೆದರು. ಅಲ್ಲಿಗೆ ಕಾಶ್ಮೀರ ಅಂತಾರಾಷ್ಟ್ರೀಯ ಸ್ತರದಲ್ಲಿ ಚರ್ಚೆಯಾಗುವ ವಿಷಯವಾಯಿತು. ಪ್ರತಿಯೊಂದು ರಾಷ್ಟ್ರವೂ ನಮ್ಮ ಮೇಲೆ ಬೆರಳೆತ್ತಿ ‘ಕಾಶ್ಮೀರ’ ಎನ್ನುವಂತಾಯ್ತು. ಇದಕ್ಕೂ ಮುನ್ನ ನೆಹರೂ ಮೌಂಟ್ ಬ್ಯಾಟನ್‌ನ ಮಾತು ಕೇಳಿ ಲಾಹೋರಿಗೆ ಹೋಗಿ, ಜಿನ್ನಾ ಮತ್ತು ಲಿಯಾಕತ್ ಅಲಿ ಖಾನರೊಂದಿಗೆ ಮಾತುಕತೆ ನಡೆಸುವವರಿದ್ದರು. ಪಟೇಲರು ‘ಗೆಲುವಿನ ಹೊಸ್ತಿಲಲ್ಲಿರುವ ನಾವು, ಅವರ ಮುಂದೆ ಹೋಗಿ ಕಣ್ಣೀರಿಡುವುದು ಸರಿಯಲ್ಲ’ ಎಂದು ದಬಾಯಿಸಿದ ಅನಂತರವೇ ಅವರು ಸುಮ್ಮನಾಗಿದ್ದು! ಆದರೆ ನೆಹರೂ ವಿಶ್ವಸಂಸ್ಥೆಗೆ ಕಾಶ್ಮೀರದ ಸಮಸ್ಯೆ ಒಯ್ಯುವ ವಿಚಾರವನ್ನು ಪಟೇಲರಿಗೆ ತಿಳಿಸಲೇ ಇಲ್ಲ.

ಅಂದು ನೆಹರೂ ಮಾಡಿದ ಮೂರ್ಖತನ ಇಂದಿಗೂ ಭಾರತದ ಪಾಲಿಗೆ ಸಮಸ್ಯೆಯಾಗಿ ಕಾಡುತ್ತಿದೆ. ಕಾಶ್ಮೀರದಲ್ಲೊಂದು ಪಾಕ್ ಆಕ್ರಮಿತ ಕಾಶ್ಮೀರ ನಿರ್ಮಾಣವಾಗಿದೆ. ಸ್ವತಃ ಕಾಶ್ಮೀರದ ರಾಜನೇ ಭಾರತದೊಂದಿಗೆ ವಿಲೀನವಾದಾಗಲೂ ಅಲ್ಲಿನ ಜನ ಪಾಕಿಸ್ಥಾನ-ಪಾಕಿಸ್ಥಾನ ಎಂದು ಬೊಬ್ಬಿಡುವುದು ನಿಂತಿಲ್ಲ. ಯಾವ ಕಾಶ್ಮೀರ ಒಂದು ಕಾಲದಲ್ಲಿ ಧರೆಯ ಸ್ವರ್ಗ ಎಂದು ಕರೆಯಲ್ಪಡುತ್ತಿತ್ತೋ ಅದು ಇಂದು ಅಕ್ಷರಶಃ ನರಕವಾಗಿಬಿಟ್ಟಿದೆ. ಅಲ್ಲಿ ನಿತ್ಯ ಹಿಂದೂಗಳ ಮಾರಣಹೋಮ. ಕಾಶ್ಮೀರದ ಆಸ್ತಿಯಾಗಿದ್ದ ಪಂಡಿತರು ಇಂದು ಅಲ್ಲಿ ನಿರಾಶ್ರಿತರು. ಪಂಡಿತರ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಸಾಮಾನ್ಯ. ನಾವುಗಳು ಕಾಶ್ಮೀರದ ಕೊಳ್ಳಕ್ಕೆ ಹೋಗಬೇಕಾದರೆ, ಅಬ್ಬೇಪಾರಿಗಳಂತೆ, ಪರರಾಷ್ಟ್ರದವರಂತೆ ಹೋಗಬೇಕು. ಇವೆಲ್ಲವನ್ನೂ ನೆನೆದು ಕಣ್ಣೀರಿಡುವಾಗಲೆಲ್ಲ, ಆ ಹನಿಗಳಲ್ಲಿ ನೆಹರೂವಿನದೇ ಬಿಂಬ ಮೂಡುತ್ತದೆ!

ಯುವ ದಿನದ ಶುಭಾಶಯಗಳು

Posted in ನಮ್ಮ ನಮ್ಮ ನಡುವೆ by Chakravarty on January 10, 2009

ಜನವರಿ ೧೨, ಜಗತ್ತು ಕಂಡ ಮಹಾನ್ ಕ್ರಾಂತಿಕಾರಿ ಸಂತ ಸ್ವಾಮಿ ವಿವೇಕಾನಂದರ ಜನ್ಮದಿನ. ವಿವೇಕಾನಂದರ ಚಿಂತನೆಗಳು ಅತ್ಯಂತ ವಿಶಾಲ ಮತ್ತು ಸಾರ್ವಕಾಲಿಕ. ಯುವ ಜನರ ಪಾಲಿಗಂತೂ ಪರಮಾದರ್ಶವಾದ ಈ ಧೀಮಂತ ಮೂರ್ತಿಯ ಜನ್ಮದಿನವನ್ನು ಆಚರಿಸುವುದು ‘ಯುವ ದಿನ’ ಎಂದೇ.

swami_vivekananda-1893-09-signed

ನಿಮಗೆ-ನಮಗೆಲ್ಲರಿಗೂ ಯುವದಿನದ ಶುಭಾಶಯ.

ಸ್ವಾಮಿ ವಿವೇಕಾನಂದರು ತೋರಿದ ಹಾದಿಯಲ್ಲಿ ನಾಲ್ಕು ಹೆಜ್ಜೆ ಒಟ್ಟಾಗಿ ನಡೆಯೋಣ ಬನ್ನಿ…

ಜನವರಿ ೨೫ರವರೆಗಿನ ಕಾರ್ಯಕ್ರಮಗಳು

Posted in ಡೈರಿ by Chakravarty on January 6, 2009

ಚಕ್ರವರ್ತಿ ಸೂಲಿಬೆಲೆಯ ಜನವರಿ ೨೫ರ ವರೆಗಿನ ಕಾರ್ಯಕ್ರಮಗಳು:

ಜನವರಿ ೬,೭,೮: ಗುಲ್ಬರ್ಗ

ಜನವರಿ ೯: ಉಪನ್ಯಾಸ- “ವಿಶ್ವದ ಆಧ್ಯಾತ್ಮಿಕ ಗುರುವಾಗಿ ಭಾರತ”
ಸ್ಥಳ- ಚಂದ್ರ ಶೇಖರ ಭಾರತೀ ಕಲ್ಯಾಣ ಮಂಟಪ, ಚಾಮರಾಜಪೇಟೆ.
ಅವಧಿ: ಸಂಜೆ ೫:೩೦ರಿಂದ ೬:೩೦

ಜನವರಿ ೧೬: ಉಪನ್ಯಾಸ
ವಿವೇಕಾನಂದ ಕೇಂದ್ರದ ವತಿಯಿಂದ ವಿವೇಕಾನಂದ ಜಯಂತಿ ಕಾರ್ಯಕ್ರಮ

ಸ್ಥಳ: ಸುಲ್ತಾನ್ ಪಾಳ್ಯ
ಅವಧಿ: ಸಂಜೆ ೫ರಿಂದ ೬

ಜನವರಿ ೧೭: ಬೆಳಗ್ಗೆ- ಪಾವಘಡ; ವಿವೇಕಾನಂದ ಜಯಂತಿ ಪ್ರಯುಕ್ತ ಉಪನ್ಯಾಸ

ಸಂಜೆ: ಜಾಗೋ ಭಾರತ್ ದೇಶಭಕ್ತಿ ಗೀತೆಗಳ ಕಾರ್ಯಕ್ರಮ
ಸ್ಥಳ: ಸರ್ಜಾಪುರ
ಅವಧಿ: ಸಂಜೆ ೬ರಿಂದ ೯

ಜನವರಿ ೧೮: ಸಂಸ್ಕಾರ ಭಾರತಿ ವತಿಯಿಂದ ಹರಟೆ.
ಸ್ಥಳ: ಬಳ್ಳಾರಿ

ಜನವರಿ ೧೯ರಿಂದ ೨೨: ‘ಸುಮ್ಮನೆ ಬರಲಿಲ್ಲ ಸ್ವಾತಂತ್ರ್ಯ’ ಉಪನ್ಯಾಸ ಮಲೆ
ಸ್ಥಳ: ಕುಮಟಾ
ಅವಧಿ: ಪ್ರತಿ ಸಂಜೆ ೫ರಿಂದ…

ಜನವರಿ ೨೩: ವಿವೇಕಾನಂದ ಜಯಂತಿ ಕಾರ್ಯಕ್ರಮ
ಸ್ಥಳ: ಹಿರಿಯೂರು

ಜನವರಿ ೨೪: ಜಗೋ ಭಾರತ್ ಕಾರ್ಯಕ್ರಮ
ಸ್ಥಳ: ಹಿರಿಯೂರು
ಅವಧಿ: ಸಂಜೆ ೬ರಿಂದ…

ಜನವರಿ ೨೫: ವಿಜಯ ನಗರ ಅಂಧರ ಕೇಂದ್ರದಲ್ಲಿ ಉಪನ್ಯಾಸ
ಅವಧಿ: ೯:೩೦ರಿಂದ ೧೦:೩೦

ಬಸವೇಶ್ವರ ನಗರ ‘ಜ್ಞಾನಕೂಟ’ವತಿಯಿಂದ ಕಾರ್ಯಕ್ರಮ
ಅವಧಿ: ೧೧ರಿಂದ ೧೨

‘ಯುವದಿನಾಚರಣೆ’ ಕಾರ್ಯಕ್ರಮಗಳು

Posted in Uncategorized by Chakravarty on December 31, 2008

ಯುವ ದಿನದ ( ಸ್ವಾಮಿ ವಿವೇಕಾನಂದರ ಜನ್ಮ ದಿನ- ೧೨ ಜನವರಿ) ಅಂಗವಾಗಿ ವಿಶೇಷ ಕಾರ್ಯಕ್ರಮ

ದಿನಾಂಕ ೩.೦೧.೨೦೦೯
ವಿಷಯ: ಸ್ವಾಮಿ ವಿವೇಕಾನಂದರ ಜೀವನ- ಸಂದೇಶ
ಉಪನ್ಯಾಸ: ಚಕ್ರವರ್ತಿ ಸೂಲಿಬೆಲೆ
ಸಮಯ: ಸಂಜೆ ೪.೩೦ರಿಂದ ೬.೩೦ರವರೆಗೆ
ಆಯೋಜಕರು: ಯೂತ್ ಫಾರ್ ಸೇವಾ. www.youthforseva.org

ಯೂತ್ ಫಾರ್ ಸೇವಾದ ಪರವಾಗಿ ತಮಗೆಲ್ಲರಿಗೂ ಪ್ರೀತಿಯ ಆಹ್ವಾನವಿದೆ.

ವಂದೇ,
ಚಕ್ರವರ್ತಿ ಸೂಲಿಬೆಲೆ

ಸಾಂಸ್ಕೃತಿಕ ಆಕ್ರಮಣಗಳು ಮತ್ತು ಪರಿಣಾಮಗಳು

Posted in ದಿಲ್ ಹೈ ಹಿಂದೂಸ್ಥಾನಿ by Chakravarty on December 23, 2008

ರಾಷ್ಟ್ರವೆಂದರೇನು?
ಬರಿಯ ಕಲ್ಲು – ಮಣ್ಣೇ? ನಾವು ಕಟ್ಟಿ ನಿಲ್ಲಿರುವ ಕಟ್ಟಡಗಳೇ? ಹರಿಯುವ ನದಿಯೇ? ಎದೆಯೆತ್ತಿ ನಿಂತಿರುವ ಪರ್ವತ ಸಮೂಹಗಳೇ? ಅಲ್ಲಿ ಜನಿಸಿರುವ ಮಹಾಪುರುಷರೇ? ಅಥವಾ ಅವರು ಬರೆದಿರುವ ಗ್ರಂಥಗಳೇ?
ಊಹೂಂ… ಉತ್ತರ ಅಷ್ಟು ಸುಲಭವೇನಲ್ಲ. ಬಹಳ ಬಾರಿ ರಾಷ್ಟ್ರವೆಂದೊಡನೆ ನಾವು ಇಂಥ ವಿಷಯಗಳ ಸುತ್ತಲೇ ಅಡ್ಡಾಡುತ್ತಿರುತ್ತೇವೆ. ವಾಸ್ತವವಾಗಿ, ರಾಷ್ಟ್ರ ಸಂಸ್ಕೃತಿಯ ಪ್ರವಾಹ. ಸಂಸ್ಕೃತಿ ಇವುಗಳೆಲ್ಲವನ್ನೂ ಒಳಗೊಂಡಂತಹ, ಇವುಗಳನ್ನೂ ಮೀರಿದಂತಹ ಅಂಶ.

ರಾಷ್ಟ್ರಕವಿ ಕುವೆಂಪು ಇದನ್ನು ಸಮರ್ಥವಾಗಿ ಚಿತ್ರಿಸುತ್ತಾರೆ. ಮಾನವನನ್ನು ದೃಷ್ಟಿಯಲ್ಲಿರಿಸಿಕೊಂಡು ಅವರು ಪ್ರಗತಿಯ ಬಗೆಗಳನ್ನು ವಿವರಿಸುತ್ತಾರೆ.  ಮಾನವನ ಆಂತರಿಕ ಬೆಳವಣಿಗೆಯನ್ನು ಸಂಸ್ಕೃತಿ ಎಂದು ಗುರುತಿಸಿ, ಬಾಹ್ಯ ಬೆಳವಣಿಗೆಯನ್ನು ನಾಗರಿಕತೆ ಎನ್ನುತ್ತಾರೆ. ಇದೇ ಚಿಂತನೆಯನ್ನು ವಿಸ್ತರಿಸಿ ರಾಷ್ಟ್ರಕ್ಕೆ ಹೇಳುವುದಾದರೆ, ಪ್ರತಿಯೊಂದು ರಾಷ್ಟ್ರಕ್ಕೂ ಒಂದು ಅಂತರ್ಪ್ರವಾಹ ಇರುತ್ತದೆಯಲ್ಲ, ಅದನ್ನೇ ‘ಸಂಸ್ಕೃತಿ’ ಎನ್ನುವುದು. ಈ ಅಂತರ್ಪ್ರವಾಹಕ್ಕೆ ಧಕ್ಕೆ ಬಂದಾಗಲೆಲ್ಲ ದೇಶ ಸಾಂಸ್ಕೃತಿಕವಾಗಿ ನಲುಗಿಹೋಗುತ್ತದೆ.

ಭಾರತದ ಪಾಲಿನ ಅಂತರ್ಪ್ರವಾಹ ಇತರೆಲ್ಲ ರಾಷ್ಟ್ರಗಳಿಗಿಂತಲೂ ವಿಭಿನ್ನವಾದುದು. ಈ ಪ್ರವಾಹದ ಮೂಲ ಋಷಿಗಳ ಪಾದದಲ್ಲಿದೆ. ಆತ್ಮ ಚಿಂತನೆಯತ್ತ ತಮ್ಮನ್ನು ತಾವು ತೊಡಗಿಸಿಕೊಂಡು, ಇಂದ್ರಿಯಗಳನ್ನು ನಿಗ್ರಹಿಸಿ, ಮನಸ್ಸಿನ ತೆರೆಗಳನ್ನು ಸರಿಸುತ್ತ ಹೋದ ಋಷಿಗಳು ಶಾಶ್ವತ ಸತ್ಯವನ್ನು ಅಲ್ಲಿಂದ ಅರಸಿ ತಂದರು. ಅವರ ಇಡಿಯ ಜೀವನವೇ ಸತ್ಯಾನ್ವೇಷಣೆಯದಾಯಿತು. ಹೀಗೆ ಅರಸಿದ ಸತ್ಯವನ್ನು ಎಲ್ಲರಿಗೂ ತಿಳಿಸಿ, ಅವರನ್ನೂ ಸತ್ಯ ಮಾರ್ಗಿಗಳಾಗಿಸಬೇಕೆನ್ನುವ ಋಷಿಗಳ ಪ್ರಯತ್ನ ಸ್ತುತ್ಯರ್ಹವಾಗಿತ್ತು. ಈ ಹಿನ್ನೆಲೆಯಲ್ಲಿಯೇ ಜಗತ್ತಿಗೆ ಒಳಿತಾಗಲಿ, ಜಗತ್ತೇ ಕುಟುಂಬವಾಗಲಿ ಎಂಬ ಚಿಂತನೆ ಈ ನೆಲದಿಂದ ಹೊರಟಿದ್ದು. ಆರ್ಥಿಕ ದೃಷ್ಟಿಕೋನದಿಂದ ‘ಎಲ್ಲರಿಗೂ ಸಮಬಾಳು,ಎಲ್ಲರಿಗೂ ಸಮಪಾಲು’ ಎನ್ನುವ ಆಧುನಿಕ ಸಮಾಜವಾದ ಚಿಗಿತುಕೊಳ್ಳುವ ಸಾವಿರಾರು ವರ್ಷಗಳ ಮೊದಲೇ ಆಧ್ಯಾತ್ಮಿಕ ದೃಷ್ಟಿಯಿಂದ ಎಲ್ಲರೂ ಸಮಾನರು ಎಂಬ ಸತ್ಯವನ್ನು ಭಾರತ ಸಾಕ್ಷಾತ್ಕರಿಸಿಕೊಂಡಿತ್ತು. ಅದನ್ನು ಜಗತ್ತಿನ ಮುಂದಿರಿಸಿತು. ಜಗತ್ತಿನ ವಿವಿಧೆಡೆಗಳಿಂದ ಜ್ಞಾನಾಕಾಂಕ್ಷಿಗಳು ಭಾರತದತ್ತ ನಡೆದುಬಂದರು. ತಾನೇ ತಾನಾಗಿ ಭಾರತ ಜಗತ್ತಿನ ಗುರುಪೀಠವನ್ನು ಅಲಂಕರಿಸಿಬಿಟ್ಟಿತ್ತು.  ಭಾರತೀಯ ಸಂಸ್ಕೃತಿ ಎಂದರೆ, ಜ್ಞಾನ ಅರಸುವ, ಜ್ಞಾನ ನೀಡುವ ಸಂಸ್ಕೃತಿ ಎಂದು ಸ್ಥಾಪಿತವಾಯ್ತು.

ಸ್ವಾಮಿ ವಿವೇಕಾನಂದರು ಒಂದೆಡೆ, ‘ಭಾರತದ ಆತ್ಮ ಆಧ್ಯಾತ್ಮ’ ಎಂದು ಹೇಳಿರುವರು. ಈ ಕೇಂದ್ರವನ್ನು ಬದಲಾಯಿಸಲು ಪ್ರಯತ್ನ ನಡೆದಾಗಲೆಲ್ಲ ಇಲ್ಲಿ ಅಲ್ಲೋಲಕಲ್ಲೋಲವಾಗಿದೆ. ಪ್ರತಿ ಬಾರಿ ಮಹಾ ಪುರುಷರು ಜನ್ಮವೆತ್ತಿ ಬಂದು ಅದನ್ನು ಮತ್ತೆ ಕೇಂದ್ರದಲ್ಲಿ ತಂದು ನಿಲ್ಲಿಸಿದ್ದಾರೆ. ಪ್ರತಿ ಬಾರಿಯ ಆಕ್ರಮಣದಲ್ಲೂ ಭಾರತದ ಕೇಂದ್ರಕ್ಕೆ ಧಕ್ಕೆ ಉಂಟಾಗಿದೆ.

ಇರಲಿ. ಈ ರಾಷ್ಟ್ರದ ಮೇಲೆ ಆಕ್ರಮಣವಾಗಿದೆ ಎಂದಾಗ ಅದು ಬರಿಯ ಭೂಕಬಳಿಕೆಯ ಆಕ್ರಮಣವಲ್ಲ. ಅದು ಸಂಸ್ಕೃತಿಯ ಮೇಲಿನ ಆಕ್ರಮಣ. ಹಾಗೆ ನೋಡಿದರೆ ಭೂಕಬಳಿಕೆ ಶಾಶ್ವತವಾಗುವುದೂ ಸಂಸ್ಕೃತಿಯ ನಾಶದಿಂದಲೇ. ಈಗಿನ ಆಫ್ಘಾನಿಸ್ಥಾನ, ಗಾಂಧಾರಿಯ ತವರು. ಇತಿಹಾಸಕ್ಕೆ ಹೋದರೆ, ಬುದ್ಧ ತತ್ತ್ವದಿಂದ ಸಂಪನ್ನವಾಗಿದ್ದ ನಾಡು. ಈ ಭೂಮಿಯ ಮೇಲೆ ಇಸ್ಲಾಮೀಯ ದಾಳಿಗಳು ನಡೆದವು. ಅವರಂತೂ ಸಂಸ್ಕೃತಿಗೇ ಕೊಡಲಿಯಿಟ್ಟರು. ಜನರ ಸತ್ತ್ವ ನಾಶವಾಯ್ತು. ಪರಿಣಾಮವಾಗಿ ಆ ನಾಡು ನಮ್ಮಿಂದ ದೂರವಾಗುತ್ತ ಹೋಯ್ತು. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ನಮ್ಮ ವಿರೋಧಿಯೂ ಆಗಿಹೋಯ್ತು!

ಸಂಸ್ಕೃತಿಯ ಮೇಲಿನ ಆಕ್ರಮಣ ಉದ್ದೇಶಪೂರ್ವಕವಾದುದು. ಬೇರೊಂದು ಸಂಸ್ಕೃತಿಯನ್ನು ನಾಶಮಾಡಿ ತಮ್ಮ ಸಂಸ್ಕೃತಿಯನ್ನು ಹೇರುವ ಪ್ರಯತ್ನ ಅದು.
ಭಾರತೀಯ ಸಂಸ್ಕೃತಿ ಕೂಡ ಜಗತ್ತಿನ ಇತರೆಡೆಯಲ್ಲಿ ವ್ಯಾಪಿಸಿದೆ. ಮಲಯ, ಜಾವಾ, ಸುಮಾತ್ರ, ಬಾಲಿ ಮೊದಲಾದೆಡೆಗಳಲ್ಲಿ ಸೂಕ್ಷ್ಮವಾಗಿ ನಮ್ಮ ಸಂಸ್ಕೃತಿ ಹಾಸುಹೊಕ್ಕಾಗಿರುವುದನ್ನು ನಾವು ಗಮನಿಸಬಹುದು. ಆದರೆ ಅದು ಒತ್ತಾಯದ ಹೇರಿಕೆಯಲ್ಲ. ಜ್ಞಾನ ದಾನಕ್ಕೆ, ವ್ಯಾಪಾರಕ್ಕೆ, ಸಾಂಸ್ಕೃತಿಕ ರಾಯಭಾರಕ್ಕೆಂದೇ ಭಾರತದಿಂದ ತೆರಳಿದ ಜನರು ಅಲ್ಲಿ ಪಸರಿಸಿದ, ಅಲ್ಲಿನ ಜನ ಆದರದಿಂದ ಸ್ವೀಕರಿಸಿದಂಥದ್ದು ಅದು. ಭಾರತೀಯರು ತಮ್ಮಲ್ಲಿರುವ ಸತ್ತ್ವಯುತ ಚಿಂತನೆಗಳನ್ನು ಹಂಚಿ ಜನಮನ್ನಣೆ ಗಳಿಸಿದರು. ಅವರೆಂದೂ ಖಡ್ಗ ಹಿಡಿದು ತಮ್ಮ ವಿಚಾರಗಳನ್ನು ಹೇರಲಿಲ್ಲ. ಹೀಗಾಗಿ ಭಾರತೀಯ ಸಂಸ್ಕೃತಿಯನ್ನು ಸ್ವೀಕರಿಸಿದ ಯಾವ ದೇಶಕ್ಕೂ ನಷ್ಟವಾಗಲಿಲ್ಲ. ಬದಲಿಗೆ ಲಾಭವೇ ಆಯಿತು. ಭಾರತದ ಮೇಲೆ ಆಕ್ರಮಣ ಮಾಡಿದ ಶಕರು, ಹೂಣರು ಕೇವಲ ಸಂಪತ್ತಿಗಾಗಿ ಆಕ್ರಮಣ ಮಾಡಿದ್ದರಿಂದ, ಕ್ರಮೇಣ ಅವರು ಭಾರತೀಯರಲ್ಲಿ ಒಂದಾಗಿ ಬೆರೆತು ಹೋದರು.

ಆದರೆ…. ಒಂದು ಸಾಮ್ರಾಜ್ಯ ಕಟ್ಟುವ ಬಯಕೆಯಿಂದ, ತಾವು ಅನುಸರಿಸುವ ಮತವನ್ನು ಹೇರುವ ಉದ್ದೇಶದಿಂದ ಆಕ್ರಮಣ ಮಾಡಿದ ಇಸ್ಲಾಮೀಯರು ನಮ್ಮ ದೇಶದ ಕೇಂದ್ರಕ್ಕೆ ಕೈಹಾಕಿದರು. ಹೆಣ್ಣನ್ನು ತಾಯಿಯೆಂದು ಪೂಜಿಸುವ ಸಂಸ್ಕೃತಿಯ ಮೇಲೆ ಹೆಣ್ನನ್ನು ಭೋಗದ ವಸ್ತುವೆಂದು ಕಾಣುವ ಸಂಸ್ಕೃತಿಯ ಅಕ್ರಮಣವಾಯ್ತು. ಅವರ ಕ್ರೌರ್ಯದೆದುರು ಭಾರತೀಯರ ಒಗ್ಗಟ್ಟು ಕದಡಿ ಹೋಯ್ತು. ಉತ್ತರ ಭಾರತದ ಅನೇಕ ಭೂಭಾಗಗಳಂತೂ ತತ್ತರಿಸಿಹೋದವು. ಹೆಣ್ಣು ಮಕ್ಕಳನ್ನು ಕಾಪಾಡಿಕೊಳ್ಳುವ ಸಲುವಾಗಿ ಹಿಂದೆಲ್ಲೂ ಇಲ್ಲದ ಬಾಲ್ಯ ವಿವಾಹ ಜಾರಿಗೆ ಬಂತು. ಬುರ್ಖಾ ಪದ್ಧತಿ ಆರಂಭವಾಯ್ತು. ಮಾನ ರಕ್ಷಣೆಗೆ ಜೌಹರ್ ಪದ್ಧತಿ ವಾಪಕವಾಯ್ತು.

ಈ ದೇಶಕ್ಕೆ ಒಗ್ಗದ ಸಂಸ್ಕೃತಿಯನ್ನು ಹೇರಲು ಹೊರಟವರ ವಿರುದ್ಧ ಎದೆ ಸೆಟೆದು ನಿಂತ ಸಿಖ್ ಪಂಥ, ಕತ್ತಿಯನ್ನೇ ಕುತ್ತಿಗೆಗೆ ಇಳಿಬಿಟ್ಟುಕೊಂಡಿತು. ಜನರ ಆಚಾರ ವಿಚಾರಗಳು ಆತ್ಮ ರಕ್ಷಣೆಯ ಅನಿವಾರ್ಯಕ್ಕೆ ಸಿಲುಕಿ ಬದಲಾಗುತ್ತ ಸಾಗಿದವು. ಒತ್ತಾಯವಾಗಿ ಹೇರಲ್ಪಟ್ಟ ಹೊರಗಿನ ಸಂಸ್ಕೃತಿಗೆ ಒಗ್ಗಿಕೊಳ್ಳಲಾಗದೆ, ತಮ್ಮದನ್ನು ಬಿಟ್ಟುಕೊಡಲಾಗದೆ, ಮಿಶ್ರ ಸಂಸ್ಕೃತಿಯೊಂದು ಹುಟ್ಟಿಕೊಂಡು, ಜನರನ್ನು ಎಲ್ಲಿಯೂ ಸಲ್ಲದ ಸ್ಥಿತಿಗೆ ತಂದುನಿಲ್ಲಿಸಿತು. ಇದು ಮತಾಂತರಕ್ಕೆ ಪ್ರಚೋದನೆ ನೀಡಿತು. ಹೀಗೆ ಮತಾಂತರಗೊಂದ ಜನ ತಮ್ಮ ಮೂಲ ಧರ್ಮದ ವಿರುದ್ಧ ಮಾತನಾಡಲಾರಂಭಿಸಿದರು. ಸ್ವಯಂ ರಕ್ಷಣೆಗೆ ಅದು ಅವರು ಆರಿಸಿಕೊಂಡ ಅಸ್ತ್ರವಾಗಿತ್ತು. ಕ್ರಮೇಣ ಅದು ಅಭ್ಯಾಸವೂ ಆಗಿ ಹೋಯ್ತು.
“ಒಬ್ಬ ಮತಾಂತರಗೊಂಡರೆ ಹಿಂದೂ ಧರ್ಮಕ್ಕೆ ಒಬ್ಬನ ನಷ್ಟವಲ್ಲ, ಒಬ್ಬ ವಿರೋಧಿಯ ಹೆಚ್ಚಳ!” ಸ್ವಾಮಿ ವಿವೇಕಾನಂದರು ಹೇಳಿದ ಮಾತು ಅದೆಷ್ಟು ಸತ್ಯ!
~
ಭೂಮಾರ್ಗದ ಮೂಲಕ ಅರಬರು ನಡೆಸಿದ ಆಕ್ರಮಣಗಳು ಈ ಬಗೆಯ ಸಾಂಸ್ಕೃತಿಕ ಪಲ್ಲಟ ಉಂಟು ಮಾಡುತ್ತಿದ್ದ ಕಾಲದಲ್ಲಿ ಶಿವಾಜಿ ಮಹಾರಾಜರಂಥವರು ಅದಕ್ಕೆ ತಕ್ಕ ಪ್ರತಿರ್‍ಓಧವೊಡ್ಡಿ ಮತ್ತೆ ಭಾರತೀಯತೆಯನ್ನು ಸ್ಥಾಪಿಸುವ ಸಾರ್ಥಕ ಯತ್ನ ನಡೆಸಿದರು. ಭರತದ ಅಂತರ್ಪ್ರವಾಹವನ್ನು ಮತ್ತೆ ಸರಿಯಾದ ದಿಕ್ಕಿನತ್ತ ಹೊರಳಿಸಿದರು.
ಇದೇ ವೇಳೆಗೆ ಪಶ್ಚಿಮದ ಕಡಲ್ಗಳ್ಳರ ಸುವ್ಯವಸ್ಥಿತ ಆಕ್ರಮನ ಅದಾಗಲೇ ಆರಂಭವಾಗಿಬಿಟ್ಟಿತ್ತು!

ಹಡಗುಗಳ ಮೂಲಕ ಸಂಪದ್ಭರಿತ ದೇಶಗಳನ್ನು ಹುಡುಕುತ್ತಾ ಸಾಗಿ, ಅದನ್ನು ಕೊಳ್ಳೆಹೊಡೆದು, ಅಲ್ಲಿ ತಮ್ಮ ರಾಜ್ಯವನ್ನೂ, ಮತವನ್ನೂ ಸ್ಥಾಪಿಸಿ ಮೆರೆಯುತ್ತಿದ್ದ ಪಾಶ್ಚಾತ್ಯರು ಭಾರತಕ್ಕೂ ಕಾಲಿಟ್ಟರು. ವ್ಯಾಪಾರದ ಸೋಗಿನಲ್ಲಿ ಬಂದವರು, ಬರಬರುತ್ತ ನಮ್ಮ ಮೇಲೆ ಆಳ್ವಿಕೆ ನಡೆಸುವ ಉಮೇದಿಗೆ ಬಿದ್ದರು. ಭಾರತದ ಆತ್ಮವನ್ನೇ ನಾಶಗೊಳಿಸದೆ ಅದು ಸಾಧ್ಯವಿಲ್ಲ ಎಂಬ ಸತ್ಯ ಅವರಿಗೆ ಗೊತ್ತಿತ್ತು. ಅದನ್ನು ಮೆಕಾಲೆ, ವಿಲ್ಟರ್ ಫೋರ್ಸ್ ನಂಥವರು ಬೇರೆ ಬೇರೆ ಸಂದರ್ಬಗಳಲ್ಲಿ ಹೇಳಿಯೂಬಿಟ್ಟರು. ಎಲ್ಲಿಯವರೆಗೆ ಇವರ ಆತ್ಮೋನ್ನತಿಯ ಶಿಕ್ಷಣವನ್ನು ಹಾಳುಮಾಡಲಾಗುವುದಿಲ್ಲವೋ, ಅಲ್ಲಿಯವರೆಗೆ ತಮ್ಮ ಸಾಮ್ರಾಜ್ಯ ಸ್ಥಾಪನೆಯೂ ಸಾಧ್ಯವಿಲ್ಲ ಎಂಬ ಅಳಲು ಅವರಿಗಿತ್ತು!

ಅಸಾಮಾನ್ಯ ತಂತ್ರ ನಿಪುಣರಾಗಿದ್ದ ಆಂಗ್ಲರು ಭಾರತದ ಬೌದ್ಧಿಕ ಸಂಪತ್ತಿಗೂ ಲಗ್ಗೆ ಹಾಕಿದರು. ತಮ್ಮ ಶಿಕ್ಷಣದ ಮೂಲಕ ಒಂದು ಬುದ್ಧಿವಂತರ ವರ್ಗ ಸೃಷ್ಟಿಸಿ, ಅವರ ಮೂಲಕವೇ ಇಲ್ಲಿನ ಸಂಸ್ಕೃತಿಯನ್ನು ಹಾಳುಗೆಡವುವ, ಇಲ್ಲಿನ ಜನರು ‘ಪಶ್ಚಿಮದ ನಾಗರಿಕತೆಯೇ ಶ್ರೇಷ್ಠ’ ಎಂದು ಭ್ರಮಿಸುವಂತೆ ಮಾಡುವ ಯೋಜನೆಗಳನ್ನು ರೂಪಿಸಿದರು. ಪರಿಣಾಮವಾಗಿ, ಭಾರತೀಯ ಚಿಂತನೆಗಳು ಅನಗರಿಕ, ಕೀಳು ಅಭಿರುಚಿಯವು ಎಂದು ತಿಳಿಯುತ್ತ, ಅದನ್ನೇ ಹೇಳಿಕೊಂಡು ತಿರುಗುವ ತಥಾಕಥಿತ ಬುದ್ಧಿಜೀವಿಗಳ ವರ್ಗವೊಂದು ನಿರ್ಮಾಣವಾಗಿಯೇಬಿಟ್ಟಿತು. ನೋಡನೋಡುತ್ತ, ಮೆಕಾಲೆ ಹೇಳಿದಂತೆ, ‘ಕರಿ ಚರ್ಮದ ಆಂಗ್ಲರ’ ಸಂತತಿ ನಾವಾಗಿಬಿಟ್ಟೆವು.

ಇಂಗ್ಲೀಶ್ ಭಾರತದ ಪಾಲಿಗೆ ಮರ್ಮಾಘಾತವನ್ನೇ ನೀಡಿತು. ಇಲ್ಲಿನ ಸ್ಥಳೀಯ ಭಾಷೆಗಳ ನಾಶಕ್ಕೆ, ಸಂಸ್ಕೃತಿಯ ನಾಶಕ್ಕೆ ಅದರ ಕೊಡುಗೆ ಅಪಾರ! ಭಾಷೆಯೊಂದಿಗೆ ಯಾರ ದ್ವೇಷವೂ ಇಲ್ಲ. ಆದರೆ, ಅದು ಹೊತ್ತು ತರುವ ಸಂಸ್ಕೃತಿ ವಿನಾಶಕಾರಿ. ( ಇವತ್ತಿಗೂ ಹಳ್ಳಿಯವನಂತೆ ಕಾಣುವ ವ್ಯಕ್ತಿಯೊಬ್ಬ ಅತ್ಯುನ್ನತ ಮಟದ ಇಂಗ್ಲಿಶ್ ಮಾತಾಡಿದರೆ ಅದನ್ನು ಅಚ್ಚರಿಯಿಂದ ನೋಡಲಾಗುತ್ತದೆ. ಇಂಗ್ಲಿಶ್ ಮಾತಾಡುವವನು ಅಪ್ಪಟ ಭಾರತೀಯನಂತಿರಲಾರನೆಂಬುದೇ ಸುಪ್ತ ಮನಸ್ಸಿನ ಚಿಂತನೆ!). ಇಂಗ್ಲಿಶ್ ಕಲಿತ ಶ್ರೀಮಂತ ಜನಗಳು ಆಚಾರ ವಿಚಾರಗಳೆಲ್ಲದರಲ್ಲಿ ಆಂಗ್ಲರನ್ನೇ ಅನುಕರಿಸುವುದು ಯಾರೂ ಅರಿಯದ ಸಂಗತಿಯೇನಲ್ಲ. ಸ್ವತಃ ವಿಲಿಯಂ ಬೆಂಟಿಕನೇ ಪತ್ರದಲ್ಲಿ ಹೇಳಿಕೊಂಡಿದ್ದ, “ಈ ಜನರು ದಾನ, ಭಿಕ್ಷೆಗಳನ್ನು ನೀಡುವುದು ಬಿಟ್ಟು ನಮ್ಮ ಪಾರ್ಟಿಗಳಿಗೆ ಖರ್ಚು ಮಾಡುತ್ತಿರುವುದು ನೋಡಿ ನನಗೆ ವಿಪರೀತ ಖುಷಿಯಾಗುತ್ತಿದೆ” ಎಂದು!

ಹೌದು. ಈ ಸಾಂಸ್ಕೃತಿಕ ಆಕ್ರಮಣ ಬರಿಯ ವೇಷ ಭೂಷಣಗಳನ್ನಷ್ಟೆ ಬದಲಾಯಿಸಿಲ್ಲ. ಮನಸ್ಸುಗಳನ್ನೂ ಕಲ್ಲಾಗಿಸಿಬಿಟ್ಟಿವೆ. ಅತ್ಯಂತ ಭವುಕವಾಗಿದ್ದ, ಜಗತ್ತಿನ ನೋವಿಗೆ ಸ್ಪಂದಿಸುತ್ತಿದ್ದ ಭಾರತ ಇಂದು ತನ್ನ ನೋವಿಗೆ ಅಳುವಷ್ಟು ಕಣ್ಣೀರನ್ನೂ ಉಳಿಸಿಕೊಂಡಿಲ್ಲ. ಟೀವಿಯಲ್ಲಿ ಬಾಂಬ್ ಸ್ಫೋಟದ- ಸತ್ತವರ ದೃಶ್ಯಗಳನ್ನು ನೋಡುತ್ತಲೇ ಕೇಕು ತಿನ್ನುವವರ ಸಂಖ್ಯೆ ಕಡಿಮೆಯೇನಿಲ್ಲ. ಇದು ಸಾಂಸ್ಕೃತಿಕ ಪಲ್ಲಟದ ಪರಿಣಾಮವಲ್ಲದೆ ಮತ್ತೇನು?

ನಮ್ಮ ಪ್ರಾಚೀನ ಶಿಕ್ಷಣ ಪದ್ಧತಿಯನ್ನು ಹಾಳುಮಾಡಿದ್ದೇ ಇವೆಲ್ಲಕ್ಕೂ ಮೂಲ ಕಾರಣ. ಬರಿಯ ಕಾರಕೂನರ ನಿರ್ಮಾಣದ ಶಿಕ್ಷಣ ಅದೆಷ್ಟು ನಿಸ್ತೇಜವಾಯ್ತೆಂದರೆ, ಅದು ಭಾರತೀಯ ಸಭ್ಯತೆ- ಸಂಸ್ಕೃತಿಗಳ ಅಶ್ವತ್ಥ ವೃಕ್ಷವನ್ನು ಮಕ್ಕಳಿಗೆ ಪರಿಚಯ ಮಾಡಿಸಿಕೊಡುವಲ್ಲಿ ಸೋತುಹೋಯಿತು. ಹೀಗಾಗಿಯೇ ಇಂದಿನ ಶಾಲಾ ಕಾಲೇಜುಗಳಲ್ಲಿ ಭಾರತದ ಬಗ್ಗೆ ಹೆಮ್ಮೆಯಿಂದ ಮಾತಾಡಬಲ್ಲ ವಿದ್ಯಾರ್ಥಿಗಳ ಸಂಖ್ಯೆ ಅತಿ ವಿರಳ. ತಮ್ಮನ್ನು ತಾವು ಗೆದ್ದುಕೊಳ್ಳುವ ವಿದ್ಯೆಯಲ್ಲಿ ಸಿದ್ಧ ಹಸ್ತವಾಗಿದ್ದ ಭಾರತ ಇಂದು ಆತ್ಮ ವಿಶ್ವಾಸವೇ ಇಲ್ಲದ ಸ್ಥಿತಿಗೆ ಇಳಿದುಬಿಟ್ಟಿದೆ. ಅಂತರ್ಮುಖತೆಯನ್ನು ಗಳಿಸಿಕೊಂಡು, ಕಣ್ಣೂ ಮುಚ್ಚಿಯೂ ನೋಡಬಲ್ಲ ಸಮರ್ಥ್ಯ ಹೊಂದಿದ್ದ ಭಾರತೀಯರು ತೆರೆದ ಕಣ್ಣಿಂದಲೂ ನೋಡಲು ಸಾಧ್ಯವಾಗದ ಹಂತ ತಲುಪಿದ್ದಾರೆ.

ಸಾನೆ ಗುರೂಜಿ ಒಂದು ಮಾತು ಹೇಳುತ್ತಾರೆ. “ಹಾಗೇನಾದರೂ ಬೇರೆ ಸಂಸ್ಕೃತಿಗಳ ಆಘಾತಕ್ಕೆ ಸಿಕ್ಕಿ ನಾಶವಾಗುವ ಸಂಸ್ಕೃತಿ ನಮ್ಮದಾದರೆ, ಅದು ನಾಶವಾಗುವುದೇ ಒಳ್ಳೆಯದು. ಆದರೆ, ಹಾಗೆಲ್ಲ ಸಣ್ಣ ಗಾಳಿಗೆ ಪತರಗುಟ್ಟುವ ಸಂಸ್ಕೃತಿ ನಮ್ಮದಲ್ಲ” ಎಂದು.
ಇಲ್ಲೊಂದು ಭರವಸೆ ಮೂಡುತ್ತದೆ. ‘ನಿತ್ಯ ನೂತನೇ ಸನಾತನೀ’ ಎನ್ನುವ ಮಾತಿದೆ. ಯಾವುದು ಸದಾ ಹೊಸ  ಹೊಸ ಝರಿಗಳನ್ನು ತನ್ನೊಳಗೆ ಸೇರಿಸಿಕೊಂಡು ಹರಿಯುತ್ತದೆಯೋ, ಅದರ ಸತ್ತ್ವವನ್ನು ಅರಗಿಸಿಕೊಂಡು ಪ್ರವಾಹವಾಗಿ ಮುನ್ನುಗ್ಗುತ್ತದೆಯೋ ಅದೇ ‘ಸನಾತನ’.  ಅದು, ಎಲ್ಲವನ್ನೂ ಜೀರ್ಣಿಸಿಕೊಂಡು ಬೆಳೆಯುವ ಮಹಾವೃಕ್ಷ. ನಾವಿದರ ರೆಂಬೆಗಳಾಗೋಣ. ಈ ಮಹಾಪ್ರವಾಹವನ್ನು ಸೇರುವ ಉಪನದಿಗಳಾಗೋಣ. ದಾರಿ ತಪ್ಪುವ ಕವಲುಗಳನ್ನೂ ಸೇರಿಸಿಕೊಂಡು ಮುನ್ನಡೆಯೋಣ.
ಭವಿಷ್ಯದ ಅಧಿಪತಿಗಳು ನಾವು; ವರ್ತಮಾನವನ್ನೂ ನಮ್ಮದಾಗಿಸಿಕೊಳ್ಳೋಣ.

ಬುಡವೇ ಭದ್ರವಿಲ್ಲದ ಮೇಲೆ ಕಟ್ಟಡ ಮಜಬೂತಾಗುವುದು ಹೇಗೆ?

Posted in ನೆಹರೂ ಪರದೆ ಸರಿಯಿತು by Chakravarty on December 3, 2008

( ‘ನೆಹರೂ ಪರದೆ ಸರಿಯಿತು’ ಪುಸ್ತಕದಿಂದ ಆಯ್ದ ಭಾಗ)

ಥೂ! ಗಾಂಧೀಜಿ ಹೇಳ್ತಾರಲ್ಲ , ಗ್ರಾಮ ಸ್ವರಾಜ್ಯ-ಸ್ವದೇಶೀ … ಇವೆಲ್ಲ  ಯೋಚಿಸಲಿಕ್ಕೂ  ಅನರ್ಹವಾದವು’ ಹೀಗೆನ್ನುತ್ತಿದ್ದವರು ಯಾರಿರಬಹುದು ಹೇಳಿ? ಸಾವರ್ಕರಾ? ಅಂಬೇಡ್ಕರಾ? ಜಿನ್ನಾನಾ? ಪಟೇಲರಾ? ಖಂಡಿತಾ ಅಲ್ಲ, ಹಾಗೆನ್ನುತ್ತಿದ್ದವರು, ಸ್ವತಃ ಗಾಂಧೀಜಿಯವರ ಅನುಯಾಯಿ ನೆಹರೂ!

ಯಾರನ್ನು  ಗಾಂಧೀಜಿ ‘ನನ್ನ  ನಂತರ ನನ್ನ  ಮಾತನಾಡುವವ’ ಎಂದು ಕರೆಯುತ್ತಿದ್ದರೋ ಅದೇ ವ್ಯಕ್ತಿ. ಯಾರನ್ನು  ಇಡಿಯ ದೇಶ ಗಾಂಧೀಜಿಯ ಚಿಂತನೆಗಳ ಶಾಶ್ವತ ರೂಪ ಎಂದು ಭಾವಿಸುತ್ತಿದ್ದರೋ ಆತ. ಹೌದು ಅದೇ ನೆಹರೂ ಸ್ವದೇಶಿ ಚಿಂತನೆ ನಡೆಸಿದರೆ ದೇಶ ಹಾಳಾಗಿ ಹೋಗುತ್ತದೆ, ದೇಶವನ್ನು ಕಟ್ಟಬೇಕೆಂದರೆ ದೊಡ್ಡ ದೊಡ್ಡ  ಯಂತ್ರಗಳ ಮೇಲೆ ಕಟ್ಟಬೇಕು, ಅದರಿಂದಲೇ ಆರ್ಥಿಕ ಸ್ಥಿತಿ ಬಲಗೊಳ್ಳುವುದು ಸಾಧ್ಯ ಎನ್ನುತ್ತಿದ್ದರು.
ದೇಶ ಅನಾಚೂನವಾಗಿ ಬೆಳೆದು ಬಂದದ್ದೇ ಗ್ರಾಮ ಸ್ವರಾಜ್ಯದ ಆಧಾರದ ಮೇಲೆ. ಲಕ್ಷಾಂತರ ಹಳ್ಳಿಗಳು ಉದ್ಧಾರವಾದರೆ ಮಾತ್ರ ದೇಶದ ಅಭಿವೃದ್ಧಿ  ಸಾಧ್ಯ ಎಂದು  ಹಿಂದಿನಿಂದಲೂ ಹೇಳಿಕೊಂಡು ಬಂದಿದ್ದರು. ಆದರೆ ನೆಹರೂ ಅವೆಲ್ಲವನ್ನೂ ತಿರಸ್ಕರಿಸಿದರು. ದೊಡ್ಡ ದೊಡ್ಡ ಯಂತ್ರಗಳು ಗೃಹಕೈಗಾರಿಕೆಗಳನ್ನು  ಮೀರಿ ಬೆಳೆಯಬೇಕು. ಆಗ ದೇಶದಲ್ಲಿ  ಹಣ ಸಂಗ್ರಹವಾಗುತ್ತದೆ. ಆ ಹಣ ಬಡವರಿಗೂ  ಸೇರುತ್ತದೆ ಎಂಬುದು ಅವರ ಲೆಕ್ಕಾಚಾರ. ದೇಶ ಸಾವಿರಾರು ವರ್ಷಗಳಿಂದ ಅನುಸರಿಸಿಕೊಂಡು ಬಂದ ಮಾರ್ಗವನ್ನೇ  ಈಗ ನೆಹರೂ ಬದಲಿಸ ಹೊರಟಿದ್ದರು. ಪಾಪ! ಗಾಂಧೀಜಿಯಂತಹ ಮಹಾನ್ ವ್ಯಕ್ತಿಯೊಂದಿಗೆ  ಒಡನಾಡಿಯೂ ತಮ್ಮ  ಆ ತನಕದ ಆಡಂಬರತನವನ್ನು  ಬದಲಿಸಿಕೊಂಡು ಸರಳವಾಗಲಾರದ ವ್ಯಕ್ತಿ, ಸರಳವಾಗಿದ್ದ  ದೇಶವನ್ನು ದಿಢೀರ್ ಸಿರಿವಂತಿಕೆಯತ್ತ ಎಳೆದು ತರುವ ಯೋಚನೆಗೆ ಶುರುವಿಟ್ಟರು.

ನೆಹರೂ ಸ್ವತಃ ಆರ್ಥಿಕ ತಜ್ಞರಲ್ಲ , ಯಂತ್ರಗಳ ಬಗ್ಗೆ  ಮಾತನಾಡಬಲ್ಲ  ಇಂಜಿನಿಯರೂ ಆಗಿರಲಿಲ್ಲ.  ಅವರು ಬರಿ ಕನಸುಗಾರರಾಗಿದ್ದರು. ತಾವು ಕಂಡ ಕನಸನ್ನು ನನಸುಗೊಳಿಸಬೇಕು. ಆ ಮಾರ್ಗದಲ್ಲಿರುವ ತೊಡಕುಗಳು ಏನೇ ಇರಲಿ, ಅದರಿಂದ ದೇಶ ನಿರ್ನಾಮವಾಗಿಯೇ ಹೋಗಲಿ ಚಿಂತೆ ಇಲ್ಲ. ಕನಸು ಮಾತ್ರ ಸಾಕಾರವಾಗಬೇಕು ಎಂಬ ಹುಚ್ಚು  ಅವರಲ್ಲಿತ್ತು! ಅದಕ್ಕೆ ಮೆಹಲೋನವೀಸ್ ಎಂಬುವವನ ಜೊತೆ ಪಡೆದರು.
ಆತ ಮತ್ತೊಬ್ಬ  ನೆಹರೂ. ಇತ್ತ ಇಂಜಿನಿಯರ್ ಅಲ್ಲ, ಅತ್ತ  ಆರ್ಥಿಕತಜ್ಞನೂ ಅಲ್ಲ. ಬೇರೆಡೆಯ ಯೋಜನೆಗಳನ್ನು  ಕದ್ದು  ತನ್ನದೇ  ಯೋಜನೆ ಇದು ಎಂದು ನಂಬಿಸಬಲ್ಲ  ಮೋಸಗಾರ ಅಷ್ಟೇ. ಆತ ಅಂಕಿ-ಅಂಶಗಳನ್ನು  ಕೊಟ್ಟು ಯಂತ್ರಗಳಿಂದಲೇ ದೇಶದ ಅಭಿವೃದ್ಧಿ  ಎಂದು ಸಾಸಿ ತೋರುತ್ತಿದ್ದ. ಅದನ್ನು  ಸಾಕಾರಗೊಳಿಸಲೆಂದೇ ರಷ್ಯಾದ ಮಾದರಿಯ ಪಂಚವಾರ್ಷಿಕ ಯೋಜನೆಗಳನ್ನು  ಜಾರಿಗೆ ತರಲು ಒತ್ತಡ ಹೇರಿದ.

ವಾಸ್ತವವಾಗಿ ಆಗತಾನೆ ಸ್ವಾತಂತ್ರ್ಯ ಪಡೆದ ದೇಶ ತನ್ನ  ಆಂತರಿಕ ಶಕ್ತಿ ಯಾವುದೆಂದು ಗುರುತಿಸಿಕೊಂಡು ಅದನ್ನು  ಸೂಕ್ತವಾಗಿ ಬಳಸಿಕೊಳ್ಳುವ ಮೂಲಕ ಬೆಳೆಯಬೇಕು. ಅದನ್ನು  ಬಿಟ್ಟು, ಅವರು ಹಾಗೆ  ಬೆಳೆದಿದ್ದಾರೆ; ಇವರು ಹೀಗೆ  ಬೆಳೆದಿದ್ದಾರೆ ಎನ್ನುತ್ತಾ  ಕುಳಿತರೆ, ಅವರನ್ನು  ಅನುಸರಿಸುವ ಪ್ರಯತ್ನ  ಮಾಡಿದರೆ ಖಂಡಿತ ಬೆಳವಣಿಗೆ ಅಸಾಧ್ಯ.ಭಾರತದ ಮಟ್ಟಿಗೆ ಹೇಳುವುದಾದರೆ, ಗ್ರಾಮಶಕ್ತಿ  ಇಲ್ಲಿನ ಆಂತರಿಕ ಶಕ್ತಿ. ಅಲ್ಲಿ  ಕಳೆದು ಹೋಗುತ್ತಿರುವ ನಮ್ಮವರ ಕಲೆ-ಕುಸುರಿ ಕೆಲಸಗಳನ್ನು ಬಳಸಿಕೊಳ್ಳಬೇಕಿತ್ತು. ಕೃಷಿ ಕಾರ್ಯದಲ್ಲಿ  ಕ್ಷಮತೆಯನ್ನು  ಹೆಚ್ಚಿಸುವ  ಯತ್ನ  ಮಾಡಬೇಕಿತ್ತು. ಆದರೆ  ನೆಹರೂ ಅವೆಲ್ಲವನ್ನು  ಬದಿಗಿಟ್ಟು  ಕೈಗಾರಿಕೀಕರಣ ಮಾಡುವ ಪ್ರಯತ್ನ  ಶುರುವಿಟ್ಟರು. ಅದಕ್ಕೆ ಹಣ ಎಲ್ಲಿಂದ ತರಬೇಕು? ಸಾಲ ತಂದರು. ಮೊದಲ ಬಾರಿಗೆ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ  ಸಾಲ ಎತ್ತುವ ಚಾಳಿ ಶುರುವಿಟ್ಟಿತು.  ಆ ಹಣವನ್ನು  ನೆಹರೂ ಎಲ್ಲೆಲ್ಲಿ  ಹೂಡಿಕೆ ಮಾಡಿದರೋ ಅಲ್ಲಿಂದ ಹೇಳುವಷ್ಟು  ಹಣ ಹುಟ್ಟಲಿಲ್ಲ. ಮತ್ತೆ  ಸಾಲ-ಮತ್ತೆ ನಷ್ಟ. ಈ ಚಕ್ರ ಎಲ್ಲಿಯವರೆಗೂ ಮುಂದುವರೆಯಿತೆಂದರೆ, ಇಂದು ಸಾಲದ ಮೇಲೆಯೇ ಬದುಕುವ ಚಟವನ್ನು  ನಮ್ಮ  ನಾಯಕರು ಹಚ್ಚಿಸಿಕೊಂಡಿದ್ದಾರೆ. ದೇಶ ಅಕ್ಷರಶಃ ಸಾಲದ ಉರುಳಲ್ಲಿ  ಸಿಕ್ಕು  ಒದ್ದಾಡುತ್ತಿದೆ. ನೆಹರೂ ಹುಟ್ಟಿಸಿದ ಆ ಆರ್ಥಿಕ ಕೂಸು ನೆಹರೂ ಕಾಲದಲ್ಲಿಯೇ ಸತ್ತುಹೋಯಿತು. ಈ ದೇಶದ ಜನ ಅಪಾರ ತೆರಿಗೆ ಕಟ್ಟುವ ಮೂಲಕ ಆ ಕೂಸಿಗೆ ಕೃತಕ ಉಸಿರಾಟ ಮಾಡುತ್ತಿದ್ದಾರೆಯೇ ಹೊರತು ಮತ್ತೇನಲ್ಲ!

ನೆಹರೂ, Public Sector Unitಗಳನ್ನು  ಸರ್ಕಾರದ ವಶಕ್ಕೆ ಪಡೆದರು. ಗೃಹಕೈಗಾರಿಕೆಗಳನ್ನು  ನಡೆಸುವುದು, ಅಲ್ಲಿನ ವಸ್ತುಗಳನ್ನು ಮಾರುಕಟ್ಟೆಗೊಯ್ಯುವುದು ಇವಲ್ಲಾ ಸಾಧ್ಯವಾದಷ್ಟೂ ಕಷ್ಟವಾಗುವಂತೆ ನೋಡಿಕೊಂಡರು. ಲೈಸೆನ್ಸು, ಪರ್ಮಿಟ್ಟು ಎಂದೆಲ್ಲ  ರಗಳೆಗಳು ಶುರುವಾಗಿದ್ದು ಇದೇ ಕಾಲಕ್ಕೆ. ಸಮಾಜವಾದದ ಹೆಸರಲ್ಲಿ, ಸರ್ವರಿಗೂ  ಸಮಪಾಲು ಎನ್ನುತ್ತಿದ್ದ  ನೆಹರೂ ಕೊನೆಗಾಲಕ್ಕೆ  ಈ ರೀತಿ ಬದಲಾದದ್ದು, ಬಡವರ ಶೋಷಣೆಗೆ ನಿಂತದ್ದು ಎಲ್ಲರಿಗೂ  ಅಚ್ಚರಿತಂದಿತ್ತು. ಬಡತನ ನಿರ್ಮೂಲನೆಗೆ ಎಂದು ಶುರುವಿಟ್ಟ ಆರ್ಥಿಕ ಯೋಜನೆಗಳು ಬಡವರ ನಿರ್ಮೂಲನೆ ಮಾಡಿದ್ದು ಖಂಡಿತ ಸುಳ್ಳಲ್ಲ.

ಗಾಂಧೀಜಿಯ ಗ್ರಾಮರಾಜ್ಯದ ಕಲ್ಪನೆಯನ್ನು  ಅಮೆರಿಕದಂತಹ ರಾಷ್ಟ್ರಗಳೇ ಮೆಚ್ಚಿ  ಸ್ವೀಕರಿಸಿದ್ದವು. ಅವರಲ್ಲಿ  ಗೃಹಕೈಗಾರಿಕೆಗಳ ಪರಿಕಲ್ಪನೆ ಇಲ್ಲದಿದ್ದರೂ, ಹೆಚ್ಚು -ಹೆಚ್ಚು  ಜನ ಸೇರಿ ಕೆಲಸ ಮಾಡುವಂತಹ ಸಣ್ಣ ಪ್ರಮಾಣದ ಕೈಗಾರಿಕೆಗಳನ್ನು  ಸ್ಥಾಪಿಸಿದರು. ಲಕ್ಷಾಂತರ ಜನರಿಗೆ ಉದ್ಯೋಗ ನೀಡಬಲ್ಲ ಏಕೈಕ ಮಾರ್ಗ ಅದು. ಅಕ್ಷರಶಃ ಆ ನೀತಿಯನ್ನು  ಭಾರತ ಪಾಲಿಸಬೇಕಿತ್ತು. ಇಲ್ಲಿನ ಜನಸಂಖ್ಯೆಗೆ ತಕ್ಕಂತಹ ಉದ್ಯೋಗ ನೀಡಬೇಕಾದರೆ

Medium scale industries & Small scale industriesಗಳ ಜರೂರತ್ತಿತ್ತು. ಆದರೆ ಸ್ವಾತಂತ್ರ್ಯ ಬಂದ ೫೫ ವರ್ಷಗಳ ನಂತರ ಇಂದಿಗೂ ಆ ಎರಡು ಕ್ಷೇತ್ರಗಳಿಗೂ ವಿಶೇಷ ಬೆಲೆ ಬಂದಿಲ್ಲ. ಆ ವರ್ಗದವರೊಂದಿಗೆ ನೆಹರೂ ಕಾಲದ ಅಸ್ಪೃಶ್ಯತೆ ಇಂದಿಗೂ ಜಾರಿಯಲ್ಲಿದೆ!
ನೆಹರೂ ಎಂದಿಗೂ ಗಾಂಧೀಜಿ ಹೇಳಿದ ಮಾರ್ಗದಲ್ಲಿ  ನಡೆದವರೇ ಅಲ್ಲ. ಗಾಂಧೀಜಿ ಆಶ್ರಮದಲ್ಲಿದ್ದ  ನಿಷ್ಠಾವಂತ ಕಾರ್ಯಕರ್ತರು ನೆಹರೂ ಪಾಲಿಗೆ ನಿಯತ್ತಿನ ಸಿಪಾಯಿಗಳು. ಚುನಾವಣೆ ಬಂತೆಂದರೆ ಸಾಕು, ಅಲ್ಲಿ ನೆಹರೂ ಹಾಜರ್. ಅದೇ ಕಾರ್ಯಕರ್ತರನ್ನು  ಪುಸಲಾಯಿಸಿ, ಬಡಿದೆಬ್ಬಿಸಿ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದರು. ಆ ಕಾರ್ಯಕರ್ತರ ಪ್ರಾಬಲ್ಯವಿದ್ದ  ಕ್ಷೇತ್ರದಲ್ಲಿ  ಅವರದೇ ಅಭ್ಯರ್ಥಿಯನ್ನು ನಿಲ್ಲಿಸಲೂ ಹಿಂದೆ-ಮುಂದೆ ನೋಡುತ್ತಿರಲಿಲ್ಲ. ಆಮೇಲೆ..? ಆಮೇಲೇನು? ಅದೇ ಗಾಂಧೀಜಿ ಆಶ್ರಮದಿಂದ ಹೊರಸೂಸುತ್ತಿದ್ದ  ಜಗ ಬೆಳಗುವ ಚಿಂತನೆಯನ್ನು  ಮೂಲೆಗೊತ್ತುತ್ತಿದ್ದರು. ಗಾಂಧೀಜಿಯ ಕಟ್ಟಾ ಅನುಯಾಯಿಯೊಬ್ಬರು ಮೂರು ಬಾರಿ ಚುನಾವಣೆ ರ್ಸ್ಪಸಿ ಗೆದ್ದರು. ಸರಕಾರ ಕೊಟ್ಟ  ಸೌಲಭ್ಯಗಳನ್ನೆಲ್ಲಾ  ಹಿಂದಿರುಗಿಸಿ ಗಾಂಜಿ  ಹೇಳಿದ ಮಾರ್ಗದಲ್ಲಿ  ನಡೆದರು. ಆದರೆ ನೆಹರೂ ಅವರ ಮಾತಿಗೆ  ಎಂದೂ ಬೆಲೆಯನ್ನೇ  ಕೊಡಲಿಲ್ಲ. ಗ್ರಾಮಸ್ವರಾಜ್ಯದ ಕಲ್ಪನೆಯನ್ನು  ಮೂದಲಿಸಿ ದೊಡ್ಡ ಕಾರ್ಖಾನೆಗಳನ್ನು  ಬೆಂಬಲಿಸುವುದರಲ್ಲಿಯೇ ಕಾಲಕಳೆದರು. ಆ ಕಾರ್ಖಾನೆಗಳಿಗಾಗಿ ಸಾಲತಂದರು. ದೇಶವನ್ನು  ಅಂತಾರಾಷ್ಟ್ರೀಯ ಮಟ್ಟದಲ್ಲಿ  ಚಿರಋಣಿಗಳನ್ನಾಗಿಸಿ(?) ಹೊರಟರು.

ಇದೇ ವೇಳೆಗೆ, ಭಾರತದ ನಂತರ ಸ್ವಾತಂತ್ರ್ಯ ಪಡೆದಿದ್ದ  ರಾಷ್ಟ್ರಗಳೆಲ್ಲ  ಮಿಂಚಿನಂತೆ ಬೆಳೆದವು. ರಾಷ್ಟ್ರದ ಅಂತಃಶಕ್ತಿಯನ್ನು ಗುರುತಿಸಿ, ನಿಸ್ವಾರ್ಥತೆಯಿಂದ ರಾಷ್ಟ್ರವನ್ನು  ಮುನ್ನಡೆಸಿದವರೆಲ್ಲ  ಜಗತ್ತಿನ ಭೂಪಟದಲ್ಲಿ  ಕಂಗೊಳಿಸುವಂತೆ ಬೆಳೆದರು. ಅಲ್ಲಿ ಬೆಳೆದದ್ದು  ವೈಯಕ್ತಿಕವಾಗಿ  ಆ ವ್ಯಕ್ತಿಗಳಲ್ಲ , ರಾಷ್ಟ್ರ!. ಆದರೆ ಭಾರತದಲ್ಲಿ  ನೆಹರೂ ಹಠಕ್ಕೆ  ಬಿದ್ದು,  ತಾವು ಬೆಳೆಯಬೇಕೆಂದರು. ಜಗತ್ತಿನ  ಎಲ್ಲ  ರಾಷ್ಟ್ರಗಳು  ತನ್ನ ಬಗ್ಗೆಯೇ ಮಾತಾಡಬೇಕೆಂದು ಆಶಿಸಿದರು. ಆ ಆಸೆಯ ಪೂರೈಕೆಗಾಗಿ ದೇಶದ ಹಿತಾಸಕ್ತಿಗಳನ್ನು  ಬಲಿಕೊಡಲಿಕ್ಕೂ  ಅವರು ಹಿಂದೆ-ಮುಂದೆ ನೋಡಲಿಲ್ಲ!!
ಭಾರತ ಸ್ವತಂತ್ರವಾಗಿ ಬಹುಕಾಲದ ನಂತರ ಅಕಾರ ಪಡೆದ ಸಿಂಗಾಪೂರದ  ಲೀ ಕ್ವಾನ್‌ಯೂರನ್ನು  ಈ ಸಂದರ್ಭದಲ್ಲಿ ಉಲ್ಲೇಖಿಸುವುದು ಸೂಕ್ತ. ಸ್ಪಷ್ಟ  ಉದ್ದೇಶ, ಚಿಂತನೆಗಳೊಂದಿಗೆ ದೇಶವನ್ನು  ಎತ್ತರಕ್ಕೆ  ಬೆಳೆಸಬೇಕೆಂಬ ಹಠಕ್ಕೆ  ಬಿದ್ದ ಕ್ವಾನ್‌ಯೂ ಅಂತಾರಾಷ್ಟ್ರೀಯ ಮಟ್ಟದಿಂದ  ವ್ಯಾಪಾರಿಗಳನ್ನು  ಸಿಂಗಾಪೂರಕ್ಕೆ ಸೆಳೆದರು. ಅದೇ ವೇಳೆಗೆ ಸಿಂಗಾಪೂರದ ಕಲೆ ಜಗತ್ತು  ಮೆಚ್ಚುವಂತೆ ನೋಡಿಕೊಂಡರು. ಸಿಂಗಪೂರ್ ನೋಡುತ್ತ, ನೋಡುತ್ತ ಕಣ್ಣು ಕುಕ್ಕುವ ನಗರವಾಗಿಬಿಟ್ಟಿತು. ಕ್ವಾನ್‌ಯೂ ಒಮ್ಮೆ  ಮಾತನಾಡುತ್ತ, ‘ಹೊರಗಡೆಯಿಂದ ಬರುವ ತಂತ್ರಜ್ಞಾನ, ಬಂಡವಾಳವನ್ನು  ಸಿಂಗಾಪೂರ ಸ್ವಾಗತಿಸುತ್ತಿದೆ. ಆದರೆ ಆ ನೆಪದಲ್ಲಿ  ಅದು ತನ್ನತನವನ್ನು  ಕಳೆದುಕೊಳ್ಳಲು ಸಿದ್ಧವಿಲ್ಲ’ ಎಂದಿದ್ದರು. ‘ನಾಯಕರು, ಅಕಾರಿಗಳು, ನಿರ್ಣಯ ಮಾಡಬಲ್ಲ ಜನ ಇವರೆಲ್ಲ  ಮೊದಲು ಶಿಸ್ತನ್ನು  ಪಾಲಿಸಬೇಕು. ಶಿಸ್ತನ್ನು  ಇತರರ ಮೇಲೆ ಹೇರುವ ಮುನ್ನ  ಅದನ್ನು  ಅನುಸರಿಸಿ ತೋರಿಸಬೇಕು. ಅವರು ಮೊದಲು ಭ್ರಷ್ಟಾಚಾರರಹಿತರಾಗಿ ಜನರಿಗೆ ಉದಾಹರಣೆಯಾಗಬೇಕು’ ಎಂದೂ ಹೇಳಿದ್ದರು. ಅವೆಲ್ಲ  ನೆಹರೂ ಕಿವಿಗೆ  ಬೀಳುವುದು  ಸಾಧ್ಯವೇ ಇರಲಿಲ್ಲ. ಬಿದ್ದರೂ  ಕ್ವಾನ್‌ಯೂ ಹೇಳಿದ ಯಾವುದನ್ನೂ  ಅವರಿಗೆ  ಮಾಡಿ ತೋರಿಸುವುದು ಸಾಧ್ಯವಿರಲಿಲ್ಲ.  ಶಿಸ್ತು, ಚಿಂತನೆಗಳಲ್ಲಿನ  ಸ್ಪಷ್ಟತೆ, ಇವು ನೆಹರೂ  ಪಾಲಿಗೆ ದೂರ-ಬಹುದೂರ! ಚೆಂದದ ಬಟ್ಟೆ, ಭಾಷಣ, ಹೊಗಳುಭಟರ ಸಹವಾಸ ಅವರಿಗೆ ಹೇಳಿ ಮಾಡಿಸಿದಂಥವಾಗಿದ್ದವು!
‘ನಿಮ್ಮ  ದೇಶದಲ್ಲಿ  ಪ್ರತಿಭೆಗಳಿಗೆ ಸೂಕ್ತ ಅವಕಾಶಕೊಡುತ್ತಿಲ್ಲ. ಅವರಿಗೆ ತಮ್ಮ  ಸಾಧನೆ ತೋರ್ಪಡಿಸಲು ಅನುಕೂಲವಾಗುವಂತಹ, ಆರ್ಥಿಕ-ಸಾಮಾಜಿಕ-ರಾಜಕೀಯ ಪರಿಸರದ ನಿರ್ಮಾಣ ಮಾಡಿಕೊಡುತ್ತಿಲ್ಲ. ಇದೇ ಭಾರತೀಯರು ಸಿಂಗಾಪೂರಕ್ಕೆ ಬಂದರೆ ಅದ್ಭುತ ಸಾಧನೆ ಮಾಡುತ್ತಾರೆ. ಆದರೆ ಇಲ್ಲಿ  ಅವರಿಂದ ಸಾಧ್ಯವಿಲ್ಲ’ ಮುಂತಾದ ವಿಚಾರಗಳನ್ನು  ಮನಸ್ಸಿಗೆ ನಾಟುವಂತೆ ಹೇಳಿ ‘ಭಾರತ ಬೆಳೆದರೆ ನಮಗೆ ಲಾಭವಿದೆ. ಅದಕ್ಕೆ ಸ್ವಾರ್ಥದಿಂದ  ಭಾರತ ಬೆಳೆಯಲಿ ಎಂದು ಆಶಿಸುತ್ತಿದ್ದೇನೆ’ ಎಂದು ಕ್ವಾನ್‌ಯೂ ಹೇಳಿದ್ದರು.

ಏಷ್ಯಾದ ಬಹುತೇಕ ರಾಷ್ಟ್ರಗಳು ಹೀಗೆ ಭಾರತ ಆರ್ಥಿಕವಾಗಿ ಶಕ್ತಿಯುತವಾಗುವುದನ್ನು  ಕಾಯುತ್ತ  ಕುಳಿತಿದ್ದವು. ದಶಕಗಳಷ್ಟು ದೀರ್ಘಕಾಲ ಕಾದವು. ಭಾರತ ಪ್ರಬಲವಾಗುವ ಬದಲು, ಆರ್ಥಿಕವಾಗಿ ದುರ್ಬಲವಾಗುತ್ತ ಸಾಗಿದಂತೆಲ್ಲ ಹತಪ್ರಭವಾದವು. ಜಪಾನ್-ಚೀನಾಗಳ ಮೊರೆಹೊಕ್ಕು ಸುಮ್ಮನಾದವು. ನೆಹರೂ ಯೋಜನೆಗಳ ಮೇಲೆ ಯೋಜನೆಗಳನ್ನು  ರೂಪಿಸಿದರು. ಪ್ರತಿಯೊಂದೂ ಬಡ ಭಾರತದಲ್ಲಿ  ಸಂಪತ್ತನ್ನು  ಸೃಷ್ಟಿಸುವ (ನೆನಪಿಡಿ! ಸಂಪತ್ತನ್ನು  ಗಳಿಸುವುದಲ್ಲ ) ಯೋಜನೆಗಳೇ ಆದವು. ಅದಕ್ಕೆ ಸಾಲ ತರಲಾಯಿತು. ತಂದ ಸಾಲದಲ್ಲಿ  ಬಹುಪಾಲು ನೆಹರೂ ಮತ್ತವರ ತಂಡಕ್ಕೇ ಖರ್ಚಾಯಿತು. ಮಂತ್ರಿಗಳು -ರಾಜಕಾರಣಿಗಳು-ಅಕಾರಿವರ್ಗ ಇವರೆಲ್ಲರ ಖರ್ಚುವೆಚ್ಚ  ಅಷ್ಟು  ಅಪಾರವಾಗಿತ್ತು!
ಭಾರತದಲ್ಲಿ ಹುಟ್ಟುತ್ತಿರುವ -ಇನ್ನೂ  ಹುಟ್ಟದಿರುವ  ಮಗುವೂ ಕೂಡ ಸಾಲದ ಹೊರೆ ಹೊರಲೇಬೇಕಾಯಿತು. ಮತ್ತು  ಪರಿಸ್ಥಿತಿಗಳನ್ನು  ಅವಲೋಕಿಸಿದ ರಾಷ್ಟ್ರಪತಿ ಡಾ| ಬಾಬು ರಾಜೇಂದ್ರ ಪ್ರಸಾದರು ದ್ವಿತೀಯ ಪಂಚವಾರ್ಷಿಕ ಯೋಜನೆ (೨ನೇ ಜೂನ್ ೧೯೫೭)ಯ ಮುನ್ನ ನೆಹರೂಗೆ ಪತ್ರ ಬರೆದರು,
‘ನಾವು ಯೋಜನೆಗಳಲ್ಲಿ  ತೊಡಗಿಸುತ್ತಿರುವ ಹಣ ಸರಿಯಾಗಿ ಬಳಕೆಯಾಗುತ್ತಿದೆಯೋ ಇಲ್ಲವೋ ಎಂಬುದನ್ನು  ಗಮನಿಸಲಿಕ್ಕೆ  ಸೂಕ್ತ ವ್ಯವಸ್ಥೆ  ಮಾಡಲಾಗಿದೆ ಎಂದು  ಭಾವಿಸಿದ್ದೇನೆ…. ಹಾಗೇನಾದರೂ ಆಗದಿದ್ದಲ್ಲಿ, ಜನರ ಬೆವರಿನ ಹಣ, ತ್ಯಾಗದ ಹಣ ವಿಪತ್ತಿಗಾಗಿ ಖರ್ಚಾದಂತಾಗುತ್ತದೆ. ನಾವು ಎರಡನೇ ಪಂಚವಾರ್ಷಿಕ ಯೋಜನೆಗಳಿಗೆಂದೇ ಜನರ ಮೇಲೆ ತೆರಿಗೆಯ ಭಾರ ಹೇರಿದ್ದೇವೆ. ಆದರೆ ಇದೇ ಸಂದರ್ಭದಲ್ಲಿ  ಹೊಸ ಆರ್ಥಿಕ ನೀತಿಯನ್ನು  ಜಾರಿಗೆ ತರಲು, ಆಡಳಿತಕ್ಕೆಂದು  ಮಾಡುತ್ತಿರುವ  ಖರ್ಚನ್ನು ಕಡಿತಗೊಳಿಸಲು  ಯಾವ-ಯಾವ ಕ್ರಮಗಳನ್ನು   ಕೈಗೊಂಡಿದ್ದೇವೆಂಬುದು ನನಗೆ ತಿಳಿಯುತ್ತಿಲ್ಲ. ಹನಿ ಹನಿ ಸೋರಿ ಅದು ಖಾಲಿಯೂ ಆಗಬಹುದು. ಅದಕ್ಕೆ ಪ್ರತಿಯೊಂದು ವಿಭಾಗಗಳೂ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಯಾವುದೇ ಯೋಜನೆಗಳನ್ನು  ಕೈಗೊಳ್ಳುವ ಮುನ್ನ ಅದು ನಮ್ಮ  ಆರ್ಥಿಕ ಪರಿಸ್ಥಿತಿಗೆ ಸೂಕ್ತವಾಗಿ  ಹೊಂದಾಣಿಕೆಯಾಗುವಂತಿರಬೇಕು. ಕೊರತೆ ನಿರ್ಮಾಣವಾಗಿ ಜನರ ಮೇಲೆ ತೆರಿಗೆಯ ಭಾರ ಅಕವಾಗದಂತೆ ನೋಡಿಕೊಳ್ಳುವ ವ್ಯವಸ್ಥೆ  ಇರಬೇಕು’ ಎಂದೆಲ್ಲ  ಬುದ್ಧಿಮಾತು ಹೇಳಿದ್ದರು.

ಕೇಳುವ ವ್ಯವಧಾನ ನೆಹರೂಗಿರಲಿಲ್ಲ. ಆ ಪತ್ರ ಅದ್ಯಾವ  ಬುಟ್ಟಿ ಸೇರಿತೋ ದೇವರೇ ಬಲ್ಲ.
ನೆಹರೂ ಪಾಲಿಗೆ ಸರ್ಕಾರ ನಡೆಸುವುದೆಂದರೆ ಐಷಾರಾಮಿ ಹೋಟೇಲು ನಡೆಸಿದಂತೆ. ಅಲ್ಲಿ ಎಲ್ಲವೂ ವೈಭವೋಪೇತವಾಗಿರಬೇಕು. ಅದಕ್ಕೆ  ಅಗತ್ಯವಿರುವಷ್ಟು  ಹಣ  ದೊರೆಯದಿದ್ದರೆ ಸಾಲವಾದರೂ ತರಬೇಕು. ಇದು  ಅವರ ಚಿಂತನೆ. ಅದಕ್ಕೆ  ತಕ್ಕಂತೆ  ಭಾರತ ಒಂದು  ವೈಭವೋಪೇತ ಹೋಟೆಲಿನಂತಾಯಿತೇ ಹೊರತು ರಾಷ್ಟ್ರವಾಗಲಿಲ್ಲ, ಶಕ್ತಿಯಾಗಲಿಲ್ಲ!

ಯೋಜನೆಗಳ ಹೆಸರಿನಲ್ಲಿ  ಖರ್ಚು ಮಾಡಿದ  ಒಂದೊಂದು ಹಣವೂ ಸೇರಬೇಕಾದ  ಸ್ಥಳ ಸೇರಲಿಲ್ಲ. ಕೆಲಸವೇನೋ ಬೇಕಾದಷ್ಟಾಯ್ತು. ಆದರೆ ಗುಣಮಟ್ಟ ಕಳಪೆಯಾಯಿತು. ೧೯೫೨-೫೩ರಲ್ಲಿ  ಒಂದು ಕೊಳವೆ ಬಾವಿ ೨೦೦ ಎಕರೆಗಳ ಭೂಮಿಗೆ ನೀರುಣಿಸಲು ಶಕ್ತವಾಗಿದ್ದರೆ, ಪಂಚವಾರ್ಷಿಕ ಯೋಜನೆಗಳ ಫಲವಾಗಿ  ಸಿಕ್ಕಸಿಕ್ಕಲ್ಲಿ ಕೊರೆದ ಕೊಳವೆ ಬಾವಿಗಳು ೧೯೫೫-೫೬ರ ವೇಳೆಗೆ ಸರಾಸರಿ ೬೦ ಎಕರೆ ಭೂಮಿಯನ್ನು  ಮಾತ್ರ ತಣಿಸಬಲ್ಲವಾಗಿದ್ದವು. ಹಣ ಸುರಿದದ್ದು ವ್ಯರ್ಥವಾಗಿತ್ತು. ಸರ್ಕಾರ ಜನ ಮಾಡುತ್ತಿದ್ದ  ಕೆಲಸಗಳನ್ನು  ತಾನೇ ಮಾಡಲು  ಮುಂದಾದ್ದರಿಂದ ಜನರೂ  ಆಲಸಿಗಳಾದರು. ಕೆರೆ ಹೂಳೆತ್ತಬೇಕಿದ್ದರೂ  ಸರ್ಕಾರದ ಮರ್ಜಿಗೆ ಕಾಯಲು ಶುರುವಿಟ್ಟರು. ಇಡಿಯ ದೇಶ ನೈತಿಕ ತಳಹದಿಯನ್ನು  ಕಳೆದುಕೊಳ್ಳಲು ಶುರುವಿಟ್ಟಿತು.

ಅವುಗಳ  ಎಲ್ಲ  ಶ್ರೇಯ ನೆಹರೂವಿಗೇ ಸಲ್ಲಬೇಕು!

Tagged with:

ಭಯೋತ್ಪಾದನಾ ನಿಗ್ರಹ- ಕೆಲವು ವೈಫಲ್ಯಗಳು

Posted in ನಮ್ಮ ನಮ್ಮ ನಡುವೆ by Chakravarty on December 1, 2008

ಮತ್ತೊಂದು ಮಾಯದ ಗಾಯ!
ಸುಖಾಂತ್ಯವಾಯ್ತೆಂದು ಬೀಗಿದ್ದಷ್ಟೆ ಬಂತು. ಸತ್ಯ ಹೇಳಿ. ಒಂಭತ್ತು ಉಗ್ರಗಾಮಿಗಳನ್ನು ಕೊಲ್ಲಲು ೬೨ ಗಂಟೆಗಳಷ್ಟು ದೀರ್ಘ ಕಾಲ ಸವೆಸಿದ್ದನ್ನು (ಅದೂ ಭಾರತದ ಪ್ರಮುಖ ನಗರಿ ಮುಂಬಯ್ ನೊಳಗೆ) ಯಾರಾದರೂ ಹೆಮ್ಮೆಯಿಂದ ಹೇಳಿಕೊಳ್ಳಬಹುದೇನು?
ಧಿಕ್ಕಾರವಿರಲಿ ಸರ್ಕಾರಗಳಿಗೆ!
ಧಿಕ್ಕಾರವಿರಲಿ ನಮ್ಮ ರಕ್ಷಣಾ ಪಡೆಗಳಿಗೆ!!

ಮೊದಲನೆಯದೇನೋ ಸರಿ. ಈ ಎರಡನೆಯದೇಕೆ ಎನ್ನುವಿರೇನೋ?
ಹೌದು. ಆ ಸಾಲು ಬರೆಯಬೇಕಾದರೆ ನನಗೂ ವಿಪರೀತ ನೋವಿದೆ. ಆದರೆ ಬರೆಯದೇ ವಿಧಿಯಿಲ್ಲ. ಕಾದಾಟದಲ್ಲಿ ಸತ್ತವರಿಗೆ ಶ್ರದ್ಧಾಂಜಲಿ ಅರ್ಪಿಸುವ ಭರದಲ್ಲಿ ಆದದ್ದನ್ನು ಮರೆತುಬಿಟ್ಟರೆ… ಮುಂದಿನ ವರ್ಷ ಮತ್ತೊಂದಷ್ಟು ಜನರಿಗೆ ಶ್ರದ್ಧಾಂಜಲಿ ಅರ್ಪಿಸಬೇಕಾದೀತು.

ನಮ್ಮ ಪೋಲಿಸ್ ಪಡೆ, ವಿಶೇಷ ದಳಗಳು ಮತ್ತು ಕಮಾಡೋಗಳ ನಡುವೆ ಹೊಂದಣಿಕೆ ಇಲ್ಲ ಎಂಬುದು ಮೊದಲಿಂದ ಗೊತ್ತಿದ್ದರೂ ಈಗ ಅದು ಸ್ಪಷ್ಟವಾಗಿ ಸಾಬೀತಾಯ್ತು. ಪ್ರತಿಯೊಬ್ಬರಿಗೂ ನಾವು ಮೇಲ್ಮಟ್ಟದವರೆನ್ನುವ ಹಮ್ಮು. ಗೆಲುವಿನ ಸಹಿ ತಮ್ಮಿಂದಲೇ ಬರೆಯಲ್ಪಡಬೇಕೆನ್ನುವ ಆತುರ. ಹೀಗಗಿ ಒಳಹೊಕ್ಕ ಉಗ್ರರೆಷ್ಟು? ಅಡಗಿರುವ ತಾಣಗಳಾವುವು? ತಾಜ್ ನ ಕಟ್ಟಡ ಹೇಗಿದೆ? ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೇ ಪ್ರತಿದಾಳಿ ಶುರುವಿಟ್ಟರು.
ಉಗ್ರ ನಿಗ್ರಹಕ್ಕೆಂದೇ ರಚನೆಯಾದ ದಳವೊಂದು  ಎಷ್ಟು ಬೆಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದೆಯೆಂದರೆ, ಒಬ್ಬ ಉಗ್ರನ ಕೈಲಿ ಮೂವರು ಪ್ರಮುಖ ಅಧಿಕಾರಿಗಳು ಕೊಲೆಯಾಗುವಷ್ಟು!
‘ಉಗ್ರ ನಿಗ್ರಹ ದಳ’ವೆಂದರೆ ಸಾಮಾನ್ಯ ಪೋಲಿಸರೆಂದು ಭಾವಿಸಬೇಡಿ. ಅವರಿಗೆ ಉಗ್ರರ ಮನಸ್ಥಿತಿಯ ಪರಿಚಯ ಮಾಡಿಕೊಡಲಾಗಿರುತ್ತದೆ. ಅವರ ಹೋರಾಟದ ಹೆಜ್ಜೆಗಳ ಅರಿವು ಮೂಡಿಸಲಾಗಿರುತ್ತದೆ. ಪ್ರತಿಯೊಬ್ಬನ ಶಕ್ತಿ ಸಾಮರ್ಥ್ಯಗಳ ಅಂದಾಜು ತಿಳಿಸಲಾಗಿರುತ್ತದೆ. ಜೊತೆಗೆ, ಗುಪ್ತಚರ ಇಲಾಖೆಗಳೊಂದಿಗೆ ಸಂಪರ್ಕ ಕೊಡಿಸಿ ಒಳಗಿನ ಶತ್ರುಗಳ ಬಗ್ಗೆಯೂ ವಿವರ ನೀಡಲಾಗಿರುತ್ತದೆ.
ಇಷ್ಟೆಲ್ಲಾ ಇದ್ದರೂ ಅತಿ ವಿಶ್ವಾಸದೊಂದಿಗೆ ಹೊರಟು ಬಲಿಯಾಗಿಬಿಟ್ಟರಲ್ಲ… ಸರಿಯಾ? ಬಹುಶಃ ಅವರು ತಮಗಿಂತ ಕೆಳಮಟ್ಟದ ಪೋಲಿಸರೊಂದಿಗೆ ಸಮನ್ವಯವನ್ನೇ ಸಾಧಿಸಿರಲಿಲ್ಲವೆನಿಸುತ್ತದೆ. ಅವರ ಸಮನ್ವಯತೆಯೇನಿದ್ದರೂ ಮುಖ್ಯಮಂತ್ರಿ, ಪಿ.ಎಂ, ಸೂಪರ್ ಪಿ.ಎಂ.ಗಳೊಂದಿಗೆ. ಇಲ್ಲವಾದರೆ, ಪ್ರಜ್ಞಾ ಸಿಂಗಳನ್ನು  ಬಂಧಿಸುವಲ್ಲಿ ಖರ್ಚು ಮಾಡಿದ ಬುದ್ಧಿಮತ್ತೆಯ ಹತ್ತನೇ ಒಂದು ಭಾಗದಷ್ಟಾದರೂ ಖರ್ಚು ಮಾಡಿದ್ದರೆ ಸಾಕಿತ್ತು. ಉಗ್ರರನ್ನು ಬಡಿಯುವುದು ಅಷ್ಟೊಂದು ಕಷ್ಟವಾಗುತ್ತಿರಲಿಲ್ಲ.

ಖಂಡಿತ. ಹೋರಾಡುತ್ತ ಮಡಿದವರ ಬಗ್ಗೆ ನನಗೆ ನೋವಿದೆ. ಗೌರವವಿದೆ. ಆದರೆ ಅವರನ್ನು ಉಗ್ರ ನಿಗ್ರಹಕ್ಕೆಂದು ನಿಯೋಜಿಸಿರುವುದು ಪ್ರಾಣ ಕೊಡಲಿಕ್ಕಲ್ಲ, ಪ್ರಾಣ ತೆಗೆಯಲಿಕ್ಕೆ. ಗಡಿ ಭಾಗದ ಸೈನಿಕನ ಸಾವಿಗೂ ಭಾರತದೊಳಗಿನ ಈ ವೀರರ ಸಾವಿಗೂ ಖಂಡಿತ ಸಮ್ಯವಿಲ್ಲ. ಅಲ್ಲಿ ಎದುರಾಳಿಯಾದವನು ತನ್ನದೇ ಆದ ಆಯಕಟ್ಟಿನ ಜಾಗದಲ್ಲಿ ನಿಂತಿರುತ್ತಾನೆ. ಅವನ ಶಕ್ತಿಯ ಅರಿವು ನಮ್ಮ ಸೈನಿಕರಿಗಿರುವುದಿಲ್ಲ. ಇಲ್ಲಿ, ಆಯಕಟ್ಟು ನಮ್ಮದು. ಸಾಮರ್ಥ್ಯವೂ ನಮ್ಮದೇ. ಅದರೂ ಫಲಿತಾಂಶ ಹೀಗಗಿಬಿಡುತ್ತದೆ.

ಏಕೆ ಗೊತ್ತೆ? ಇವರಿಗೆಲ್ಲ ದೇಶ ರಕ್ಷಣೆಗಿಂತ, ಕುರ್ಚಿಯ ಮೇಲೆ ಕುಳಿತ ನಾಯಕನ ರಕ್ಷಣೆಯ ಜರೂರತ್ತಿದೆ. ಇಲ್ಲವಾದರೆ, ಒಳ ಬಂದ ಉಗ್ರನ ಕೈಲಿರುವ ಕೇಸರಿ ದಾರ ನೋಡಿ ‘ಹಿಂದೂ ಉಗ್ರ’ ಎಂದು ಸಾಧಿಸಿಬಿಡುವ ಹಟಕ್ಕೆ ನಮ್ಮ ರಕ್ಷಣಾ ಇಲಾಖೆ ಬೀಳುತ್ತಿರಲಿಲ್ಲ.
ಬಿಡಿ. ಅವರ ಬಗ್ಗೆ ಇನ್ನು ಮಾತಾಡಿ ಪ್ರಯೋಜನವೇ ಇಲ್ಲ. ಅಕಸ್ಮಾತ್ ಹೀಗೆ ಒಳಗೆ ಬಂದಿರುವವರು ನಿಜವಾಗಿಯೂ ಹಿಂದೂ ಉಗ್ರನಾಗಿದ್ದಿದ್ದರೆ ಏನಾಗಿರುತ್ತಿತ್ತು? ಮಾಧ್ಯಮಗಳೆಲ್ಲ ಹಿಂದೂಗಳ ವಿರುದ್ಧ ತಿರುಗಿಬಿದ್ದಿರುತ್ತಿದ್ದವು. ಅನಂತಮೂರ್ತಿ, ಕಾರ್ನಾಡ್, ಗೌರಿ ಲಂಕೇಶರೆಲ್ಲ ಬೊಂಬಡಾ ಬಜಾಯಿಸಿಬಿಟ್ಟಿರುತ್ತಿದ್ದರು. ನಾವು, ನೀವು ಮುಖ ಎತ್ತಿಕೊಂಡು ರಸ್ತೆಗಿಳಿಯುವಂತಿರಲಿಲ್ಲ. ಇದೇ ಉಗ್ರ ನಿಗ್ರಹ ದಳದ ಸಿಬ್ಬಂದಿ ಆ ತಂಡದ ಅಷ್ಟೂ ಜನರನ್ನು ಹಿಡಿದು, ಹಿಂಸಿಸಿ, ಪ್ರತಿನಿತ್ಯ ಹೇಳಿಕೆಗಳನ್ನು, ಅವರಿಂದ ಪಡೆದ ಮಾಹಿತಿಗಳನ್ನು ಪತ್ರಿಕೆಗಳಿಗೆ ಬಹಿರಂಗಪಡಿಸುತ್ತಿತ್ತು. ವಾಸ್ತವವಾಗಿ ಹಾಗೆ ಮಾಡಬಾರದೆಂಬ ನಿಯಮವಿದೆ. ಆದರೆ ಪ್ರಜ್ಞಾ ಸಿಂಗಳ ವಿಚಾರದಲ್ಲಿ, ಪ್ರತಿನಿತ್ಯ ಪತ್ರಿಕೆಗಳ ಮುಖಪುಟದಲ್ಲಿ ವಿಚಾರಣೆಯ ವಿವರ ಬರುತ್ತಿತ್ತಲ್ಲ? ‘ಹಿಂದೂ’ಉಗ್ರಗಾಮಿ ಎಂದು ಸಾಬೀತುಪಡಿಸುವ ಯತ್ನ ನಡೆಯುತ್ತಿತ್ತಲ್ಲ? ಇದರಲ್ಲಿ ಕರ್ಕರೆ ಅವರ ಕೈವಡವಿತ್ತಾ? ಕೆಳೋಣವೆಂದರೆ, ಅವರು ಬದುಕಿಲ್ಲ. ಹೋಗಲಿ, ಸಾಧ್ವಿಯ ಕಿಡ್ನಿಗೆ ಏಟುಬೀಳುವಂತೆ ಅವಳನ್ನು ಬಡಿದಿದ್ದಾರಲ್ಲ, ಅದರ ಬಗ್ಗೆ ಅವರಿಗೆ ಗೊತ್ತಿತ್ತಾ? ಅದೂ ಗೊತ್ತಿಲ್ಲ.

ಇನ್ನು ಹೇಳುವುದೇನಿಲ್ಲ. ನಮ್ಮ ರಕ್ಷಣೆಗೆಂದು ನಿಯೋಜಿತರಾದವರ ರಕ್ಷಣೆ ನಾವೇ ಮಾಡಬೇಕಾ? ಅಷ್ಟಾದರೂ ಹೇಳಿಬಿಟ್ಟರೆ ನಾವೇ ಒಂದು ಪಡೆಕಟ್ಟಿ, ಒಂದು ಕೈ ನೋಡಬಹುದು. ಇಷ್ಟಕ್ಕೂ ದೇಶ ರಕ್ಷಣೆಯ ಹೊಣೆ ನಮ್ಮೆಲ್ಲರಿಗೂ ಇದೆಯಲ್ಲವೇ? ಬಹುಶಃ ನಾವೂ ನೀವೂ ಬಂದೂಕು  ಕೈಲಿ ಹಿಡಿದು ಹೋರಾಡುವ ಕಾಲ ಹತ್ತಿರ ಬಂದಿದೆ.
Be alert… Be ready.

ಅಮೆರಿಕನ್ನರಿಂದ ಪಾಠ ಕಲಿಯಲಿದು ಸಕಾಲ…

Posted in ದಿಲ್ ಹೈ ಹಿಂದೂಸ್ಥಾನಿ by Chakravarty on November 28, 2008

ಮನಸ್ಸೇನೋ ಕುದಿಯುತ್ತಿದೆ. ಆದರೇನು? ಸ್ವಲ್ಪ ಕಾಲ ಸುಮ್ಮನಿರೋಣ. ಅದು ಅಮೆರಿಕ ಕಲಿಸಿದ ಪಾಠ. ವಿಶ್ವ ವ್ಯಾಪಾರಕೇಂದ್ರ ಕಟ್ಟಡಗಳು ಉರುಳಿಬಿದ್ದಾಗ ಅಮೆರಿಕನ್ನರು ಅಧ್ಯಕ್ಷರ ಮೇಲೆ ಎದುರಾಡಾಲಿಲ್ಲ. ಸುಮ್ಮನಿದ್ದರು. ಆಫ್ಘಾನಿಸ್ಥಾನದ ಮೇಲೆ ಮುಗಿಬಿದ್ದರು. ತಮ್ಮ ದೇಶದಲ್ಲಿ ಕಳಕೊಂಡ ಒಂದೊಂದು ಜೀವದ ಲೆಕ್ಕ ಚುಕ್ತಾ ಮಾಡಿದರು. ಇಷ್ಟಕ್ಕೂ ನಾವೀಗ ನೇರ ಆಕ್ರಮಣವನ್ನೇನೂ ಮಾಡಬೇಕಿಲ್ಲ. ಪಾಕಿಸ್ಥಾನದ ಮೇಲೆ ಆರ್ಥಿಕ ದಿಗ್ಬಂಧನ ಹೇರಿದರೂ ಸಾಕು. ಅದರೊಂದಿಗೆ ಸಂಬಂಧ ಹೊಂದಿರುವ ದೇಶಗಳತ್ತ ಮುನಿಸಿ ಕುಂತರೂ ಸಾಕು. ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಆಘಾತವನ್ನೇ ನೀಡಿದಂತಾಗುತ್ತದೆ.

ಭಾರತದ ಹಿಂದಿನ ವೈಭವವನ್ನು ಹೇಳಿ- ಕೇಳಿ ಸಾಕಾಗಿಹೋಗಿದೆ. ಒಂದೋ ನಾವೀಗ ಬದುಕಬೇಕು, ಇಲ್ಲವೇ ಇಡಿಯ ರಾಷ್ಟ್ರವನ್ನು ನಿರ್ನಾಮಗೊಳ್ಳಲು ಬಿಟ್ಟು ಸಾಯಬೇಕು. ಹೋರಾಡಿ ಬದುಕುವುದಕ್ಕಿಂತ ನರಸತ್ತವರ ಹಾಗೆ ಸಾಯುವುದೇ ಸರಿ ಎಂದವರ ಬಗ್ಗೆ ಯಾರೇನೂ ಮಾಡಲಾಗದು. ಅಂಥವರು ತಮ್ಮೂರ ರಸ್ತೆಗಳಲ್ಲಿ ಅಡ್ಡಾದಿಡ್ಡಿ ಹಾರಾಡುವ ಉಗ್ರರ ಗುಂಡುಗಳಿಗೆ ಹೆಣವಾಗುತ್ತಾರೆ. ಹೀಗೆ ಸತ್ತಿದ್ದಕ್ಕೆ ಸರ್ಕಾರದಿಂದ ಲಕ್ಷ ಲಕ್ಷ ರುಪಾಯಿಗಳ ಭಕ್ಷೀಸು ಪಡೆಯುತ್ತಾರೆ.
ಇಂತಹ ಸಾವಿಗೆ ನಮ್ಮ ಪಾಳಿ ಎಂದು ಬಂದೀತೋ ಎಂದು ಕಾಯುತ್ತ ಕೂರೋಣವೆ?

ನಮ್ಮಲ್ಲಿ ಜೀವಗಳಿಗೆ ಬೆಲೆಯೇ ಇಲ್ಲ. ಇಂದು ಬಾಂಬ್ ದಾಳಿಗೆ ತತ್ತರಿಸಿದ ಮುಂಬಯಿಯಲ್ಲಿ ನಾಳೆ ಎಲ್ಲವೂ ಸರಿಯಾಗಿಯೇ ನಡೆಯುತ್ತದೆ. ಬೆಳಗಿನ ಎಕ್ಸ್ ಪ್ರೆಸ್ ರೈಲು ಸರಿಯಾದ ಸಮಯಕ್ಕೆ ಬರುತ್ತದೆ. ಕಾಲಿಗೆ ಬಿಗಿಯಾಗಿ ಲೇಸ್ ಕಟ್ಟಿಸಿಕೊಂಡ ಮಗು ತನ್ನ ಶಾಲೆಗೆ ಹೊರಡುತ್ತದೆ. ತರಕಾರಿ ಮಾರಾಟ, ಹೆಂಗಸರ ಚೌಕಶಿ, ಷೇರು ಪೇಟೆ- ಎಲ್ಲವೂ ಮಾಮೂಲಿ. ಆದರೆ, ರಾಷ್ಟ್ರದ ಅಸ್ಮಿತೆಗೆ ಆದ ಗಾಯ…? ಅದು ಮಾಯುವುದು ಯಾವಾಗ?

೧೯೯೩ರಲ್ಲಿ ಆದ ಮುಂಬೈ ಸರಣಿ ಸ್ಫೋಟದ ರೂವಾರಿಗಳೇ ಇನ್ನೂ ಕೈಗೆ ಸಿಕ್ಕಿಲ್ಲ. ಸಂಸತ್ತಿನ ಮೇಲೆ ಆಕ್ರಮಣ ಮಾಡಿದವರಿಗೆ ಶಿಕ್ಷೆ ಘೋಷಣೆಯಾಗಿದ್ದರೂ ಜಾರಿಯಾಗಿಲ್ಲ. ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ ನಡೆಸಿದವರೂ ಪತ್ತೆಯಾಗಿಲ್ಲ. ಕರಾಚಿಯಿಂದ ಉಗ್ರರು ಮುಂಬೈಗೆ ರಾಜಾರೋಷವಾಗಿ ಬಂದಿದ್ದಾರೆಂದರೆ, ಇಡಿಯ ರಕ್ಷಣಾ ವ್ಯವಸ್ಥೆ ಅದೆಷ್ಟು ಹದಗೆಟ್ಟಿದೆಯೆಂದು ಕೇಳುವವರಿಲ್ಲ.
ಪಟ್ಟಿ ಸಕಷ್ಟು ಉದ್ದವಿದೆ. ರಾಷ್ಟ್ರವೆಂಬ ನ್ಯಾಯಾಲಯದಲ್ಲಿ ನಾವೆಲ್ಲರೂ ಅಪರಾಧಿ ಸ್ಥಾನದಲ್ಲಿದ್ದೇವೆ. ನಿಷ್ಕ್ರಿಯತೆಯ ಕಳಂಕ ನಮ್ಮನ್ನು ಮೆತ್ತಿಕೊಂಡಿದೆ. ಇನ್ನು ಬಹುಕಾಲ ಇದು ನಡೆಯಲಾರದು. ನಮ್ಮ ದಾರಿ ನಾವು ಆರಿಸಿಕೊಳ್ಳಬೇಕಿದೆ. ಒಂದೋ ಹೇಡಿಗಳಂತೆ ಸಾಯಬೇಕು, ಇಲ್ಲವೇ ದೇಶದ್ರೋಹಿಗಳನ್ನು ಹುಡುಹುಡುಕಿ ಕೊಲ್ಲಬೇಕು. ಇದು ತುರ್ತು ಪರಿಸ್ಥಿತಿ. ಹೀನ ರಕ್ಷಣಾ ಮಂತ್ರಿ ಶಿವರಾಜ ಪಾಟೀಲರನ್ನು, ಚಮಚಾಗಿರಿಗಷ್ಟೇ ಸೂಕ್ತರಾದ ಮನಮೋಹನ ಸಿಂಗರನ್ನು ತರಾಟೆಗೆ ತೆಗೆದುಕೊಳ್ಳಲು ಇದು ಸಕಾಲವಲ್ಲ. 

ಮನಸ್ಸೇನೋ ಕುದಿಯುತ್ತಿದೆ. ಆದರೇನು? ಸ್ವಲ್ಪ ಕಾಲ ಸುಮ್ಮನಿರೋಣ. ಅದು ಅಮೆರಿಕ ಕಲಿಸಿದ ಪಾಠ. ವಿಶ್ವ ವ್ಯಾಪಾರಕೇಂದ್ರ ಕಟ್ಟಡಗಳು ಉರುಳಿಬಿದ್ದಾಗ ಅಮೆರಿಕನ್ನರು ಅಧ್ಯಕ್ಷರ ಮೇಲೆ ಎದುರಾಡಾಲಿಲ್ಲ. ಸುಮ್ಮನಿದ್ದರು. ಆಫ್ಘಾನಿಸ್ಥಾನದ ಮೇಲೆ ಮುಗಿಬಿದ್ದರು. ತಮ್ಮ ದೇಶದಲ್ಲಿ ಕಳಕೊಂಡ ಒಂದೊಂದು ಜೀವದ ಲೆಕ್ಕ ಚುಕ್ತಾ ಮಾಡಿದರು.
ನಮ್ಮ ಪ್ರಧಾನಿಗೆ ಅಷ್ಟೊಂದು ತಾಕತ್ತಿಲ್ಲ ಬಿಡಿ. ಇಷ್ಟಕ್ಕೂ ನಾವೀಗ ನೇರ ಆಕ್ರಮಣವನ್ನೇನೂ ಮಾಡಬೇಕಿಲ್ಲ. ಪಾಕಿಸ್ಥಾನದ ಮೇಲೆ ಆರ್ಥಿಕ ದಿಗ್ಬಂಧನ ಹೇರಿದರೂ ಸಾಕು. ಅದರೊಂದಿಗೆ ಸಂಬಂಧ ಹೊಂದಿರುವ ದೇಶಗಳತ್ತ ಮುನಿಸಿ ಕುಂತರೂ ಸಾಕು. ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಆಘಾತವನ್ನೇ ನೀಡಿದಂತಾಗುತ್ತದೆ.

ಆದರೇನು? ಅಂಥದೊಂದು ಇಚ್ಛಾಶಕ್ತಿ ಬೇಕಲ್ಲ? ಓಟಿಗಾಗಿ ಗಡ್ಡ ನೆಕ್ಕುವವರು ಬದುಕಿರುವವರೆಗೆ ಅದು ಸಾಧ್ಯವಾಗಲಾರದು. ಅವರನ್ನು ಪಕ್ಕಕ್ಕೆ ತಳ್ಳಿನಾವೇ ಮುಂದೆ ಬಂದರೆ…? ಅದು ಸರಿ. ಎದುರು ಬಂದ ಸೋಗಲಾಡಿ ಬುದ್ಧಿಜೀವಿಗಳನ್ನು, ಭಾರತೀಯತೆಯ ಬದ್ಧ ದ್ವೇಷಿಗಳನ್ನು ಹಳ್ಳದಲ್ಲಿ ಹೂತು, ರಾಷ್ಟ್ರ ರಕ್ಷಿಸುವ ಹೊಣೆ ನಮ್ಮದೇ.

ಈ ಬಾರಿ ಪ್ರತ್ಯುತ್ತರ ನೀಡಬೇಕಿರುವ ಹೊಣೆ ಇಂಟೆಲಿಜೆನ್ಸ್ ಅಧಿಕಾರಿಗಳದಲ್ಲ, ರಾಜಕಾರಣಿಗಳದೂ ಅಲ್ಲ. ಅದು ನಮ್ಮದು. ನಮ್ಮದೇ.
ಭಯೋತ್ಪಾದಕರ ಬೆಂಬಲಿಗರು ನಮ್ಮ ನಡುವೆಯೇ ಇದ್ದಾರೆ. ಅಂಥವರ ಮೇಲೆ ದಿಗ್ಬಂಧನ ನಾವು ಹೇರೋಣ. ಒಂದೊಂದು ಅನ್ನದ ಕಾಳಿಗೂ ಅವರು ಪರಿತಪಿಸುವಂತಾಗಬೇಕು. ಅಲ್ಲಿಂದ ಹೊರಟ ಬೇಗೆ, ಭಯೋತ್ಪಾದನೆಯನ್ನು ಸುಟ್ಟು ಬೂದಿ ಮಾಡಲಿ. ನಮ್ಮಲ್ಲಿರುವ ಅಸ್ತ್ರ ಇದೊಂದೇ.
ಬಳಸಿ. ಚೆನ್ನಾಗಿ ಬಳಸಿ. ಇದು ಕೊನೆಯ ಯುದ್ಧ. ಈ ಬಾರಿ ಗೆಲ್ಲೋಣ. ಇಲ್ಲವೇ ಸತ್ತು ಮಲಗೋಣ. ಆಯ್ಕೆ- ನಿಮ್ಮದು.

ಉಪನ್ಯಾಸ ಕಾರ್ಯಕ್ರಮಗಳು

Posted in Uncategorized by Chakravarty on November 22, 2008

ನಮಸ್ತೇ.  ಹಿಂದೊಮ್ಮೆ ಕೆಲವರ ಬಯಕೆಯಂತೆ ಬ್ಲಾಗಿನಲ್ಲಿ ಚಕ್ರವರ್ತಿಯ ಉಪನ್ಯಾಸ ಕಾರ್ಯಕ್ರಮಗಳ ವಿವರ ಹಾಕುವುದಾಗಿ ಹೇಳಲಾಗಿತ್ತು. ಕಾರಣಾಂತರಗಳಿಂದ ಹೇಳಿದಂತೆ ನಡೆದುಕೊಳ್ಳಲಾಗಲಿಲ್ಲ. ಈ ಬಾರಿ ಸದ್ಯಕ್ಕೆ ಗೊತ್ತಾಗಿರುವಂತೆ ಚಕ್ರವರ್ತಿಯ ಕಾರ್ಯಕ್ರಮ ವಿವರವನ್ನು ಹಾಕಲಾಗಿದೆ. ಮತ್ತೇನಾದರೂ ವ್ಯತ್ಯಾಸಗಳಾದರೆ ಅಪ್ ಡೇಟ್ ಮಾಡಲಾಗುವುದು.

ನವೆಂಬರ್

೨೪: ಸೂಲಿಬೆಲೆ-  ಕನ್ನಡ ರಾಜ್ಯೋತ್ಸವ

೨೫: ಪೀಣ್ಯಾ ಬಳಿ ಇಸ್ಪಾತ್ ನಲ್ಲಿ ಕನ್ನಡ ರಾಜ್ಯೋತ್ಸವ

೨೬: ಬೆಳಗ್ಗೆ ೧೧ರಿಂದ ೧೨ರವರೆಗೆ ವಿಜಯ ನಗರದ ಉದಯ ಸ್ಕೂಲಿನಲ್ಲಿ ಉಪನ್ಯಾಸ. ಸಂಜೆ ೫ರಿಂದ ೬ ಜ್ಞಾನವಾಣಿ ಲೈವ್ ಫೋನ್ ಇನ್ ಕಾರ್ಯಕ್ರಮ

೨೯: ರವಿಶಂಕರ್ ಗುರೂಜಿ ಆಶ್ರಮದಲ್ಲಿ ಶಿಕ್ಷಕರ ಸಮಾವೇಶ- ಉಪನ್ಯಾಸ

೩೦: ಬೆಳಗ್ಗೆ- ಹೊಳೆನರಸೀಪುರ; ಶಿಕ್ಷಕರಿಗೆ ಉಪನ್ಯಾಸ. ಸಂಜೆ ಬೆಂಅಗಳೂರಿನ ಕಾಕ್ಸ್ ಟೌನಿನಲ್ಲಿ ಸಂತರೊಂದಿಗೆ ಪಾದಯಾತ್ರೆ
ಡಿಸೆಂಬರ್

೭: ಶಿವಮೊಗ್ಗ- ಅಂಧರ ವಿಕಾಸ ಕೇಂದ್ರದ ಕಾರ್ಯಕ್ರಮ

೨೨ ಮತ್ತು ೨೩: ಗುಲ್ಬರ್ಗಾ- ಶಿಕ್ಷಕರ ಸಮಾವೇಶದಲ್ಲಿ ಉಪನ್ಯಾಸ

ಜನವರಿ

೯: ಬೆಂಗಳೂರು- ಚಂದ್ರಶೇಖರ ಭಾರತೀ ತೀರ್ಥ ಸ್ವಾಮೀಜಿಕಲಾ ಮಂಟಪದಲ್ಲಿ ‘ಜಗದ್ಗುರು ಭಾರತ’ ಉಪನ್ಯಾಸ

೧೮: ಬಳ್ಳಾರಿ- ಸಂಸ್ಕಾರ ಭಾರತೀ ವತಿಯಿಂದ ಹರಟೆ

೧೯ರಿಂದ ೨೩: ಕುಮಟಾ; ‘ಸುಮ್ಮನೆ ಬರಲಿಲ್ಲ ಸ್ವಾತಂತ್ರ್ಯ’ ಉಪನ್ಯಾಸ ಮಾಲೆ
ಫೆಬ್ರವರಿ

೬ರಿಂದ ೮: ಕಾಳಿ ಮಂದಿರ ವಾರ್ಷಿಕೋತ್ಸವ