ಇತ್ತೀಚೆಗೆ ಮೈಸೂರಿನ ಕಾರ್ಯಕ್ರಮವೊಂದಕ್ಕೆ ಹೋಗಿದ್ದಾಗ, ಹುತಾತ್ಮ ಸಂದೀಪ್ ಉನ್ನಿಕೃಷ್ಣನ್ರ ತಂದೆ ಸಿಕ್ಕಿದ್ದರು. ಸಾವಿರಾರು ಜನರೆದುರಿಗೆ ಮಗನನ್ನು ನೆನಪಿಸಿಕೊಂಡು ಭಾವುಕರಾದರು. ಅಪ್ಪ, ಸ್ವಂತ ದುಡ್ಡಿನಿಂದ ನಮ್ಮನ್ನು ಸಾಕಿದ್ದೀ ಸರಿ. ಆದರೆ ಸಮಾಜಕ್ಕೇನು ಮಾಡಿದ್ದೀಯ? ದೇಶಕ್ಕೇನಾದರೂ ಮಾಡಿರುವೆಯಾ?ಅಂತ ಆರನೇ ತರಗತಿಯ ಹುಡುಗನಾಗಿದ್ದಾಗ ಕೇಳಿದ್ದನಂತೆ. ಮುಂದೆ ಪ್ರತಿಭಾವಂತ ಹುಡುಗ ಎಲ್ಲವನ್ನೂ ಧಿಕ್ಕರಿಸಿ ಸೇನೆಯೆದುರು ನಿಂತ. ಕಮಾಂಡೋ ಪಡೆ ಸೇರಿಕೊಂಡ. ತಾಜ್ನೆದುರು ದೇಶದ ರಕ್ಷಣೆ ಮಾಡುತ್ತಲೇ ಪ್ರಾಣ ತ್ಯಾಗ ಮಾಡಿದ. ನ್ನ ಮಗ ಸೈನಿಕನಾಗಬಾರದಿತ್ತು. ಅವನೊಳಗಿನ ದೇಶದ ಕಾಳಜಿ ಅದೆಷ್ಟಿತ್ತೆಂದರೆ, ಅವನು ಬದುಕಿದ್ದರೆ ಇನ್ನೂ ಹೆಚ್ಚಿನ ಕೆಲಸ ಮಾಡಿರುತ್ತಿದ್ದಎಂದು ಮರುಗಿದರು ತಂದೆ. ಕೊನೆಗೆ ಅವನು ಪ್ರಾಣ ಕೊಟ್ಟ ಈ ದೇಶವನ್ನು ನೀವೆಲ್ಲ ಸೇರಿ ಹಾಳು ಮಾಡುತ್ತಿದ್ದೀರಲ್ಲಎಂದು ಬೇಸರದಿಂದ ಪ್ರಶ್ನಿಸಿದರು.
ಮನಸ್ಸು ತುಂಬ ಹೊತ್ತು ಮೂಕವಾಗಿಬಿಟ್ಟಿತ್ತು. ಸಂದೀಪ್ ಯಾತಕ್ಕೋಸ್ಕರ ಪ್ರಾಣ ಬಿಡಬೇಕಾಗಿತ್ತು? ಅವನೂ ಉಗ್ರರೊಂದಿಗೆ ಕಾದಾಡುವ ಮುನ್ನ ಸಾಯಲಿರುವವರು ತನ್ನ ಜಾತಿಯವರಲ್ಲ, ತನ್ನ ಭಾಷೆಯವರಲ್ಲ, ತನ್ನ ಪರಿವಾರದವರಲ್ಲ ಎಂದು ಸುಮ್ಮನಾಗಿಬಿಟ್ಟಿದ್ದರೆ? ಹೌದಲ್ಲ. ನಮ್ಮ ಕಾಯುವ ಸೈನಿಕ ವಿಧಾನಸೌಧದಲ್ಲಿ ಕುಳಿತವರಂತೆ ಜಾತಿಯ ಬಣ ಮಾಡಿ, ನಂನಮ್ಮ ಜಾತಿಯವರ ರಕ್ಷಣೆಗೆ ನಾವಿದ್ದೇವೆ ಎಂದು ಕುಳಿತುಬಿಟ್ಟಿದ್ದರೆ ನಮ್ಮ ಕತೆ ಏನಾಗಿರುತ್ತಿತ್ತು ಹೇಳಿ!?
ಹಾಗಂತ ಸೈನಿಕರಿಗೆ ಜಾತಿ ಇಲ್ಲವಾ? ಖಂಡಿತ ಇದೆ. ಅವರ ಪಾಲಿಗೆ ಅವರ ರೆಜಿಮೆಂಟುಗಳೇ ಅವರ ಜಾತಿ. ಸಿಖ್, ಜಾಟ್, ಗೂರ್ಖಾ, ಮದ್ರಾಸಿ, ರಜಪೂತ್ ಇವೆಲ್ಲ ಜಾತಿಯಾಧಾರಿತ ರೆಜಿಮೆಂಟುಗಳೇ. ಪ್ರತಿಯೊಬ್ಬ ಸೈನಿಕನೂ ತನ್ನ ರಎಜಿಮೆಂಟಿನ ಗೌರವ ಹೆಚ್ಚಿಸುವುದರಲ್ಲಿಯೇ ಮಗ್ನ. ರೆಜಿಮೆಂಟಿಗಾಗಿಯೇ ಪ್ರಾಣಅನ್ನೋದು ಅವರ ಧ್ಯೇಯ ವಾಕ್ಯ. ಆದರೆ ವಿಶೇಷವೇನು ಗೊತ್ತೆ? ಇತರರಿಗಿಂತ ತಾನು ತ್ಯಾಗದಲ್ಲಿ ಶ್ರೇಷ್ಠನಾಗಿರಬೇಕು ಅನ್ನೋದು ಅವರ ಪಣವೇ ಹೊರತು ಸ್ವಾರ್ಥದಲ್ಲಲ್ಲ! ಇದು ನಮಗೂ ಅವರಿಗೂ ಇರುವ ವ್ಯತ್ಯಾಸ. ನಾವು ನಮ್ಮ ಜಾತಿಯವರು ಗಳಿಸಿದ್ದೆಷ್ಟೆಂದು ಲೆಕ್ಕ ಹಾಕುತ್ತೇವೆ. ಅವರು ನಮ್ಮ ರೆಜಿಮೆಂಟು ಕಳಕೊಂಡ ಜೀವ, ಪಡಕೊಂಡ ಪ್ರಶಸ್ತಿಗಳ ಲೆಕ್ಕ ಹೇಳುತ್ತಾರೆ.
ನಾಯಕ್ ಸುಬೇದಾರ್ ಚೆವಾಂಗ್ ರಿಂಚೆನ್ ಸಾಯಲಿಕ್ಕೆ ತಯಾರಾಗಿಯೇ ಬಂದವನು. ತನ್ನೊಂದಿಗೆ ಬಂದ ಗೆಳೆಯರನ್ನೂ ದೇಶಕ್ಕಾಗಿ ಪ್ರಾಣ ಕೊಡೋಣ ಎಂದೇ ಕರೆತಂದವನು. ಚೀನಾದ ಆಕ್ರಮಣದ ಮುನ್ಸೂಚನೆ ಕೊಟ್ಟನಲ್ಲ, ಅವತ್ತು ಸಾಸೆರ್ ಪಾಸ್ ಏರುವಾಗ ದಾರಿಯುದ್ದಕ್ಕೂ ಮನುಷ್ಯರ, ಪ್ರಾಣಿಗಳ ಮೂಳೆಗಳು ಕಾಣುತ್ತಿದ್ದವಂತೆ. ಪರಿಸ್ಥಿತಿಯ ಭಯಾನಕ ಒತ್ತಡ ತಾಳಲಾರದೆ ಜೀವ ಕಳಕೊಂಡ ಕಳೇವರಗಳವು. ಅದನ್ನು ನೋಡಿಯೂ ನೋಡದವನಂತೆ ಹೆಜ್ಜೆ ಇಡುವುದು ಒಬ್ಬ ಸೈನಿಕನಿಗೆ ಮಾತ್ರ ಸಾಧ್ಯ! ಅದೂ ಚೆವಾಂಗ್ನಂಥವನಿಗೆ.
೧೯೪೮ರ ಯುದ್ಧದ ನಂತರ ಜಮ್ಮು ಕಾಶ್ಮೀರ ಬಟಾಲಿಯನ್ಗೆ ಅವನನ್ನು ಸೇರಿಸಿಕೊಳ್ಳಲಾಗಿತ್ತು. ೧೯೬೨ರ ನಂತರ ಹಿಮಾವೃತ ಬೆಟ್ಟಗಳನ್ನೇರಲು ರಿಂಚೆನ್ನಂತಹ ಸ್ಥಳೀಯರೇ ಇರಬೇಕೆಂದು ಅರ್ಥೈಸಿಕೊಂಡ ಸೇನೆ, ಲಡಾಖ್ ಸ್ಕೌಟ್ಸ್ ಎಂಬ ಪಡೆಯನ್ನು ರೂಪಿಸಿ ಅದನ್ನು ರಿಂಚೆನ್ನ ಕೈಗಿತ್ತಿತು. ಆತ ಮೊದಲ ಮೇಜರ್ ಆದ! ಇವತ್ತಿಗೂ ಜಗತ್ತಿನ ಅತ್ಯಂತ ಎತ್ತರದಲ್ಲಿ ತರಬೇತಿ ಪಡೆಯುತ್ತಿರುವ ಸೈನಿಕ ತುಕಡಿ ಲಡಾಖ್ ಸ್ಕೌಟ್ಸ್ ಎಂಬ ಹೆಗ್ಗಳಿಕೆ ಇದೆ. ಲಡಾಖ್ನ ದಾರಿಯುದ್ದಕ್ಕೂ ಮಾಂಕೆಂಬ ಸೈನಿಕ ತರಬೇತಿ ಠಾಣ್ಯಗಳು ಕಾಣುತ್ತವೆ. ಹಿಮವನ್ನೇ ಅಂಕೆಯಲ್ಲಿಡುವ ಸೈನಿಕರಿವರು!
೧೯೭೧ರಲ್ಲಿ ಬಾಂಗ್ಲಾದೇಶದ ದಿಕ್ಕಿನಲ್ಲಿ ಸ್ವಲ್ಪ ಕಿರಿಕಿರಿ ಶುರುವಾಯ್ತು. ಆಗಿನ್ನೂ ಬಾಂಗ್ಲಾ, ಪೂರ್ವ ಪಾಕಿಸ್ತಾನವೆಂದು ಕರೆಯಲ್ಪಡುತ್ತಿತ್ತು. ಲಾಲ್ ಬಹಾದ್ದೂರ್ ಶಾಸ್ತ್ರಿಯವರನ್ನು ಬಿಟ್ಟರೆ ಕಾಂಗ್ರೆಸ್ಸು ಸೃಷ್ಟಿಸಿದ ಏಕೈಕ ಗಂಡು ಪ್ರಧಾನಿ ಇಂದಿರಾ ಗಾಂಧಿ ಪಾಕಿಸ್ತಾನಕ್ಕೆ ತೀವ್ರ ಎಚ್ಚರಿಕೆ ನೀಡಿದರು. ಹಿಮಾವೃತ ಬೆಟ್ಟಗಳಲ್ಲಿ ಪಾಕಿಸ್ತಾನದ ಗನ್ನುಗಳು ಸದ್ದು ಮಾಡಿದವು. ರಿಂಚೆನ್ ಪಡೆಗೆ ಈಗ ಕೈತುಂಬ ಕೆಲಸ. ಸೈನ್ಯ ಪಾಕೀ ಪಡೆಯನ್ನು ಮೆಟ್ಟಿ, ಹಿಮ್ಮೆಟ್ಟಿಸಲು ಲಡಾಖ್ ಸ್ಕೌಟ್ಗೆ ಜವಾಬ್ದಾರಿ ವಹಿಸಿತು. ನಾಳೆ ಬೆಳಗ್ಗೆ ಪಶ್ಚಿಮದತ್ತ ಹೊರಡಲು ಸಿದ್ಧರಾಗಿಎಂಬ ಆದೇಶ ಬಂತು.
೪೦ರ ತರುಣ ರಿಂಚೆನ್ ಯುದ್ಧದ ಯೋಜನೆಯಲ್ಲಿ ನಿಷ್ಣಾತ. ಅವನದು ಓದಿಕೊಂಡ ಮೇಜರ್ಗಳಂತಹ ನಿರ್ಧಾರವಲ್ಲ. ಅಡ್ಡದಾರಿಗಳನ್ನು ಹಿಡಿಯುವುದೇ ಹೆಚ್ಚು. ಸ್ಥಳೀಯರನ್ನು ಒಲಿಸಿಕೊಂಡೇ ಅವನ ಯುದ್ಧದ ಮೊದಲ ಹೆಜ್ಜೆ. ಊಟ, ತಿಂಡಿ, ಸೂಪುಗಳ ಕೊರತೆಯಾಗಬಾರದಲ್ಲ, ಅದಕ್ಕೇ. ಬೆಳಿಗ್ಗೆಯೇ ರಿಂಚೆನ್ನ ಪಡೆ ಜೀಪುಗಳಲ್ಲಿ ಹೊರಟು ೪೦ ಕಿ.ಮೀ. ನಂತರ ಅಷ್ಟೇ ದೂರ ನಡೆದು ಬೈಗ್ದಾಂಗ್ಡೊ ತಲುಪಿಕೊಂಡವು. ಅಲ್ಲಿಂದಾಚೆಗೆ ಪಾಕ್ ಪಡೆಗಳ ಮೇಲೆ ಮುಗಿಬೀಳಲು ಎರಡು ಮಾರ್ಗವಿತ್ತು. ಎಂದಿನಂತೆ ಶ್ಯೋಕ್ ನದಿ ದಾಟಬೇಕು. ಇಲ್ಲವೇ ಕಡಿದಾದ ಬೆಟ್ಟವೇರಿ ತದುಕಬೇಕು. ಓದಿಕೊಂಡವರೆಲ್ಲ ನದಿ ದಾಟೋಣವೆಂದರು. ರಿಂಚೆನ್ ಒಪ್ಪಲಿಲ್ಲ. ನದಿಯ ಆ ಬದಿಯಲ್ಲಿ ಪಾಕಿಗಳು ಮೈನ್ಗಳನ್ನು ಹುದುಗಿಸಿಟ್ಟು ಕಾಯುತ್ತಿರುತ್ತಾರೆ. ಬೆಟ್ಟ ಹತ್ತೋಣ ಎಂದ. ಆ ಬೆಟ್ಟವನ್ನು ಅದಾಗಲೇ ಬಹಳ ಬಾರಿ ಹತ್ತಿಯಾಗಿತ್ತು. ಬೆಟ್ಟ ಹತ್ತುವ ಮುನ್ನ ಸೈನ್ಯಕ್ಕೆ ಕೊಡಲಾಗಿದ್ದ ಸ್ಟೀಲ್ ಹೆಲ್ಮೆಟ್ಗಳನ್ನು ತೆಗೆಸಿ ಮಂಕಿ ಕ್ಯಾಪ್ಗಳನ್ನು ಹಾಕಿಸಿದ. ಸೇನೆಯ ಬೂಟುಗಳನ್ನು ಬೇಡವೆಂದು ಲಡಾಖಿ ಶೂ ತೊಡಿಸಿದ. ಈ ಡಾಖಿ ಶೂಭಾರವೂ ಕಡಿಮೆ, ಅಷ್ಟೇ ಬೆಚ್ಚಗಿರುತ್ತದೆಂದು ಅವನಿಗೆ ಗೊತ್ತಿತ್ತು. ಹಿರಿಯ ಅಧಿಕಾರಿಗಳಿಗೆಲ್ಲ ಇವನ ಪದ್ಧತಿ ಹುಚ್ಚಿನದೆನ್ನಿಸಿದರೂ ಇವನ ಮೇಲೆ ಅಗಾಧ ವಿಶ್ವಾಸ ಇರಿಸಿದ್ದರಿಂದ ಯಾರೂ ಮರು ಮಾತಾಡಲಿಲ್ಲ. ರಿಂಚೆನ್ ಹಾಸಿಗೆಯನ್ನು, ಊಟ ತಿಂಡಿಯನ್ನು, ಕೊನೆಗೆ ಹೆಚಿಚನ ಮದ್ದುಗುಂಡುಗಳನ್ನೂ ಬೇಡವೆಂದುಬಿಟ್ಟ. ಜೊತೆಗಿದ್ದವರು ಅಚ್ಚರಿಗೊಂಡರು. ರಿಂಚೆನ್ ನಗುನಗುತ್ತ ಗುಡ್ಡದ ಮೇಲೆ ನಮ್ಮನ್ನು ಕಂಡಾಕ್ಷಣ ಪಾಕೀ ಸೈನಿಕರು ಹೆದರಿ ಓಡುತ್ತಾರೆ. ಅವರು ಬಿಟ್ಟು ಹೋಗುವುದೆಲ್ಲ ನಮಗೆ ಉಡುಗೊರೆಯೇ ಅಲ್ಲವೆ?ಎಂದ. ಯುದ್ಧಕ್ಕೆ ಹೊರಡುವ ಮುನ್ನವೇ ರಿಂಚೆನ್ ಯುದ್ಧ ಗೆದ್ದಾಗಿತ್ತು. ನೀರಿನ ಬಾಟಲಿಗಳಲ್ಲಿ ಅರ್ಧ ನೀರು, ಉಳಿದರ್ಧ ರಮ್ ತುಂಬಿಸಿಕೊಂಡ. ಹೀಗೇಕೆಂದು ಕೇಳಿದ್ದಕ್ಕೆ ಆಗ ನೀರು ಚಳಿಗೆ ಗೆಡ್ಡೆ ಕಟ್ಟುವುದಿಲ್ಲ ಎಂದ. ರಿಂಚೆನ್ನ ಹೆಜ್ಜೆಗಳು ಹಿರಿಯ ಅಧಿಕಾರಿಗಳಲ್ಲಿ ಭರವಸೆ ತುಂಬಿದವು.
ಬೆಟ್ಟ ಹತ್ತಲಾರಂಭಿಸಿದಾಗ ವಿಪರೀತ ಮಂಜು ಸುರಿಯುತ್ತಿತ್ತು. ಪಾಕಿಸ್ತಾನದ ಗುಂಡುಗಳೂ ಕೂಡ. ಮೇಜರ್ ಅಹ್ಲುವಾಲಿಯಾ ಗುಡ್ಡದ ಹಿಂಬದಿಗೆ ಹೋದರು. ರಿಂಚೆನ್ ಮುಂದಿನಿಂದ ಹತ್ತಲಾರಂಭಿಸಿದ. ಅದೇನೆನ್ನಿಸಿತೋ ರಿಂಚೆನ್ ಪಾಕ್ ಠಾಣ್ಯದ ಹತ್ತಿರ ಬಂದೊಡನೆ ಬೆಟ್ಟದ ಮೆಲಿಂದ ಗ ಶರಣಾದರೆ ಒಳ್ಳೆಯದು. ಇಲ್ಲವಾದರೆ ನಿಮ್ಮನ್ನೆಲ್ಲ ಕೊಂದು ಹಾಕುತ್ತೇವೆಎಂದ. ಶತ್ರು ಸೈನಿಕರು ಕಕ್ಕಾಬಿಕ್ಕಿಯಾದರು. ಸದ್ದು ಬಂದೆಡೆ ಗಾಬರಿಯಿಂದ ನೋಡಿದರು. ಅಷ್ಟರಲ್ಲಿಯೇ ಹಿಂಭಾಗದಿಂದ ಬಂದ ಅಹ್ಲುವಾಲಿಯಾ ಶತ್ರು ಸೈನಿಕರ ಸಮಾಧಿ ಮಾಡಿಯೇಬಿಟ್ಟರು. ಮತ್ತೊಮ್ಮೆ ಕಿ ಕಿ ಸೋ ಸೋ ಲಾ ಗ್ಯಾಲೋಕೇಳಿಬಂತು. ಆಯಕಟ್ಟಿನ ಬೆಟ್ಟ ನಮ್ಮ ಕೈಗೆ ಮರಳಿತ್ತು.
ಒಂದು ದಿನ ಕಳೆಯುತ್ತಿದ್ದಂತೆ ಬೆಟ್ಟದ ಬುಡದಲ್ಲಿನ ಪಾಕ್ ಆಯಕಟ್ಟಿನ ಠಾಣ್ಯದತ್ತ ಸೈನಿಕರು ಉರುಳಲಾರಂಭಿಸಿದರು. ಬೆಟ್ಟ ಅದೆಷ್ಟು ಸವಾಲಿನದಾಗಿತ್ತೆಂದರೆ, ಕೇವಲ ೩೦೦ ಮೀಟರ್ ಸಾಗಲು ಎರಡು ತಾಸು ಹಿಡಿದಿತ್ತು. ಅಲ್ಲಿಗೆ ತಲುಪಿದಾಗ ಗೆಲುವು ಕಾದಿತ್ತು. ತಮ್ಮ ಅತ್ಯಂತ ಪ್ರಮುಖ ಠಾಣ್ಯವನ್ನು ಪಾಕ್ ಸೈನಿಕರು ಭೀತಿಯಿಂದ ತೊರೆದು ಓಡಿಹೋಗಿದ್ದರು! ಅಪಾರ ಪ್ರಮಾಣದ ಆಹಾರ, ಶಸ್ತ್ರಾಸ್ತ್ರಗಳ ದಾಸ್ತಾನು ನಮ್ಮವರ ಕೈಸೇರಿತು. ಮುಂದಿನ ಗುರಿ, ಚುಲುಂಖಾ ರಕ್ಷಣಾ ಸಂಕೀರ್ಣ
ರಿಂಚೆನ್ ಮತ್ತೆ ಅಸಾಂಪ್ರದಾಯಿಕ ಹಾದಿಯನ್ನೆ ಬಳಸಿ ಶತ್ರುಸೇನೆಯೊಳಕ್ಕೆ ನುಗ್ಗಿಹೋದ. ಮೇಜರ್ ಥಾಪಾ ರಿಂಚೆನ್ನ ಜೊತೆಜೊತೆಯಲ್ಲಿ ಕಾದಾಡಿದ. ಶತ್ರು ಅಧಿಕಾರಿಗಳು ಸೆರೆ ಸಿಕ್ಕರು. ಅನೇಕರು ನುನ್ನುಗಳ ಬಾಯೋನೆಟ್ಟಿಗೆ ಬಲಿಯಾದರು. ಸೈನ್ಯದ ಈ ಗೆಲುವು ಅತ್ಯಂತ ಮಹತ್ವದ್ದಾಗಿತ್ತು. ಇಲ್ಲಿಂದಾಚೆಗೆ ಭಾರತ, ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿತು. ಈಗ ನಾವು ಕಾಲಿಟ್ಟ ಜಾಗವೆಲ್ಲ ನಮ್ಮದೇ ಆಸ್ತಿ. ಮೋಸದಿಂದ ಕಳಕೊಂಡ ಜಾಗವನ್ನು ಛಾತಿಯಿಂದ ಪಡಕೊಳ್ಳುವ ಅವಕಾಶ. ರಿಂಚೆನ್ ತನ್ನ ಪಡೆಯನ್ನು ಕರೆದು, ಭೂಪಟ ತೋರಿಸಿ ಮುಂದಿನ ಗುರಿ ತುರ್ತುಕೆಂದ. ಗೆಲುವಿನ ಸವಿ ನಶೆಯಿದ್ದಂತೆ. ಅದರಿಂದ ಮುಕ್ತರಾಗಲು ಯಾರೂ ಬಯಸಲಾರರು.
ತುರ್ತುಕ್ನತ್ತ ಕಾಲಿಟ್ಟವರಿಗೆ ಪಾಕಿಸ್ತಾನದ ಸೇನೆ ಭಯಾನಕ ಸ್ವಾಗತವನ್ನೆ ಕೋರಿತು. ಅವರ ದಾಳಿಯನ್ನು ನೋಡಿದರೆ ಅವರು ಭಾರೀ ಸಂಖ್ಯೆಯಲ್ಲಿರುವಂತೆ ಅನ್ನಿಸುತ್ತಿತ್ತು. ಆದರೆ ಪಾಕಿಗಳ ಬುದ್ಧಿ ಅರಿತಿದ್ದ ರಿಂಚೆನ್ ಪ್ರತಿದಾಳಿ ನಡೆಸುತ್ತ ನುಗ್ಗಿದ. ಅಂದಿನ ರಾತ್ರಿ ಶತ್ರುಗಳ ಗುಂಡಿನ ಮೊರೆತ ಕಡಿಮೆಯಗುತ್ತ ಸಾಗಿ, ಕೊನೆಗೆ ನಿಂತೇ ಹೋಯ್ತು. ಭಾರತದ ಸೇನೆ ತುರ್ತುಕ್ನ ಒಲಗೆ ನುಗ್ಗಿ ನೋಡಿದರೆ, ಎಲ್ಲವೂ ಖಾಲಿ ಖಾಲಿ. ಎಂದಿನಂತೆ ಪಾಕಿಗಳು ಓಡಿಹೋಗಿದ್ದರು.
ರಿಂಚೆನ್ ಆ ಊರಿನ ಒಂದು ಮನೆ ಹೊಕ್ಕ. ಭಾರತೀಯ ಸೈನಿಕರ ಬಗ್ಗೆ ಅವರು ಭಯಭೀತರಾಗಿದ್ದಾರೆಂದು ಅರಿತ. ಊರಿನವರನ್ನೆಲ್ಲ ಸೇರಿಸಿ, sಯ ಬೇಡ, ನಾವು ಮಿತ್ರರುಅಂದ. ಅಷ್ಟರಲ್ಲಿ ಹಳ್ಳಿಯವನೊಬ್ಬ ರಿಂಚೆನ್ ಬಳಿ ಬಂದು ನು ಸುಮರ್ನ ಕುಂಜಾಂಗ್ನ ಮಗನಲ್ಲವೆ?ಎಂದ. ಅಲ್ಲಿಗೆ, ರಿಂಚೆನ್ಗೆ ಊರಿನವರ ಮೇಲೂ ವಿಜಯ ಸಿಕ್ಕಿತ್ತು. ಪಾಕ್ ಸೈನಿಕರು ಭಾರತೀಯ ಸೇನೆಯ ಮೇಲೆ ಮಾಡಿದ್ದೆಲ್ಲ ಬರೀ ಅಪಪ್ರಚಾರ ಎಂದು ಮನದಟ್ಟಾಯ್ತು. ಭೀತಿಯಿಂದ ಊರು ತೊರೆದಿದ್ದ ಹೆಂಗಸರೆಲ್ಲರು ಮರಳಿ ಬಂದರು. ೨೩ ವರ್ಷಗಳ ನಂತರ ಆ ಹಳ್ಳಿ ಭಾರತದ ತೆಕ್ಕೆಗೆ ಬಂದು ಉಸಿರಾಡಲಾರಂಭಿಸಿತ್ತು.
ಅಲ್ಲಿಂದ ಏಳೆಂಟು ದಿನ ಕಾದಾಡುತ್ತಾ ರಿಂಚೆನ್ ಸೇನೆ ಬಾಲ್ಟಿಸ್ತಾನದ ಹೊಸ್ತಿಲಿಗೆ ಬಂದು ನಿಂತಿತ್ತು. ಆದರೆ ಅಷ್ಟರಲ್ಲಿಯೇ ನಮ್ಮ ಸರ್ಕಾರ ಶರಣಾದ ಪಾಕ್ ಸೇನೆಯೊಂದಿಗೆ ಯುದ್ಧ ವಿರಾಮ ಘೋಷಿಸಿತು. ಛೆ! ಇನ್ನೊಂದೇ ದಿನ ಬಿಟ್ಟಿದ್ದರೆ ಬಾಲ್ಟಿಸ್ತಾನ ನಮಗೆ ಮರಳಿ ದೊರೆತಿರುತ್ತಿತ್ತು. ಆಗ ಪಾಕಿಸ್ತಾನಕ್ಕೆ ಸಿಯಾಚೆನ್ ಬುಡ ದಕ್ಕುತ್ತಿರಲಿಲ್ಲ. ನಮ್ಮ ಸೈನಿಕರು ನೆಮ್ಮದಿಯಿಂದ ಇರುವುದು ಸಾಧ್ಯವಾಗುತ್ತಿತ್ತು.
ಬಿಡಿ.. ನಮ್ಮ ಹೀರೋ ರಿಂಚೆನ್ಗೆ ಮತ್ತೊಂದು ಮಹವೀರ ಚಕ್ರ ಬಂತು. ಸೇನೆಯಲ್ಲಿ ಬಡ್ತಿ ಕೊಡಲು ಆತನ ಬಳಿ ಶಿಕ್ಷಣದ ಸರ್ಟಿಫಿಕೇಟ್ ಇಲ್ಲದಿರುವುದೇ ಅಡ್ಡಿಯಾಯ್ತು. ಕರ್ನಲ್ ಮಾಡೋಣವೆಂದರೆ, ಪ್ರಚಲಿತ ವಿದ್ಯಮಾನಗಳ ಪರೀಕ್ಷೆಯಲ್ಲಿ ಆತ ಎಂದಿಗೂ ಪಾಸ್ ಆಗಲೇ ಇಲ್ಲ. ಮೇಜರ್ ಆಗಿಯೇ ಕಾಲ ತಳ್ಳಿದ ರಿಂಚೆನ್ಗೆ ನಿವೃತ್ತಿಗೆ ಕೆಲವು ವರ್ಷಗಳ ಮುನ್ನ ಗೌರವ ಕರ್ನಲ್ ಆಗಿ ಬಡ್ತಿ ನೀಡಲಾಯ್ತು. ಕರ್ನಲ್ ರಿಂಚೆನ್ ಹೆಸರಿಗೆ ತಕ್ಕಂತೆ ಬದುಕಿದ.
ಹೌದು.. ಲಡಾಖಿ ಭಾಷೆಯಲ್ಲಿ ರಿಂಚೆನ್ ಅಂದರೆಜೀವಕಳೆಯಿಂದ ತುಂಬಿದವನು ಎಂದರ್ಥ. ಚೆವಾಂಗ್ ಅಂದರೆ ರೋಅಂತ. ಹೌದಲ್ಲವೆ? ಬರಿಯ ಹೀರೋ ಅಲ್ಲ ಆತ, ಜೀವಕಳೆಯಿಂದ ಲಕಲಕಿಸುವ ಹೀರೋ!
lekhana oduttiddar mymana romanchanagolluttade .dhanyavadagalu.viswanath
lekhana oduva modalu enidu lekhana anta kutoohalavittu….odidamele namma sainikara mele poojyate ide….dhanyavaadagalu lekhanakke swamy…
Realy Great …. We greatful to Indian Army…
great Hindhustani
awesome article sir…….please keep posting such inspiring incidents ….i didn’t know this much about our soldiers..hats off to them!!!…mera bharat maahan…..
Really great mr. Rinchen.