RSS

ನಮ್ಮ ಇತಿಹಾಸ ನಾವೇ ಬರೆದು ಓದೋದು ಬೇಡವೆ?

ಬ್ರಿಟಿಷ್ ಅಧಿಕಾರಿ ಮ್ಯಾಲೆಸನ್ ಈ ದೇಶದ ಜನರನ್ನು ಹುಚ್ಚರು ಅಂತ ಕರೀತಾನೆ. ಏಕೆ ಗೊತ್ತೇನು? ನೇಣು ಶಿಕ್ಷೆಗೆ ಕಳಿಸಿದರೆ ಈ ದೇಶದ ಜನ ಹೆದರೋದಿರಲಿ, ತಾವೇ ನೇಣುಗಂಬದ ಬಳಿ ಧಾವಿಸಿ ನೇಣು ಕುಣಿಕೆಯನ್ನು ಕೊರಳಿಗೆ ಹಾಕಿಕೊಂಡುಬಿಡ್ತಾ ಇದ್ದರಂತೆ. ಆದಷ್ಟು ಬೇಗ ನನ್ನ ನೇಣಿಗೇರಿಸಿ ಅಂತ ಗೋಗರಿಯುತ್ತಾ ಇದ್ದರಂತೆ. ಹೀಗೇಕೆಂದು ಪ್ರಶ್ನಿಸಿದಾಗ, ಪುನರ್ಜನ್ಮ ನಂಬೋರು ನಾವು, ಬೇಗ ಹೊರಟರೆ, ಬೇಗ ಮರಳಿ ಬರುತ್ತೇವಲ್ಲ! ಅನ್ನುವ ವಾದ ಮಂಡಿಸುತ್ತಿದ್ದರಂತೆ. ಹೆದರಿಸಬೇಕೆಂದು ನೇಣಿಗೇರಿಸಿದರೆ, ಅದೇ ಪ್ರೇರಣೆಯಾಗುವ ರೀತಿ ಅತೀ ವಿಶಿಷ್ಟವಲ್ಲವೆ? ಅದಕ್ಕೇ ಬ್ರಿಟಿಷರಿಗೆ ಅಷ್ಟೊಂದು ಕೋಪ. ಮೇ ೧೦ಕ್ಕೆ ೧೮೫೭ರಲ್ಲಿ ಸಂಗ್ರಾಮವೊಂದಕ್ಕೆ ಮುನ್ನುಡಿ ಬರೆಯಲಾಗಿತ್ತು. ಬ್ಯಾರಕ್‌ಪುರದ ಮಂಗಲ್‌ಪಾಂಡೆ ಆಂಗ್ಲ ಪೊಲೀಸ್ ಅಧಿಕಾರಿಯತ್ತ ಗುಂಡು ಸಿಡಿಸಿ, ತಿಂಗಳ ಕೊನೆಯಲ್ಲಿ ಆರಂಭವಾಗಬೇಕಾಗಿದ್ದ ಕ್ರಾಂತಿಗೆ ಆಗಲೇ ಕಿಡಿ ಹಚ್ಚಿಬಿಟ್ಟಿದ್ದ. ಅಲ್ಲಿಂದಾಚೆಗೆ ಮೀರತ್, ದೆಹಲಿಗಳು ಕ್ರಾಂತಿಯ ಕಿಡಿಗೆ ಉರಿದು ಬಿದ್ದವು. ಕಾನ್‌ಪುರ, ಝಾನ್ಸಿಗಳು ಜಯಘೋಷ ಮೊಳಗಿಸಿದವು. ಬಿಹಾರ ಕುದಿಯಿತು. ದಕ್ಷಿಣದಲ್ಲೂ ಬ್ರಿಟಿಷರ ಬುಡಕ್ಕೆ ಬಲವಾದ ಪೆಟ್ಟು ಬಿತ್ತು. ಅಂದುಕೊಂಡಂತೆಯೇ ಎಲ್ಲವೂ ಆಗಿದ್ದರೆ, ಇತಿಹಾಸದ ಹಾದಿ ಬೇರೆಯೇ ಇರುತ್ತಿತ್ತು. ಆ ವೇಳೆಗೆ ಆಂಗ್ಲರೊಟ್ಟಿಗೆ ಕಾದಾಡಿ ಹೈರಾಣಾಗಿದ್ದ ಸಿಕ್ಖರು ಭಾರತೀಯ ಸೈನಿಕರ ಬೆಂಬಲಕ್ಕೆ ಬರಲಿಲ್ಲ. ಅಯ್ಯೋ ಪಾಪ! ಅನ್ನುವ ಕೆಲವಷ್ಟು ಜನ ಆಂಗ್ಲ ಅಧಿಕಾರಿಗಳಿಗೆ ಉಳಿದುಕೊಳ್ಳುವ ಮಾರ್ಗ ತೋರಿದರು. ಅಂತೂ ಮಹಾಯುದ್ಧವೊಂದರಲ್ಲಿ ನಾವು ಸೋತಿದ್ದೆವು. ರಾಣಿ ತಾನೇ ಭಾರತವನ್ನು ತನ್ನ ತೆಕ್ಕೆಗೆ ಎಳೆದುಕೊಂಡಳು. ಪರೋಕ್ಷವಾಗಿ ಮಾಡುತ್ತಿದ್ದ ಸುಲಿಗೆಗೆ ನೇರವಾಗಿ ಕೈಹಾಕುವ ಹೊಸ ಮೋಸದಾಟವಿದು. ೧೬೦೦ರ ಮೊದಲ ದಿನದಿಂದ ಹಿಡಿದು, ೧೯೪೭ರ ತಮ್ಮ ಅವಧಿಯ ಕೊನೆಯ ದಿನದವರೆಗೆ ಆಂಗ್ಲರ ಲೂಟಿ ಹೇಳತೀರದ್ದು. ಅವರು ಹಳ್ಳಿಗಳನ್ನು ಧ್ವಂಸಗೈದರು. ಬಂದರುಗಳನ್ನು ಖಾಲಿ ಮಾಡಿದರು. ಊರುಗಳುದ್ದಕ್ಕು ರೈಲ್ವೆ ಹಳಿಗಳನ್ನೆಳೆದು, ತೆರಿಗೆ ಲೂಟಿಗೆ ವ್ಯವಸ್ಥೆ ಮಾಡಿಕೊಂಡರು. ಇಲ್ಲವಾದಲ್ಲಿ, ಸುಮಾರು ಏಳು ಲಕ್ಷದಷ್ಟಿದ್ದ ಬ್ರಿಟಿಷರು ಕೋಟ್ಯಂತರ ಸಂಖ್ಯೆಯಲ್ಲಿದ್ದ ಭಾರತೀಯರನ್ನು ಆಳುತ್ತಿದ್ದುದಾದರೂ ಹೇಗೆ?
ಇವೆಲ್ಲ ಬಿಡಿ. ಇಂಥ ಲೂಟಿಕೋರ ಆಂಗ್ಲರನ್ನು ನಮ್ಮ ಪಠ್ಯಪುಸ್ತಕಗಳಲ್ಲಿ ಬಿಂಬಿಸಿರುವ ರೀತಿಯನ್ನು ನೀವು ನೋಡಬೇಕು. ಹತ್ತನೆ ತರಗತಿಯ ಸಮಾಜ ಪುಸ್ತಕದಲ್ಲಿ ಕೂಡಲೇ ಭಾರತದಾದ್ಯಂತ ರೈಲು ಸಂಪರ್ಕ ಬೆಳೆಯಿತು. ಇದರ ಪರಿಣಾಮವಾಗಿ ಹೆಚ್ಚಿನ ಭಾರತೀಯರು ದೇಶದಾದ್ಯಂತ ಪ್ರಯಾಣ ಮಾಡಲು ಅನುಕೂಲವಾಯಿತು. ಇದರಿಂದ ಭಾರತೀಯರಿಗೆ ತಾವೆಲ್ಲ ಒಂದೇ ಎಂಬ ಭಾವನೆ ಮೂಡಿತು ಎಂದು ಬರೆದಿದ್ದಾರೆ. ನಮ್ಮ ಮಕ್ಕಳು ಈ ಸಾಲುಗಳನ್ನು ಓದಿದರೆ, ನಾವು ಒಂದೆಂಬ ಭಾವನೆ ಮೂಡಲು ರೈಲು ಪ್ರಯಾಣವೇ ಕಾರಣವಾಯಿತು ಎಂದು ತಿಳಿಯುತ್ತಾರೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಎರಡನೆಯದು, ಬ್ರಿಟಿಷರು ಬರುವ ಮುನ್ನ ಮಗಧ ಸಾಮ್ರಾಜ್ಯ ದೇಶವ್ಯಾಪಿ ಹರಡಿತ್ತಲ್ಲ, ಆಗ ಭಾರತ ದೇಶ ಒಂದಾಗಿರಲಿಲ್ಲವೆ? ಕಾಶಿಯಾತ್ರೆ ಮಾಡಿದ ಭಕ್ತ ರಾಮೇಶ್ವರಕ್ಕೆ ಬಂದು ತೀರ್ಥ ಸಮರ್ಪಿಸುತ್ತಿದ್ದನಲ್ಲ, ಅವನು ಓಡಾಟ ಮಾಡಲೇ ಇಲ್ಲವೆ? ಅದು ಬಿಡಿ. ಇಂದು ಜಮ್ಮುವಿನಿಂದ ಕನ್ಯಾಕುಮಾರಿಯವರೆಗೆ ರೈಲು ಮಾರ್ಗಗಳಿವೆಯಲ್ಲ, ನಿಜ ಹೇಳಿ, ನಾವೆಲ್ಲ ಒಂದೇ ಎಂಬ ಭಾವನೆ ಜನರಲ್ಲಿ ಬಲವಾಗಿ ಮೂಡಿದೆಯಾ? ಇಂಥಾ ಸಾಲುಗಳನ್ನು ಪ್ರೌಢ ಮಕ್ಕಳ ತಲೆಯಲ್ಲಿ ತುರುಕುವಾಗ ಎಚ್ಚರಿಕೆ ಬೇಡವಾ?
ಅದೇ ಪಾಠ ಆಂಗ್ಲರ ಆಳ್ವಿಕೆಯಲ್ಲಿ ಶಿಕ್ಷಣ ಪದ್ಧತಿ ಚೆಂದಗೊಂಡಿದುದರ ಕುರಿತು ಒಂದಿಡೀ ಪ್ಯಾರ ಹೊಗಳುತ್ತದೆ. ಭಾರತದಲ್ಲಿ ಶಿಕ್ಷಣ ಮೇಲುಜಾತಿಯ ಪುರುಷರಿಗೆ ಮಾತ್ರ ದೊರೆಯುತ್ತಿತ್ತೆಂದು ತೆಗಳುತ್ತದೆ. ಅಷ್ಟೇ ಅಲ್ಲ, ಇಂಗ್ಲೀಷರ ಶಿಕ್ಷಣದಿಂದ ಪಾಶ್ಚಾತ್ಯ ಜ್ಞಾನ- ವಿಜ್ಞಾನ ಎಲ್ಲರಿಗೂ ಹರಡಿತು…. ದೇಶದಲ್ಲಿ ಇಂಗ್ಲಿಷ್ ಶಿಕ್ಷಣ ಶಾಲೆಗಳನ್ನು ತೆರೆದರು…. ಕ್ರೈಸ್ತ ಮತ ಪ್ರಚಾರಕರು ಇದರಲ್ಲಿ ಪ್ರಮುಖ ಪಾತ್ರವಹಿಸಿದರು ಎಂದು ಹೇಳಿದೆ.
ಈ ಇತಿಹಾಸಕಾರರ ಮನಸ್ಸೆಂಥದ್ದು ನೋಡಿ. ಎಲ್ಲರಿಗೂ ಶಿಕ್ಷಣ ತಲುಪಿಸುವಲ್ಲಿ ಮುಖ್ಯ ಪಾತ್ರ ಕ್ರೈಸ್ತ ಪಾದ್ರಿಗಳದ್ದು ಎಂದು ಹೇಳುವ ಮೂಲಕ ಓದುಗರಲ್ಲಿ ಜಾತೀಯತೆ ಬಿತ್ತುವ ಕೆಲಸ ಮಾಡಿದ್ದಾರೆ. ಇಷ್ಟಕ್ಕೂ ನಮ್ಮ ಚರಿತ್ರಕಾರರು ಧರ್ಮಪಾಲರ ಬ್ಯೂಟಿಫುಲ್ ಟ್ರೀ ಓದಿದ್ದಾರೇನು? ಆಂಗ್ಲರ ದಾಖಲೆಗಳೇ ಹೇಳುವಂತೆ, ಬಳ್ಳಾರಿಯಲ್ಲಿ ಅಧ್ಯಯನಶೀಲರು ಮತ್ತು ಅಧ್ಯಾಪಕರಲ್ಲಿ ಬಹುತೇಕರು ಕೆಳವರ್ಗಗಳಿಂದ ಬಂದವರು. ದೇಶದ ಬಹುತೇಕ ಕಡೆಗಳಲ್ಲಿ ಶಾಲೆಗಳ ಸ್ಥಿತಿ ಹೀಗೆಯೇ ಇತ್ತು. ಇಲ್ಲವಾದಲ್ಲಿ, ಆಂಗ್ಲರ ಆಗಮನ ಕಾಲಕ್ಕೆ ಎಲ್ಲೆಡೆ ಕುಶಲಕರ್ಮಿಗಳು ಇದ್ದರಲ್ಲ, ಅದು ಹೇಗೆ ಸಾಧ್ಯವಾಯ್ತು? ಬ್ರಾಹ್ಮಣರು ಉನ್ನತ ಹುದ್ದೆಗಳಲ್ಲಿದ್ದು ಶೋಷಣೆ ಮಾಡುತ್ತಾ ಕಾಲಾಯಾಪನೆ ಮಾಡುತ್ತಿದ್ದರು ಎನ್ನುವವರಿಗೆ, ೧೮೫೭ರ ವೇಳೆಗೆ ಸೈನ್ಯದಲ್ಲಿದ್ದ ಬಹುಪಾಲು ಸಂಖ್ಯೆ ಬ್ರಾಹ್ಮಣರದ್ದು ಎನ್ನುವ ಅರಿವಿದೆಯೇನು? ಈ ಸಂಗ್ರಾಮದ ಕಿಡಿ ಉರಿಸಿದ ಮಂಗಲ್‌ಪಾಂಡೆ ಸ್ವತಃ ಜನಿವಾರಧಾರಿ. ನಮ್ಮನ್ನು ಒಡೆದಾಳಲು ಆಂಗ್ಲರು ಬಳಸಿದ್ದ ಅದೇ ದಾಳವನ್ನು ಮುಂದಿರಿಸಿ ಇಂದಿಗೂ ಕೊಲ್ಲುವುದು ಯಾವ ನ್ಯಾಯ? ಒಬ್ಬರನ್ನು ಕೊಲ್ಲುವುದು ಒತ್ತಟ್ಟಿಗಿರಲಿ, ಕ್ರೈಸ್ತಪಾದ್ರಿಗಳನ್ನು ಸಾರ್ವಜನಿಕ ಶಿಕ್ಷಣದ ಹರಿಕಾರರೆಂದು ಬಿಂಬಿಸಿರುವುದು ಸರಿಯಾ? ಕ್ರೈಸ್ತಮತ ಪ್ರಚಾರಕರು ಬಂದಾಗಿನಿಂದ ಮಾಡಿದ ಕೆಲಸಗಳೇನೆಂಬುದನ್ನು ಅನೇಕ ಬ್ರಿಟಿಷ್ ಅಧಿಕಾರಿಗಳೇ ದಾಖಲಿಸಿದ್ದಾರೆ. ಗೋವೆಯಲ್ಲಿ ಸಂತ ಕ್ಸೇವಿಯರ್ ನಡೆಸಿದ ಕ್ರೌರ್ಯ ಯಾರಿಗೆ ತಿಳಿಯದು ಹೇಳಿ. ಇಷ್ಟಿದ್ದರೂ ಅವನ್ನೆಲ್ಲ ಮರೆಮಾಚಿ, ಆ ಕ್ರೈಸ್ತಮತವನ್ನು ಹೆಚ್ಚೆಂದು ಬಿಂಬಿಸಿ, ನಮ್ಮ ಪ್ರಚೀನ ಪರಂಪರೆಯನ್ನು ಜರೆದಿರುವುದು ಸರಿಯಾ? ಇದೊಂದು ಗಮನಿಸಲೇಬೇಕಾದ ಸಂಗತಿ.
ನಾವು ತಂತ್ರಜ್ಞಾನ ದಿನದಿಂದ ದಿನಕ್ಕೆ ಬದಲಾಗುವುದನ್ನು ನೋಡುತ್ತಾ ಇದ್ದೇವೆ. ನೆನ್ನೆ ಲ್ಯಾಪ್‌ಟಾಪ್, ಇಂದು ಪಾಮ್‌ಟಾಪ್. ಪುಸ್ತಕದ ಬದಲು ಕಿಂಡಲ್. ಅದು ಒಪ್ಪಬಹುದಾದದ್ದು. ಆದರೆ ಭಾರತದಲ್ಲಿ ಇತಿಹಾಸವೇ ಬದಲಾಗಿಬಿಡುತ್ತೆ. ಭಾರತವೆಂದರೆ ಏನೆಂದು ಅರಿಯದ ಬ್ರಿಟಿಷರು ಈ ದೇಶದ ಇತಿಹಾಸ ಮನಸಿಗೆ ಬಂದಂತೆ ಬರೆದರು. ಆಮೇಲೆ ಮಾವೋ ಮದವೇರಿಸಿಕೊಂಡವರು, ಸಚ್ಚಿಂತನೆಗಳೆಲ್ಲ ಚೀನಾದಿಂದಲೇ ಹರಿದುಬಂದವೆಂಬಂತೆ ಭಾರತವನ್ನು ತೆಗಳಿದರು. ನಾವು ಅದೇ ವರ್ಣ ಪದ್ಧತಿಯ ಮನುಸ್ಮೃತಿ ಹಿಡಿದುಕೊಂಡು ಬಡೆದಾಡುತ್ತ ಉಳಿದೆವು. ನಮ್ಮ ಅಂಗಳದಲ್ಲಿಯೇ ನಿಂತುಕೊಂಡು ನಮ್ಮ ಮನೆಯನ್ನು ಬಯ್ದುಕೊಳ್ಳುವ ದೈನೇಸಿ ಸ್ಥಿತಿ.
ಇದೇ ಪುಸ್ತಕ, ೧೮೫೭ರ ಸಂಗ್ರಾಮದ ಕುರಿತಂತೆ ಬ್ರಿಟಿಷ್ ಇತಿಹಾಸಕಾರರು ಇದನ್ನು ಕೇವಲ ಸಿಪಾಯಿ ದಂಗೆ ಎಂದು ವರ್ಣಿಸಿದ್ದಾರೆ. ಭಾರತದ ಇತಿಹಾಸಕಾರರು ಇದನ್ನು ಭಾರತದ ಮೊದಲ ಸ್ವಾತಂತ್ರ್ಯ ಸಮರ ಎಂದು ಕರೆದಿದ್ದಾರೆ ಎಂದು ಹೇಳುತ್ತದೆ. ಆಮೇಲೆ ಇಡಿಯ ಪುಸ್ತಕದಲ್ಲಿ ಎಲ್ಲೂ ಇದನ್ನು ಸ್ವಾತಂತ್ರ್ಯ ಸಂಗ್ರಾಮ ಎಂದು ಸಂಬೋಧಿಸದೆ, ದಂಗೆ ಎಂದೇ ಮತ್ತೆ ಮತ್ತೆ ಕರೆದಿರುವುದರ ಔಚಿತ್ಯ ಯಾರಿಗೂ ಅರ್ಥವಾಗದ್ದು. ಬಹುಶಃ ನಮ್ಮ ಇತಿಹಾಸಕಾರರ ತಲೆ ಕೆಟ್ಟಿರಬೇಕೆಂದು ಪಠ್ಯಪುಸ್ತಕ ರಚನೆಕಾರರು ನಿರ್ಧರಿಸಿರಬೇಕು. ಹೀಗಾಗಿ ಅವರಿಗೆ ಪಠ್ಯಪುಸ್ತಕದ ಉದ್ದಕ್ಕೂ ವಿದೇಶಿ ಅಥವಾ ಕಮ್ಯುನಿಸ್ಟ್ ಬುದ್ಧಿಯ ಸ್ವದೇಶಿ ಲೇಖಕರೇ ಮಾರ್ಗದರ್ಶಕರು. ಅದಕ್ಕೇ ಇಷ್ಟೆಲ್ಲ ಸಮಸ್ಯೆಗಳು.
ಜಾಗತಿಕ ಇತಿಹಾಸ ತಿಳಕೊಳ್ಳುವ ಮುನ್ನ, ಪ್ರಾದೇಶಿಕ ಸ್ಥಿತಿಗತಿಗಳ ಅವಲೋಕನವಾಗಬೇಕಾದದ್ದು ಅತ್ಯಗತ್ಯ. ಬಾಗಲಕೋಟೆಯ ವಿದ್ಯಾರ್ಥಿಗಳಿಗೆ ಹಲಗಲಿಯ ಬೇಡರೇ ಗೊತ್ತಿಲ್ಲವಾದರೆ ಹೇಗೆ? ಶಿವಮೊಗ್ಗದ ಮಕ್ಕಳು ನಗರದ ಕೋಟೆಯನ್ನೇ ನೋಡಿಲ್ಲವೆಂದರೆ ಸರಿಯೇ? ಉತ್ತರಕನ್ನಡದ ಶಾಲೆಗೆ ಹೋಗಿ ಮೀರ್ಜಾನ್ ಕೋಟೆಯ ಕಥೆ ಕೇಳಿ. ಅದು ಕರಿಯ ಚಲನಚಿತ್ರದ ಚಿತ್ರೀಕರಣ ನಡೆದ ಜಾಗ ಅನ್ನುತ್ತಾರೆ. ಇದಕ್ಕೇನು ಹೇಳುವುದು!?
ಇತ್ತೀಚೆಗೆ ಸುರಪುರಕ್ಕೆ ಹೋಗುವ ಅವಕಾಶ ಸಿಕ್ಕಿತ್ತು. ೧೮೫೭ರ ಹೋರಾಟದಲ್ಲಿ ವೆಂಕಟಪ್ಪ ನಾಯಕ ಹೋರಾಡಿದ ಜಾಗ ಅದು. ವೆಂಕಟಪ್ಪನಾಯಕನ ಮುಂದಿನ ಪೀಳಿಗೆಯ ರಾಜರು ಅಲ್ಲಿದ್ದಾರೆ. ಅವರು ಅಂದಿನ ದಿನಗಳಲ್ಲಿದ್ದ ನವಾಬರ, ರಾಜರುಗಳ ಇಂದಿನ ಪೀಳಿಗೆಯವರನ್ನು ಒಟ್ಟು ಸೇರಿಸಿ ಮಹತ್ವದ ಕಾರ್ಯಕ್ರಮವೊಂದಕ್ಕೆ ಭಾಷ್ಯ ಬರೆದಿದ್ದರು. ಅದಕ್ಕೂ ವರ್ಷ ಮೊದಲು, ಶಾಲೆ ಮಕ್ಕಳಿಗೆಂದೇ ಇತಿಹಾಸ ಮೇಳವನ್ನು ಅಲ್ಲಿನ ಮಿತ್ರರು ಆಯೋಜಿಸಿದ್ದರು. ಆ ಮಕ್ಕಳು ತಮ್ಮ ಆಸುಪಾಸಿನ ಚಾರಿತ್ರಿಕ ಸ್ಥಳಗಳನ್ನು, ವ್ಯಕ್ತಿಗಳನ್ನು ಭೇಟಿ ಮಾಡಿ, ತಮ್ಮೂರಿನ- ತಮ್ಮ ಜನರ ಕುರಿತಂತೆ ಗೌರವ ತಾಳಿದರು. ಎಲ್ಲ ಕಡೆಯೂ ಹೀಗೆ ಆದರೆ ಎಷ್ಟು ಚೆಂದ ಅಲ್ಲವೆ?
ನಾವು ಇತ್ತೀಚೆಗೆ ವಿಜ್ಞಾನದ ಕುರಿತಂತೆ ತುಂಬ ಗಮನ ಹರಿಸುತ್ತ ಇದ್ದೇವೆ, ಸರಿ. ಆದರೆ ಇತಿಹಾಸವನ್ನು ಅತ್ಯಂತ ಬೋರಿಂಗ್ ಮಾಡಿಬಿಟ್ಟಿದ್ದೇವೆ. ಅಷ್ಟೇ ಅಲ್ಲ, ಅದನ್ನು ತಿರುತಿರುಚಿ ಇತಿಹಾಸ ಪುರುಷರಿಗೆ ಮೈತುಂಬ ಅವಮಾನ ಮಾಡುತ್ತಿದ್ದೇವೆ. ಇವೆಲ್ಲವನ್ನು ಸರಿ ಮಾಡುವ ಯತ್ನಕ್ಕೆ ಯಾರಾದರೂ ಕೈಹಾಕಿದರೆ ಕೇಸರೀಕರಣ ಎಂದು  ಬೊಬ್ಬೆ ಹಾಕುತ್ತಾರೆ. ಭಾರತದ ಇತಿಹಾಸವನ್ನು ಭಾರತೀಯರೇ ಬರೆಯೋದು, ಭಾರತೀಯರು ಓದೋದು ಬೇಡ ಅನ್ನಿಸುತ್ತದೆಯೇನು?

 

ಮೇ ತಿಂಗಳ ಕಾರ್ಯಕ್ರಮಗಳು

7: ವಿದ್ಯಾರ್ಥಿಗಳಿಗೆ ವಿಜ್ಞಾನದೆಡೆಗೆ ಪ್ರೇರಣೆ- ಶಿಬಿರ, ಮಣಿಪಾಲ್
8: ಬಾಲಭವನ್ ಮಕ್ಕಳ ಶಿಬಿರ, ಬೆಂಗಳೂರು
ಸಂಜೆ: ರಾಗಿಗುಡ್ಡದಲ್ಲಿ ಪ್ರವಚನ
9ರಿಂದ11: ರಾಷ್ಟ್ರಶಕ್ತಿ ಕೇಂದ್ರದ ಶಿಬಿರ, ಮಹಾತ್ಮಾ ಸ್ಕೂಲ್, ಆನೆಕಲ್ಲು
12: ಭಾರತ್ ಸ್ವಾಭಿಮಾನ್, ಧಾರವಾಡ
13: ಭಾರತ್ ಸ್ವಾಭಿಮಾನ್, ಕಾರವಾರ
ಸಂಜೆ: ಉನ್ನತಿ ಟ್ರಸ್ಟ್ ಕಾರ್ಯಕ್ರಮ, ಶಿರಸಿ
14: ಭಾರತ್ ಸ್ವಾಭಿಮಾನ್, ಮಂಗಳೂರು
ಸಂಜೆ: ಭಾರತ್ ಸ್ವಾಭಿಮಾನ್, ಉಡುಪಿ
15: ಭಾರತ್ ಸ್ವಾಭಿಮಾನ್, ಹಾಸನ
16: ಭಾರತ್ ಸ್ವಾಭಿಮಾನ್, ಚಿಕ್ಕಮಗಳೂರು
17: ಭಾರತ್ ಸ್ವಾಭಿಮಾನ್, ಆರ್. ಟಿ.ನಗರ, ಬೆಂಗಳೂರು
18: ಭಾರತ್ ಸ್ವಾಭಿಮಾನ್, ಮೈಸೂರು
19: ವಿವೇಕಾನಂದರ 150ನೇ ಜಯಂತಿ ಕಾರ್ಯಕ್ರಮ, ಸುಳ್ಯ
20: ಬ್ರಾಹ್ಮಣ ಯುವ ಸಮಾವೇಶ, ಶಿವಮೊಗ್ಗ
25: ವಿವೇಕಾನಂದರ 150ನೇ ಜಯಂತಿ ಕಾರ್ಯಕ್ರಮ, ಚನ್ನೇನ ಹಳ್ಳಿ
26: ಶಿಕ್ಷಕರ ಶಿಬಿರ, ಮಹಾತ್ಮಾ ಸ್ಕೂಲ್, ಆನೆಕಲ್ಲು
27: ಧಾರ್ಮಿಕ ಕಾರ್ಯಕ್ರಮ, ಪೂಜೇನ ಅಗ್ರಹಾರ
28ರಿಂದ 31: ಖಾಸಗಿ ಕಾರ್ಯಕ್ರಮ, ಹೊನ್ನಾವರ

 
2 Comments

Posted by on May 6, 2012 in ಡೈರಿ

 

ಶಾಂತಿಯ ಮಂತ್ರಕ್ಕೆ ಅಣ್ವಸ್ತ್ರದ ಅಕ್ಷತೆ

ಏನೇ ಹೇಳಿ. ಅಟಲ್ ಬಿಹಾರಿ ವಾಜಪೇಯಿ ಎಂದಾಕ್ಷಣ ಒಮ್ಮೆ ಹೃದಯವೇ ತೇವವಾಗುತ್ತೆ. ಆ ಮನುಷ್ಯ ಪ್ರಧಾನಿ ಗಾದಿಯಲ್ಲಿ ಕುಳಿತ ಆ ದಿನಗಳೇ ಚೆಂದ. ಹದಿಮೂರು ದಿನದ ಸರ್ಕಾರ, ಆಮೇಲಿನ ೧೩ ತಿಂಗಳ ಸರ್ಕಾರ, ಕೊನೆಗೆ ಪೂರ್ಣ ಪ್ರಮಾಣದ ಅಧಿಕಾರ! ಅವರ ಕಾಲಕ್ಕೇ ಭಾರತವೆಂಬ ಈ ದೇಶ ಗಂಡು ರಾಷ್ಟ್ರ ಎನಿಸಿಕೊಂಡಿದ್ದು. ಅವರ ಕಾಲದಲ್ಲೇ ಈ ದೇಶದ ಜನರ ದೇಹದಲ್ಲಿ ಸ್ವಾಭಿಮಾನದ ರಕ್ತ ಹರಿದಿದ್ದು. ನಾಡಿದ್ದು ಮೇ ೧೧ಕ್ಕೆ ಪೋಖರಣ್ ನಲ್ಲಿ ಬಾಂಬ್ ಸ್ಫೋಟದ ಪರೀಕ್ಷೆ ನಡೆಸಿ ೧೫ ವರ್ಷಗಳಾಗುತ್ತವೆ. ಅದಕ್ಕೂ ಮುನ್ನ ಶಕ್ತಿಹೀನವಾಗಿದ್ದ ಭಾರತ ಅಲಿಪ್ತ ನೀತಿಯ ಶಾಂತಿಯ ಮಾತಾಡುತ್ತಿತ್ತು. ಆನಂತರ ನಮ್ಮ ಶಾಂತಿ ಮಂತ್ರವನ್ನು ಜಗತ್ತು ಬಾಯ್ಮುಚ್ಚಿ ಕೇಳಲಾರಂಭಿಸಿತು. ಅನುಮಾನವಿಲ್ಲ, ಶ್ರೇಯ ಅಟಲ್ ಜೀಗೇ.

ಮೇ ೧೧ರ ಆ ಕತೆಯೇ ರೋಚಕ. ೧೩ ದಿನಗಳ ಅಧಿಕಾರ ದಕ್ಕಿದಾಗ ಅಟಲ್ ಜೀ ಮಾಡಿದ ಮೊದಲ ಕೆಲಸವೇ ವಿಜ್ಞಾನಿಗಳನ್ನು ಕರೆದು ಭಾರತವನ್ನು ಗಂಡು ರಾಷ್ಟ್ರವಾಗಿಸುತ್ತೀರಾ ಎಂದು ಎಂದು ಕೇಳಿದ್ದು. ವಿಜ್ಞಾನಿಗಳ ಮುಖದಲ್ಲಿ ಮಂದಹಸ ಮಿನುಗಿತ್ತು. ಅವರೇನೋ ತಯಾರಿ ಶುರುವಿಟ್ಟರು. ಪಾಪ, ಸರ್ಕಾರವೇ ೧೩ ದಿನಗಳಲ್ಲಿ ಬಿದ್ದುಹೋಯ್ತು. ರಾಷ್ಟ್ರಕ್ಕೆ ಅದೆಷ್ಟು ಬೇಸರವಾಯ್ತೋ, ಪರಮಾಣು ಸಂಶೋಧನಾನಿರತ ವಿಜ್ಞಾನಿಗಳಂತೂ ತಲೆಯ ಮೇಲೆ ಕೈ ಹೊತ್ತರು. ಆಮೇಲೆ ಬಂದ ಐ.ಕೆ.ಗುಜರಾಲ್ ರನ್ನು, ದೇವೇಗೌದರನ್ನು ಪರಿಪರಿಯಾಗಿ ಕೇಳಿಕೊಂಡರೂ ಅವರು ಅಣ್ವಸ್ತ್ರ ಪರೀಕ್ಷೆಗೆ ಒಪ್ಪಲೇ ಇಲ್ಲ. ಇರುವಷ್ಟು ದಿನ ಆರಾಮಾಗಿ ಕಾಲ ಕಳೆದರೆ ಸಾಕೆಂಬುದು ಅವರ ಇಚ್ಛೆ. ವಿಜ್ಞಾನಿಗಳಿಗೆ ಆಸೆಯಂತೂ ಇದ್ದೇ ಇತ್ತು. ಭಾರತವನ್ನು ಜಗತ್ತಿನ ಅಣ್ವಸ್ತ್ರ ರಾಷ್ಟ್ರಗಳ ಪಟ್ಟಿಯಲ್ಲಿ ನಿಲ್ಲಿಸಬಲ್ಲ ಆ ಧೀರ, ಪ್ರಧಾನಿಯಾಗಿ ಮತ್ತೆ ಬಂದೇಬರುತ್ತಾನೆಂಬ ಭರವಸೆಯೂ ಇತ್ತು. ಹಾಗೆಯೇ ಆಯಿತು. ೯೮ರಲ್ಲಿ ಅಟಲ್ ಜೀ ಮತ್ತೆ ಪ್ರಧಾನಿಯಾದರು. ಬಹುಮತವಿಲ್ಲದ ಸರ್ಕಾರ ಅದು. ಹೀಗಾಗಿ ಸರ್ಕಾರ ಉರುಳುವ ಮುನ್ನ ಕೊಟ್ಟ ಮಾತು ಉಳಿಸಿಕೊಳ್ಳಬೇಕಿತ್ತು. ಆಗಿಂದಾಗಲೇ ಅವರು ಅಬ್ದುಲ್ ಕಲಾಮರನ್ನು, ಚಿದಂಬರಂರನ್ನು ಕರೆದು ಯೋಜನೆ ನೆರವೇರಿಸುವುದು ಸಾಧ್ಯವೇ ಎಂದು ಕೇಳಿಕೊಂಡರು. `ನೀವು ಅಧಿಕಾರ ಕಳಕೊಂಡರೂ ನಾವು ನಮ್ಮ ಸಂಶೋಧನೆ ನಿಲ್ಲಿಸಲಿಲ್ಲ. ಹೀಗಾಗಿ ಈ ಬಾರಿ ಬರೀ ಅಣ್ವಸ್ತ್ರವಲ್ಲ, ಹೈಡ್ರೋಜನ್ ಬಾಂಬನ್ನೇ ಸಿಡಿಸಿ ಪರೀಕ್ಷಿಸೋಣ ಎಂದುಬಿಟ್ಟರು. ಪ್ರಧಾನಿಗಂತೂ ಸ್ವರ್ಗಕ್ಕೆ ಮೂರೇ ಗೇಣು.
ಸವಾಲು ಸುಲಭವಾಗಿರಲಿಲ್ಲ. ಅಮೆರಿಕಾದ ೪ ಉಪಗ್ರಹಗಳು ಭಾರತವನ್ನೇ ಎಚ್ಚರಿಕೆಯಿಂದ ಗಮನಿಸುತ್ತಿದ್ದವು. ಅಮೆರಿಕಾದ್ ಗೂಢಚಾರರು ಭಾರತದುದ್ದಗಲಕ್ಕೂ ಕದ್ದುಮುಚ್ಚಿ ತಿರುಗಾಡುತ್ತಿದ್ದರು. ಅನೇಕ ಬಾರಿ ಜತೆಗಿದ್ದವರೇ ಅಮೆರಿಕಾದ್ ಏಜೆಂಟರಾಗಿರುವ ಸಂಭವವೂ ಇತ್ತು. ಕನಸೇನೋ ಭರ್ಜರಿ. ಆದರೆ ಅದನ್ನು ನನಸು ಮಾಡುವಲ್ಲಿ ಪ್ರಯಾಸವೂ ಜೋರಾಗಿಯೇ ಇತ್ತು. ಅಟಲ್ ಜೀ ಎದೆಯೊಡ್ಡಿ ಸಿದ್ಧರಾಗಿದ್ದರು. ಯೋಜನೆ ರೂಪುಗೊಂಡಿತು. ಕಲಾಂ, ಚಿದಂಬರಂ, ಅಟಲ್ ಜೀ ಮತ್ತು ಅವರ ಕಾರ್ಯದರ್ಶಿ ಬ್ರಜೇಶ್ ಮಿಶ್ರಾರಿಗೆ ಬಿಟ್ಟರೆ ಏನಾಗಲಿದೆ ಎನ್ನುವುದು ಐದನೆಯವರಿಗೆ ಗೊತ್ತಿರಲಿಲ್ಲ. ನಿಮಗೆ ಆಶ್ಚರ್ಯವಾದೀತು. ಅಣ್ವಸ್ತ್ರ ಪರೀಕ್ಷೆ ಮೇ ೧೧ರಂದು ನಿಗದಿಯಾಗಿದೆಯೆಂಬುದು ಅಂದಿನ ರಕ್ಷಣಾ ಸಚಿವರಿಗೆ, ಗೃಹಸಚಿವರಿಗೆ ತಿಳಿದಿದ್ದು ಮೇ ೧೦ರ ಸಂಜೆಯೇ!
ಪೋಖರಣ್ ಅನ್ನು ಈ ಯೋಜನೆಗೆ ಆರಿಸಿಕೊಳ್ಳಲಾಗಿತ್ತು. ಅದಕ್ಕೆ ಕಾರಣವೂ ಇತ್ತು. ಸುತ್ತಲೂ ಮರಳ ರಾಶಿ, ನೀರಿನ ಸೆಲೆಯೂ ಬಲು ಆಳದಲ್ಲಿತ್ತು. ಹೀಗಾಗಿ ತಗ್ಗು ತೋಡುವಾಗ ತೊಂದರೆಯೂ ಇಲ್ಲ, ಆಳಕ್ಕೆ ಹೋದಂತೆ ನೀರನ್ನು ಬಸಿಯಬೇಕಾದ ಸಮಸ್ಯೆಯೂ ಇಲ್ಲ. ಸೈನ್ಯದ ೫೮ ಇಂಜಿನಿಯರ್ ಗಳ ಬ್ರಿಗೇಡ್ ಹಳ್ಳ ತೋಡುವ ಕೆಲಸ ಶುರು ಮಾಡಿತು. ಈ ಕೆಲಸವನ್ನು ಬೆಳಿಗ್ಗೆ ಮಾಡುವಂತಿಲ್ಲ. ಕತ್ತಲಾದ ಮೇಲೆ ಕೆಲಸ ಶುರು ಮಾಡಬೇಕು. ಬೆಳಗಾಗುವುದರೊಳಗಾಗಿ ವಸ್ತುಗಳು, ವಾಹನಗಳು ಎಲ್ಲೆಲ್ಲಿದ್ದವೋ ಅಲ್ಲಲ್ಲಿಯೇ ಇಟ್ಟು ಮಾಯವಾಗಬೇಕು. ಇಲ್ಲವಾದಲ್ಲಿ ಅಮೆರಿಕಾದ ೪ ಉಪಗ್ರಹಗಳು ಜಗತ್ತಿನಾದ್ಯಂತ ಬೊಂಬಡಾ ಬಜಾಯಿಸಿಬಿಡುತ್ತವೆ. ಆಮೇಲೆ ಅಣ್ವಸ್ತ್ರ ಪರೀಕ್ಷೆ ಇರಲಿ, ಅದರ ಮಾತಾಡುವುದೂ ಕಷ್ಟ. ಸೈನಿಕರು ತಗ್ಗು ತೋಡಿ ವಿಜ್ಞಾನಿಗಳಿಗೆ ದಾರಿ ಮಾಡಿಕೊಟ್ಟರು. ದೂರದೂರದಿಂದ ಪರಿಸರ ವಿಜ್ಞಾನಿಗಳು ಬಂದು ಸುತ್ತಲಿನ ವಾತಾವರಣದ ಅಧ್ಯಯನ್ ಮಾಡಿ ವರದಿ ನೀಡಿ ಹೋಗುತ್ತಿದ್ದರು. ಆದರೆ ಯಾರೊಬ್ಬರಿಗೂ ತಾವು ಇದನ್ನೆಲ್ಲ ಯಾವ ಉದ್ದೇಶಕ್ಕಾಗಿ ಮಾಡುತ್ತಿದ್ದೇವೆ ಎಂಬುದು ಮಾತ್ರ ಗೊತ್ತಿರಲಿಲ್ಲ, ಅಷ್ಟು ಗುಪ್ತವಾಗಿ ಉಳಿದಿತ್ತು ಯೋಜನೆ!
ಅಬ್ದುಲ್ ಕಲಾಂ, ಚಿದಂಬರಂ, ಕಾಕೋಡ್ಕರ್ ರಂತಹ ವಿಜ್ಞಾನಿಗಳು ಅನುಮಾನ ಬರದಿರಲೆಂದು ಸೈನಿಕ ವೇಷ ಧರಿಸಿದರು. ಉನ್ನತ ಹುದ್ದೆಯನ್ನೇ ಅವರುಗಳಿಗೆ ನೀಡಲಾಗಿತ್ತು. ರಾಜಸ್ತಾನದ ಆ ಬಿರುಬಿಸಿಲಿನಲ್ಲಿ, ಉರಿಯುವ ಟೆಂಟುಗಳಲ್ಲಿ ಎಸಿ ಇರಲಿ,ಫ್ಯಾನೂ ಇಲ್ಲದೆ ಕೆಲಸ ಮಾಡಬೇಕಿತ್ತು. ಗಾಳಿಗೆ ವೈರುಗಳು ಒಂದಕ್ಕೊಂದು ತಿಕ್ಕಾಡಿ ಬೆಂಕಿ ಹೊತ್ತಿಕೊಂಡರೆ ಪ್ರಮಾದವಾದೀತೆಂಬ ಹೆದರಿಕೆ ಇದ್ದೇ ಇತ್ತು.
ಇತ್ತ ಅಟಲ್ ಜೀ ಕಾಯುತ್ತಲಿದ್ದರು.ಮೇ ೧೦ಕ್ಕೆ ರಾಷ್ಟ್ರಪತಿಗಳು ವಿದೇಶ ಪ್ರವಾಸ ಮುಗಿಸಿ ಬರಲಿದ್ದಾರೆ. ಅದರ ಮರುದಿನವೇ ಪರೀಕ್ಷಣೆ ನಡೆದುಬಿಡಲಿ ಎಂದು ಅವರ ಯೋಚನೆ. ವಿಜ್ಞಾನಿಗಳೂ ಸಿದ್ಧತೆ ಪೂರ್ಣಗೊಳಿಸಿದ್ದರು. ವೈಟ್ ಹೌಸ್, ತಾಜ್ ಮಹಲ್ ಎಂಬ ಎರಡು ತಗ್ಗುಗಳು, ನವ್ ತಾಲ್ ಎಂಬ ೪ ಹಳ್ಳಗಳು ನಿರ್ಮಾಣಗೊಂಡಿದ್ದವು. ವೈಟ್ ಹೌಸ್ ನೊಳಗೆ ಹೈಡ್ರೋಜನ್ ಬಾಂಬ್ ಪರೀಕ್ಷೆ. ತಾಜ್ ಮಹಲ್ ನಿಂದ ಉಡಾಯಿಸಲು ಸಾಮಾನ್ಯ ಬಾಂಬು. ಉಳಿದವು ಚಿಕ್ಕ ಪ್ರಮಾಣದ ಪರೀಕ್ಷೆಗಳು.
ದೊಡ್ಡ ದೊಡ್ಡ ರಿಂಗ್‌ಗಳನ್ನು ತಗ್ಗಿನೊಳಗೆ ಇಳಿಬಿಡಲು ಮರಳು ತುಂಬಿದ ಚೀಲಗಳನ್ನು ಮೊದಲು ಇಳಿಸಬೇಕಿತ್ತು. ಅದರ ಂಏಲೆ ರಿಂಗ್ ಗಳು ಇಳಿಯಬೇಕು. ಸಮಯ ಬಲು ಕಡಿಮೆ ಇತ್ತು.ಇದ್ದ ಕೆಲವೇ ಸೈನಿಕರು ಹಗಲು ರಾತ್ರಿ ಎನ್ನದೆ ದುಡಿಯುತ್ತಿದ್ದರು. ನಿಮಿಶಕ್ಕೆ ೩ ಮರಳ ಚೀಲವಾದರೆ ೨೪ ಗಂಟೆಗೆ಼ಷ್ಟು ಎಂಬೆಲ್ಲ ಲೆಕ್ಕಾಚಾರಗಳು ನಡೆದಿದ್ದವು. ಎಲ್ಲರೂ ಕೆಲಸದಲ್ಲಿ ಮೈಮರೆತಿದ್ದರು.ಇದ್ದಕ್ಕಿದ್ದಂತೆ ಒಂದೆರಡು ರಕ್ತದ ಹನಿ ಚೆಲ್ಲಿದ್ದು ಕಂಡುಬಂತು. ಜಾಡು ಹುಡುಕಿಕೊಂಡು ಹೊರಟರೆ, ಸೈನಿಕರ ಬಟ್ಟೆ ತೊಳೆಯುವ ದೋಭಿ ಎನ್.ಕೆ.ಡೇ, ತಾನೂ ಮರಳ ಚೀಲ ಹೊರುವ ಕೆಲಸಕ್ಕೆ ಬಂದುಬಿಟ್ಟಿದ್ದ. ಅವನ ಕೈಗೆ ಮರಳುಗಾಡಿನ ವಿಷಪೂರಿತ ಚೇಳೊಂದು ಬಲವಾಗಿ ಕುಟುಕಿಬಿಟ್ಟಿತ್ತು. ಅದರಿಂದ ವನ ಚರ್ಮ ಸೀಳಿ, ರಕ್ತ ಸುರಿದಿತ್ತು. ಧೋಬಿಗೆ ಮಾತ್ರ ಅದರ ಅರಿವೂ ಆಗಲಿಲ್ಲ. ಆತ ತನ್ನ ಪಾಡಿಗೆ ತಾನು ಕೆಲಸ ಮುಂದುವರೆಸಿದ್ದ. ಭಾರತದ ಮಹತ್ಸಾಧನೆಯೊಂದಕ್ಕೆ ಮುನ್ನುಡಿ ಬರೆಯಲಿದೆ. ಅದರಲ್ಲಿ ತಾನೂ ಭಾಗಿ ಎಂಬ ಯೋಚನೆಯೇ ಅವನನ್ನು ರೋಮಾಂಚನಗೊಳಿಸಿಬಿಟ್ಟಿತ್ತು.
ಅತ್ತ ಮುಂಚಿನ ದಿನ ಪೋಖರಣ್ ನ ಪಕ್ಕದ ಹಳ್ಳಿ ಖಟೋರಿಯಲ್ಲಿ ನಾಳೆ ಮನೆಯಲ್ಲಿ ಯಾರೂ ಇರಬೇಡಿ, ಶಾಲೆಗೆ ರಜೆ ಕೊಡಿ, ಸೈನ್ಯದ ಒಂದಷ್ಟು ಚಟುವಟಿಕೆಗಳನ್ನು ನಡೆಸಬೇಕಿದೆ ಎಂದು ವಿನಂತಿಸಲು ಅಧಿಕಾರಿಯೊಬ್ಬರು ಹೋಗಿದ್ದರು. ಸೋಹ್ರಂ ಎಂಬ ವ್ಯಕ್ತಿಯೊಬ್ಬ ಅಧಿಕಾರಿಯ ಬಳಿ ಬಂದು, ನನಗೆ ಗೊತ್ತು, ಬಾಂಬ್ ಪರೀಕ್ಷೆ ನಡೆಸುತ್ತಿದ್ದೀರಿ ತಾನೆ? ೧೯೭೪ರಲ್ಲೂ ಹೀಗೇ ಆಗಿತ್ತು. ಅವತ್ತು ನಮ್ಮ ಮನೆಯ ಸೂರು ಸೀಳಿಹೋಗಿತ್ತು. ಮನೆ ಬಿದ್ದರೂ ಚಿಂತೆಯಿಲ್ಲ, ನೀವು ಮುಂದುವರೆಸಿರಿ; ನಾವು ನಿಮ್ಮೊಂದಿಗಿದ್ದೇವೆ’ ಎಂದಿದ್ದ. ಅಧಿಕಾರಿ ಅವಾಕ್ಕಾಗಿ ಸೋಹ್ರಂನನ್ನು ತಬ್ಬಿಕೊಂಡಿದ್ದ.
ಕೊನೆಗೂ ಆ ಸಮಯ ಬಂದುಬಿಟ್ಟಿತ್ತು. ಮೇ ೧೦ಕ್ಕೆ ಆಕಾಶ ಬಿರಿಯುವಂತಹ ಮಳೆ. ಗುಡುಗು ಸಿಡಿಲುಗಳು ಎಲ್ಲರನ್ನೂ ಆತಂಕಕ್ಕೆ ನೂಕಿಬಿಟ್ಟಿದ್ದವು. ಎರಡು ಗೋಲಗಳಲ್ಲಿ ತುಂಬಿಟ್ಟಿದ್ದ ಪ್ಲುಟೋನಿಯಮ್ ಮಿಸುಕಾಡಿದ್ದರೆ ಅನಾಹುತವೇ ಕಾದಿತ್ತು. ಇಡಿಯ ಯೋಜನೆಯ ಮಹತ್ವದ ಕೊಂಡಿಯಾಗಿದ್ದ ವಿಜ್ಞಾನಿ ಕಾಕೋಡ್ಕರ್ ರ ತಂದೆ ತೀರಿಕೊಂಡ ಸುದ್ದಿ ಬಂತು. ಎಲ್ಲರ ಮುಖವೂ ಕಪ್ಪಿಟ್ಟಿತು. ಕಾಕೋಡ್ಕರ್ ಊರಿಗೆ ಧಾವಿಸಿ, ತಂದೆಯ ಅಂತ್ಯ ಸಂಸ್ಕಾರ ಮುಗಿಸಿ, ಮುಂದಿನ ಅನುಷ್ಠಾನಗಳಿಗೆ ಕಾಯದೇ ಮರಳಿ ಬಂದುಬಿಟ್ಟರು. `ನಮ್ಮಪ್ಪ ಇದ್ದಿದ್ದರೆ, ಹೀಗೇ ಮಾಡಲು ಹೇಳಿರುತ್ತಿದ್ದರು’ ಎಂದರು. ಮರುದಿನದ ವೇಳೆಗೆ ಎಲ್ಲ ಬಗೆಯ ಮೋಡಗಳೂ ತಿಳಿಯಾದವು. ಬಿರುಬಿಸಿಲೂ ಬಂದಿತು. ಇನ್ನೇನು ಪರೀಕ್ಷೆ ಶುರುವಾಗಬೇಕು, ಅಷ್ಟರಲ್ಲಿ ಅನಿರೀಕ್ಷಿತವಾಗಿ ಬಿರುಗಾಳಿ ಶುರುವಾಯ್ತು. ಮತ್ತೊಂದು ಬಗೆಯ ಹೆದರಿಕೆ ಈಗ. ಅಣ್ವಸ್ತ್ರ ಪರೀಕ್ಷೆ ಒಂದು ಗಂಟೆ ಮುಂದೆ ಹೋಯ್ತು. ಇತ್ತ ವಿಜ್ಞಾನಿಗಳ ಮುಖ ಬೆಪ್ಪಾಯ್ತು. ಅತ್ತ ಪ್ರಧಾನಮಂತ್ರಿಗಳ ಮನೆಯಲ್ಲಿ ಅಟಲ್ ಜೀ, ಅಡ್ವಾಣಿ ಮತ್ತು ಜಾರ್ಜ್ ರ ಮುಖದಲ್ಲಿ ಆತಂಕದ ಗೆರೆಗಳು. ಬ್ರಜೇಶ್ ಮಿಶ್ರಾ ನಿರಂತರ ಫೋನಿಗೆ ಕಿವಿಗೊಟ್ಟು ಕೂತಿದ್ದಾರೆ. ೦ಯಾವುದನ್ನೂ ನೇರವಾಗಿ ಕೇಳುವಂತಿಲ್ಲ. ಎಲ್ಲವನ್ನೂ ಸಂಕೇತ ಭಾಷೆಯಲ್ಲೇ ಕೇಳಬೇಕು.
ಒಂದು ಗಂಟೆಯ ನಂತರ ಬಿರುಗಾಳಿ ನಿಂತಿತು. ಮರಳು ಶಾಂತವಾಯ್ತು. ವಿಜ್ಞಾನಿಗಳು ಕಾರ್ಯಪ್ರವೃತ್ತರಾದರು. ಸ್ಪರೀಕ್ಷೆಯ ಪರಿಣಾಮಗಳನ್ನು ಸೆರೆಹಿಡಿಯಲು ಕ್ಯಾಮೆರಾವೊಂದನ್ನು ನೇತುಹಾಕಲಾಗಿತ್ತು. ವಿಜ್ಞಾನಿಗಳು ಗಣನೆ ಶುರುಮಾಡಿದರು. ೫…೪…೩…೨…೧…. ಅವರೆದುರಿನ ಟೀವಿ ಪರದೆಯಲ್ಲಿ ಸಹಸ್ರ ಮಿಂಚುಗಳು ಸಿಡಿದಂತಹ ಬೆಳಕು ಧಿಗ್ಗನೆ ಕಂಡಿತು. ಒಮ್ಮೆ ಕುಳಿತ ಭೂಮಿ ಅಲುಗಾಡಿತು. ಭೂಮಿಯೊಳಗಿನ ಆ ಅಲುಗಾಟ ರಿಕ್ಟರ್ ಮಾಪಕದಲ್ಲಿ ಒಂದಷ್ಟು ಸಂಕೇತವನ್ನು ಗೀಚಿತು. ವಿಜ್ಞಾನಿಗಳ ಪ್ರಯತ್ನ ಸಾರ್ಥಕವಾಯ್ತು. ಅವರು ಕುಣಿದಾಡುತ್ತ ಪ್ರಧಾನ ಮಂತ್ರಿಗಳಿಗೆ ಸುದ್ದಿ ಮುಟ್ಟಿಸಿದರು. `ವೈಟ್ ಹೌಸ್ ಸಿಡಿಯಿತು, ಬುದ್ಧ ಮತ್ತೆ ನಕ್ಕ!’ ಅಟಲ್ ಜೀ ಕಣ್ಣಂಚು ಒದ್ದೆಯಾಯ್ತು. ಜಾರ್ಜ್, ಅಡ್ವಾಣಿಯರೂ ಅಷ್ಟೇ ಭಾವುಕರಾಗಿದ್ದರು.
ಅಮೆರಿಕಾ ಬೆಕ್ಕಸ ಬೆರಗಾಗಿತ್ತು. ಕೋಟ್ಯಂತರ ಡಾಲರುಗಳನ್ನು ಸುರಿದೂ ಅದು ಭಾರತದ ಅಣ್ವಸ್ತ್ರ ಪರೀಕ್ಷೆಯ ಜಾಡು ಹಿಡಿಯುವಲ್ಲಿ ಸೋತಿತ್ತು. ಭಾರತ ಮಾತ್ರ ಎದೆಯುಬ್ಬಿಸಿ ಬೀಗುತ್ತ ಜಗದೆದುರು ನಿಂತಿತ್ತು.
೧೫ ವರ್ಷಗಳು ಸರ್ರನೆ ಕಳೆದುಹೋಯ್ತು. ದೇಶದ ಆತ್ಮಗೌರವ ರಕ್ಷಣೆಗೆ ಕಣಕಣವನ್ನು ಬಸಿದ ವಿಜ್ಞಾನಿಗಳು ಸಾಮಾನ್ಯ ಜನರ ಪಾಲಿಗೆ ಹೀರೋಗಳೆನಿಸಲೇ ಇಲ್ಲ. ತೆಂಡೂಲ್ಕರ್ ರಾಜ್ಯಸಭಾ ಸದಸ್ಯನಾಗುವ ಸುದ್ದಿ ಕೇಳಿ ರೋಮಾಂಚಿತರಾದವರು’ ಅವತ್ತಿನ ಆ ವಿಜ್ಞಾನಿಗಳೆಲ್ಲ ಎಲ್ಲಿ ಹೋದರೆಂಬ ವಿಚಾರಕ್ಕೆ ಚರ್ಚೆಗೂ ಕೂರಲಿಲ್ಲ…

 

ಓಡುವ ನದಿ ಮುನಿದರೆ…. ಹರಿವ ದಾರಿ ಮರೆತರೆ…

ಗಾಳಿ, ನೀರು ನಮ್ಮ ಬದುಕಿನ ಮೂಲ ಘಟಕಗಳು. ಅವುಗಳಿಂದಲೇ ಆಹಾರ, ಅವುಗಳಿಂದಲೆ ಕಾಡು- ನಾಡು ಎಲ್ಲವೂ. ಚಂದ್ರನ ಮೇಲೆ ನಾವು ಕಳಿಸುತ್ತಿರುವ ಯಂತ್ರಗಳೆಲ್ಲ ಹುಡುಕುತ್ತಿರೋದು ಗಾಳಿ- ನೀರನ್ನೆ. ನಾವು ಮಾತ್ರ ಇದ್ದ ನೀರನ್ನೂ ಖಾಲಿ ಮಾಡಿ ಭೂಮಿಯನ್ನು ಬಂಜರು ಮಾಡುತ್ತಿದ್ದೇವೆ, ವಾತವರಣವನ್ನು ಕಲುಷಿತಗೊಳಿಸಿ, ಬದುಕನ್ನೆ ದುಸ್ತರಗೊಳಿಸಿಕೊಳ್ಳುತ್ತಿದ್ದೇವೆ.

ಮೂರು ವರ್ಷಗಳ ಹಿಂದೆ ಕೊರೆದ ಬೋರ್‌ವೆಲ್‌ನಲ್ಲಿ ನೀರು ಕಡಿಮೆಯಾಗಿದೆ ಅಂತ, ಮೂರು ತಿಂಗಳ ಹಿಂದೆ ನಮ್ಮ ಮನೆಯಲ್ಲಿ ಮತ್ತೊಂದು ಬಾವಿ ಕೊರೆದಿದ್ದಾರೆ. ದುರಂತವೆಂದರೆ ೧೧೦೦ ಅಡಿ ಕೆಳಗೆ ದಕ್ಕಿರುವ ನೀರಿನ ಸೆಲೆ ಇನ್ನೊಂದು ವರ್ಷದಲ್ಲಿ ಬತ್ತಿಹೋಗುವಷ್ಟು ಮಾತ್ರ! ಕೋಲಾರದಲ್ಲಿ ಕೊಳವೆ ಬಾವಿ ಕೊರೆಯದಿರಲು ಆಜ್ಞೆ ಜಾರಿಯಾಗಿದೆ. ಮನೆಗೆ ಅಡಿಪಾಯ ಹಾಕಹೋದರೆ ದೊರೆಯುತ್ತಿದ್ದ ನೀರು ಉತ್ತರಕನ್ನಡದಲ್ಲೀಗ ೫೦೦ ಅಡಿ ಆಳಕ್ಕಿಳಿದುಬಿಟ್ಟಿದೆ. ಉತ್ತರ ಕರ್ನಾಟಕದ ಭಣಗುಡುವ ಬಿಸಿಲನಲ್ಲಿ ಶುದ್ಧ ನೀರೆಂದರೆ ಬಾಟಲಿಯ ನೀರು ಅಂತಾಗಿಬಿಟ್ಟಿದೆ. ಈ ಬಾರಿಯ ಬರ ಭೀಕರ, ಹಾದಿ ಹೀಗೇ ಸವೆದರೆ ಬರಲಿರುವ ದಿನಗಳು ಇನ್ನೂ ಭಯಂಕರ!

೨೦೦೬ರಲ್ಲಿ ನಾವು ಬಳಸಿದ ನೀರಿನ ಪ್ರಮಾಣ ೮೨೯ ಬಿ.ಕ್ಯು.ಮೀ. ೨೦೫೦ರ ವೇಳೆಗೆ ಅದರ ಎರಡರಷ್ಟು ನೀರು ನಮಗೆ ಬೇಕು. ದುರಂತ, ಆ ವೇಳೆಗೆ ನಮ್ಮ ಬಳಿ ಈಗಿನ ಅರ್ಧದಷ್ಟು ನೀರೂ ಉಳಿದಿರಲಾರದು! ಅಪಾರ ಕೃಷಿಯೋಗ್ಯ ಭೂಮಿಯನ್ನು ಹೊಂದಿದ್ದರೂ ಧಾನ್ಯೋತ್ಪಾದನೆಯಲ್ಲಿ ನಾವು ಸೋಲುತ್ತಿರುವ ಮುಖ್ಯ ಕಾರಣ ನೀರೇ! ಕಳೆದ ದಶಕದಿಂದೀಚೆಗೆ ನೀರಿಲ್ಲದೇ ಬಂಜರಾಗುತ್ತಿರುವ ಭೂಮಿಯ ಪ್ರಮಾಣವೂ ಹೆಚ್ಚುತ್ತಿದೆ. ಅದಕ್ಕೇ ಕಳೆದ ಫೆಬ್ರುವರಿಯಲ್ಲಿ ನದಿ ಜೋಡಣೆಯ ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ ಸುಪ್ರೀಂ ಕೋರ್ಟು ಸರ್ಕಾರಗಳಿಗೆ ಆದೇಶಿಸಿರೋದು. ಮೇಲ್ನೋಟಕ್ಕೆ ಗಂಗೆ-ಕಾವೇರಿಯರು ಬೆಸೆದುಕೊಂಡರೆ ಚಂದ ಅನಿಸುತ್ತೆ. ನಡುಭಾಗದ ಭೂಮಿಯನ್ನು ಹತ್ತಿ-ಇಳಿಯುವ ಹಾದಿಯಲ್ಲಿ ಗಂಗೆ ಮುನಿದು ಮರಳಿಬಿಟ್ಟರೆ..? ಒಂದಿಡೀ ನಾಗರಿಕತೆ ನಾಶವಾಗಿಬಿಡುವ ಹೆದರಿಕೆ ಪರಿಸರವಾದಿಗಳನ್ನು ಕಾಡುತ್ತಿದೆ.
ನದಿಗಳನ್ನು ಬೆಸೆಯುವ ಯೋಜನೆ ಇಂದು ನೆನ್ನೆಯದಲ್ಲ. ೧೮೫೮ರಲ್ಲಿಯೇ ಕರ್ನಲ್ ಆರ್ಥರ್ ಕಾಟನ್ ಭಾರತವನ್ನು ಕಾಲುವೆಗಳಿಂದ ಬೆಸೆಯುವ ಯೋಜನೆ ಮುಂದಿಟ್ಟಿದ್ದ. ಅದಕ್ಕೆ ತಗಲುವ ವೆಚ್ಚ ಕಂಡು ಗಾಬರಿಗೊಂಡ ಸರ್ಕಾರ ಸುಮ್ಮನಾಗಿತ್ತು. ಎಡವಟ್ಟಾದರೆ ನಷ್ಟವಾದೀತೆಂದು ಹೆದರಿತ್ತು. ಮುಂದೆ ೭೦ರ ದಶಕದಲ್ಲಿ ಗಂಗೆ ಕಾವೇರಿ ಬೆಸೆಯುವ ಯೋಜನೆ ಸರ್ಕಾರದೆದುರು ಬಂತು. ೨೬೪೦ ಕಿ.ಮೀ.ಗಳ ಈ ಯೋಜನೆಗೆ ೧೨ಸಾವಿರ ಕೋಟಿ ರೂಪಾಯಿಗಳ ವೆಚ್ಚ ತಗಲುವ ಕಲ್ಪನೆಯೇ ಭಯಾನಕವಾಗಿತ್ತು. ಯೋಜನೆ ಕಸದ ಬುಟ್ಟಿ ಸೇರಿತು. ಮುಂದೆ ಆ ದಶಕದ ಕೊನೆಯಲ್ಲಿ ಹಿಮಾಲಯದ ನದಿಗಳನ್ನು ಹಾರದಂತೆ ಬೆಸೆಯುವ ೯,೩೦೦ ಕಿ.ಮೀ ಉದ್ದದ ಯೋಜನೆ ಬಂತು, ಹೋಯ್ತು. ಎನ್‌ಡಿಎ ಸರ್ಕಾರ ಸುರೇಶ್ ಪ್ರಭು ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ಕೇಳಿತು. ಸಮಿತಿ ವರದಿಯನ್ನು ಕೊಟ್ಟಿತು ನಿಜ, ಆದರೆ ಎಲ್ಲ ಬಗೆಯ ಸಮಸ್ಯೆಗಳಿಗೆ ನದೀ ಜೋಡಣೆಯಿಂದ ಪರಿಹಾರ ದೊರಕಲಾರದೆಂದೂ ಒಪ್ಪಿಕೊಂಡಿತ್ತು. ಈಗ ಮತ್ತೊಮ್ಮೆ ನದೀ ಜೋಡಣೆಯ ವಿಚಾರಕ್ಕೆ ಜೀವ ಬಂದಿದೆ. ಈ ಬಾರಿ ಒಟ್ಟಾರೆ ಖರ್ಚು ಸುಮಾರು ೨೦ ಲಕ್ಷ ಕೋಟಿಯಾದರೂ ಆದೀತು. ನೆನಪಿಡಿ, ಕರ್ನಾಟಕದ ವರ್ಷಿಕ ಬಜೆಟ್ ಒಂದು ಲಕ್ಷ ಕೋಟಿ ಮಾತ್ರ.
ನದಿ ಜೋಡಣೆ ಯೋಜನೆ ಎಷ್ಟು ಮನಮೋಹಕವೋ ಅಷ್ಟೇ ಸಮಸ್ಯೆಗಳ ಆಗರ ಕೂಡಾ. ಮಧ್ಯ ಪ್ರದೇಶದ ಕೆನ್ ಮತ್ತು ಬೇಟ್ವಾ ನದೀ ಜೋಡಣೆಯೊಂದೇ ಅಲ್ಲಿನ ಪನ್ನಾ ರಕ್ಷಿತಾರಣ್ಯದ ಎರಡರಷ್ಟು ಅರಣ್ಯವನ್ನು ನುಂಗಿ ನೀರು ಕುಡಿದುಬಿಡುತ್ತದೆ. ಇನ್ನು ದೇಶದ ಮೂವತ್ತು ನದಿಗಳನ್ನು ಜೋಡಿಸಿದರೆ ಕಥೆ ಏನಾದೀತು? ೨೦೦೭ರ ಒಂದು ವರದಿಯ ಪ್ರಕಾರ ಭಾರತದ ನದೀಜೋಡಣೆ ಯೋಜನೆ ಏಳೂ ಮುಕ್ಕಾಲು ಲಕ್ಷ ಹೆಕ್ಟೇರ್ ಭೂಮಿಯನ್ನು ಅಪೋಶನ ತೆಗೆದುಕೊಳ್ಳದೆ. ಸುಮಾರು ೧೫ ಲಕ್ಷ ಜನರು ನಿರ್ವಸಿತರಾಗುತ್ತಾರೆ. ಸುಮಾರು ೨೦ ಹೆಕ್ಟೇರ್ ಭೂಮಿ ಕಾಲುವೆ ಕೊರೆಯಲಿಕ್ಕೇ ಬೇಕು. ಇದರಲ್ಲಿ ಒಂದು ಲಕ್ಷ ಹೆಕ್ಟೇರ್ ನಷ್ಟು ಭೂಮಿ ಅರಣ್ಯದ್ದಾಗಿದೆ ಎನ್ನುವುದೇ ಭಯಾನಕ. ಹೇಳಿ, ಇಷ್ಟು ಸವಾಲು ಸ್ವೀಕರಿಸಲು ಸಿದ್ಧವಿದ್ದೇವೆಯೇ? ಇಷ್ಟಕ್ಕೂ ಈ ಯೋಜನೆಗೆ ಹಸಿರು ನಿಶಾನೆ ದೊರೆತೊಡನೆ ಜಗತ್ತಿನ ಆಕ್ರಾಮಕ ಕಂಪೆನಿಗಳು ಅರಣ್ಯವನ್ನು ಸಪಾಟು ಮಾಡಲು ಧಾವಿಸುತ್ತವೆ. ಮೊದಲು ಆ ಕೆಲಸ. ಆಮೇಲೆ ಭೂಮಿಯನ್ನು ವಶಪಡಿಸಿಕೊಳ್ಳುವಲ್ಲಿ ಹೋರಾಟ. ಇಷ್ಟೆಲ್ಲ ಆದನಂತರ ಕಾಮಗಾರಿ ಶುರುವಾಗಬೇಕು. ಅಷ್ಟರೊಳಗೆ ಭೂ ಮಂಡಲದ ತಾಪಮಾನದಲ್ಲಿ ಏರುಪೇರಾಗಿ ನದಿಯ ನೀರಿನ ಸೆಲೆ ಕಡಿಮೆಯಾಗುತ್ತ ಈ ಯೋಜನೆಯನ್ನೇ ಕೈಬಿಟ್ಟರೆ ಅಚ್ಚರಿಯಿಲ್ಲ.
ಹಾಗೆ ನೋಡಿದರೆ ನಮ್ಮ ಕೃಷಿಯ ಅರ್ಧಕ್ಕೂ ಹೆಚ್ಚು ಭಾಗ ಭೂಗರ್ಭದ ನೀರಿನ ಆಧಾರದ ಮೇಲೆಯೇ ನಿಂತಿರೋದು. ಹಳ್ಳಿಯ ಶೇಕಡಾ ೯೦ರಷ್ಟು, ಪಟ್ಟಣದ ಶೇ.೫೦ರಷ್ಟು ಕುಡಿಯುವ ನೀರಿಗೆ ಭೂಗರ್ಭದ ನೀರೇ ಆಧಾರ. ಅದರೆ, ನಮ್ಮ ನೀರಾವರಿ ಬಜೆಟ್ಟಿನ ಮುಕ್ಕಾಲು ಭಾಗ ಡ್ಯಾಮ್ಗಳ ನಿರ್ಮಾಣಕ್ಕೆ ಮೀಸಲಾಗಿಟ್ಟಿರುವುದು ಮಹಾ ದುರಂತ.
ನೆನಪು ಮಾಡಿಕೊಳ್ಳಿ, ೧೯೮೦ರ ಅರಂಭದಲ್ಲಿ ರಾಜಸ್ಥಾನದ ಆಳ್ವಾರಿನ ಅನೇಕ ಭಾಗಗಳನ್ನು ಕಪ್ಪು ಪ್ರದೇಶವೆಂದು ಘೋಷಿಸಲಾಗಿತ್ತು. ಅದರರ್ಥ, ಅಲ್ಲಿ ಇನ್ನು ಭೂಗರ್ಭದ ಜಲವೇ ಇಲ್ಲ ಅಂತ. ರಾಜೇಂದ್ರ ಸಿಂಗರ ನೇತೃತ್ವದ ತರುಣ ಭಾರತದ ೧೫ ಜನ ಅಲ್ಲಿಗೆ ಹೋಗಿ ಮಳೆಯ ನೀರನ್ನು ಇಂಗಿಸುವ ಯತ್ನ ಶುರು ಮಾಡಿದರು. ಆರಂಭದ ದಿನಗಳಲ್ಲಿ ಮಕ್ಕಳ ಕಳ್ಳರೆಂದು ಜನರ ಬಳಿ ಅವರು ಹೊಡೆತ ತಿಂದದ್ದೂ ಇದೆ. ಕ್ರಮೇಣ ರಾಜೇಂದ್ರ ಸಿಂಗರ ಪ್ರಯತ್ನ ಜನರಿಗೆ ಮನದಟ್ಟಾಯಿತು. ಭೂಮಿಯೊಳಗೆ ನಿರ್ಮಿಸಲಾದ ನೀರಿಂಗುವ ತೊಟ್ಟಿಗಳು ನೀರನ್ನು ಹಿಡಿದವು, ಭೂಮಿಯೊಳಗೆ ಇಂಗಿಸಿದವು. ನೋಡನೋಡುತ್ತ ಅಂತರ್ಜಲದ ಮಟ್ಟ ಏರಿತು, ಕಪ್ಪು ಪ್ರದೇಶದ ಹಣೆಪಟ್ಟಿ ಹೋಗಿ, ಆಳ್ವಾರ್, ಸಮೃದ್ಧ ನೀರಿನ ಪ್ರದೇಶವಾಯಿತು. ಅಂದು ೫೦ ಸಾವಿರದಲ್ಲಿ ಎರಡು ತೊಟ್ಟಿ ಕಟ್ಟಿಕೊಂಡವ, ಇಂದು ವರ್ಷಕ್ಕೆ ಮೂರು ಕೋಟಿಯಷ್ಟು ಕೃಷಿ ಪದಾರ್ಥ ಬೆಳೆಯುತ್ತಾನೆ. ಅದು ಬಿಡಿ, ೧೯೮೬ರಲ್ಲಿ ಬತ್ತಿ ಹೋಗಿದ್ದ ಅರವಾರಿ ನದಿಯಗುಂಟ ನೀರಿಂಗಿಸಿದ್ದರ ಪರಿಣಾಮವಾಗಿ ಆ ನದಿಯೇ ಪುನರುಜ್ಜೀವಿತಗೊಂಡು ಲಕಲಕಿಸಿ ಹರಿಯಲಾರಂಭಿಸಿತು. ಡಿಸೆಂಬರ್‌ಗೇ ಬತ್ತುತ್ತಿದ್ದ ನೀರು ಈಗ ಮಾರ್ಚ್- ಏಪ್ರಿಲ್ ವರೆಗೂ ಕಾಣಸಿಗುತ್ತದೆಂದರೆ, ನೀವೇ ಲೆಕ್ಕ ಹಾಕಿ.
ಗಾಳಿ, ನೀರು ನಮ್ಮ ಬದುಕಿನ ಮೂಲ ಘಟಕಗಳು. ಅವುಗಳಿಂದಲೇ ಆಹಾರ, ಅವುಗಳಿಂದಲೆ ಕಾಡು- ನಾಡು ಎಲ್ಲವೂ. ಚಂದ್ರನ ಮೇಲೆ ನಾವು ಕಳಿಸುತ್ತಿರುವ ಯಂತ್ರಗಳೆಲ್ಲ ಹುಡುಕುತ್ತಿರೋದು ಗಾಳಿ- ನೀರನ್ನೆ. ನಾವು ಮಾತ್ರ ಇದ್ದ ನೀರನ್ನೂ ಖಾಲಿ ಮಾಡಿ ಭೂಮಿಯನ್ನು ಬಂಜರು ಮಾಡುತ್ತಿದ್ದೇವೆ, ವಾತವರಣವನ್ನು ಕಲುಷಿತಗೊಳಿಸಿ, ಬದುಕನ್ನೆ ದುಸ್ತರಗೊಳಿಸಿಕೊಳ್ಳುತ್ತಿದ್ದೇವೆ. ಅದಕ್ಕೇ ಸುರೇಶ್ ಪ್ರಭು, ರಾಜಕೀಯ ನೇತರರಾಗಿದ್ದೂ ಈ ವಿಚಾರದಲ್ಲಿ ಮಾತ್ರ ರಾಜಕೀಯ ತರಬೇಡಿರೆಂದು ಸಂದರ್ಶನದಲ್ಲಿ ಗೋಗರೆದಿರೋದು.
ಮಹಾರಾಷ್ಟ್ರದ ಕಾಂಗ್ರೆಸ್ ನೇತಾರ ಅಮರೀಷ್ ಪಟೇಲ್ ಮತ್ತು ನಿವೃತ್ತ ಭೂಗರ್ಭ ಶಾಸ್ತ್ರಜ್ಞ, ಆರೆಸ್ಸೆಸ್‌ನ ಸುರೇಶ್ ಖಾನಾಪುರ್‌ಕರ್, ದಶಕಗಳಷ್ಟು ಹಿಂದೆಯೇ ತಮ್ಮ ನಡುವಿನ ಸೈದ್ಧಾಂತಿಕ ಭೇದ ಮರೆತು, ನೀರಿಗಾಗಿ ಒಂದಾಗಿದ್ದರು. ಅಲ್ಲಿನ ಧುಲೆ ಜಿಲ್ಲೆಯ ಶಿರಪುರ ತಾಲ್ಲೂಕಿನಲ್ಲಿ ಬತ್ತಿಹೋಗಿದ್ದ ನಿರು ಇಂದು ಮತ್ತೆ ಭೋರ್ಗರೆಯುತ್ತಿದೆ. ವರ್ಷಕ್ಕೆ ಒಂದು ಬೆಳೆ ತೆಗೆಯಲು ಹೈರಾಣಾಗುತ್ತಿದ್ದ ರೈತ ಈಗ ಎರಡನೇ ಬೆಳೆಯನ್ನು ತೆಗೆದು ಸುಖದಿಂದಿದ್ದಾನೆ. ಅಮರೀಷ್ ಪಟೇಲರು ತಮ್ಮ ಸಹಕಾರಿ ಸಂಸ್ತೆಯ ಲಾಭವನ್ನು ಈ ಯೋಜನೆಗೆ ಸುರಿದಿದ್ದಾರೆ. ಅಚ್ಚರಿ ಏನು ಗೊತ್ತೆ? ನೂರೈತ್ತು ಚದರ ಕಿ.ಮೀ.ಗಳಷ್ಟು ಭುಮಿಯಲ್ಲಿ ಕಳೆದ ಎಂಟು ವರ್ಷಗಳಲ್ಲಿ ಅವರು ಮಾಡಿರುವ ಖರ್ಚು ಅರೂವರೆ ಕೋಟಿಯಷ್ಟು ಮಾತ್ರ.
ಬೆಳೆ ಹಾಳಾದೊಡನೆ ನಮ್ಮ ಸರ್ಕಾರಗಳು ರೈತನಿಗೆ ಹಣದ ಪರಿಹಾರ ಘೋಷಿಸಿಬಿಡುತ್ತವೆ. ಅದು ಅವನಲ್ಲೇನೂ ಬಲ ತುಂಬಿಕೊಳ್ಳುವುದಿಲ್ಲ, ಬದಲಿಗೆ ಅವನನ್ನು ಶಾಶ್ವತವಾಗಿ ಬೇಡುವವನನ್ನಾಗಿಸಿಬಿಡುತ್ತದೆ. ಮಧ್ಯಪ್ರದೇಶದ ಜಾಬುವಾ ಜಿಲ್ಲೆಯಲ್ಲಿ ಸ್ವಾವಲಂಬಿ ಆಂದೋಲನದ ನೇತೃತ್ವ ವಹಿಸಿದ ಹಿರಿಯರೊಬ್ಬರು ಹೇಳಿದ ಮಾತು ಮನನೀಯ. ಊಟ ಹಾಕೋದು ನಿಜವದ ಸೇವೆಯಲ್ಲ, ಊಟ ಗಳಿಸುವ ಮಾರ್ಗ ತೋರೋದು ನಿಜವಾದ ಸೇವೆ. ನೀರಿನ ವಿಚಾರದಲ್ಲಿ ನಾವು ಸ್ವಾವಲಂಬಿಯಾಗಬೇಕೆಂದರೆ ಇರುವುದನ್ನು ಹಾಗೆಯೇ ಉಳಿಸಿಕೊಂಡು, ನೀರಿನ ಸೆಲೆ ಹೆಚ್ಚಿಸಬೇಕೇ ಹೊರತು, ಇರುವುದನ್ನುನ ನಾಶಮಾಡಿ, ನೀರಿನ ಸ್ರೋತವನ್ನೆ ಮುಗಿಸುವುದಲ್ಲ.
ನಮ್ಮೂರಿನ ಕೆರೆ ನೋಡಿದಾಗೆಲ್ಲ ಹೊಟ್ಟೆ ಉರಿಯುತ್ತದೆ. ಸೂಲಿಬೆಲೆಯ ಕೆರೆ ತುಂಬಿದರೆ ಸುತ್ತಲ ಹಳ್ಳಿಗಳಿಗೆ ನೀರು. ಹೊಸಕೋಟೆ ಕೆರೆ ತುಂಬಿದರೆ, ಸುತ್ತಲ ತಾಲ್ಲೂಕಿಗೆ ನೀರು ಅಂತ ರೈತರು ಹೇಳೋದನ್ನ ಚಿಕ್ಕಂದಿನಲ್ಲಿ ಕೇಳುತ್ತಿದ್ದೆ. ಆ ಕೆರೆ ತುಂಬಿ ಎರಡು ದಶಕಗಳಾದರೂ ಕಳೆದಿವೆ. ಆಳು ಮುಳುಗುವಷ್ಟು ಹೂಳು ಆ ಕೆರೆಗಳಲ್ಲಿ. ಅರಣ್ಯ ಇಲಾಖೆಯಂತೂ ನಮ್ಮೂರಿನ ಕೆರೆಯೊಳಗೆ ನಿರುಪಯುಕ್ತ ಯೂಕಲಿಪ್ಟಸ್ ಗಿಡಗಳನ್ನು ನೆಟ್ಟು ಎರಡೇ ವರ್ಷಗಳಲ್ಲಿ ಹೆಲಿಕಾಪ್ಟರಿಗೆ ಹಸಿರುಹಸಿರು ಕಾಣುವ ಅರಣ್ಯದ ನಿರ್ಮಾಣ ಮಾಡಿದೆ. ಈ ಗಿಡಗಳಾದರೋ, ಭೂಗರ್ಭದ ನೀರನ್ನೆ ಬತ್ತಿಸಿ, ಕೆರೆಯನ್ನೂ ನಾಶಮಾಡಿಬಿಟ್ಟಿವೆ. ಹೇಳಿ, ನಮ್ಮೂರಿನ ಕೆರೆಗಳನ್ನೆ ಉಳಿಸಿಕೊಳ್ಳಲಾಗದ, ಪಕ್ಕದ ಕೆರೆಗಳೊಂದಿಗೆ ಜೋಡಿಸಿಕೊಳ್ಳಲಾಗದ ನಾವು, ನದಿ ಜೋಡಿಸುವಲ್ಲಿ ಗೆಲ್ಲುತ್ತೀವಾ? ಕೆರೆಗಳಿಂದ ಉಪಕೃತಗೊಂಡ ರೈತ, ತಾನೇ ನಾಲ್ಕು ವರ್ಷಕ್ಕೊಮ್ಮೆ ಕೆರೆಗಳಿಂದ ಹೂಳೆತ್ತುವ ಪ್ರಕ್ರಿಯೆ ನಡೆಸುತ್ತಿದ್ದನಂತೆ. ಅದಕ್ಕೆ ಕೈಹಾಕಿ ನಿಭಾಯಿಸುವೆನೆಂದು ಹೊರಟ ಸರ್ಕಾರ ತಾನೂ ಮಾಡಲಿಲ್ಲ, ರೈತನಿಗೂ ಬಿಡಲಿಲ್ಲ.
ಒಟ್ಟಾರೆ ಇಂದಿನ ಪರಿಸ್ಥಿತಿ ನೀರಿಗಾಗಿ ಹಾಹಾಕಾರ, ಮತ್ತೊಂದಷ್ಟು ಲಕ್ಷಕೋಟಿಯ ಯೋಜನೆಗೆ ಶ್ರೀಕಾರ ಅನ್ನುವಂತಾಗಿದೆಯಷ್ಟೆ.

 

ಒಳಸಂಚಿಗೆ ಬೇಕಿದೆ ಆತ್ಮವಿಶ್ವಾಸದ ಅಗ್ನಿಸ್ಪರ್ಷ

ಅಗ್ನಿ ೫ ಬಂದನಂತರ ರಣಾಂಗಣದಲ್ಲಿ ನಮ್ಮನ್ನು ಸೋಲಿಸಲು ಚೀನಾಕ್ಕೆ ಸಾಧ್ಯವಾಗಲಾರದು ನಿಜ. ಆದರೆ ಸಂಸತ್ತಿನ ಮೇಜಿನ ಮೇಲೆಯೇ ನಮ್ಮ ಸೋಲಿಗೆ ಷರಾ ಬರೆದರೆ ಯಾರು ಏನು ಮಾಡಿಯಾರು ಹೇಳಿ!?

ನಾಲ್ಕು ವರ್ಷಗಳ ತಪಸ್ಸು ಪೂರ್ಣಗೊಂಡಿದೆ. ೭೦೦ ಕಿ.ಮೀ.ದೂರದವರೆಗೂ ಹೋಗಿ ಶತ್ರು ಠಾಣ್ಯ ನಾಶ ಮಾಡಿಬರಬಲ್ಲ. ಅಗ್ನಿ ೧ನ್ನು ನಭಕ್ಕೆ ಹಾರಿಬಿಟ್ಟಾಗಿನಿಂದಲೂ ೫,೦೦೦ ಕಿ.ಮೀ. ದೂರಕ್ಕೆ ಹೋಗಬಲ್ಲ ಅಗ್ನಿಯ ಕನಸು ಕಾಣುತ್ತಲೇ ಇದ್ದವರು ನಾವು. ಮೊನ್ನೆ ಅಗ್ನಿ ೫ ಯಶಸ್ವಿಯಾಗಿ ಉಡಾವಣೆಗೊಂಡು ಸೈನ್ಯದ ಶಕ್ತಿಯನ್ನು ನೂರ್ಮಡಿಗೊಳಿಸಿದಾಗ ಆ ಕನಸು ನನಸಾಯಿತು. ಕನಸು ನನಸುಗಳ ಕತೆ ಏನೇ ಇರಲಿ. ಸೈನ್ಯದ ಸಾಮರ್ಥ್ಯದ ಕುರಿತಂತೆ ನಡೆಯುತ್ತಿದ್ದ ವಾದ ವಿವಾದಗಳಿಂದ ಈ ಪರೀಕ್ಷೆ ಕೇಂದ್ರ ಸರ್ಕಾರವನ್ನಂತೂ ಪಾರುಮಾಡಿತು. ಅಗ್ನಿಯೂ ತಂಪೆರೆಯಬಲ್ಲದೆಂದರೆ ಹೀಗೇ ನೋಡಿ!
ಈ ನಾಲ್ಕು ವರ್ಷಗಳ ಪ್ರಯತ್ನ ಅಂತ್ಯ ಕಾಣಲು ಇನ್ನೂ ಸ್ವಲ್ಪ ಕಾಲಾವಕಾಶ ಬೇಕಿತ್ತು. ಆದರೆ ರಕ್ಷಣಾ ಸಚಿವ ಆಂಟನಿ ವಿಜ್ಞಾನಿಗಳಿಗೆ ದುಂಬಾಲು ಬಿದ್ದು ಈ ಪ್ರಯೋಗವನ್ನು ಸಾಧ್ಯವಾಗಿಸಿ ಯಶಸ್ಸು ಗಳಿಸಿಕೊಂಡರು. ಈ ನಿಟ್ಟಿನಲ್ಲಿ ಡಿಆರ್‌ಡಿಓಗೆ ಸಹಕಾರಿಯಾಗಿ ಹಲವು ವೈಜ್ಞಾನಿಕ ಸಂಸ್ಥೆಗಳು ದುಡಿದಿವೆ. ಯಶಸ್ಸಿನ ಈ ಹೊತ್ತಿನಲ್ಲಿ ಆ ವಿಜ್ಞಾನಿಗಳಿಗೆಲ್ಲ ಒಂದು ಪ್ರೀತಿಯ ಸಲಾಮು.
ಅದಿರಲಿ. ಈ ಅಗ್ನಿಯ ವಿಶೇಷವೇನು ಗೊತ್ತೇ? ಈ ಕ್ಷಿಪಣಿ ಚೀನಾದ ಈಶಾನ್ಯವೂ ಸೇರಿದಂತೆ ಇಡಿಯ ಏಷ್ಯಾ, ಯುರೋಪಿನ ಶೇ.೭೦ ಭಾಗ ಹಾಗೂ ಆಸ್ಟ್ರೇಲಿಯಾದ ತೀರಗಳನ್ನು ನಾಶ ಮಾಡಬಲ್ಲದು. ಚೀನಾದ ಎದೆಯಲ್ಲಿ ಅವಲಕ್ಕಿ ಕುಟ್ಟಲು ಪ್ರಾರಂಭವಾಗಿರೋದು ಅದ್ಕಕೇ. ಪಾಕಿಸ್ತಾನವಂತೂ ಇಂತಹದೊಂದು ಪ್ರಯೋಗದ ಯೋಚನೆಯನ್ನೂ ಮಾಡಲಾರದು ಬಿಡಿ. ಆದರೆ ಚೀನಾ ಮಾತ್ರ ತಕ್ಕ ಸಿದ್ಧತೆ ಶುರು ಮಾಡಿದೆ. ಇಂತಹ ಕ್ಷಿಪಣಿಗಳು ಅದರ ಬಳಿ ಇಲ್ಲವೆಂದಲ್ಲ, ಆದರೆ ತಾನು ಬಳಸುವ ಒಂದೊಂದು ಕ್ಷಿಪಣಿಗೂ ಭಾರತ ಪ್ರತ್ಯುತ್ತರ ನೀಡಬಲ್ಲದೆಂಬುದು ಅದಕ್ಕೀಗ ಖಾತ್ರಿಯಾಗಿದೆ. ಅದಕ್ಕೇ ತನ್ನ ಅಧಿಕೃತ ಪತ್ರಿಕೆ ಗ್ಲೋಬಲ್ ಟೈಮ್ಸ್‌ನಲ್ಲಿ ಚೀನಾ ಅಲವತ್ತುಕೊಂಡಿದೆ. ಕಾಲು ಕೆರೆದುಕೊಂಡು ಜಗಳಕ್ಕೆ ಬರಬೇಡಿ ಎಂದೆಲ್ಲ ತಾಕೀತು ಮಾಡಿದೆ.
ಒಟ್ಟಾರೆ ಇಂದು ಅಗ್ನಿಯ ಸೇರ್ಪಡೆಯೊಂದಿಗೆ ಭಾರತ ಜಗತ್ತಿನ ನಾಲ್ಕನೇ ಮಿಲಿಟರಿ ಶಕ್ತಿಯಾಗಿ ಹೊರಹೊಮ್ಮಿರುವುದು ಅಚ್ಚರಿಯ ಸಂಗತಿಯೇನಲ್ಲ. ಇಂತಹ ಕ್ಷಿಪಣಿ ಹೊಂದಿರುವ ಆರು ರಾಷ್ಟ್ರಗಳ ಸಾಲಿನಲ್ಲಿ ಈಗ ಭಾರತವೂ ಎದೆಯೆತ್ತಿ ನಿಲ್ಲುವಂತಾಗಿದೆ.
ಬರಿ ಇಷ್ಟೇ ಆಗಿದ್ದರೆ ವಿಶೇಷ ಎನ್ನಿಸುತ್ತಿರಲಿಲ್ಲ. ಕಳೆದ ಫೆಬ್ರವರಿ ೧೦ಕ್ಕೆ ನಮ್ಮ ವಿಜ್ಞಾನಿಗಳು ಶತ್ರು ರಾಷ್ಟ್ರಗಳ ಕ್ಷಿಪಣಿಗಳನ್ನು ಹೊಡೆದುರುಳಿಸಬಲ್ಲಂತಹ ಪ್ರತಿಕ್ಷಿಪಣಿಗಳನ್ನೂ ಯಶಸ್ವಿಯಾಗಿ ಉಡಾಯಿಸಿದ್ದಾರೆ. ಒರಿಸ್ಸಾದ ಕಡಲ ತೀರದಲ್ಲಿ ನಡೆದ ಈ ಪ್ರಯೋಗ ರಾಮ ರಾವಣರ ಯುದ್ಧದ ಆಧುನಿಕ ಚಿತ್ರದಂತೆ ತೋರುತ್ತಿತ್ತು. ಶತ್ರು ದೇಶದಿಂದ ಹೊರಟಂತೆ ಒಂದು ಪೃಥ್ವಿ ಕ್ಷಿಪಣಿ ಹೊರಟರೆ, ಒರಿಸ್ಸಾದ ಕಡಲ ತೀರದ ಮತ್ತೊಂದು ತುದಿಯಿಂದ ಹೊರಟ ಪ್ರತಿ ಕ್ಷಿಪಣಿ ಅದನ್ನು ಆಕಾಶದಲ್ಲಿಯೇ ಧ್ವಂಸಗೊಳಿಸಿ ವಿಜ್ಞಾನಿಗಳ ಮುಖದಲ್ಲಿ ಮಂದಹಾಸ ತಂದಿತು. ೨,೦೦೦ ಕಿ.ಮೀ. ದೂರದಿಂದ ಹೊರಟ ಕ್ಷಿಪಣಿಯೊಂದನ್ನು ರೇಡಾರ್‌ಗಳು ಗುರುತಿಸಿ, ಅದರ ಹಾದಿಯನ್ನು ಗಮನಿಸುತ್ತಾ ನಮ್ಮ ಪ್ರತಿಕ್ಷಿಪಣಿಗೆ ಮಾರ್ಗದರ್ಶನ ಮಾಡುತ್ತಾ ಆಕಾಶದಲ್ಲಿಯೇ ಶತ್ರು ಕ್ಷಿಪಣಿಗೆ ಢಿಕ್ಕಿ ಹೊಡೆಸಿ ನಾಶಗೈಯುವ ಪ್ರಕ್ರಿಯೆ ಇದೆಯಲ್ಲ, ಅದು ಸಾಮಾನ್ಯ ತಂತ್ರಜ್ಞಾನವೇನಲ್ಲ. ಜೊತೆಗೆ ಈ ಕಾಳಗ ನಮ್ಮ ಹವಾಗೋಳದ ಒಳಗೆ ನಡೆಯದಂತೆ ಎಚ್ಚರಿಕೆ ಬೇರೆ ವಹಿಸಬೇಕಲ್ಲ. ನಮ್ಮ ವಾತಾವರಣದ ಒಳ ಹೊಕ್ಕ ಶತ್ರು ಕ್ಷಿಪಣಿಯನ್ನು ಹೊಡೆದುರುಳಿಸಿದರೆ ನಷ್ಟ ನಮಗೇ. ಅದಕ್ಕೇ ಅದನ್ನು ಆದಷ್ಟು ದೂಎದಲ್ಲಿಯೇ ಧ್ವಂಸಗೈಯುವ ಪ್ರಯಾಸವೂ ಆಗಬೇಕು. ಇದು ಕ್ಷಿಪಣಿಯನ್ನು ಗುರಿಯತ್ತ ನಿಖರವಾಗಿ ಹಾರಿಸಿದಷ್ಟೇ, ಸ್ವಲ್ಪ ಅದಕ್ಕಿಂತಲೂ ಹೆಚ್ಚು ಕಷ್ಟದ ಸಂಗತಿ. ಅಮೆರಿಕಾ, ರಷ್ಯಾ, ಫ್ರಾನ್ಸ್, ಇಸ್ರೇಲನ್ನು ಬಿಟ್ಟರೆ ಇಂತಹ ತಂತ್ರಜ್ಞಾನ ಹೊಂದಿರುವ ೫ನೇ ದೇಶ ನಾವು ಮಾತ್ರ!
ಹೌದು. ತಂತ್ರಜ್ಞಾನದ ದೃಷ್ಟಿಯಿಂದ, ಸೈನಿಕರ ಆತ್ಮಸ್ಥೈರ್‍ಯದ ದೃಷ್ಟಿಯಿಂದ ನಮ್ಮನ್ನು ಸರಿಗಟ್ಟಬಲ್ಲ ರಾಷ್ಟ್ರ ಸಿಕ್ಕೋದು ಕಷ್ಟ. ಆದರೆ ನಮ್ಮನ್ನಾಳುವ ನಾಯಕರ ದೂರದೃಷ್ಟಿಯ ಕೊರತೆ ಮಾತ್ರ ಸ್ವಾತಂತ್ರ್ಯ ಬಂದಾಗಿನಿಂದಲೂ ನಮ್ಮನ್ನು ಕಾಡುತ್ತಲೇ ಇದೆ. ಚೀನಾ ನೇರ ಯುದ್ಧಕ್ಕಿಳಿಯದೇ ನಮ್ಮ ಸುತ್ತಲೂ ಶತ್ರುಗಳ ನಿರ್ಮಾಣ ಮಾಡಿ ನಮ್ಮನ್ನು ಹೈರಾಣು ಮಾಡಲು ಅನೇಕ ವರ್ಷಗಳಿಂದ ಪ್ರಯತ್ನಿಸುತ್ತಲೇ ಇದೆ. ಪಾಕಿಸ್ತಾನಕ್ಕೆ ಅದು ನೀಡುತ್ತಿರುವ ಸಹಕಾರವಂತೂ ಎಲ್ಲರಿಗೂ ಗೊತ್ತಿದ್ದದ್ದೇ. ಅದರೊಟ್ಟಿಗೇ ಚೀನಾ ಶ್ರೀಲಂಕಾಕ್ಕೂ ಬಗೆ ಬಗೆಯಲ್ಲಿ ಸಹಾಯ ಮಾಡುತ್ತಿದೆ. ಹಣವಿರಲಿ, ಶಕ್ತಿಯಿರಲಿ ಎಲ್ಲ ದಿಕ್ಕಿನಿಂದಲೂ ಬಗ್ಗಿಸಿಕೊಂಡಿದೆ. ನಾವಾದರೋ ಮಿತ್ರ ಶ್ರೀಲಂಕಾವನ್ನು ಮಾನವ ಹಕ್ಕುಗಳ ಹೆಸರಲ್ಲಿ ವಿರೋಧಿಸಿಕೊಂಡು ಚೀನಾದ ಕೈ ಅದರಲ್ಲಿ ಬಲವಾಗುವಂತೆ ಮಾಡಿಬಿಟ್ಟಿದ್ದೇವೆ. ಇಂತಹದೊಂದು ಮೂರ್ಖ ನಿರ್ಧಾರವನ್ನು ಕೈಗೊಂಡಿದ್ದರ ಪರಿಣಾಮವನ್ನು ನಾವು ಭವಿಷ್ಯದಲ್ಲಿ ಎದುರಿಸಲೇಬೇಕು, ಅನುಮಾನವಿಲ್ಲ. ನಾಳೆ ಭಾರತದ ಮುಸಲ್ಮಾನರು, ಕ್ರಿಶ್ಚಿಯನ್ನರು ನಮ್ಮ ಮೇಲೆ ದಬ್ಬಾಳಿಕೆ ಆಗುತ್ತಿದೆಯೆಂದು ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋದರೆ ನಮ್ಮ ಸಹಾಯಕ್ಕೆ ನೆರೆಯ ರಾಷ್ಟ್ರಗಳು ಯಾವುದು ಬಂದಾವು ಹೇಳಿ. ನೌಕಾ ಸೇನೆಯ ದೃಷ್ಟಿಯಿಂದ ನೋಡಿದರೆ ನಮಗಿಂತ ಸಾಕಷ್ಟು ಹಿಂದಿರುವ ಚೀನಾ ತನಗೆ ಬೇಕಾದ ನೌಕಾ ನೆಲೆಯನ್ನು ಶ್ರೀಲಂಕಾದಲ್ಲಿ ಕಂಡುಕೊಳ್ಳುತ್ತಿದೆ ಗೊತ್ತೇನು? ಮಾವೋತ್ಸೆ ತುಂಗನ ಕಾಲದಿಂದಲೂ ಇದ್ದ ಭಾರತವನ್ನು ಆಪೋಶನ ತೆಗೆದುಕೊಳ್ಳಬೇಕೆಂಬ ಕನಸನ್ನು ಚೀನಾ ಈಗ ಮೊದಲಿಗಿಂತಲೂ ಹೆಚ್ಚು ಆಕ್ರಮಣಕಾರಿಯಾಗಿ ನನಸು ಮಾಡಿಕೊಳ್ಳುತ್ತಿದೆ. ಅದಕ್ಕೆ ಪ್ರತಿತಂತ್ರ ಹೆಣೆಯಬೇಕೆಂಬ ಕಿಂಚಿತ್ ಯೋಚನೆಯಾದರೂ ಇದೆಯೆ?
ಹೋಗಲಿ ಬಿಡಿ, ಚೀನಾದ ಸಂಪರ್ಕ ಸಾಧನ ಕಂಪೆನಿ ಹುವೆ (huಚಿತಿei) ತಾನು ಹುಟ್ಟಿಕೊಂಡ ೨೫ ವರ್ಷಗಳಲ್ಲಿ, ಜಾಗತಿಕ ಸಂಪರ್ಕ ಪಡಕೊಂಡ ೧೫ ವರ್ಷಗಳಲ್ಲಿ ಮಾಡಿದ ಸಾಧನೆ ಕಣ್ಣು ಕುಕ್ಕುವಂಥದ್ದು.   ಇಂದು ಭಾರತೀಯರು ಬಳಸುವ ಅಂತರ್ಜಾಲ ಸಂಬಂಧಿತ ೯೦% ಸಾಧನಗಳು ಈ ಕಂಪೆನಿಯಿಂದಲೇ ತಯಾರಾಗುವಂಥವು. ನಮ್ಮ ಸೈನ್ಯದಲ್ಲೂ ಈ ಕಂಪೆನಿಯ ಹಸ್ತ ಆಳಕ್ಕೆ ಇಳಿದಿದೆ. ನಮ್ಮ ಹಿರಿಯ ಅಧಿಕಾರಿಗಳು ಬಳಸುವ ಮೊಬೈಲಿನಿಂದ ಹಿಡಿದು, ವಿಜ್ಞಾನಿಗಳು ಬಳಸುವ ಅಂತರ್ಜಾಲ ಸಂಪರ್ಕ ಸಾಧನದವರೆಗೆ ಎಲ್ಲವೂ ಚೀನಾದ್ದೇ. ಮುಂದೆ ಮಹತ್ವದ ದಿನ ಬಂದಾಗ ಈ ಸಾಧನಗಳನ್ನು ಹುವೆ ನಿಷ್ಕ್ರಿಯಗೊಳಿಸಿಬಿಟ್ಟರೆ, ಎಲ್ಲಾ ಇದ್ದೂ ಇಲ್ಲದಂತಿರುವ ಸ್ಥಿತಿಗೆ ನಾವು ತಲುಪಿಬಿಟ್ಟೇವು.  (ಕರ್ಣ ಸಮಯಕ್ಕೆ ಸರಿಯಾಗಿ ಯುದ್ಧ ವಿದ್ಯೆಯನ್ನು ಮರೆತಂತೆಯೇ ಇದು, ಎಚ್ಚರಿಕೆ!)
ಈ ಕಂಪೆನಿಯ ವಸ್ತುಗಳಿಗೆ ಬಿಎಸ್ಸೆನ್ನೆಲ್. ಅವಕಾಶ ನೀಡಬಾರದೆಂದು ಬಹಳ ಹಿಂದೆಯೇ ನಮ್ಮ ಗುಪ್ತಚರರು ವರದಿ ನೀಡಿದ್ದರು. ಅರುಣ್ ಶೌರಿ ಕಾಲಕ್ಕೆ ಈ ಕುರಿತಂತೆ ಸಾಕಷ್ಟು ಚರ್ಚೆಗಳೂ ನಡೆದು ಈ ಕಂಪೆನಿಯನ್ನು ದೂಎರವಿಡುವ ನಿರ್ಧಾರವೂ ಆಗಿತ್ತು. ಅದು ಹೇಗೋ ಗವಾಕ್ಷಿಯಿಂದ ಭೂತ ಮತ್ತೆ ನುಸುಳಿದೆ. ನಮ್ಮ ಸೈನ್ಯದೊಳಗೆ ಆಗುವ ಪ್ರತಿ ಚಲನವಲನವನ್ನು ಚೀನಾ ಕುಳಿತಲ್ಲಿಂದಲೇ ಗಮನಿಸುವಷ್ಟು ಸಾಮರ್ಥ್ಯ ಪಡೆದುಕೊಂಡಿದೆ. ಈಗ ಹೇಳಿ, ನಮ್ಮನ್ನು ಆಳುವ ನಾಯಕರು ಇವುಗಳ ಬಗ್ಗೆ ಯೋಚಿಸದೆ ಇರುವಷ್ಟು ಮೂರ್ಖರಾಗಿಬಿಟ್ಟಿದ್ದಾರಾ?
೧೭೫೭ರಲ್ಲಿ ಸಿರಾಜುದ್ದೌಲನ ಬಳಿಯೂ ಸಾಕಷ್ಟು ಸೈನ್ಯವಿತ್ತು, ಶಸ್ತ್ರಗಳಿದ್ದವು. ಎದುರಾಳಿ ರಾಬರ್ಟ್ ಕ್ಲೈವನ ಬಳಿ ಹೇಳಿಕೊಳ್ಳುವಷ್ಟು ಸೈನ್ಯವಾಗಲೀ ಶಸ್ತ್ರಗಳಾಗಲೀ ಇರಲಿಲ್ಲ. ಆದರೆ ಅವನ ಬಳಿ ಕುಟಿಲ ನೀತಿಗಳಿದ್ದವು. ಆತ ಮೀರ್ ಜಾಫರ್‌ನನ್ನು ಬುಟ್ಟಿಗೆ ಹಾಕಿಕೊಂಡ. ನಮ್ಮ ಸೈನ್ಯ ಕಾದಾಡಲಿಲ್ಲ. ಸಿರಾಜುದ್ದೌಲನ ಹತ್ಯೆಯಾಯಿತು. ದೇಶ ಗುಲಾಮವಾಯಿತು. ಮನಮೋಹನರೂ ಸಿರಾಜುದ್ದೌಲನಂತೆಯೇ. ಅವರೊಡನೆ ಹಣಕ್ಕಾಗಿ ತಮ್ಮನ್ನೇ ಮಾರಿಕೊಳ್ಳುವ ಅನೇಕ ಮೀರ್‌ಜಾಫರ್‌ಗಳೂ ಇದ್ದಾರೆ. ಅದಕ್ಕೇ ಹೆದರಿಕೆಯಾಗೋದು. ಅಗ್ನಿ ೫ ಬಂದನಂತರ ರಣಾಂಗಣದಲ್ಲಿ ನಮ್ಮನ್ನು ಸೋಲಿಸಲು ಚೀನಾಕ್ಕೆ ಸಾಧ್ಯವಾಗಲಾರದು ನಿಜ. ಆದರೆ ಸಂಸತ್ತಿನ ಮೇಜಿನ ಮೇಲೆಯೇ ನಮ್ಮ ಸೋಲಿಗೆ ಷರಾ ಬರೆದರೆ ಯಾರು ಏನು ಮಾಡಿಯಾರು ಹೇಳಿ. ನೆಹರೂ ಪಾಕಿಸ್ತಾನಕ್ಕೆ ಭೂಮಿ ಬಿಟ್ಟರು. ಆಗಲೂ ನಮ್ಮ ಶಕ್ತಿಯೇ ಹೆಚ್ಚಿತ್ತು. ಲಾಲ್ ಬಹದ್ದೂರರು ಅನಗತ್ಯವಾಗಿ ತಾಷ್ಕೆಂಟಿನಲ್ಲಿ ಒಪ್ಪಂದಕ್ಕೆ ಬಲಿಯಾದರು. ೯೦ ಸಾವಿರ ಶತ್ರು ಸೈನಿಕರನ್ನು ಬಂಧಿಸಿಯೂ ಒಪ್ಪಂದದ ಮೇಜಿನಲ್ಲಿ ಇಂದಿರಾ ಗಾಂಧಿ ಸೋತರು. ಕಾರ್ಗಿಲ್‌ನಲ್ಲಿ ಕಷ್ಟಪಟ್ಟು ಗೆದ್ದ ಭೂಮಿಯಲ್ಲಿ ನಮ್ಮ ಸೈನಿಕರೇ ನಿಂತು ಶತ್ರು ಸೈನಿಕರಿಗೆ ’ಸೇಫ್ ಪ್ಯಾಸೇಜ್’ ನೀಡಬೇಕಾಯ್ತು. ಅದು ವಾಜಪೇಯಿಯವರು ಮಾಡಿಕೊಂಡ ಒಪ್ಪಂದ. ಹೇಳಿ, ಸೋತಿದ್ದು ಸೈನಿಕರಾ, ಆಳುವ ಧಣಿಗಳಾ?
ಅಗ್ನಿ ಬಂತು ಅಂದೊಡನೆ ಒಮ್ಮೆ ಇವೆಲ್ಲವನ್ನೂ ಕೇಳಬೇಕನ್ನಿಸಿತು ಅಷ್ಟೇ. ದೇಶದೊಡನೆ ಘನಿಷ್ಟ ಬಾಂಧವ್ಯ ಇರುವ ಸೈನಿಕರು – ವಿಜ್ಞಾನಿಗಳು ತಮ್ಮನ್ನೇ ಪನವಾಗಿಟ್ಟುಕೊಂಡು ನಮ್ಮ ಆತ್ಮಸ್ಥೈರ್‍ಯ ಹೆಚ್ಚಿಸುತ್ತಾರೆ. ಆಳುವವರು ತಮ್ಮನ್ನೇ ಮಾರಿಕೊಂಡು ನಮ್ಮಲ್ಲಿ ಹೆದರಿಕೆಯ ಬೀಜ ಬಿತ್ತುತ್ತಾರೆ. ಈ ಹೆದರಿಕೆಗೂ ಅಗ್ನಿಸ್ಪರ್ಷ ಮಾಡಬಲ್ಲ ನಾಯಕನೊಬ್ಬನಿಗಾಗಿ ದೇಶ ಕಾಯುತ್ತಿದೆ. ಆತ ಆಳುತ್ತಾನಾ? ಅದೇ ಕೋಟಿ ರೂಪಾಯಿ ಪ್ರಶ್ನೆ.

 
5 Comments

Posted by on April 21, 2012 in Uncategorized

 

ಮರೆತುಹೋದ ಹೋರಾಟಕ್ಕೆ ಮರುಹುಟ್ಟಿನ ಜೀವಹನಿ

ಮರೆವಿನ ವ್ಯಾಪ್ತಿ ಅದೆಷ್ಟಿದೆಯಲ್ಲ! ರಾಮದೇವ್ ಬಾಬಾ ಮತ್ತು ಅವರ ಭಕ್ತ ಸಮೂಹಕ್ಕೆ ದೆಹಲಿಯಲ್ಲಿ ಲಾಠಿ ಏಟು ಬಿದ್ದು ಜೂನ್‌ಗೆ ಬರೋಬ್ಬರಿ ಒಂದು ವರ್ಷ. ಅದಕ್ಕೂ ತಿಂಗಳ ಮುನ್ನ ಇಡಿಯ ದೇಶ ಜುಬ್ಬ- ಪೈಜಾಮಾದ ವೃದ್ಧನೊಬ್ಬನ ಹಿಂದೆ ನಡೆದುಹೊರಟಿತ್ತು. ಜೆಪಿ ಆಂದೋಲನದ ನಂತರ ದೇಶ ಕಂಡ ಮಹತ್ವದ ಹೋರಾಟ ಎಂದೆಲ್ಲ ಹೇಳಿಸಿಕೊಂಡ ಅಣ್ಣಾ ಹೋರಾಟ ಆ ಹೋರಾಟದ ಸ್ಥಿತಿ-ಗತಿಗಳೇನು? ನಾವೆಲ್ಲ ಮರೆತೇಬಿಟ್ಟಿದ್ದೇವೆ.
ಸ್ವಲ್ಪ ಫ್ಲ್ಯಾಷ್ ಬ್ಯಾಕು. ಅಣ್ಣಾ ಹಜಾರೆ ಕಳೆದ ಕೆಲವಾರು ದಶಕಗಳಿಂದ ಭ್ರಷ್ಟರ ವಿರುದ್ಧ ತೊಡೆ ತಟ್ಟುತ್ತಲೇಬಂದವರು. ರಾಮದೇವ್ ಬಾಬಾ ರಾಜೀವ ದೀಕ್ಷಿತರ ಭಾಷಣಗಳಿಂದ ಪ್ರಭಾವಿತರಾಗಿ ಸ್ವದೇಶೀ ಆಂದೋಲನದ ಮೂಲಕ ಭಾರತ್ ಸ್ವಾಭಿಮಾನ್‌ದತ್ತ ಹೊರಳಿದವರು. ೨೦೧೧ರ ಮಾಯೆಯೇನೋ? ಮಾಹಿತಿ ಹಕ್ಕಿನ ಹೋರಾಟಗಳನ್ನು ನಡೆಸಿಕೊಂಡುಬಂದಿದ್ದ ಕೇಜ್ರಿವಾಲ್, ಪೊಲೀಸ್ ಅಧಿಕಾರಿ ಕಿರಣ್ ಬೇಡಿ ತಾವು ಕೈಗೆತ್ತಿಕೊಂಡ ಹೋರಾಟಕ್ಕೆ ಅಣ್ಣಾರನ್ನು ಮುಂದಿರಿಸಿಕೊಂಡರು. ಆಸ್ಥಾ- ಸಂಸ್ಕಾರ್‌ಗಳಲ್ಲಿ ನಿರಂತರವಾಗಿ ಭ್ರಷ್ಟಾಚಾರಿಗಳ ನೀರಿಳಿಸುತ್ತಿದ್ದ ರಾಮದೇವ್ ಬಾಬಾರ ಬೆಂಬಲವನ್ನು ಪಡಕೊಂಡು ಬೀಗಿದರು. ’ಇಂಡಿಯಾ ಅಗೇನ್‌ಸ್ಟ್ ಕರಪ್ಷನ್’ ಕೆಲಸ ಶುರು ಮಾಡಿತು. ಭ್ರಷ್ಟಾಚಾರಿಗಳ ಸಮೂಲ ನಾಶದ ಚರ್ಚೆ ಆರಂಭವಾಯಿತು.
ಅಂದುಕೊಂಡಂತೆ ನಡೆದಿದ್ದರೆ ಸಮಸ್ಯೆ ಇರಲಿಲ್ಲ. ದೆಹಲಿಯಲ್ಲಿ ಜನಲೋಕ್‌ಪಾಲ್ ಬಿಲ್‌ಗೆ ಆಗ್ರಹಿಸಿ ನಡೆದ ರ್‍ಯಾಲಿಯಲ್ಲಿ ಸಾವಿರ ಸಾವಿರ ಸಂಖ್ಯೆಯ ಜನ ಸೇರಿದ್ದರು. ಹಾಗೆ ಸೇರಿದವರಲ್ಲಿ ಬಹುಪಾಲು ಬಾಬಾರ ಯೋಗ ಅನುಯಾಯಿಗಳೆಂಬುದರಲ್ಲಿ ಅನುಮಾನ ಯಾರಿಗೂ ಇರಲಿಲ್ಲ. ಟೀವಿಗಳಲ್ಲಿ ಬಿತ್ತರಗೊಂಡ ಚಿತ್ರಗಳಲ್ಲಿ ರಾಮ್‌ದೇವ್‌ರ ಫೋಟೋ ಹಿಡಿದು ನಿಂತ ಜನರೇ ಇದಕ್ಕೆ ಸಾಕ್ಷಿಯಾಗಿದ್ದರು. ಇದನ್ನು ಕಂಡು ’ಸೆಕ್ಯುಲರ್’ ಮದಿರೆ ಕುಡಿದ ಹಲವರಿಗೆ ಮತ್ತೇರಿಬಿಟ್ಟಿತು. ಕೇಸರಿ ಕಂಡಷ್ಟೂ ಆಂದೋಲನ ಹಳ್ಳಹಿಡಿಯುತ್ತದೆಂದು ಅಣ್ಣಾ ಟೀಮಿಗೆ ಅಫೀಮು ತಿನ್ನಿಸಿದರು. ಅವತ್ತೇ ಆಗಬಾರದ್ದು ಆಗಿಹೋಯಿತು. ರಾಮದೇವ್ ಬಾಬಾ ವೇದಿಕೆಯ ಬಳಿ ಬಂದಾಗ ಅವರನ್ನು ವೇದಿಕೆಯೇರದಂತೆ ತಡೆಯುವ ಯತ್ನ ಮಾಡಲಾಯ್ತು. ಭಾರತ ಮಾತೆಯ ಪಟವನ್ನು ತೆರವುಗೊಳಿಸಬೇಕೆಂದು ತಾಕೀತು ಮಾಡಲಾಯ್ತು. ’ವಂದೇ ಮಾತರಂ’ ಘೋಷಣೆ ಪ್ರಯತ್ನಪೂರ್ವಕವಾಗಿ ನಿಲ್ಲಿಸಲಾಯಿತು. ಕೊನೆಗೆ ಸೋನಿಯಾಗಾಂಧಿಯನ್ನು ಕರೆಸಿ ಅಣ್ಣಾ ಹಜಾರೆಯವರಿಗೆ ಹಾಲು ಕುಡಿಸುವ ಪ್ರಯಾಸವೂ ಆರಂಭವಾಯ್ತು. ರಾಮದೇವ್ ಬಾಬಾ ಕಡಿಮೆ ಭಂಡರಲ್ಲ. ಯಾರ ಮುಲಾಜೂ ಇಲ್ಲದೆ ವೇದಿಕೆ ಏರಿದರು. ಅಣ್ಣಾ ಹಜಾರೆಯವರನ್ನು ತಬ್ಬಿಕೊಂಡರು. ಹಾಲು ಕುಡಿಸಿದರು. ಬಗೆಬಗೆಯ ಘೋಷಣೆಗಳನ್ನು ಹಾಕಿಸಿ ತೆರಳಿದರು.
ಆದರೆ ॒ಹಾವು ಬಾಲ ತುಳಿಸಿಕೊಂಡಿತ್ತು. ಈಗ ಭುಸುಗುಟ್ಟುವುದಷ್ಟೇ ಬಾಕಿ. ಬಾಬಾ ರಾಮದೇವ್ ತಮ್ಮ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿಬಿಟ್ಟರು. ಕಪ್ಪುಹಣ ಮರಳಿ ತರುವ ಹೋರಾಟಕ್ಕೆ ತಮ್ಮ ಅನುಯಾಯಿಗಳನ್ನು ಎಳೆದುತಂದರು. ದೆಹಲಿಯ ರಾಮಲೀಲಾ ಮೈದಾನ ತುಂಬಿ ತುಳುಕಾಡಿತು. ಅದಕ್ಕೂ ಮುನ್ನ ಕಪಿಲ್ ಸಿಬಲ್ ನಡೆಸಿದ ಸಂಧಾನ ಬಾಬಾಜಿಗೆ ಕೋಡು ಮೂಡಿಸಿತ್ತು. ಸರ್ಕಾರ ತನ್ನೆದುರು ಸಾಷ್ಟಾಂಗವೆರಗಿಬಿಟ್ಟಿದೆಯೆಂಬ ಭ್ರಮೆಯಲ್ಲಿ ತೇಲಾಡಿದರು ಬಾಬಾ.
ಎಡವಟ್ಟು ಅಲ್ಲಿಯೇ ಆಗಿದ್ದು. ಅಡ್ಡ ನಿಂತವರನ್ನು ಮುಗಿಸಿಯೇಬಿಡುವ ಚಾಳಿ ಕಾಂಗ್ರೆಸ್ಸಿನ ಸಂಸ್ಕೃತಿಯಲ್ಲೇ ಅಡಗಿರುವಂಥದ್ದು. ನೆಹರೂ, ಸುಭಾಷ್ ಚಂದ್ರ ಬೋಸರ ಸಾವಿನ ಗುಟ್ಟು ರಟ್ಟಾಗಲು ಬಿಡಲೇ ಇಲ್ಲ. ಲಾಲ್ ಬಹದ್ದೂರ್ ಶಾಸ್ತ್ರಿ ತಿರಿಕೊಂಡಿದ್ದು ಹೇಗೆ ಎಂಬ ಪ್ರಶ್ನೆಗೆ ಇಂದಿಗೂ ಉತ್ತರವಿಲ್ಲ. ಇನ್ನು ಸಣ್ಣಪುಟ್ಟ ಅದೆಷ್ಟು ಮಂದಿ ಅದರ ಅಧಿಕಾರ ದಾಹಕ್ಕೆ ಬಲಿಯಾಗಿರುವರೋ ದೇವರೇ ಬಲ್ಲ. ಇಂತಹ ಕಾಂಗ್ರೆಸ್ಸಿಗೆ ಲಂಗೋಟಿಯುಡುವ ಫಕೀರನೊಬ್ಬ ಸವಾಲೇ ಆಗಿರಲಿಲ್ಲ. ಬಾಬಾಜೀಯನ್ನು ಬಡಿದು ಭ್ರಷ್ಟಾಚಾರದ ವಿರುದ್ಧದ ಆಂದೋಲನವನ್ನೆ ಮಟ್ಟ ಹಾಕಿಬಿಡಬೇಕು ಅನ್ನುವ ಹಟಕ್ಕೆ ಬಿದ್ದಿತ್ತು ಸರ್ಕಾರ. ಕಪಿಲ್ ಸಿಬಲ್ ಒಪ್ಪಂದದ ಪತ್ರವನ್ನು ಬಾಬಾರ ಬಳಿಯೇ ಬರೆಸಿಕೊಂಡು ರಾಮಲೀಲಾ ಮೈದಾನದಲ್ಲಿ ಎಲ್ಲರೆದುರು ಅವರ ಮಾನ ಹರಾಜಿಗಿಟ್ಟುಬಿಟ್ಟ. ದಿನ ಬೆಳಗಾಗುವುದರಲ್ಲಿ ಮಾಧ್ಯಮಗಳು ಕಾಂಗ್ರೆಸ್ಸಿನ ಸೊಂಟವೇರಿ ಕುಳಿತುಬಿಟ್ಟಿದ್ದವು.
ಯೋಗಗುರು ಮುಗುಮ್ಮಾಗಿಬಿಟ್ಟರು. ಸರ್ಕಾರದ ಎಲ್ಲ ಇಲಾಖೆಗಳು ಅವರ ಹಿಂದೆ ಬಿದ್ದವು. ಪ್ರತಿಕ್ರಿಯಾತ್ಮಕ ರಾಜಕಾರಣ ಶುರುವಾಯ್ತು. ಭ್ರಷ್ಟಚಾರ ನಿರ್ಮೂಲನೆಯ ಕ್ರೆಡಿಟ್ಟು ಬಾಬಾಗೆ ಸೇರಿಬಿಡುತ್ತದಲ್ಲ ಎಂದು ಕಸಿವಿಸಿಪಡುತ್ತಿದ್ದ ಅಣ್ಣಾ ಟೀಮಿಗೆ (ಅಣ್ಣಾ ಹಜಾರೆ ಬಿಟ್ಟು) ಈಗ ನಿರಾಳವಾಗಿತ್ತು. ಗಾಂಧಿ ಮಾದರಿ ಹೊರಾಟ ರಾಮ್‌ದೇವ್ ಬಾಬಾಗೆ ಗೊತ್ತಿಲ್ಲವೆಂದರು ಕೆಲವರು. ತಾನೇ ಪ್ರಾಮಾಣಿಕನಲ್ಲದೆ ಇಂಥ ಹೋರಾಟ ಮಾಡಬಾರದೆಂದರು ಮತ್ತೊಂದಷ್ಟು ಜನ. ಬಾಬಾರಿಗೆ ಒಂದು ಹಿಡನ್ ಅಜೆಂಡಾ ಇದೆ ಎಂದರು ಕಿರಣ್ ಬೇಡಿ. ಅಲ್ಲಿಗೆ ಸಿಬಲ್ ಯೋಜನೆ ಪೂರ್ಣಗೊಂಡಿತ್ತು. ಬಾಬಾ ತಣ್ಣಗಾಗಿದ್ದರು. ಅಣ್ಣಾ ಟೀಮ್ ಅವರಿಂದ ಬೇರ್ಪಟ್ಟಿತ್ತು.
ಈಗ ಅಣ್ಣಾ ತಂಡ ತಿರುಗಿಬಿತ್ತು. ದೇಶವೆಲ್ಲ ಈ ಬಾರಿ ಪ್ರತಿಕ್ರಿಯೆಗೆ ಸಜ್ಜಾಯ್ತು. ಲಕ್ಷಲಕ್ಷ ಜನ ಧಾವಿಸಿಬಂದರು. ತೀರಾ ಅಸ್ಸಾಮ್‌ನಲ್ಲೂ ಕಾಲೇಜಿಂದ ಹುಡುಗರು ಬೀದಿಗಿಳಿದರು. ಅರವಿಂದ ಕೇಜ್ರಿವಾಲ್ ದಿನ ಬೆಳಗಾಗುವುದರೊಳಗೆ ಖ್ಯಾತರಾಗಿಬಿಟ್ಟರು. ಇನ್ನೇನು ಗೆಲುವು ಹತ್ತಿರವಿದೆ ಎಂದಾಗ ಮತ್ತೆ ಸಿಬಲ್ ಎಂಟ್ರಿಯಾಯ್ತು. ಅಣ್ಣಾ ತಂಡದೊಂದಿಗೆ ಗುರುತಿಸಿಕೊಂಡಿದ್ದ ಸ್ವಾಮಿ ಅಗ್ನಿವೇಶ್ ಸಿಬಲ್‌ರ ಏಜೆಂಟ್ ಎನ್ನುವುದು ಬೆಳಕಿಗೆ ಬಂತು. ಕಿರಣ್ ಬೇಡಿ ಕಾರ್ಯಕ್ರಮವೊಂದಕ್ಕೆ ಎಷ್ಟು ದುಡ್ಡು ಪಡೆಯುತ್ತಾರೆ ಎನ್ನುವ ಚರ್ಚೆ ಶುರುವಾಯ್ತು. ಕೆಜ್ರೀವಾಲ್ ವೇತನ ಬಾಕಿಯ ಕುರಿತಾಗಿ ಮಹತ್ವದ ಸುದ್ದಿಗಳು ಬೀದಿಗೆ ಬಿದ್ದವು. ಅಣ್ಣಾ ಟೀಮ್ ಒಳಗಿಂದೊಳಗೇ ಕಳಾಹೀನವಾಯಿತು. ಆದರೆ ಜನರ ಉತ್ಸಾಹ ಕುಂದಲಿಲ್ಲ. ಎಲ್ಲರ ಆಕ್ರೋಶ ತನ್ನ ವಿರುದ್ಧ ಎಂದರಿತ ಕೇಂದ್ರ ಸರ್ಕಾರ, ಭ್ರಷ್ಟಾಚರದಲ್ಲಿ ಎಲ್ಲ ಪಕ್ಷಗಳೂ ಒಂದೇ ಎಂದು ಬಿಂಬಿಸುವ ಪ್ರಯತ್ನಕ್ಕೆ ಕೈಹಾಕಿತು. ಬಿಜೆಪಿ ಕಾಂಗ್ರೆಸ್ಸಿನ ತೆಕ್ಕೆಗೆ ಬಿತ್ತು. ಕರ್ನಾಟಕದ ಬಿಜೆಪಿಯ ಭ್ರಷ್ಟರು, ಈ ಭ್ರಷ್ಟರಿಂದ ಹಣ ಪಡೆದು ತೇಜೋಹೀನವಾದ ಹೈಕಮಾಂಡು ಯಾರೂ ಮಾತಡುವ ಗೋಜಿಗೆ ಹೋಗದೆ ಸುಮ್ಮನುಳಿದುಬಿಟ್ಟರು. ಅಲ್ಲಿಗೆ ಕಾಂಗ್ರೆಸ್ಸಿನ ಯೋಜನೆ ಯಶಸ್ವಿಯಾಗಿತ್ತು. ತನಗಾದ ನಷ್ಟ ಬಿಜೆಪಿಗೆ ಲಾಭವಾಗದಂತೆ ಅದು ನೋಡಿಕೊಂಡಿತು.
ಅತ್ತ ಜನಲೋಕಪಾಲ್‌ಗೆ ಪ್ರತಿಯಾಗಿ ಲೋಕ್‌ಪಾಲ್ ಅನ್ನು ಸರ್ಕಾರ ಜಾರಿಗೆ ತಂತು. ಅಣ್ಣಾ ಟೀಮ್ ಜನಲೋಕಪಾಲ್ ಬೇಕೇಬೇಕೆಂಬ ಹಟಕ್ಕೆ ಬಿತ್ತು. ತಗೊಳ್ಳಿ. ಕಾಂಗ್ರೆಸ್ಸಿಗೆ ನಿರಾಳ. ಭ್ರಷ್ಟಾಚಾರ, ಕಪ್ಪುಹಣದ ಚರ್ಚೆಗಳು ನಿಂತುಹೋಗಿ ಲೋಕಪಾಲ್, ಜನಲೋಕಪಾಲ್ ಚರ್ಚೆ ಶುರುವಾಯ್ತು. ಜನಲೋಕಪಾಲದಲ್ಲಿ ಪ್ರಧಾನಿಯೂ ಪ್ರಶ್ನಾರ್ಹರೆಂಬ ಮಾತು ಕಾಂಗ್ರೆಸ್ಸನ್ನಿರಲಿ, ಬಿಜೆಪಿಯನ್ನೂ ಕೆರಳಿಸಿತು. ಸಂಸತ್ತನ್ನು ಹೊರಗಿನವರೊಬ್ಬರು ಪ್ರಶ್ನಿಸುವ ವ್ಯವಸ್ಥೆ ಯಾರೊಬ್ಬರಿಗೂ ಹಿಡಿಸಲಿಲ್ಲ. ಎನ್ನುವಲ್ಲಿಗೆ, ಅಣ್ಣಾ ಹಜಾರೆ ನಿಂತ ನೆಲ ಕಳಚಿಹೋಗಿತ್ತು. ಬಿಜೆಪಿಯೂ ಅಣ್ಣಾ ಹಜಾರೆಯ ಬೆಂಬಲಕ್ಕೆ ನಿಲ್ಲಬೇಕೋ ಬೇಡವೋ ಎನ್ನುವ ದ್ವಂದ್ವಕ್ಕೆ ಬಿದ್ದಿತ್ತು. ಹಾಗೆ ನೋಡಿದರೆ ಕಳೆದ ಚುನಾವಣೆಯಲ್ಲಿ ಕಪ್ಪು ಹಣದ ಸುದ್ದಿ ತೆಗೆದು ಅದನ್ನು ಮರಳಿ ತರುವ ಆಧಾರದ ಮೇಲೇ ಬಿಜೆಪಿ ಹೋರಾಟ ನಡೆಸಿತ್ತು. ಈಗ ಅದು ಮೊದಲಿಗಿಂತ ಹೆಚ್ಚು ಆತುಕೊಂಡು ಅದನ್ನು ಮರಳಿ ತರಲು ಕಾದಾಡಬೇಕಿತ್ತು. ಅಷ್ಟು ಬಿಡಿ. ಸೋನಿಯಾ ಹಣ ವಿದೇಶದಲ್ಲಿದೆ ಎಂದು ಹೇಳಿದ್ದು ತಪ್ಪಾಯ್ತೆಂದು ಆಕೆಗೆ ಅಡ್ವಾಣಿ ಪತ್ರ ಬರೆದು, ಕಾರ್ಯಕರ್ತರ ಆತ್ಮಸ್ಥೈರ್ಯ ಕೊಂದುಬಿಟ್ಟರು. ಈ ವೇಳೆಗೆ ವಿದೇಶ ಪ್ರವಾಸಕ್ಕೆ ಹೋಗಿ ತನ್ನ ಕಪ್ಪು ಹಣವನ್ನು ಸೋನಿಯಾ ಚೀನಾಕ್ಕೆ ವರ್ಗಾಯಿಸಿದರೆಂಬ ಸುದ್ದಿ ವ್ಯಾಪಕವಾಗಿ ಹರಿದಾಡಿದ್ದನ್ನು ಹಿಡಿದೆಳೆಯಬೇಕಿದ್ದ ಬಿಜೆಪಿಗೆ ಅಡ್ವಾಣಿಯ ಈ ಪತ್ರವೇ ಮುಳುವಾಯಿತು.
ಅಣ್ಣಾ ಉಪವಾಸ ಮುಗಿಯಿತು. ಈಗಿಂದೀಗಲೇ ಜನಲೋಕಪಾಲ್ ಎಂದವರು ಎಲೆಕ್ಷನ್‌ಗೆ ಮುಂಚಿತವಾಗಿ ಆದರೆ ಸಾಕು ಎನ್ನುವಲ್ಲಿಗೆ ಬಂದರು. ಜನ ಲೋಕಪಾಲ್ ಜಾರಿಗೆ ತಂದ ಬಿಜೆಪಿ ಉತ್ತರಾಖಂಡದಲ್ಲಿ ಸೋತಿತು. ಅದರ ಹೆಸರನ್ನೂ ಎತ್ತದಿದ್ದ ಸಮಾಜವಾದಿ ಪಾರ್ಟಿ ಉತ್ತರಪ್ರದೇಶದಲ್ಲಿ ಗೆದ್ದಿತು. ಅಂದರೆ, ಅಣ್ಣಾ ಮತವಾಗಿ ಪರಿವರ್ತನೆಯಾಗಿರಲಿಲ್ಲ! ಎಲ್ಲ ರಾಜಕೀಯ ಪಕ್ಷಗಳೂ ನಿರಾಳವಾದವು. ಅಣ್ಣಾ ಟೀಮ್ ಹೈರಾಣಾಯಿತು. ಕಾಂಗ್ರೆಸ್ಸು ರಾಮದೇವ ಬಾಬಾರನ್ನು ಬಡಿದಾಗ ಬೀಗಿದ್ದ ಕೆಜ್ರಿವಾಲ್ ಹರಿದ್ವಾರ ಯೋಗಪೀಠಕ್ಕೆ ಹೋಗಿ ಬಾಬಾರೊಡನೆ ವೇದಿಕೆ ಹಂಚಿಕೊಂಡರು. ಕಿರಣ್ ಬೇಡಿಯಂತು ತಾನೇ ಹೇಳಿದ್ದ ಹಳೆಯದನ್ನೆಲ್ಲ ಮರೆತು ಒಗ್ಗಟ್ಟು ಮುರಿಯುವವರ ಸಂಚಿಗೆ ಬಲಿಯಾಗಬಾರದೆಂದು ಹರಿದ್ವಾರದಲ್ಲಿ ಭಾಷಣ ಬಿಗಿದುಬಿಟ್ಟರು. ರಾಮದೇವ ಬಾಬಾ ವರ್ಷದಿಂದಲೇ ಹೊಸ ಆಂದೋಲನವೊಂದಕ್ಕೆ ತಯಾರಿ ನಡೆಸುತ್ತಿದ್ದಾರೆ. ಈ ಬಾರಿ ಅವರ ಸುತ್ತಲಿನ ತಂಡ ಹೊಚ್ಚ ಹೊಸತು. ಅವರ ಸುತ್ತಮುತ್ತ ಕೆ.ಎನ್.ಗೋವಿಂದಾಚಾರ್ಯ ಕಾಣುತ್ತಿಲ್ಲ, ಸುಬ್ರಹ್ಮಣಿಯನ್ ಸ್ವಾಮಿ ನಾಪತ್ತೆಯಾಗಿದ್ದಾರೆ. ಆರೆಸ್ಸೆಸ್ಸಿನ ಮುಖಂಡರು ದೂರ ಉಳಿದಿದ್ದಾರೆ. ಬಹುಶಃ ಇವರು ಬಂದರೆ ಅಂದೋಲನ ವ್ಯಾಪಕವಾಗಿ ಹರಡಲಾರದೆಂಬ ಹೆದರಿಕೆ ಬಾಬಾರಿಗೆ ಇರಬಹುದು.
ಹೇಗೇ ಇರಲಿ. ಜೂನ್ ಮೂರಕ್ಕೆ ಜಂತರ್‌ಮಂತರ್‌ನಲ್ಲಿ ಬಾಬಾ ಅನುಯಾಯಿಗಳು ಸೇರಲಿದ್ದಾರೆ. ಬಹುಶಃ ಅವತ್ತು ಅಣ್ಣಾ ಹಜಾರೆಯವರೂ ಅಲ್ಲಿಗೆ ಬಂದಾರು. ಇಂದಿನ ಟ್ರೆಂಡ್ ನೋಡಿದರೆ ಕೇಜ್ರಿವಾಲ್, ಕಿರಣ್ ಬೇಡಿಯೂ ವೇದಿಕೆಯ ಮೇಲಿದ್ದರೆ ಅಚ್ಚರಿಯಿಲ್ಲ. ಅಣ್ಣಾ ತಂಡಕ್ಕೆ ಈಗ ಜನಬಲ ಕಡಿಮೆಯಾಗಿದೆ. ವಿರೋಧಿಗಳು ಹೆಚ್ಚಾಗಿದ್ದಾರೆ. ಬಾಬಾ ಮಾತ್ರ ಹಳೆಯದರಿಂದ ಪಾಠ ಕಲಿತು ಸಂಚು ರೂಪಿಸಿದ್ದಾರೆ. ಅಣ್ಣಾಗೆ ಜನಲೋಕಪಾಲ್ ಬೆಕು, ಬಾಬಾಗೆ ಕಪ್ಪುಹಣ! ಇವರಿಬ್ಬರನ್ನು ಬೇರ್ಪಡಿಸಿ ಬೇಳೆ ಬೇಯಿಸಿಕೊಳ್ಳಲು ಕಾಂಗ್ರೆಸ್ ಮಾತ್ರ ಹೊಂಚುಹಾಕುತ್ತಲೆ ಕುಳಿತಿದೆ.

 
2 Comments

Posted by on April 14, 2012 in Uncategorized

 

ಉದಯ ಸೂರ್ಯನ ನಾಡಲ್ಲಿ ಭಾರತೀಯತೆಯ ಹೊಂಬೆಳಕು

ಈಗಿನ ಅರುಣಾಚಲದ ಜನ ಹಳೆಯ ಸೋಲುಗಳನ್ನು ಮರೆತು ಸ್ವಾಭಿಮಾನಿಗಳಾಗಿ ನಿಂತಿದ್ದಾರೆ. ಚೀನಾ ಮತ್ತು ಭಾರತಗಳ ನಡುವಿನ ವ್ಯತ್ಯಾಸಗಳನ್ನು ಗುರುತಿಸುವಷ್ಟು ಅವರೀಗ ಸಮರ್ಥರಾಗಿದ್ದಾರೆ

- ಚಕ್ರವರ್ತಿ ಸೂಲಿಬೆಲೆ

‘ಸರ್, ನನಗೆ ಕರ್ನಾಟಕ, ತಮಿಳುನಾಡು, ಆಂಧ್ರ, ಮಹಾರಾಷ್ಟ್ರ, ಒರಿಸ್ಸಾ, ಬಿಹಾರಗಳೆಲ್ಲಗೊತ್ತು. ಆದರೆ ನಿಮ್ಮ ಜನರಿಗೆ ಅರುಣಾಚಲವೇ ಗೊತ್ತಿಲ್ವಲ್ಲ, ನಾವು ಅಲ್ಲಿಗೆ ಹೋದರೆ ನಮ್ಮನ್ನು ಗುರುತಿಸೋದೇ ಇಲ್ವಲ್ಲ, ಹೀಗೇಕೆ?’ ಇಟಾನಗರದ ವಿವೇಕಾನಂದ ಕೇಂದ್ರ ಶಾಲೆಯ ಒಂಭತ್ತನೆಯ ತರಗತಿಯಲ್ಲಿ ಓದುತ್ತಿರುವ ಹುಡುಗನೊಬ್ಬ ಕೇಳಿದ ಪ್ರಶ್ನೆ ಇದು. ನಾನು ಒಂದಷ್ಟು ಹೊತ್ತು ತಡಬಡಾಯಿಸಿದೆ. ಅಷ್ಟರಲ್ಲಿ ಹುಡುಗಿಯೊಬ್ಬಳು ಎದ್ದು ನಿಂತು, ‘ನಿಮ್ಮ ಬೆಂಗಳೂರಿನಲ್ಲಿಯೇ ನಮ್ಮನ್ನು ನೋಡಿ ಜನ ಚೈನೀಸ್ ಅಂತಾರೆ. ಯಾಕೆಂದು ಕೇಳಿದರೆ ನೋಡಲಿಕ್ಕೆ ಹಾಗೇ ಇದ್ದೀರಲ್ಲ ಅಂದುಬಿಡ್ತಾರೆ. ನೀವು ನೋಡಲಿಕ್ಕೆ ಥೇಟು ಪಾಕಿಸ್ತಾನದವರ ಥರ ಕಾಣ್ತೀರಲ್ಲ ಅಂದರೆ ಕೋಪಿಸ್ಕೋತಾರೆ. ನಿಜ ಹೇಳಿ ಸರ್, ಅರುಣಾಚಲ ನಿಮಗೆ ಬೇಡವಾ? ನಾವೆಲ್ಲ ಚೀನಾಕ್ಕೆ ಸೇರಿ ಹೋದರೆ ನಿಮಗೆ ಖುಷೀನಾ?’ ಅಂತ ತನ್ನ ಪುಟ್ಟ ಕಂಗಳಿಂದ ನನ್ನನ್ನೇ ನೋಡಿದಳು. ನಾನೇ ಸ್ವಲ್ಪ ಕಣ್ತಪ್ಪಿಸುವ ಯತ್ನ ಮಾಡಿದೆ.
ನನ್ನ ಯೋಚನೆಗಳೆಲ್ಲ ಬುಡಮೇಲಾಗಿದ್ದವು. ಅರುಣಾಚಲದ ಜನ ಚೈನಾಕ್ಕೆ ಓಡಿಹೋಗಲು ತುದಿಗಾಲಲ್ಲಿ ನಿಂತಿದ್ದಾರೆ, ಬಿಟ್ಟರೆ ಸಾಕೆಂದು ಕಾಯುತ್ತಿದ್ದಾರೆ, ಪ್ರತಿನಿತ್ಯ ಟೀವಿಯಲ್ಲಿ ಚೈನಾದ ಚಾನೆಲ್ಲುಗಳನ್ನು ನೋಡಿ ಆನಂದಿಸುತ್ತಾರೆ ಎಂದುಕೊಂಡಿದ್ದ ನನಗೆ ಆಘಾತ ಕಾದಿತ್ತು. ನಾನು ದಕ್ಷಿಣ ಅರುಣಾಚಲದ ಅನೇಕ ಜಿಲ್ಲೆಗಳನ್ನು, ಹಳ್ಳಿಗಳನ್ನು, ಕೊನೆಗೆ ಮನೆಗಳನ್ನೂ ಹೊಕ್ಕಿ ಬಂದೆ. ನನ್ನೊಡನೆ ಮಾತನಾಡಿದ ಪ್ರತಿಯೊಬ್ಬರೂ ನನ್ನಷ್ಟೇ, ಸರಿಯಾಗಿ ಹೇಳಬೇಕೆಂದರೆ ನನಗಿಂತ ಒಂದು ಗುಲಗಂಜಿ ಹೆಚ್ಚೇ ಭಾರತೀಯರಾಗಿ ಕಂಡರು!
ಅರುಣಾಚಲ ಚೀನಾದೊಂದಿಗೆ ಬದುಕಲಾರದೆಂಬ ತಥ್ಯ ಕಳೆದ ಒಂದೂವರೆ ದಶಕದಿಂದೀಚೆಗೆ ಪ್ರತಿಯೊಬ್ಬ ಅರುಣಾಚಲೀಯನಿಗೂ ದೃಢವಾಗುತ್ತ ಬಂದಿದೆ. ಆತನೀಗ ತನ್ನ ಮೂಲವನ್ನು ಭಾರತದೊಳಗೆ ಅರಸುವ ಪ್ರಯತ್ನ ಹೆಚ್ಚಿಸುತ್ತಿದ್ದಾನೆ. ಅದಕ್ಕೆ ಸೂಕ್ತ ಪುರಾವೆಗಳು ದಕ್ಕಿದಾಗಲೆಲ್ಲ ಸಂತೋಷಿಸುತ್ತಾನೆ. ಚೈನಾದ ವಿರುದ್ಧ ತನ್ನ ಭಾವನೆಗಳನ್ನು ತೀವ್ರಗೊಳಿಸಿಕೊಳ್ಳುತ್ತಾನೆ.
ಹಾಗೆ ನೋಡಿದರೆ ಅರುಣಾಚಲವೆನ್ನುವ ಹೆಸರೇ ಅದನ್ನು ಭಾರತದೊಂದಿಗೆ ಬೆಸೆಯುವಂತಹ ಮೊದಲ ಅಂಶ. ಅದು ಉದಯ ಸೂರ್ಯನ ನಾಡು. ಬೆಳಿಗ್ಗೆ ನಾಲ್ಕಕ್ಕೆಲ್ಲ ಅಲ್ಲಿ ಸೂರ್ಯನ ಬೆಳಕು ಹರಡಿಕೊಂಡುಬಿಡುತ್ತೆ. ಸಂಜೆ ಐದಕ್ಕೆ ಮುನ್ನ ಕತ್ತಲೂ ಆವರಿಸಿಕೊಂಡುಬಿಡುತ್ತದೆ. ಅರುಣೋದಯ ಮೊದಲು ಇಲ್ಲಿಯೇ ಆಗುವುದರಿಂದ ಇದು ಅರುಣಾಚಲ. ರಾಮಾಯಣ, ಮಹಾಭಾರತದ ಕಾಲದಲ್ಲೂ ಅರುಣಾಚಲದ ಉಲ್ಲೇಖವನ್ನು ಪಂಡಿತರು ಗುರುತಿಸಿದ್ದಾರೆ. ಕೃಷ್ಣನ ಸತಿ ರುಕ್ಮಿಣಿ ಅರುಣಾಚಲದವಳೇ ಎನ್ನುವುದಕ್ಕೆ ಪುರಾವೆಗಳಿವೆ. ಪರಶುರಾಮನ ಮೂಲಸ್ಥಾನವೂ ಇದೇ ಎನ್ನಲಾಗುತ್ತದೆ. ಇಲ್ಲಿನ ಬುಡಕಟ್ಟು ಜನಾಂಗದವರು ಕೈಲಿ ಹಿಡಿಯುವ ‘ದಾವು’ ಮತ್ತು ಪರಶುರಾಮನ ಕೈಯ ‘ಕೊಡಲಿ’ ಎರಡನ್ನೂ ಸಮೀಕರಿಸಿ ನೋಡಿದಾಗ ಇದು ನಿಜವಿರಬಹುದು ಎನ್ನಿಸುತ್ತದೆ. ಅಷ್ಟೇ ಅಲ್ಲ, ಇಡಿಯ ಅರುಣಾಚಲದಲ್ಲಿ ವ್ಯಾಪಿಸಿಕೊಂಡಿರುವ ೨೬ ಥರದ ಬುಡಕಟ್ಟುಗಳ ಆಚರಣೆ, ಬದುಕಿನ ರೀತಿ ನೀತಿಗಳು ವೇದಕಾಲದ ಜೀವನ ಪದ್ಧತಿಗೆ ಅತ್ಯಂತ ಹತ್ತಿರದ್ದೆಂಬುದನ್ನು ನೋಡಿದಾಗಲಂತೂ ಅರುಣಾಚಲದ ಬುಡ ಭಾರತದೊಳಕ್ಕೆ ಎಷ್ಟು ಭದ್ರವಾಗಿದೆಯೆಂಬುದರಲ್ಲಿ ಎಳ್ಳಷ್ಟೂ ಅನುಮಾನವಿರದು.
ಇಷ್ಟಕ್ಕೂ ಅರುಣಾಚಲ ಕರ್ನಾಟಕದ ಅರ್ಧಭಾಗದಷ್ಟು ಭೂಪ್ರದೇಶ ಹೊಂದಿದ್ದು, ಜನಸಂಖ್ಯೆಯಲ್ಲಿ ನಮ್ಮ ಒಟ್ಟು ಜನಸಂಖ್ಯೆಯ ಮೂರು ಪ್ರತಿಶಥದಷ್ಟು ಮಾತ್ರ ಇದೆ. ಅಂದಾಜು ಕಿಲೋಮೀಟರಿಗೆ ಹದಿನೈದು ಜನ! ನೈಸರ್ಗಿಕವಾಗಿ ಅತ್ಯಂತ ಸಿರಿವಂತ ಭೂಮಿ. ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಹೋಗುವಷ್ಟರಲ್ಲಿ ಅದೆಷ್ಟು ನದಿಗಳು ನಿಮ್ಮನ್ನು ಅಡ್ಡಗಟ್ಟುತ್ತವೆಯೋ ಲೆಕ್ಕವಿಟ್ಟು ಸುಸ್ತಾಗುತ್ತೀರಿ. ಹೀಗಾಗಿ ಇಲ್ಲಿನ ಬಹುತೇಕ ಜಿಲ್ಲೆಗಳು ನದಿಗಳ ಹೆಸರಿಂದಲೇ ಗುರುತಿಸಲ್ಪಡುತ್ತವೆ. ಇಲ್ಲಿನ ಪ್ರತಿ ಜಿಲ್ಲೆಯೂ ಒಂದೊಂದು ಬುಡಕಟ್ಟಿನವರಿಂದ ತುಂಬಿಹೋಗಿದೆ. ಅವರ ವೇಷ ಭೂಷಣ, ಆಚಾರ ವಿಚಾರಗಳೆಲ್ಲವೂ ವಿಶಿಷ್ಟವಾದವು. ಪ್ರತಿಯೊಂದು ಪಂಗಡದವರ ಭಾಷೆ ಕೂಡ ಭಿನ್ನವೇ. ಆದರೂ ವಿಚಿತ್ರವೆನಿಸುವಂತೆ ಇಲ್ಲಿನ ಮೂಲೆಮೂಲೆಯಲ್ಲೂ ಜನ ಹಿಂದಿ ಮಾತನಾಡುತ್ತಾರೆ. ಚಿಕ್ಕ ಮಗುವಿರಲಿ, ವಯಸ್ಸಾದ ಮುದುಕರಿರಲಿ ಹಿಂದಿಯನ್ನು ಚೆನ್ನಾಗಿ ದುಡಿಸಿಕೊಂಡಿದ್ದಾರೆ. ಹೀಗಾಗಿ ಅರುಣಾಚಲದುದ್ದಕ್ಕೂ ತಿರುಗಾಡುವಾಗ ನಿಮಗೆ ಭಾಷೆಯ ಸಮಸ್ಯೆ ಎದುರಾಗದು. ಅಷ್ಟೇ ಅಲ್ಲ, ಇಡಿಯ ರಾಜ್ಯವನ್ನು ರಾಷ್ಟ್ರದೊಂದಿಗೆ ಬೆಸೆಯುವಲ್ಲಿ ಅದರ ಪಾತ್ರ ಹೇಳತೀರದು.
ಈಶಾನ್ಯದ ಏಳು ರಾಜ್ಯಗಳಲ್ಲಿ ಅರುಣಾಚಲದಷ್ಟು ಭಾರತದೊಂದಿಗೆ ಏಕಾತ್ಮಗೊಂಡ ಮತ್ತೊಂದು ರಾಜ್ಯವಿಲ್ಲ ಎಂದು ಧಾರಾಳವಾಗಿ ಹೇಳಬಹುದು. ಅಸ್ಸಾಮ್ ಎಲ್ಲ ಬಗೆಯ ಸವಲತ್ತು ಪಡೆದುಕೊಂಡೂ ಭಿನ್ನಭಿನ್ನ ರಾಗ ಹಾಡುತ್ತಿರುತ್ತದೆ. ಅರುಣಾಚಲ ಹಾಗಲ್ಲ. ಈ ಅಸ್ಮಿತೆಯನ್ನು ಹಾಳುಗೈಯಲು ಪಟ್ಟ ಪಾಡು ಅಷ್ಟಿಷ್ಟಲ್ಲ. ಈಸ್ಟ್ ಇಂಡಿಯಾ ಕಂಪೆನಿ ಭಾರತವನ್ನು ಆಳುವಾಗಲೇ ಏಳು ರಾಜ್ಯಗಳನ್ನು ಕ್ರಿಸ್ತನಿಗೆ ಉಡುಗೊರೆಯಾಗಿ ಕೊಡಬೇಕೆಂದು ಅವರು ನಿರ್ಧರಿಸಿಯಾಗಿತ್ತು. ಹೀಗಾಗಿ ಭಾರತದ ಇತರ ರಾಜ್ಯಗಳಿಂದ ಈಶಾನ್ಯ ರಾಜ್ಯಗ್ಳನ್ನು ಬೇರ್ಪಡಿಸಿಯೇ ಇಟ್ಟಿದ್ದರು. ಸ್ವಾತಂತ್ರ್ಯ ಬಂದ ಮೇಲೂ ನಮ್ಮ ಸರ್ಕಾರಗಳು, ಸಂಘಟನೆಗಳು ಅತ್ತ ಗಮನ ಕೊಡಲಿಲ್ಲ. ದೇವರ ಲೀಲೆಯೇ ಇರಬೇಕು, ೧೯೬೨ರಲ್ಲಿ ಚೀನಾ ಆಕ್ರಮಣವೆಸಗಿತು. ‘ಹಿಂದೀ ಚೀನೀ ಭಾಯಿ ಭಾಯಿ’ ಎಂದು ಜಪಿಸುತ್ತಲೇ ಇದ್ದ ನೆಹರೂ ಬೆಚ್ಚಿಬಿದ್ದರು. ತಯಾರಿ ಮಾಡಿಕೊಳ್ಳುವ ಮೊದಲೇ ದಾಳಿಗೆ ಸಜ್ಜಾಗಿದ್ದೇವೆಂದು ಘೋಷಿಸಿಬಿಟ್ಟರು. ಚೀನಾದ ಕೆಂಪು ಸೇನೆ ಭಾರತದೊಳಕ್ಕೆ ನುಗ್ಗಿತು. ಕೆಲವೇ ದಿನಗಳಲ್ಲಿ ನಮ್ಮ ಸೇನೆಯ ಪ್ರತಿರೋಧವನ್ನು ಮಣಿಸಿ ಗೆಲುವು ಸಾಸಿಬಿಟ್ಟಿತು. ಅರುಣಾಚಲದ ಉತ್ತರ ಭಾಗವನ್ನು ವಶಪಡಿಸಿಕೊಂಡುಬಿಟ್ಟಿತು. ಹಿಂದಿನ ಎಲ್ಲ ಒಪ್ಪಂದಗಳನ್ನೂ ಕ್ಕರಿಸಿ ಮುನ್ನಡೆದೇ ಬಿಟ್ಟಿತು. ಮಾವೋತ್ಸೆ ತುಂಗ ಪೂರ್ಣ ಭಾರತವನ್ನು ವಶಪಡಿಸಿಕೊಂಡು ಅರ್ಧದಷ್ಟು ಜನರನ್ನು ನಾಶಗೈದು, ಉಳಿದವರನ್ನು ಜೀತದಾಳುಗಳಾಗಿ ದುಡಿಸಿಕೊಳ್ಳುವ ಕನಸು ಕಾಣತೊಡಗಿದ. ರಷ್ಯಾ ಭಾರತದ ಸಹಾಯಕ್ಕೆ ಬರಲು ನಿರಾಕರಿಸಿತು. ‘ನೀವು ನಮಗೆ ಮಿತ್ರರಿರಬಹುದು. ಚೀನಾ ನಮಗೆ ಸಹೋದರನಂತೆ’ ಎಂದುಬಿಟ್ಟಿತು. ನೆಹರೂ ಒಲ್ಲದ ಮನಸ್ಸಿನಿಂದಲೇ ಅಮೆರಿಕಾದ ಎದುರು ನಿಂತರು. ಅಮೆರಿಕಾ ಅಧ್ಯಕ್ಷರ ಗುಡುಗಿನಂಥ ಮಾತು, ಮಿಂಚಿನಂತಹ ಕಾರ್ಯಾಚರಣೆ ಚೀನಾಕ್ಕೆ ಗಾಬರಿ ಹುಟ್ಟಿಸಿತು. ಚೀನಾ ಮುಂದೆ ಬರುವುದನ್ನು ತಡೆದು, ಈವರೆಗೆ ಪಡಕೊಂಡಿದ್ದ ಪ್ರದೇಶಗಳನ್ನು ಪಟ್ಟಾಗಿ ಹಿಡಕೊಂಡಿತು. ನಮ್ಮ ನಾಯಕರಿಗೆ ಇಷ್ಟಾದರೂ ಸಾಕಿತ್ತು. ಗೆದ್ದೆವೆಂದು ಬೀಗುತ್ತ ತಮ್ಮವರ ಮುಂದೆ ನಡೆದರು. ಆದರೆ ಅರುಣಾಚಲದ ಜನರ ಆತ್ಮಸ್ಥೈರ್ಯ ಕುಸಿದುಹೋಗಿತ್ತು. ಭಾರತದ ಸೈನಿಕರು ಕಠಿಣ ಸಮಯದಲ್ಲಿ ಕೈಕೊಟ್ಟು ಓಡಿಹೋಗುತ್ತಾರೆಂಬ ಚಿತ್ರಣ ಅವರ ಮನಸ್ಸಿನಲ್ಲಿ ನಿಂತುಬಿಟ್ಟಿತು. ಅಲಾಂಗ್ ಜಿಲ್ಲೆಯಲ್ಲಿ ಮುದುಕಿಯೊಬ್ಬಳು ಹೇಳಿದ್ದು ಈಗಲೂ ಗುಂಯ್‌ಗುಡುತ್ತಿದೆ, ‘ನಮ್ಮ ಸೈನಿಕರು ನಮ್ಮನ್ನು ಸಂಕಷ್ಟದಲ್ಲಿ ತಳ್ಳಿ ಓಡಿಬಿಟ್ಟರು.ಆ ಸೈನಿಕರು ನಮ್ಮನ್ನು ಚೆನ್ನಾಗಿ ನೋಡಿಕೊಂಡರು’
ಇತ್ತ ಭಾರತೀಯರ ಆತ್ಮಸ್ಥೈರ್ಯವೂ ಉಡುಗಿಹೋಗಿತ್ತು. ಮುಂದೇನು ಎಂಬ ಚಿಂತೆ ಕಾಡುತ್ತಿದ್ದಾಗ, ಗಾಂಧೀಜಿಯ ಅನುಯಾಯಿಗಳೊಂದಷ್ಟು ಜನ ಅರುಣಾಚಲದತ್ತ ನಡೆದರು. ಭಾರತದ ಇತರೆ ಜನಗಳು ಅರುಣಾಚಲಕ್ಕೆ ಬರುತ್ತಾರೆಂಬ ಭರವಸೆಯನ್ನು ಅಲ್ಲಿಯ ಜನರಲ್ಲಿ   ಮೂಡಿಸುವ ಪುಟ್ಟ ಪ್ರಯತ್ನವದು. ಅದೇ ವೇಳೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಟುವಟಿಕೆಗಳು ಶುರುವಾದವು. ವನವಾಸಿ ಕಲ್ಯಾಣ ಆಶ್ರಮ, ಅರುಣಾಚಲ ವಿಕಾಸ ಪರಿಷತ್ತಿನ ಹೆಸರಿನಲ್ಲಿ ನೆಲೆನಿಲ್ಲುವ ಯತ್ನ ಮಾಡಿತು. ಇಷ್ಟು ಹೊತ್ತಿಗಾಗಲೇ ಪಕ್ಕದ ನಾಗಾಲ್ಯಾಂಡು ಕ್ರಿಸ್ತನ ನಾಡಾಗಿ ಪರಿವರ್ತನೆ ಹೊಂದಿತತು. ಮತಾಂತರ ಹೊಂದಿ, ರಾಷ್ಟ್ರವಿರೋ ಕೃತ್ಯಗಳಿಗೆ ಪ್ರೇರಣೆ ಪಡೆದವರ ಉಪಟಳ ಮಿತಿ ಮೀರಿತ್ತು.ಇಡಿಯ ನಾಗಾಲ್ಯಾಂಡ್ ಭೀತಿಯ ರಾಜ್ಯವಾಯ್ತು. ಬೆಚ್ಚಿಬಿದ್ದ ಅರುಣಾಚಲ ಸರ್ಕಾರ ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರವನ್ನು, ರಾಮಕೃಷ್ಣ ಆಶ್ರಮವನ್ನು ರಾಜ್ಯಕ್ಕೆ ಬರುವಂತೆ ಕೇಳಿಕೊಂಡಿತು.
ಬದಲಾವಣೆಯ ಗಾಳಿ ಬೀಸತೊಡಗಿತು. ಎಲ್ಲ ತೊಂದರೆಗಳ ನಡುವೆ ಶುರುವಾದ ಆಶ್ರಮ ಮತ್ತು ಕೇಂದ್ರದ ಶಾಲೆಗಳು ಕಳೆದ ೩೫ ವರ್ಷಗಳಲ್ಲಿ ಹೊಸದೊಂದು ಶಿಕ್ಷಿತ, ದೇಶಭಕ್ತ ಪೀಳಿಗೆಯನ್ನು ಹುಟ್ಟುಹಾಕಿವೆ. ಈಗಿನ ಅರುಣಾಚಲದ ಜನ ಹಳೆಯ ಸೋಲುಗಳನ್ನು ಮರೆತು ಸ್ವಾಭಿಮಾನಿಗಳಾಗಿ ನಿಂತಿದ್ದಾರೆ. ಚೀನಾ ಮತ್ತು ಭಾರತಗಳ ನಡುವಿನ ವ್ಯತ್ಯಾಸಗಳನ್ನು ಗುರುತಿಸುವಷ್ಟು ಅವರೀಗ ಸಮರ್ಥರಾಗಿದ್ದಾರೆ. ಮತ್ತೊಂದೆಡೆ, ಆದರೆ ಅರುಣಾಚಲವನ್ನು ಆದಷ್ಟು ಬೇಗ ಮತಾಂತರಿಸುವ ತರಾತುರಿಗೆ ಬಿದ್ದ ವ್ಯಾಟಿಕನ್ ತನ್ನ ಅಷ್ಟೂ ದೃಷ್ಟಿಯನ್ನು ಅದರತ್ತ ಕೇಂದ್ರೀಕರಿಸಿದೆ. ‘ನಿಮಗೆ ಪೂಜಿಸಲೊಂದು ದೇವರ ಮೂರ್ತಿಯಿಲ್ಲ, ಒಂದು ಪ್ರಾರ್ಥನಾ ಮಂದಿರವಿಲ್ಲ’ ಎಂದು ಪದೇ ಪದೇ ಹೇಳುತ್ತ ಸಮುದಾಯಗಳ ಮುಖಂಡರನ್ನು ಚರ್ಚಿನತ್ತ ಸೆಳೆದು ತರಲಾಗುತ್ತದೆ. ಆಮೇಲೆ ಅವರಿಗೆ ಕುಡಿಸಿ, ತಿನ್ನಿಸಿ,ಕತ್ತಿಗೊಂದು ಶಿಲುಬೆ ತೊಡಿಸಲಾಗುತ್ತದೆ. ಕಳೆದ ೬೫ ವರ್ಷಗಳಿಂದ ಇದೇ ಅವರ ಕಾಯಕವಾಗಿದೆ.
ಇದಕ್ಕೆ ಪ್ರತಿಯಾಗ ಅರುಣಾಚಲ ವಿಕಾಸ ಪರಿಷತ್ತಿನ ಕಾರ್ಯಗಳು ಅನನ್ಯವಾದುದು. ಆಯ್ದ ಬುಡಕಟ್ಟಿನ ಹಿರಿಯರನ್ನು ಪರಿಷತ್ತು ದೇಶದ ಇತರ ರಾಜ್ಯಗಳಿಗೆ ಕರೆದೊಯ್ದಿತು. ಇಲ್ಲಿನ ರೀತಿನೀತಿಗಳನ್ನು ಕಂಡ ಅವರಿಗೆ ತಾವೂ ಹೀಗೇ ಬದುಕಬೇಕನ್ನಿಸಿತು. ಮರಳಿ ಅರುಣಾಚಲಕ್ಕೆ ಬಂದೊಡನೆ ಅಲ್ಲೊಂದು ಸಭೆಯಾಯ್ತು. ಹತ್ತಾರು ವಿಚಾರ ಸಂಕಿರಣಗಳು ನಡೆದವು. ಅವರು ನಿತ್ಯ ಪೂಜಿಸುವ ಸೂರ್ಯ ಚಂದ್ರರ (ಅವರ ಭಾಷೆಯಲ್ಲಿ ಡೋನ್ಯೊ- ಪೋಲೋ) ಚಿತ್ರ ಬಿಡಿಸಲಾಯ್ತು. ಕೇರಿಗೊಂದು ಪ್ರಾರ್ಥನಾ ಮಂದಿರ ನಿರ್ಮಾಣಗೊಂಡಿತು. ಈಗ ಕ್ರಿಶ್ಚಿಯನ್ನರಾಗಿ ಮತಾಂತರಗೊಂಡವರೂ ದೇಸೀ ಶ್ರದ್ಧೆಯ ಹಬ್ಬಗಳಲ್ಲಿ ಪಾಲ್ಗೊಳ್ಳುವ ಮೂಲಕ ಪರಿವರ್ತನೆಗೆ ತಯಾರಾಗುತ್ತಿದ್ದಾರೆ.
ಇದಕ್ಕೆ ಪೂರಕವಾಗಿ ಅರುಣಾಚಲವನ್ನು ಮುಷ್ಟಿಯಲ್ಲಿ ಹಿಡಿಯುವ ಚೀನಾದ ಪ್ರಯತ್ನಗಳು ನೆಲಕಚ್ಚುತ್ತಿವೆ. ಚೀನಾದ ನಿವೃತ್ತ ಸೇನಾಕಾರಿಯೊಬ್ಬ ಇತ್ತೀಚೆಗೆ ತನ್ನ ಬ್ಲಾಗ್‌ನಲ್ಲಿ ‘ಚೀನಾ ಭಾರತದಿಂದ ಕಲಿಯಬೇಕಾದ ಪಾಠಗಳು’ ಎನ್ನುವ ಲೇಖನ ಬರೆದಿದ್ದಾರೆ. ಅದರಲ್ಲಿ ಅರುಣಾಚಲದಲ್ಲಿ ಬಲಗೊಳ್ಳುತ್ತಿರುವ ಭಾರತೀಯ ಭಾವನೆಗಳ ಕುರಿತಂತೆ ಅಚ್ಚರಿ, ಗಾಬರಿ ಎರಡನ್ನೂ ವ್ಯಕ್ತಪಡಿಸಿದ್ದಾರೆ. ಆದರೆ ಇದ್ಯಾವುದೂ ಹೊಸತಾಗಿ ಆದುದಲ್ಲ. ಅರುಣಾಚಲದ ಜನರ ಒಳಗಿದ್ದ ದೇಸೀ ಭಾವನೆಗಳು ಈಗ ಹೊರಬರುತ್ತಿವೆ ಅಷ್ಟೇ.

 
9 Comments

Posted by on April 7, 2012 in Uncategorized

 

ಅಧರ್ಮವೆಂದು ಗೊತ್ತಿದೆ, ಅನುಸರಿಸೋಕೆ ಮನಸಿಲ್ಲ…

ರಾಮಾಯಣದ ಅತ್ಯಂತ ಮಹತ್ವದ ತಿರುವ ಕಂಡ ಪ್ರಸಂಗ ಅದು. ದಶರಥ ತಾನು ಕೈಕೇಯಿಗೆ ಯಾವಗಲೋ ಕೊಟ್ಟ ಮಾತನ್ನು ಈಡೇರಿಸಲಿಕ್ಕಾಗಿ ಪಟ್ಟಾಭಿಷಕ್ತನಾಗಬೇಕಿದ್ದ ರಾಮನನ್ನು ಹದಿನಾಲ್ಕು ವರ್ಷ ವನವಾಸಕ್ಕೆ ತೆರಳುವಂತೆ ಕೇಳಿಕೊಳ್ಳುತ್ತಾನೆ. ರಾಮನೇನೋ ತಂದೆಯ ಆಜ್ಞಾಪಾಲನೆಗೆ ಸಿದ್ಧನಾಗಿಬಿಟ್ಟ. ಆದರೆ ಲಕ್ಷ್ಮಣನ ಮುಖ ಕೆಂಪುಕೆಂಪಾಯಿತು. “ಅಣ್ಣ, ಅಪ್ಪನನ್ನು ಕೊಂದು ರಾಜ್ಯ ವಶಪಡಿಸಿಕೊಳ್ಳೋಣ” ಎಂದ. ರಾಮ ತಮ್ಮನನ್ನು ಸಂತೈಸುತ್ತ, ” ತಂದೆಯ ಮಾತನ್ನು ನಡೆಸಿಕೊದುವುದೆ ಪುತ್ರಧರ್ಮ. ಅದರಲ್ಲಿಯೆ ನಮಗೆ ಶ್ರೇಯಸ್ಸು” ಎಂದುಬಿಟ್ಟ. ತಂದೆಯ ಮಾತಿಗಾಗಿ ರಾಜ್ಯಬಿಟ್ಟು ತೆರಳಿದ ರಾಮ, ಮರಳಿ ಬರುವ ವೇಳೆಗೆ ಜಗ ಬೆಳಗುವ ರಾಮನಾಗಿ ಬಂದ. ಆದರೆ ಪತ್ನಿಯ ದಾಕ್ಷಿಣ್ಯಕ್ಕೆ ಒಳಗಾಗಿ ಮಗನನ್ನೇ ಕಾಡಿಗೆ ಅಟ್ಟಿದ ದಶರಥ, ಪುತ್ರವ್ಯಾಮೋಹದಲ್ಲಿಯೇ ಕೊನೆಯುಸಿರೆಳೆದ.
~
ಯಾರದೋ ಮರ್ಜಿಗೆ, ಮುಲಾಜಿಗೆ ಒಳಗಾಗಿ ಕೈಗೊಂಡ ನಿರ್ಣಯಗಳು ಮತ್ತೆಲ್ಲೋ ಒಳ್ಳೆಯ ಕೆಲಸ ಮಾಡಿದರೆ ಪುಣ್ಯ. ಅನೇಕ ವೇಳೆ ಅವು ಭವಿಷ್ಯವನ್ನೇ ಮೊಟಕುಗೊಳಿಸುವಂಥಹ ನಿರ್ಣಯಗಳಾಗಿಬಿಡುತ್ತವೆ.
ಧೃತರಾಷ್ಟ್ರ ತನ್ನ ಮಕ್ಕಳಿಗೇ ರಾಜ್ಯ ಸಿಗಬೆಕೆಂದು ಹಟ ಹಿದಿದು ಪಾಂದವರಿಗೆ ಅನ್ಯಾಯ ಮಾಡಿದನಲ್ಲ, ಪರಿಣಾಮ ಏನಾಯ್ತು ಗೊತ್ತ? ಯುದ್ಧ ಮತ್ತು ಸರ್ವನಾಶ! ಧರ್ಮರಾಜ್ಯ ಸ್ಥಾಪನೆಯಾಗಲಿಕ್ಕೆ ಕೃಷ್ಣ ಕಾರಣನಾದ ಎನ್ನುವುದನ್ನು ಬಿಟ್ಟರೆ ಇಡಿಯ ಮಹಾಭಾರತ ಅನೇಕ ತುಮುಲಗಳ ಆಗರವಾಗಿ ಕಾಣುವುದಿಲ್ಲವೇ? ಅತ್ತ ಧೃತರಾಷ್ಟ್ರ ತನ್ನ ಪುತ್ರ ವ್ಯಾಮೋಹದ ಮುಲಾಜಿಗೆ ಒಳಗಾದರೆ, ಅವನ ಮಗ ದುರ್ಯೋಧನ ತನ್ನದೇ ಅಹಂಕಾರದ ದಾಕ್ಷಿಣ್ಯಕ್ಕೆ ಒಳಗಾಗಿದ್ದ. ಕೃಷ್ಣ ಬಂದು ಧರ್ಮೋಪದೇಶ ಮಡಿದರೆ,
ಜಾನಾಮಿ ಧರ್ಮಂ ನ ಚ ಮೇ ಪ್ರವೃತ್ತಿಃ
ಜಾನಾಮ್ಯಧರ್ಮಂ ನ ಚ ಮೇ ನಿವೃತ್ತಿಃ
ಎಂದುಬಿಟ್ಟ.  “ಧರ್ಮ ಗೊತ್ತಿದ್ದರೂ ಆಚರಿಸುವ  ಮನಸಿಲ್ಲ, ಅಧರ್ಮವೆಂದು ತಿಳಿದರೂ ಬಿಡಲು ಮನಸಿಲ್ಲ” ಎಂಡು ತನ್ನ ಅಹಂಕಾರಕ್ಕೆ ಶರಣಾಗಿಬಿಟ್ಟ! ಅಬ್ಬಬ್ಬ… ಈ ಪರಿಯ ದಾಸ್ಯ ಅದೆಷ್ಟು ಕಷ್ಟ, ನಿಕೃಷ್ಟ!?
~
ಹಲವು ಬಾರಿ ನಂಬಿಕೊಂಡ ಆದರ್ಶಗಳೂ ದಾಕ್ಷಿಣ್ಯವಾಗಿಯೇ ಕಾಡುತ್ತವೆ. ಬಹುಶಃ ಆದರ್ಶಗಳ ಮರ್ಜಿಗೆ ಒಳಗಾಗುವುದು ಅಂದರೆ ಅದೇ ಇರಬೇಕು.
ಪೃಥ್ವಿರಾಜ್ ಚೌಹಾನನ ಮೇಲೆ ಮಹಮದ್ ಘೋರಿ ದಾಳಿ ಮಾಡಿದ್ದು ನೆನಪಿಸಿಕೊಳ್ಳಿ. ನಮ್ಮ ಇತಿಹಾಸದ ಅತ್ಯಂತ ಪ್ರಮುಖ ಘಟ್ಟ ಅದು. ತರೈನ್ ಎನ್ನುವ ಪ್ರದೇಶದಲ್ಲಿ ಅವರಿಬ್ಬರಿಗೂ ಮುಖಾಮುಖಿಯಾಯ್ತು. ಪೃಥ್ವಿರಾಜನ ಸೇನೆಯೆದುರು ಘೋರಿಯ ಸೇನೆ ಪತರಗುಟ್ಟಿ ಹೋಯಿತು. ಆಮೆಲೇನು?  ಘೋರಿ ಪೃಥ್ವಿರಾಜನ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿದ. ಕ್ಷಮೆ ಯಾರಿಗೆ? ಅದನ್ನು ಪಾತ್ರರಿಗೆ ನೀಡಬೇಕು. ಘೋರಿಯಂತಹ ಅಪಾತ್ರರಿಗಲ್ಲ. ಆದರ್ಶಗಳ ಮುಲಾಜಿಗೆ ಬಿದ್ದ ಪೃಥ್ವಿರಾಜ್ ಚೌಹಾಣ್ ಘೋರಿಯನ್ನು ಕ್ಷಮಿಸಿದ್ದಷ್ಟೇ ಅಲ್ಲ, ಗೌರವಯುತವಾಗಿ ಮರಳಲು ಅನುವು ಮಾಡಿಕೊಟ್ಟ ಕೂಡ!
ಮರು ವರ್ಷವೇ ತರೈನ್ ನಲ್ಲಿ ಮತ್ತೆ ದಾಳಿಯಾಯ್ತು. ಈ ಬಾರಿ ತನ್ನವರೇ ಮೋಸ ಮಾಡಿದುದರ ಫಲವಾಗಿ ಚೌಹಾನನ ಸೇನೆ ಸೋತಿತು. ಘೋರಿಯ ಕೈ ಮೇಲಾಯ್ತು. ಆತ ಚೌಹಾನನನ್ನು ಬಂಧಿಸಿ, ತನ್ನೂರಿಗೆ ಕರೆದೊಯ್ದ. ಅಲ್ಲಿ ಅವನ ಎರಡೂ ಕಣ್ಣೂಗಳನ್ನು ಕೀಳಿಸಿ ಬರ್ಬರ ಕೊಲೆ ಮಾಡಿಸಿದ.
ಅದಕ್ಕೇ ಹೇಳೋದು. ಅಯೋಗ್ಯರಿಗೆ ಒಳ್ಳೆಯದನ್ನು ಮಾಡಬಾರದೆಂಬುದೂ ಒಂದು ಆದರ್ಶ. ಏನಂತೀರಿ?
~
೧೭೫೭ರಲ್ಲೂ ಹಾಗೇ ಆಯಿತು. ಸಿರಾಜುದ್ದೌಲ ಬಂಗಾಳಾದ ನವಾಬನಾಗಿದ್ದಾಗ ಆಂಗ್ಲರ ವಿರುದ್ಧ ತಿರುಗಿ ಬಿದ್ದ. ಪೋರ್ಟ್ ವಿಲಿಯಂ ಮೇಲೆ ಏರಿ ಹೋದ. ಪತರಗುಟ್ಟಿದ ರಾಬರ್ಟ್ ಕ್ಲೈವ್, ಸಿರಾಜುದ್ದೌಲನ ವಿರುದ್ಧ ಕತ್ತಿ ಮಸೆಯುತ್ತಿದ್ದ ಮೀರ್  ಜಾಫರನನ್ನು ಒಲಿಸಿಕೊಂಡ. ರಾಜ್ಯದ ಆಮಿಷ ತೋರಿದ. ಈ ಬಾರಿ ಮೀರ್ ಜಾಫರ್ ಯುದ್ಧಕ್ಕೆ ಮುನ್ನ ನವಾಬನ ಬಳಿ ಹೋಗಿ, “ನನ್ನಂತಹ ಸೇನಾಪತಿ ಇರುವಾಗ ನವಾಬರೇ ಯುದ್ಧಕ್ಕೆ ಬರುವುದು ಸರಿಯಲ್ಲ, ಹಾಗೆ ಮಾಡಿದರೆ ಅದು ನನ್ನ ಸಾಮರ್ಥ್ಯಕ್ಕೆ ಅವಮಾನ ಮಾಡಿದಂತೆ. ಬೆರಳೆಣಿಕೆಯಷ್ಟಿರುವ ಆಂಗ್ಲರನ್ನು ಸೋಲಿಸಿ ಬರುತ್ತೇನೆ” ಎಂದ. ನವಾಬನಿಗೂ ಹೌದೆನ್ನಿಸಿತು. ತನ್ನ ಸೇನಾಪತಿಗೆ ಅವಮಾನ ಮಾಡುವುದು ಸರಿಯೇ ಅನ್ನುವ ದ್ವಂದ್ವ ಅವನನ್ನು ಕಾಡಿತು. ಮೀರ್ ಜಾಫರನ ಮುಲಾಜಿಗೆ ಒಳಗಾದ. ಭಾರತದ ಇತಿಹಾಸವೇ ಬದಲಾಯ್ತು. ರಾಬರ್ಟ್ ಕ್ಲೈವ್ ಕದನದಲ್ಲಿ ಸಲೀಸಾಗಿ ಗೆದ್ದ. ನವಾಬನನ್ನು ಪದಚ್ಯುತಗೊಳಿಸಿ ಮೀರ್ ಜಾಫರನನ್ನು ಪಟ್ಟಕ್ಕೇರಿಸಲಾಯ್ತು. ಬ್ರಿಟನ್ನಿನ ಪ್ರಭುತ್ವ ಭಾರತದಲ್ಲಿ ಸ್ಥಿರವಾಗಲು ಅದೊಂದು ಹೆದ್ದಾರಿಯಾಯ್ತು. ಒಂದು ನಿರ್ಧಾರ ಇತಿಹಾಸ ಬದಲಿಸುವ ಎಂತಹ ಕೆಲಸ ಮಾಡಿತು ನೋಡಿ!
~
ಗಾಂಧೀಜಿಯೂ ಇಂತಹ, ಇತರರಿಂದ ಪ್ರಭಾವಿತರಾದ ನಿರ್ಣಯ ಕೈಗೊಳ್ಳುತ್ತಲೇ ಇದ್ದರು. ಅವರು ನೆಹರೂರನ್ನು ತಮ್ಮ ಉತ್ತರಾಧಿಕಾರಿ ಎಂದು ಕರೆದಿದ್ದು ಏಕೆ ಎಂಬ ಪ್ರಶ್ನೆ ಒಂದು ಹಂತದ ನಂತರ ಅವರನ್ನೇ ಕಾಡಿರಲಿಕ್ಕೆ ಸಾಕು. ಮೋತೀಲಾಲ ನೆಹರೂ ಕಾಂಗ್ರೆಸ್ ಪಾರ್ಟಿಗೆ ತುಂಬಾ ದುಡಿದಿದ್ದರು ಎಂಬ ದಾಕ್ಷಿಣ್ಯವ? ಅಥವಾ ಶೋಕೀಲಾಲನಾಗಿದ್ದ ಯುವಕ ತನ್ನ ಚಿಂತನೆಗಳಿಗೆ ಮನಸೋತು ಬಂದಿದ್ದಾನೆಂಬ ಮುಲಾಜಿಗೋ? ದೇವರೇ ಬಲ್ಲ. ಹಾಗೆ ನೋದಿದರೆ ಯಾವ ಕಾರಣಕ್ಕೂ ನೆಹರೂ ಗಾಂಧೀಜಿಯ ಉತ್ತರಾಧಿಕಾರಿಯಾಗುವ ಯೋಗ್ಯತೆ ಹೊಂದಿರಲಿಲ್ಲ. ಗಾಂಧೀಜಿಯ ಸ್ವದೇಶೀ ಚಿಂತನೆಗಳು ಯೋಚಿಸಲಿಕ್ಕೂ ಅನರ್ಹ ಎಂದವರು ನೆಹರೂ. ಗಾಂಧೀಜಿಯಷ್ಟು ಸತ್ಯಪರಾಯಣತೆ, ಆದರ್ಶಗಳಿಗೆ ಬದ್ಧತೆ, ಇವ್ಯಾವುವೂ ಅವರಿಗಿರಲಿಲ್ಲ. ಅಷ್ಟಾದರೂ ಗಾಂಧೀಜಿ ಮೈಮರೆತು ನೆಹರೂಗೆ ಅಷ್ಟು ಮಹತ್ವದ ಸ್ಥಾನ ಕೊಟ್ಟರು. “ನನ್ನ ನಂತರ ನೆಹರೂ ನನ್ನ ಮಾತಾಡುತ್ತಾರೆ” ಎಂದುಬಿಟ್ಟರು. ಕಾಂಗ್ರೆಸ್ಸಿನ ಸೆಂಟ್ರಲ್ ಕಮಿಟಿ ಪಟೇಲರೇ ದೇಶದ ಪ್ರಧಾನಿಯಾಗಲಿ ಎಂದು ಘಂಟಾಘೋಷವಾಗಿ ಹೇಳಿದರೂ ಗಾಂಧೀಜಿ ಮನಸ್ಸು ಮಾಡಲಿಲ್ಲ.
ಪ್ರಧಾನ ಮಂತ್ರಿಗಿರಿ ಪಡೆದು ಆಳುವ ಖುರ್ಚಿಯೇರಿದ ನೆಹರೂ, ಖುರ್ಚಿ ತಪ್ಪಿಸಿಕೊಂಡ ನೆಹರೂನಷ್ಟು ಅಪಾಯಕಾರಿಯಲ್ಲ ಅಂತ ಗಾಂಧೀಜಿಗೆ ಅನಿಸಿತ್ತಾ? ಅಥವಾ ಅವರಪ್ಪನಿಗೆ ಮಾತು ಕೊಟ್ಟಿದ್ದೇನೆಂಬ ಒಂದೇ ಕಾರಣಕ್ಕೆ, ಆ ದರ್ದಿಗೆ ಅವರನ್ನು ಪ್ರಧಾನಿಯಾಗಲು ಬಿಟ್ಟರಾ?
ಏನೇ ಆಗಲಿ, ಆ ನಿರ್ಣಯ ರಾಷ್ಟ್ರದ ಪಾಲಿಗೆ ಭಯಾನಕವಾಗಿದ್ದನ್ನು ಮಾತ್ರ ಯಾರೂ ಅಲ್ಲಗಳೆಯಲಾರರು.
ಈ ನಡುವೆ ಪಟೇಲರಿಗೆ ಯಾವ ಮುಲಾಜಿತ್ತು ಎಂಬುದೂ ಪ್ರಶ್ನೆಯೇ. ಉಗ್ರ ಪ್ರತಾಪಿಯಾಗಿದ್ದ ಪಟೇಲರು ಗಾಂಧೀಜಿಯನ್ನು ಧಿಕ್ಕರಿಸದೆ ಉಳಿದ ಕಾಅರ್ಣವೆನು? ಗಾಂಧೀಜಿಯ ಸಮಸ್ಯೆಗಳ ಅರಿವು ಪಟೇಲರಿಗಿತ್ತಾ? ಪಟೇಲರೂ ಗಾಂಧೀಜಿಯ ದಾಕ್ಷಿಣ್ಯಕ್ಕೆ ಒಳಗಾಗಿದ್ದರಾ? ಪ್ರಶ್ನೆ ಆಳಕ್ಕಿಳಿಯುತ್ತಲೇ ಹೋಗುತ್ತದೆ. ಅಲ್ಲವೇ?
ಈ ಕಾರಣಗಳಿಂದಾಗಿ ದೇಶ ದಾರಿ ತಪ್ಪಿತೆಂದಷ್ಟೇ ಹೇಳಬಹುದು. ದೇಶ ವಿಭಜನೆಯ ಸಂದರ್ಭದಲ್ಲಿ ಲಕ್ಷಾಂತರ ಜನರ ಆಹುತಿಯಾಯ್ತು. ಆನಂತರದ ಪಂಚವಾರ್ಷಿಕ ಯೋಜನೆಗಳ ಭಾರದಲ್ಲಿ ದೇಶ ನಲುಗಿತು. ಹಳಿ ತಪ್ಪಿದ್ದ ಶಿಕ್ಷಣ ವ್ಯವಸ್ಥೆ, ನ್ಯಾಯ ವ್ಯವಸ್ಥೆ, ಕೃಷಿ ವ್ಯವಸ್ಥೆ, ಯಾವುವೂ ಮತ್ತೆ ಸರಿದಾರಿಗೆ ಬರಲೇ ಇಲ್ಲ. ಒಂದು ತಪ್ಪು ನಿರ್ಣಯ ಭಾರತವನ್ನು ಎರಡನೇ ಬಾರಿಗೆ  ಗುಲಾಮಗಿರಿಗೆ ನೂಕಿತೆಂದರೆ ತಪ್ಪಿಲ್ಲ.

~
ದಾಕ್ಷಿಣ್ಯಕ್ಕೆ ಬಸಿರಾಗುವ ಈ ಪ್ರಕ್ರಿಯೆ ಸ್ವಾತಂತ್ರ್ಯಾನಂತರವೂ ನಿಲ್ಲಲಿಲ್ಲ. ನಮ್ಮ ಮೇಲೆ ದಾಳಿ ಮಾಡಿ ನಮ್ಮ ಭೂಮಿಯನ್ನೇ ವಶಪಡಿಸಿಕೊಂಡ ಚೀನಾದ ವಿರುದ್ಧ ನಾವು ಮಾತಾಡಲೂ ಇಲ್ಲ. ದೇಸದೊಳಗಿನ ಚೀನಾ ನಿಷ್ಠ ಕಮ್ಯುನಿಸ್ಟರು ಬೇಸರಗೊಂಡರೆ!? ಎಂಬ ನೋವು ನಮಗೆ.
ಕಳೆದ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನ ಸೇನೆಯನ್ನು ಬಡಿದೆವಲ್ಲ, ಆಗಲೂ ನಮ್ಮದು ದಾಕ್ಷಿಣ್ಯವೇ. ಆರಂಭದಲ್ಲಿ ನಾವು ಕೆಳಗಿದ್ದೆವು, ಉಗ್ರರು ಮೇಲಿದ್ದರು. ಆಗ ಸಂಧಾನದ ಮಾತಿರಲಿಲ್ಲ. ನಮ್ಮ ಸೈನಿಕರು ಸಾಹಸಗೈದು ಮೇಲೇರುತ್ತಿದ್ದಂತೆ ಪಾಕ್ ಸೈನ್ಯ ತತ್ತರಿಸಿಬಿಟ್ಟಿತು. ಎಂದಿನಂತೆ ನಮ್ಮ ಸರ್ಕಾರ ಅಮೆರಿಕದ ಮುಲಾಜಿಗೆ ಒಳಗಾಗಿ ಪಾಕ್ ಸೈನಿಕರಿಗೆ ಮುಕ್ತಮಾರ್ಗ ತೋರಿಸಿತು. ನಮಮ್ ಸೈನಿಕರೇ ಅವರ ರಕ್ಷಣೆಗೆ ನಿಂತು ಅವರನ್ನು ಅವರ ದೇಶಕ್ಕೆ ಕಲೀಸಬೇಕಾಯ್ತು! ಇದಕ್ಕಿಂತ ಹೀನ ಸ್ಥಿತಿ ಯಾವುದೂ ಇಲ್ಲ ಅಂದ್ಕೊಂಡ್ರಾ
ಖಂಡಿತ ಇದೆ. ಮೌಲಾನಾ ಮಸೂದ್ ಅಜರ್ ಬಿಡುಗಡೆಗೆಂದು ಉಗ್ರರು ವಿಮಾನಾಪಹರಣ ಮಾಡಿದ್ದು ನೆನಪಿಸಿಕೊಳ್ಳಿ. ಅವತ್ತು ವಿಮಾನದಲ್ಲಿದ್ದ ಆ ಪ್ರಯಾಣಿಕರ ಮನೆಯವರು ಗಲಾಟೆ ಮಾಡಿದರೆಂಬ ಕಾರಣಕ್ಕೆ ಈ ದೇಶದ ವಿದೇಶಾಂಗ ಸಚಿವರು ವಿಮಾನದಲ್ಲಿ ಆ ಉಗ್ರಗಾಮಿಯನ್ನು ತಮ್ಮೊಂದಿಗೆ ಕುಳ್ಳರಿಸಿಕೊಂಡು ಬಿಟ್ಟು ಬಂದರಲ್ಲ, ಅದು ಯಾವ ಮಟ್ಟದ ಕೃತ್ಯ, ನೀವೇ ಹೇಳಿ!?
~
ಹುಡುಕುತ್ತ ಹೋದರೆ ಅಸಂಖ್ಯ ಘಟನೆಗಳಿವೆ. ಯಾವುದೇ ನಿರ್ಧಾರದ ಹಿಂದೆ ದೂರಾಲೋಚನೆ ಇರಬೇಕು. ಈ ಮಾತು ಇಂದಿನ ರಾಜಕಾರಣಕ್ಕೆ ಹೆಚ್ಚು ಸೂಕ್ತ. ಅಲ್ಲವೆ?

 

ತಿಂಗಳ ಕಾರ್ಯಕ್ರಮಗಳು

ಮಾರ್ಚ್

13 – ಜಾಗೋಭಾರತ್, ಕೋರಮಂಗಳ, ಬೆಂಗಳೂರು

17 – ಹರಟೆ, ತುಮಕೂರು

18 – ವಿವೇಕಾನಂದ ಜಯಂತಿ ಕಾರ್ಯಕ್ರಮ, ಸಕ್ಷಮ ಟ್ರಸ್ಟ್, ಬೆಂಗಳೂರು

20 – ಕಾಲೇಜಿನಲ್ಲಿ ಉಪನ್ಯಾಸ, ರಾಣೇಬೆನ್ನೂರು

21 – ಜಿಕೆವಿಕೆ ಯೂನಿಯನ್ ಡೇ, ಬೆಂಗಳೂರು

25 – ಉಪನ್ಯಾಸ, ಗುರುಪುರ, ಮಂಗಳೂರು

26 – ಸ್ವಾಮಿ ವಿವೇಕಾನಂದ ವಿಚಾರ ಸಂಕಿರಣ, ಬಾರ್ಕೂರು

27 – ಚಿತ್ರಸ್ಪರ್ಧೆ ಸಮಾರೋಪ, ಧರ್ಮಸ್ಥಳ

30 – ಜಾಗೋಭಾರತ್, ಸರ್ಜಾಪುರ

31 - ಜಾಗೋಭಾರತ್, ಬಂಗಾರಪೇಟೆ

ಏಪ್ರಿಲ್

1 –  ಜಾಗೋಭಾರತ್, ಶಂಕರಪುರಂ

2 -  ಜಾಗೋಭಾರತ್, ಮೂಡಬಿದಿರೆ

5 – ಧಾರ್ಮಿಕ ಸಭೆ, ಉಡುಪಿ

7 -  ಜಾಗೋಭಾರತ್, ಬಾಣಸವಾಡಿ

14 -  ಜಾಗೋಭಾರತ್, ಬಾಣಸವಾಡಿ

15 – ಧಾರ್ಮಿಕ ಸಭೆ, ಉಳ್ಳಾಲ

24ರಿಂದ ಮೇ4ರವರೆಗೆ ಗುಲ್ಬರ್ಗ ಪ್ರವಾಸ

 
3 Comments

Posted by on March 11, 2012 in Uncategorized

 

ಫೆಬ್ರವರಿಯಿಂದ ಮಾರ್ಚ್ ವರೆಗೆ ಕಾರ್ಯಕ್ರಮಗಳು

ಫೆಬ್ರವರಿ

1: ಚಾತುರ್ಯಮ್

2: ತರಳಬಾಳು ಹುಣ್ಣಿಮೆ ಕಾರ್ಯಕ್ರಮ; ಕಡೂರು

3: ಬೆ.10.30ಕ್ಕೆ ವಿವೇನಾಂದ ಜಯಂತಿ; ಕುಮಟಾ &

ಸಂ. 4.30ಕ್ಕೆ ಜಾಗೋ ಭಾರತ್; ಸಿದ್ಧಾಪುರ (ಕುಂದಾಪುರ)

4: 5.00ಕ್ಕೆ ಧಾರ್ಮಿಕ ಉಪನ್ಯಾಸ; ಗಂಗೊಳ್ಳಿ&

ರಾತ್ರಿ 9ಕ್ಕೆ ಜಾಗೋಭಾರತ್; ಭಟ್ಕಳ

5: ಮಕ್ಕಳ ಸಾಹಿತ್ಯ ಸಮ್ಮೇಳನ; ಬಾರ್ಕೂರು

8: ಸುರಪುರದಲ್ಲಿ ಕಾರ್ಯಕ್ರಮ

9: ಚಿತ್ರಕಲಾ ಪರಿಷತ್ತಿನಲ್ಲಿ ಕಾರ್ಯಕ್ರಮ ಉದ್ಘಾಟನೆ. (ಸುನೀಲ್ ಮಿಶ್ರ ಅವರ ಪೇಂಟಿಂಗ್ ಪ್ರದರ್ಶನ)

11: ಜಾಗೋ ಭಾರತ್; ಚಳ್ಳಕೆರೆ

12: ಜಾಗೋಭಾರತ್; ಕುಂದಾಪುರ

13ರಿಂದ 15 ಖಾಸಗಿ ಕಾರ್ಯಕ್ರಮಗಳು

16: ಬೆಳಗ್ಗೆ ಶ್ರಮ ಪರಿಹಾರ; ಸಂಜೆ ಶಿವರಾತ್ರಿ ಕಾರ್ಯಕ್ರಮ; ಚಿತ್ರದುರ್ಗ

18ರಿಂದ 21: ಕೋಲ್ಕೊತಾ

21ರಿಂದ ಮಾರ್ಚ್ 7: ಅರುಣಾಚಲ ಪ್ರದೇಶ

ಮಾರ್ಚ್ 13: ಜಾಗೋಭಾರತ್; ಕುಂದಾಪುರ

 
Leave a comment

Posted by on January 29, 2012 in ಡೈರಿ

 
 
Follow

Get every new post delivered to your Inbox.

Join 34 other followers