ಭಿಕಾರಿ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದವರು!

ಭಿಕಾರಿ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದವರು!

ಪಾಕಿಸ್ತಾನಕ್ಕೆ ಜೈಕಾರದ ಘೋಷಣೆಗಳು ರಾಜ್ಯದೆಲ್ಲೆಡೆ ಮೊಳಗುತ್ತಿವೆ. ಕಾಂಗ್ರೆಸ್ಸಿನ ಗೆಲುವಿನ ಹಿನ್ನೆಲೆಯಲ್ಲಿ ಈ ಘೋಷಣೆಗಳು ಎನ್ನುವುದು ನಿಜವಾದರೂ ಒಂದಷ್ಟು ಮುಸಲ್ಮಾನರ ಮಾನಸಿಕ ಸ್ಥಿತಿ ಬಹಳ ಕಾಲದಿಂದಲೂ ಹೀಗೆಯೇ ಇದೆ ಎನ್ನುವುದು ತಿಳಿಯದ ಸಂಗತಿ ಏನಲ್ಲ. ಎಡಪಂಥೀಯ ಬುದ್ಧಿಜೀವಿಗಳು, ಮುಸಲ್ಮಾನ ಪರ ಕೆಲವು ಹಿಂದೂ ಸಂಘಟನೆಗಳು ಮತ್ತು ಸ್ವತಃ ಮುಸಲ್ಮಾನರೊಂದಷ್ಟು ಜನ ಈ ಚಿಂತನೆಯನ್ನು ಪೋಷಿಸಿಕೊಂಡು ಬಂದಿದ್ದಾರೆ. ಆದರೆ ಅವರಿಗೆ ಸದ್ಯದ ಪಾಕಿಸ್ತಾನದ ಪರಿಸ್ಥಿತಿ ಎಂಥದ್ದಿದೆ ಎಂಬುದರ ಅರಿವು ಇರಲಿಕ್ಕಿಲ್ಲ. ಅಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದೆ. ಜನ ಮತ್ತು ಸೇನೆಯ ನಡುವೆ ಕಾದಾಟ ಶುರುವಾಗಿದೆ. ಯಾವ ಸೇನೆಯ ವಿಶ್ವಾಸದಿಂದಲೇ ಭಾರತವನ್ನು ಎದುರಿಸುತ್ತೇವೆಂದು ಪಾಕಿಸ್ತಾನಿಗಳು ಹೇಳುತ್ತಿದ್ದರೋ ಇಂದು ಅದೇ ಸೇನೆಯ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈ ಘರ್ಷಣೆ ಎಲ್ಲಿಗೆ ಹೋಗಿ ನಿಲ್ಲುವುದೋ ತಿಳಿದಿಲ್ಲ ನಿಜ. ಆದರೆ ಪಾಕಿಸ್ತಾನವೇ ಚೂರು-ಚೂರಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಂಡರೂ ಅಚ್ಚರಿಯಿಲ್ಲ. 1971ರಲ್ಲಿ ಪಾಕಿಸ್ತಾನವನ್ನು ಎರಡು ತುಂಡು ಮಾಡಿ ಬಿಸಾಡಿದ ಇಂದಿರಾಗೆ ಸಿಕ್ಕ ಗೌರವದ ನೂರ್ಪಟ್ಟು ಪಾಕಿಸ್ತಾನವನ್ನು ನಾಲ್ಕು ಚೂರು ಮಾಡುವ ಮೋದಿಗೆ ಸಿಕ್ಕರೂ ಸಿಗಬಹುದು. ಪಾಕಿಸ್ತಾನವೇ ಬಲೂಚಿಸ್ತಾನ, ಸಿಂಧ್, ಪಂಜಾಬು, ಕಾಶ್ಮೀರವೆಂದು ನಾಲ್ಕು ಭಾಗಗಳಾಗಿ ವಿಭಜನೆಗೊಂಡರೆ ಇವರು ಜೈಕಾರ ಹಾಕುವ ಪಾಕಿಸ್ತಾನಕ್ಕೆ ಅಸ್ತಿತ್ವವೇ ಇರುವುದಿಲ್ಲ. ಮುಸಲ್ಮಾನರನ್ನು ಈ ದಿಕ್ಕಿನಲ್ಲಿ ಭಡಕಾಯಿಸಿ ಅವರಿಂದ ಜೈಕಾರ ಹೇಳಿಸುವ ಮಂದಿ, ನಾಳೆಯ ದಿನ ಅಸ್ತಿತ್ವವೇ ಇಲ್ಲದ ಪಾಕಿಸ್ತಾನದ ಕಾರಣಕ್ಕೆ ಇವರೆಲ್ಲ ಅತಂತ್ರರಾಗುವುದನ್ನು ನೋಡಿ ನಗಲಿರುವುದಂತೂ ಸತ್ಯ.

ಪಾಕಿಸ್ತಾನದ ದುರಂತ ಪರ್ವ ಆರಂಭವಾಗಿದ್ದು ಮೋದಿಯ ಆಗಮನದ ನಂತರವೇ. ಅಲ್ಲಿಯವರೆಗೂ ಭಾರತದಲ್ಲಿ ಎಲ್ಲೆಂದರಲ್ಲಿ ಬಾಂಬ್ ಸ್ಫೋಟಗಳನ್ನು ಮಾಡಿಸುತ್ತಿದ್ದ ಪಾಕಿಸ್ತಾನ ಏಕಾಕಿ ದಿಗ್ಬಂಧನಕ್ಕೆ ಒಳಗಾಯ್ತು. ಭಾರತೀಯ ಬೇಹುಗಾರಿಕೆ ಎಷ್ಟು ಚುರುಕಾಯ್ತೆಂದರೆ ಕಾಶ್ಮೀರದಲ್ಲಿ ಕಂಡ-ಕಂಡಲ್ಲಿ ಭಯೋತ್ಪಾದಕರನ್ನು ಗುಂಡಿಟ್ಟು ಕೊಲ್ಲಲಾಯ್ತು. ಭಯೋತ್ಪಾದನಾ ಕೃತ್ಯಕ್ಕೆ ತಮ್ಮ ತಾವು ಸಮರ್ಪಿಸಿಕೊಂಡ ಬುರ್ಹನ್ ವನಿಯಂಥವರನ್ನು ಹುಚ್ಚು ನಾಯಿಗಿಂತಲೂ ಕಡೆಯಾಗಿ ಕೊಲ್ಲಲಾಯ್ತು. ಅವನ ಶವವನ್ನು ಮನೆಯವರಿಗೆ ಕೊಟ್ಟು ಶವಯಾತ್ರೆಗೆಂದು ಬಂದಿದ್ದ ಮತ್ತಷ್ಟು ಭಯೋತ್ಪಾದಕ ನಾಯಕರನ್ನು ಹಿಂಬಾಲಿಸಿಕೊಂಡು ಹೋಗಿ ಕಾಶ್ಮೀರದ ಕೊಳ್ಳವನ್ನು ಇವರಿಂದ ಮುಕ್ತಗೊಳಿಸಲಾಯ್ತು. ಅತ್ತ ಬುರ್ಹನ್‌ವನಿಯ ಸಾವನ್ನು ಕಂಡು ಬೆದರಿದ ಹೊಸ ಪೀಳಿಗೆಯ ತರುಣರು ಭಯೋತ್ಪಾದನೆಯಿಂದ ದೂರ ಉಳಿಯಲು ನಿಶ್ಚಯಿಸಿದರು. ಪಾಕೀ ಸೇನೆಗೆ ಸಿಗಬಹುದಾಗಿದ್ದ ಕಚ್ಚಾ ವಸ್ತುಗಳೇ ಇಲ್ಲವಾಗಿ ಹೋದಮೇಲೆ ಸಂಕಟ ಎರಗಿದ್ದಂತೂ ನಿಜ. ನಿಧಾನವಾಗಿ ಕಾಶ್ಮೀರ ಶಾಂತವಾಯ್ತು, ದೇಶವೂ ಕೂಡ.

ಅತ್ತ ಪಾಕಿಸ್ತಾನದಲ್ಲಿ ನಿಧಾನವಾಗಿ ಅಸಹನೆ ಆರಂಭವಾಯ್ತು. ಭಾರತವನ್ನು ಅಶಾಂತವಾಗಿರಸಲೆಂದೇ ವಿದೇಶೀ ಹೂಡಿಕೆಯನ್ನು ಪಡೆಯುತ್ತಿದ್ದ ಪಾಕಿಸ್ತಾನಕ್ಕೆ ಈಗ ಬಲುದೊಡ್ಡ ಸಂಕಟ. ನೋಡ-ನೋಡುತ್ತಲೇ ಅವರ ವಿದೇಶೀ ವಿನಿಮಯ ಬರಿದಾಗುತ್ತಾ ಹೋಯ್ತು. ಮೋದಿ ಸರ್ಕಾರದ ನಿರಂತರ ಪ್ರಯಾಸದಿಂದಾಗಿ ಐಎಮ್ಎಫ್, ವಿಶ್ವಬ್ಯಾಂಕುಗಳು ಸಾಲ ಕೊಡುವುದನ್ನು ನಿಲ್ಲಿಸಿದವು. ಈ ಹೊತ್ತಿನಲ್ಲಿಯೇ ಭುಟ್ಟೋ ಮತ್ತು ಶರೀಫ್ ಕುಟುಂಬಗಳ ರಾಜಕಾರಣದಿಂದ ಬೇಸತ್ತಿದ್ದ ಸೇನೆಗೆ ಇವರಿಬ್ಬರನ್ನು ಬಿಟ್ಟು ಹೊಸಮುಖವೊಂದನ್ನು ಪಟ್ಟಕ್ಕೆ ಕೂರಿಸುವ ಆತುರವಿತ್ತು. ಆಗ ಕಣ್ಮುಂದೆ ಬಂದವನು ಇಮ್ರಾನ್ ಖಾನ್. ಪಾಕಿಸ್ತಾನ್ ತೆಹರೀಕ್-ಎ-ಇನ್ಸಾಫ್ ಪಕ್ಷವನ್ನು ಕಟ್ಟಿಕೊಂಡು ಓಡಾಟ ನಡೆಸುತ್ತಿದ್ದ ಆತ ಪರಿವಾರ ರಾಜಕಾರಣಕ್ಕೆ ಸಡ್ಡು ಹೊಡೆಯುವುದಾಗಿ ಸೇನೆಗೆ ಭರವಸೆ ಕೊಟ್ಟು ಮುನ್ನುಗ್ಗಿದ. 2018ರಲ್ಲಿ ಚುನಾವಣೆ ನಡೆದಾಗ ಇಮ್ರಾನ್ ಖಾನನಿಗೆ ಎಲ್ಲ ಬಗೆಯ ಸಹಕಾರವನ್ನು ಕೊಟ್ಟಿದ್ದು ಸೇನೆಯೇ. ಆತ ಚುನಾವಣೆಯನ್ನು ಗೆದ್ದು ಅಲ್ಪ ಬಹುಮತದೊಂದಿಗೆ ಪಾಕಿಸ್ತಾನದ ಚುಕ್ಕಾಣಿ ಹಿಡಿದುಬಿಟ್ಟ. ಆಗ ಸೇನೆಯ ಮುಖ್ಯಸ್ಥ ಕಾಶ್ಮೀರದ ವಿಚಾರದಲ್ಲಿ ವಿಶೇಷವಾದ ಪರಿಣಿತಿ ಹೊಂದಿದ್ದ ಜನರಲ್ ಕಮರ್ ಬಾಜ್ವಾ. ಇವರೀರ್ವರ ಸಂಬಂಧ ಎಷ್ಟು ಬಲವಾಗಿತ್ತೆಂದರೆ ನ್ಯೂಯಾರ್ಕ್ ಟೈಮ್ಸ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಇಮ್ರಾನ್ ‘ನಾನು ಗೆಳೆತನವಿಟ್ಟುಕೊಂಡಿರೋದು ಪಾಕಿಸ್ತಾನೀ ಸೇನೆಯೊಂದಿಗೆ, ಶತ್ರು ಸೇನೆಯೊಂದಿಗಲ್ಲ. ನಾವು ಜೊತೆಗೂಡಿಯೇ ನಡೆಯುತ್ತೇವೆ’ ಎಂದಿದ್ದ. ಪಾಕಿಸ್ತಾನದಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣೆ ನಡೆಸಲು ಬಾಜ್ವಾನೇ ಕಾರಣ ಎಂದು ಹೇಳುವುದಕ್ಕೆ ಆತ ಹಿಂಜರಿಯಲಿಲ್ಲ. ಅಧಿಕಾರ ಪಡೆದೊಡನೆ ಒಂದೇ ಪುಸ್ತಕದ ಒಂದೇ ಪುಟದಲ್ಲಿ ನಾವಿಬ್ಬರೂ ಇದ್ದೇವೆ ಎಂದೂ ತನ್ನ ಚಟುವಟಿಕೆಗಳನ್ನು ಸಮರ್ಥಿಸಿಕೊಂಡಿದ್ದ. 2020ರಲ್ಲಿ ಅಲ್‌ಜಝೀರಾದೊಂದಿಗೆ ಮಾತನಾಡುತ್ತಾ ಸೇನೆ ಮತ್ತು ಸರ್ಕಾರದ ಸಂಬಂಧಗಳು ಬಲು ಸೌಹಾರ್ದಯುತವಾಗಿದೆ ಎಂದಿದ್ದ. ಸೇನೆಯೂ ಈತನ ಕಾಲದಲ್ಲಿ ಎಲ್ಲ ಅಧಿಕಾರವನ್ನು ಮುಕ್ತವಾಗಿ ಅನುಭವಿಸಿತು. ಅನೇಕ ಸರ್ಕಾರಿ ನಿರ್ಣಯಗಳಲ್ಲೂ ಅವರು ಮೂಗು ತೂರಿಸುತ್ತಿದ್ದುದು ಸಾಮಾನ್ಯವಾಗಿತ್ತು. ಇದರ ಹಿಂದೆ ಬಿದ್ದ ಇಮ್ರಾನ್ ಆಡಳಿತವನ್ನು ಕಡೆಗಣಿಸಿದ. ಪರಿಣಾಮ ಕೊವಿಡ್‌ನ ಸಂದರ್ಭದಲ್ಲಿ ಜನ ಹಾಹಾಕರ ಪಡುವಂತಾಯ್ತು. ಪಾಕಿಸ್ತಾನದ ಆರ್ಥಿಕ ಸ್ಥಿತಿಯೂ ಹದಗೆಟ್ಟು ಅದನ್ನು ಹಳಿಗೆ ತರುವಲ್ಲಿ ಇಮ್ರಾನ್ ಸೋತುಹೋದ. ಜನರ ಅರಚಾಟ ಆರಂಭವಾಯ್ತು. ಇಮ್ರಾನನ ಮೇಲಿದ್ದ ಆಕ್ರೋಶವೆಲ್ಲ ಸ್ವಲ್ಪಮಟ್ಟಿಗೆ ಸೇನೆಯತ್ತಲೂ ತಿರುಗಿತು. ಪದವಿಯಲ್ಲಿ ಬೇರೆ-ಬೇರೆಯವರನ್ನು ತಾನೇ ಕೂರಿಸಿ ಹಿಂದಿನಿಂದ ಅಧಿಕಾರ ನಡೆಸುವ ಪಾಕೀ ಸೇನೆ ಎಂದೂ ಜನರ ಬೈಗುಳವನ್ನು ತಿಂದಿರಲಿಲ್ಲ. ಅದಕ್ಕೆ ಎದುರಿಗೆ ಅಧ್ಯಕ್ಷನೋ ಪ್ರಧಾನಿಯೋ ಇರುತ್ತಿದ್ದ. ಇಮ್ರಾನ್ ಥೇಟು ಕೇಜ್ರಿವಾಲನಂತೆ. ಎಷ್ಟು ಬೇಕಾದರೂ ನಾಟಕಗಳನ್ನು ಮಾಡಬಲ್ಲ, ಯಾರ ಮೇಲಾದರೂ ಗೂಬೆ ಕೂರಿಸಬಲ್ಲ, ಒಟ್ಟಿನಲ್ಲಿ ತಾನು ಗೆಲ್ಲಬೇಕಷ್ಟೇ! ಹೀಗಾಗಿಯೇ ಆತನ ಮೇಲಿದ್ದ ಆಕ್ರೋಶವೆಲ್ಲ ಸೇನೆಯ ವಿರುದ್ಧ ತಿರುಗಿತು. ತಡಮಾಡದೇ ಸೇನೆ ಇಮ್ರಾನನೊಂದಿಗಿದ್ದ ಸ್ನೇಹಕ್ಕೆ ಎಳ್ಳು-ನೀರು ಬಿಟ್ಟು ಕುಂಡಿ ಝಾಡಿಸಿಕೊಂಡು ಎದ್ದುಬಿಟ್ಟಿತು. ಅಲ್ಲಿಗೆ ಇಮ್ರಾನ್ ಮತ್ತು ಸೇನೆ ಯುದ್ಧಕ್ಕೆ ನಿಂತರು. ಈ ವೇಳೆಗೆ ಜನರಲ್ ಬಾಜ್ವಾ ನಂತರ ಫೈಜ್ ಹಮೀದ್‌ನನ್ನು ಆ ಸ್ಥಾನಕ್ಕೆ ತರಬೇಕೆಂದು ಇಮ್ರಾನ್ ನಿಶ್ಚಯಿಸಿಕೊಂಡಿದ್ದ. ಅದಕ್ಕಾಗಿ ಆತನನ್ನು ಐಎಸ್ಐನ ನಿರ್ದೇಶಕನಾಗಿ ಮುಂದುವರೆಸಬೇಕೆಂದೂ ಆಗ್ರಹಿಸಿದ್ದ. ಆದರೆ ಬಾಜ್ವಾ ಹಮೀದ್‌ನನ್ನು ಪಕ್ಕಕ್ಕೆ ಸರಿಸಿ ಲೆಫ್ಟಿನೆಂಟ್ ಜನರಲ್ ನದೀಮ್ ಅಂಜುಂನನ್ನು ಕೂರಿಸಿದ. ಇದು ಸೇನೆ ಮತ್ತು ಇಮ್ರಾನ್‌ನ ನಡುವಿನ ಕಾದಾಟವನ್ನು ತೀವ್ರಗೊಳಿಸಿತು. ಸಾಲದೆಂಬಂತೆ ರಷ್ಯಾ-ಉಕ್ರೇನ್ ಯುದ್ಧದ ಹೊತ್ತಲ್ಲಿ ಪಶ್ಚಿಮದ ಒತ್ತಡಕ್ಕೆ ಮಣಿದು ರಷ್ಯಾ ವಿರೋಧಿಸುವ ನಿರ್ಣಯ ಕೈಗೊಳ್ಳಲಾರೆನೆಂದು ಇಮ್ರಾನ್ ಹೇಳಿಕೆ ಕೊಟ್ಟರೆ, ಬಾಜ್ವಾ ಉಕ್ರೇನ್‌ನ ಪರವಾದ ಹೇಳಿಕೆಯನ್ನು ಕೊಟ್ಟು ಸರ್ಕಾರದ ವಿರುದ್ಧ ನಿಂತ. ಅಲ್ಲಿಗೆ ಇವರಿಬ್ಬರ ನಡುವಿನ ಕಂದಕ ಜಗಜ್ಜಾಹೀರಾಗುವಷ್ಟು ದೊಡ್ಡದಾಗಿತ್ತು.

ಪಾಕಿಸ್ತಾನದಲ್ಲಿ ಸೇನೆ ಮನಸ್ಸು ಮಾಡಿದರೆ ಏನು ಬೇಕಿದ್ದರೂ ಮಾಡಬಲ್ಲದು. 2022ರಲ್ಲಿ ಇಮ್ರಾನನ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲಾಯ್ತು. ಈ ಗೊತ್ತುವಳಿ ಕಾನೂನು ಬಾಹಿರವಾಗಿದೆ ಎಂದು ಇಮ್ರಾನ್ ವಾದಿಸುವ ಪ್ರಯತ್ನ ಮಾಡಿದರೂ ಅದು ಅರಣ್ಯ ರೋದನವಾಯ್ತು. ಮೊದಲೇ ಹೇಳಿದಂತೆ ನಾಟಕ ಮಾಡುವುದರಲ್ಲಿ ನಿಸ್ಸೀಮನಾಗಿರುವ ಇಮ್ರಾನ್ ಅವಿಶ್ವಾಸ ಗೊತ್ತುವಳಿಯನ್ನು ಹೈಡ್ರಾಮಾ ಆಗುವಂತೆ ನೋಡಿಕೊಂಡ. ಈತನದ್ದೇ ಪಾಕಿಸ್ತಾನ್ ತೆಹರೀಕ್-ಎ-ಇನ್ಸಾಫ್ ಪಕ್ಷದ ಕೆಲವು ಸದಸ್ಯರು ಇವನ ವಿರುದ್ಧ ತಿರುಗಿಬಿದ್ದು ಈತ ಅಧಿಕಾರದಿಂದ ಕೆಳಗಿಳಿಯುವಂತಾಯ್ತು. ಆನಂತರ ಇಮ್ರಾನ್ ತನಗನಿಸಿದ್ದನ್ನು ನೇರವಾಗಿ ಹೇಳುವ ಚಾಳಿ ಬೆಳೆಸಿಕೊಂಡುಬಿಟ್ಟ. ದಿನ ಬೆಳಗಾದರೆ ಆತ ಸೇನೆಯನ್ನು ವಾಚಾಮಗೋಚರವಾಗಿ ಬೈಯ್ಯುತ್ತಿದ್ದ. ಆತನ ಆರೋಪಗಳ ಕೇಂದ್ರಬಿಂದು ಸೇನಾಮುಖ್ಯಸ್ಥ ಬಾಜ್ವಾನೇ ಆಗಿರುತ್ತಿದ್ದ. ‘ಎಲ್ಲ ಬಗೆಯ ಕೆಟ್ಟ ಕೆಲಸಗಳನ್ನು ಮಾಡಿ ಅವನಿಗೆ ಅನುಭವವಿದೆ’, ‘ಸರ್ಕಾರದ ಹಿಂದೆನಿಂತು ಒತ್ತಡಹಾಕಿ ತಮಗೆ ಬೇಕಾದ ಕೆಲಸ ಮಾಡಿಸಿಕೊಳ್ಳುವವರು ಸೇನೆಯ ಮಂದಿ’ ಎಂದೆಲ್ಲ ಆರೋಪ ಮಾಡಿದ. ಈ ಹೊತ್ತಿಗೆ ಸರಿಯಾಗಿ ಪಾಕಿಸ್ತಾನದ ಪತ್ರಕರ್ತ ಅರ್ಷದ್ ಶರೀಫ್‌ನನ್ನು ಕೀನ್ಯಾದಲ್ಲಿ ಕೊಲೆ ಮಾಡಲಾಯ್ತು. ಆತ ಅವಿಶ್ವಾಸ ಗೊತ್ತುವಳಿಯ ಸಂದರ್ಭದಲ್ಲಿ ಸೇನೆಯ ವಿರುದ್ಧವಾಗಿ, ಇಮ್ರಾನನ ಪರವಾಗಿ ಸಾಕಷ್ಟು ವರದಿಗಳನ್ನು ಮಾಡಿದ್ದ. ಸೇನೆ ಅವನನ್ನು ಗುರಿಯಾಗಿಸಿಬಿಟ್ಟಿತ್ತು. ಬ್ರಿಗೇಡಿಯರ್ ಮೊಹಮ್ಮದ್ ಶಾಫಿಕ್, ಬ್ರಿಗೇಡಿಯರ್ ಫಹೀನ್ ರಜಾ ಮತ್ತು ಐಎಸ್ಐನ ಮೇಜರ್ ಜನರಲ್ ಫೈಜಲ್ ನಜೀರ್ ಇವರು ಆತನಿಗೆ ಬೆದರಿಕೆಯ ಕರೆ ಮಾಡಲಾರಂಭಿಸಿದರು. ಪತ್ರಕರ್ತ ಅರ್ಷದ್ ಶರೀಫ್ ಪಾಕಿಸ್ತಾನ ಬಿಟ್ಟು ಓಡಿದ. ಆತನ ಮಿತ್ರರೆಲ್ಲ ದುಬೈಯಲ್ಲೋ, ಲಂಡನ್ನಿನಲ್ಲೋ ಇದ್ದಾನೆ ಎಂದು ಭಾವಿಸಿಕೊಂಡಿದ್ದರೆ, ಕೀನ್ಯಾದಲ್ಲಿ ಹೆಣವಾಗಿದ್ದ. ನಿಸ್ಸಂಶಯವಾಗಿ ಇದು ಐಎಸ್ಐನ ಕೈವಾಡವೇ ಆಗಿತ್ತಲ್ಲದೇ ಫೈಜಲ್ ನಜೀರ್‌ನೇ ಇದರ ಹಿಂದಿದ್ದ ಎಂದು ಎಲ್ಲರೂ ನಂಬಿದರು. ಸ್ವತಃ ಶರೀಫ್ನ ತಾಯಿ ರಿಫಾತ್ ಅಲ್ವಿ ಪಾಕಿಸ್ತಾನದ ನ್ಯಾಯಾಧೀಶರಿಗೆ ಪತ್ರಬರೆದು ಅದರಲ್ಲಿ ಈ ವಿಚಾರವನ್ನು ಉಲ್ಲೇಖಿಸಿದರು. ಇಮ್ರಾನ್ ಇದನ್ನು ಬಲವಾಗಿ ಹಿಡಿದುಕೊಂಡ. ಆತ ಪದೇ-ಪದೇ ಡರ್ಟಿ ಹ್ಯಾರಿ ಎಂದು ಕರೆಯಲ್ಪಡುವ ಫೈಜಲ್ ನಜೀರ್‌ನ ವಿರುದ್ಧ ಮನಸೋ ಇಚ್ಛೆ ಮಾತನಾಡಲಾರಂಭಿಸಿದ. ಇದು ಐಎಸ್ಐಗೆ ಸರಿ ಕಾಣಲಿಲ್ಲ.


ಮತ್ತೊಂದೆಡೆ ತಾನು ಅಧಿಕಾರ ಕಳೆದುಕೊಂಡೊಡನೆ ಲಾಂಗ್‌ಮಾರ್ಚ್ ಆರಂಭಿಸಿದ ಇಮ್ರಾನ್ ದೊಡ್ಡ ಸಂಖ್ಯೆಯಲ್ಲಿ ಬೆಂಬಲಿಗರನ್ನು ಸೆಳೆಯತೊಡಗಿದ. ತನ್ನ ನಾಟಕೀಯ ಭಾಷಣಗಳಿಂದ ಅವರನ್ನು ಆಕರ್ಷಿಸುತ್ತಾ ಸೇನೆಯ ವಿರುದ್ಧ ಎತ್ತಿಕಟ್ಟುವಲ್ಲಿ ಸಫಲನಾಗುತ್ತಿದ್ದ. ಇದರ ಪರಿಣಾಮವೇ ಪಂಜಾಬಿನಲ್ಲಿ ಉಪ ಚುನಾವಣೆಗಳು ನಡೆದಾಗ ಇಮ್ರಾನ್ ಖಾನನ ಪಕ್ಷ ಜಯಭೇರಿ ಬಾರಿಸಿತು. ಸಹಜವಾಗಿಯೇ ಇದು ಆತಂಕದ ವಿಚಾರವಾಗಿತ್ತು. ಸೇನೆ, ಇಮ್ರಾನ್ ತಮ್ಮಿಂದ ಅಧಿಕಾರವನ್ನು ಕಸಿಯುತ್ತಾನೆ ಎಂಬುದು ಖಾತ್ರಿಯಾಗುತ್ತಿದ್ದಂತೆ ಆತನ ಭ್ರಷ್ಟಾಚಾರದ ಪ್ರಕರಣಗಳನ್ನು ಮುಂದಿಟ್ಟು ನ್ಯಾಯಾಲಯದ ಮೂಲಕ ಆತ ಐದು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ನಿಯಮಗಳನ್ನು ಹೇರಿಬಿಟ್ಟಿತು. ಆತನ ಲಾಂಗ್ ಮಾರ್ಚ್ ಮತ್ತೆ ಮುಂದುವರಿಯಿತು. ಜನ ಮೊದಲಿಗಿಂತ ಹೆಚ್ಚಾದರೇ ಹೊರತು ಕಡಿಮೆಯಾಗಲಿಲ್ಲ. ಆತ ರ್ಯಾಲಿಯಲ್ಲಿ ಭಾಗವಹಿಸಿರುವಾಗಲೇ ಆತನ ಮೇಲೆ ಗುಂಡು ಹಾರಿಸಲಾಯ್ತು. ಕಾಲಿಗೆ ಮೂರು ಗುಂಡು ಹೊಕ್ಕಿದವೆಂದು ಇಮ್ರಾನನ ಬೆಂಬಲಿಗರು ಹೇಳಿದರು. ಆದರೆ ನೋಡುಗರಿಗೆ ಚುನಾವಣೆಯ ಹೊತ್ತಲ್ಲಿ ಪಶ್ಚಿಮ ಬಂಗಾಳದಲ್ಲಿ ದೀದಿ ಕಾಲಿಗೆ ಬ್ಯಾಂಡೇಜು ಕಟ್ಟಿಕೊಂಡಂತೆ ಕಾಣುತ್ತಿತ್ತು. ತನ್ನ ಭಿನ್ನ-ಭಿನ್ನ ಸ್ವರೂಪದ ನಾಟಕಗಳಿಂದ ಆತ ಜನರನ್ನು ಸೆಳೆಯುತ್ತಲೇ ಹೋದ. ಇನ್ನು ಈತನನ್ನು ತಡೆಯಲಾಗದು ಎಂದೇ ಆತನನ್ನು ಏಕಾಕಿ ಬಂಧಿಸುವ ನಿರ್ದೇಶನವನ್ನು ಸೇನೆ ಅಲ್ಲಿನ ಅರೆ ಸೈನಿಕಪಡೆಗೆ ಆದೇಶಿಸಿತು. ಇಮ್ರಾನನ ವಿರುದ್ಧ ಭ್ರಷ್ಟಾಚಾರದ ಪ್ರಕರಣವೊಂದಿದೆ. ಆತ ವಿದೇಶಗಳಿಗೆ ಹೋದಾಗಲೆಲ್ಲ ಅಲ್ಲಿ ಸಿಗುತ್ತಿದ್ದ ಉಡುಗೊರೆಗಳನ್ನು ಸರ್ಕಾರದ ತೋಷ್ಖಾನಗಳಿಗೆ ಕೊಟ್ಟು ಅಲ್ಲಿಂದ ಕಡಿಮೆ ಬೆಲೆಗೆ ಖರೀದಿಸಿ ತಾನು ಹೆಚ್ಚಿನ ಬೆಲೆಗೆ ಬೇರೆಯವರಿಗೆ ಮಾರುತ್ತಿದ್ದ. ಪಾಕಿಸ್ತಾನದ ಪ್ರಧಾನಿ ಎಂದು ಸಾಬೀತುಪಡಿಸಬೇಕಲ್ಲ, ಮತ್ತೇನಿದೆ ಮಾರ್ಗ? ರಾಷ್ಟ್ರಪತಿ ಪ್ರತಿಭಾ ಪಾಟಿಲ್ ತಾನು ಮರಳಿ ಮನೆಗೆ ಹೋಗುವಾಗ ತನಗೆ ಬಂದಿದ್ದ ಉಡುಗೊರೆಗಳನ್ನೆಲ್ಲ ಗಂಟುಮೂಟೆ ಕಟ್ಟಿಕೊಂಡು ಒಯ್ದಿದ್ದಳಲ್ಲ, ಇದು ಅಂಥದ್ದೇ ಮತ್ತೊಂದು ಕಥೆ ಅಷ್ಟೇ.


ವಿಚಾರಣೆಗೆಂದು ಸಾಗುತ್ತಿರುವ ಇಮ್ರಾನ್ ಖಾನನ ಬಂಧನದೊಂದಿಗೆ ಪಾಕಿಸ್ತಾನದಲ್ಲಿ ಅಕ್ಷರಶಃ ಬೆಂಕಿ ಹೊತ್ತಿಕೊಂಡಿತು. ಜನ ಬೀದಿಗೆ ಬಂದರು. ಸೇನಾ ಮುಖ್ಯನೆಲೆಗಳನ್ನು ಗುರಿಯಾಗಿರಿಸಿಕೊಂಡು ದಾಳಿ ಮಾಡಿದರು. ಅಲ್ಲಿನ ರೇಡಿಯೊ ಕೇಂದ್ರ ಹೊತ್ತಿ ಉರಿಯಿತು. ಅನೇಕ ಸೇನಾ ನಾಯಕರ ಮನೆಗಳು ಲೂಟಿಯಾದವು. ಅದಕ್ಕೆ ಬೆಂಕಿ ಹಚ್ಚಿ ಜನ ಆನಂದಿಸಿದರು. ಲೂಟಿಗೈಯ್ಯುತ್ತಿರುವ ಜನರನ್ನು ಪ್ರಶ್ನಿಸಿದಾಗ,‌ ಇದು ನಮ್ಮದ್ದೇ ದುಡ್ಡು. ಅದಕ್ಕೇ ಒಯ್ಯುತ್ತಿದ್ದೇವೆ ಎಂದು ಹೇಳುವುದನ್ನು ಕಂಡಾಗ, ಅವರಲ್ಲಿದ್ದ ಆಕ್ರೋಶ ಎದ್ದು ಕಾಣುತ್ತಿತ್ತು. ಅಚ್ಚರಿ ಎಂದರೆ ಜನರ ಈ ಆಕ್ರೋಶವನ್ನು ತಡೆಯುವಲ್ಲಿ ಸೇನೆ ತೋರಿದ ದಿವ್ಯ ನಿರ್ಲಕ್ಷ್ಯ. ಕೆಲವು ಕಡೆಯಲ್ಲಂತೂ ನುಗ್ಗಿ ಬರುತ್ತಿರುವ ಜನರ ಮೇಲೆ ಗುಂಡು ಹಾರಿಸಲೆಂದು ಕೊಟ್ಟ ಆದೇಶವನ್ನೂ ಧಿಕ್ಕರಿಸಲಾಗಿತ್ತು. ಇದು ಸೇನೆಯೊಳಗಿನ ಕುರ್ಚಿಯ ಕಾರಣಕ್ಕಾಗಿ ಎಂದು ಕೆಲವರು ವಿಶ್ಲೇಷಿಸುತ್ತಿದ್ದಾರೆ. ಅಂದರೆ ಇಮ್ರಾನ್ ಹಚ್ಚಿದ ಬೆಂಕಿ ಸೇನೆಯನ್ನೂ ಸುಡುತ್ತಿದೆ. ಭಾರತವನ್ನು ನಾಶ ಮಾಡುತ್ತೇವೆಂದು ಬದುಕು ಆರಂಭಿಸಿದ ಪಾಕಿಸ್ತಾನ ಇಂದು ತನ್ನ ಅಂಗಡಿಯನ್ನು ಗಂಟು-ಮೂಟೆ ಕಟ್ಟಿಕೊಂಡು ಭಾರತದೆದುರು ಗೋಗರೆಯಬೇಕಾದ ಪರಿಸ್ಥಿತಿಗೆ ಬಂದಿದೆ. ಇವ್ಯಾವನ್ನೂ ಅರಿಯದ ಇಲ್ಲಿನ ಮುಸಲ್ಮಾನರು ಮಸೀದಿಯಲ್ಲಿ ಮೌಲ್ವಿಯ ಮಾತು ಕೇಳಿ, ಬೀದಿಗೆ ಬಂದು ಪಾಕಿಸ್ತಾನಕ್ಕೆ ಜಿಂದಾಬಾದ್ ಹೇಳುತ್ತಾರಲ್ಲ, ಅಯ್ಯೋ ಪಾಪ ಎನಿಸುತ್ತದೆ!

ಒಂದಂತೂ ಸತ್ಯ ಅಧಿಕಾರದಲ್ಲಿರುವ ಕಾಂಗ್ರೆಸ್ಸು ಬಿಟ್ಟಿ ಭಾಗ್ಯಗಳನ್ನು ಕೊಟ್ಟು, ಮೀಸಲಾತಿಯನ್ನೂ ವಿಸ್ತರಿಸಿ ಜಾತಿ-ಜಾತಿಗಳ ನಡುವಿನ ಕದನವನ್ನು ತೀವ್ರಗೊಳಿಸಿತೆಂದರೆ ಸುಭಿಕ್ಷವಾಗಿದ್ದ ಕರ್ನಾಟಕವೂ ಪಾಕಿಸ್ತಾನದಂತಾಗಲು ಐದು ವರ್ಷ ಸಾಕು! ಆಗ ಪಾಕಿಸ್ತಾನಕ್ಕೆ ಜಿಂದಾಬಾದ್ ಹೇಳುವ ಅಗತ್ಯವಿಲ್ಲ. ಮುಸಲ್ಮಾನರು ಕರ್ನಾಟಕವೂ ಪಾಕಿಸ್ತಾನವೇ ಎಂದು ಹೆಮ್ಮೆ ಪಡಬಹುದು!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s