‘ಕೈ’ಗೇ ಬಿಟ್ಟಿದ್ದರೆ ಆತಿಕ್ ಇಲ್ಲೂ ಇರುತ್ತಿದ್ದ!

‘ಕೈ’ಗೇ ಬಿಟ್ಟಿದ್ದರೆ ಆತಿಕ್ ಇಲ್ಲೂ ಇರುತ್ತಿದ್ದ!

ಅಸದ್ ಅಹ್ಮದ್ ಮತ್ತು ಗುಲಾಮ್ ಮೊಹಮ್ಮದ್ ಇವರಿಬ್ಬರ ಎನ್ಕೌಂಟರ್ ಉತ್ತರ ಪ್ರದೇಶದಲ್ಲಿ ಆಗುತ್ತಿದ್ದಂತೆ ದೇಶದೆಲ್ಲೆಡೆ ಸಂಚಲನ ಮೂಡಿತ್ತು. ಅದರ ಕುರಿತಂತೆ ಲೇಖನ ಬರೆಯಬೇಕು ಎನ್ನುವಷ್ಟರಲ್ಲಿ ಅವರಪ್ಪ ಆತಿಕ್ ಅಹಮ್ಮದ್‌ನ ಹೆಣ ಬಿದ್ದಿದೆ. ಮೇಲ್ನೋಟಕ್ಕೆ ಇದು ಬಾಡಿಗೆ ಹಂತಕರು ಮಾಡಿರುವ ಹತ್ಯೆ ಎಂಬುದು ಗೋಚರವಾಗುತ್ತದಾದರೂ ಅನೇಕ ಮಾಧ್ಯಮಮಂದಿ ಮತ್ತು ಭಯೋತ್ಪಾದಕರ ಕುರಿತಂತೆ ಅನುಕಂಪ ಹೊಂದಿರುವ ಮಂದಿ ಯೋಗಿ ಆದಿತ್ಯನಾಥರ ಕೈವಾಡವೆಂದು ಶಂಕಿಸುತ್ತಿದ್ದಾರೆ. ಆದರೆ ಒಂದಂತೂ ನಿಜ. ಆತಿಕ್‌ನ ಸಾವು ಬರಲಿರುವ ಘೋರ ವಿಪತ್ತಿನ ಸಣ್ಣ ಮುನ್ಸೂಚನೆ ಎಂದೆನಿಸುತ್ತದೆ. ಲೇಖನದುದ್ದಕ್ಕೂ ಅದು ಹೇಗೆಂದು ವಿವರಿಸಲು ಯತ್ನಿಸುವೆ. 

ಹಾಗೆ ನೋಡಿದರೆ ಆತಿಕ್ ಸಂತನೇನೂ ಅಲ್ಲ. ಪಾಲ್ಘರ್‌ನಲ್ಲಿ ಸಾಧುಗಳ ಹತ್ಯೆಯಾದಾಗ ಮಿಸುಕಾಡದ ಮಂದಿಯೆಲ್ಲ ಆತಿಕ್‌ನ ಹತ್ಯೆಯ ಕುರಿತಂತೆ ವ್ಯಕ್ತಪಡಿಸುತ್ತಿರುವ ಅನುಕಂಪದ ಪ್ರಮಾಣವನ್ನು ನೋಡಿದರೆ, ಅವರೆಲ್ಲರ ಪಾಲಿಗೆ ಆತ ಮಹಾತ್ಮಾ ಗಾಂಧೀಯೇನೊ ಎನಿಸುತ್ತಿದೆ. 43 ವರ್ಷಗಳಲ್ಲಿ ಆತಿಕ್‌ನ ಮೇಲೆ ನೂರಕ್ಕೂ ಹೆಚ್ಚು ಕೇಸುಗಳು ದಾಖಲಾಗಿವೆ. ಇದರಲ್ಲಿ ಅಪಹರಣ, ಮಾನಭಂಗ, ದರೋಡೆಯಂಥವಲ್ಲದೇ ಕೊಲೆ ಪ್ರಕರಣಗಳೂ ಇವೆ. ಈ 43 ವರ್ಷಗಳಲ್ಲಿ ಅವನನ್ನು ಒಂದೇ ಒಂದು ಕೇಸಿನಲ್ಲಿ ಜೈಲಿಗೆ ತಳ್ಳುವುದು ಸಾಧ್ಯವಾಗಿರಲಿಲ್ಲ. ಆತನ ಕೇಸನ್ನು ಕೈಗೆತ್ತಿಕೊಳ್ಳುವುದಿಲ್ಲವೆಂದು ಅನೇಕ ಬಾರಿ ನ್ಯಾಯಾಧೀಶರುಗಳೇ ಕೈಚೆಲ್ಲಿ ಎದ್ದುಹೋದ ಉದಾಹರಣೆಯಿದೆ. ಯಾವುದಾದರೂ ಒಬ್ಬ ನ್ಯಾಯಾಧೀಶರು ಧೈರ್ಯ ಮಾಡಿ ವಿಚಾರಣೆಗೆ ನಿಂತರೆ ಅವನಿಗೆ ಜಾಮೀನು ಕೊಟ್ಟು ಮನೆಗೆ ಕಳಿಸುವುದಷ್ಟೇ ಅಲ್ಲದೇ ಬೇರೇನೂ ಮಾಡುತ್ತಿರಲಿಲ್ಲ. ನಿಮಗೆ ಅಚ್ಚರಿಯಾಗಬಹುದು. ಈ ಕೊಲೆಗಡುಕ ಐದು ಬಾರಿ ಶಾಸಕನಾಗಿದ್ದ! ಮೂರು ಬಾರಿ ಪಕ್ಷೇತರನಾಗಿ, ಒಮ್ಮೆ ಸಮಾಜವಾದಿ ಪಾರ್ಟಿಯಿಂದ, ಮತ್ತೊಮ್ಮೆ ಅಪ್ನಾದಲ್ ಪಾರ್ಟಿಯಿಂದ ಆಯ್ಕೆಯಾಗಿದ್ದ. 2004ರಲ್ಲಿ ಸಮಾಜವಾದಿ ಪಕ್ಷದಿಂದಲೇ ಸಂಸತ್ ಸದಸ್ಯನಾಗಿದ್ದ ಈತ ಪಾರ್ಟಿ ಹೊರಹಾಕಿದ ಮೇಲೆ 2009ರಲ್ಲಿ ಅಪ್ನಾದಲ್‌ನಿಂದ ಆಯ್ಕೆಯಾಗಿದ್ದ. 2012ರಲ್ಲಿ ಜೈಲಿನಿಂದಲೇ ಸ್ಪರ್ಧಿಸಿ 2005ರಲ್ಲಿ ತಾನೇ ಕೊಂದಿದ್ದ ರಾಜು ಪಾಲ್‌ ಪತ್ನಿಯ ಎದುರು ಸೋತಿದ್ದ. 2014ರಲ್ಲಿ ಸಮಾಜವಾದಿ ಪಕ್ಷ ಇಂತಹ ಕೊಲೆಗಡುಕ ಕ್ರಿಮಿನಲ್‌ನನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಂಡು ಸಂಸತ್ ಸದಸ್ಯನನ್ನಾಗಿಸುವ ಪ್ರಯತ್ನ ಮಾಡಿತ್ತು. ಮೋದಿ ಸುನಾಮಿಯಲ್ಲಿ ಅನೇಕ ಆತಿಕ್‌ಗಳು ಕೊಚ್ಚಿಹೋದರು. 

ಈಗ ಆತಿಕ್ ಸುದ್ದಿಯಾಗುತ್ತಿರುವುದೇಕೆಂದರೆ 2005ರಲ್ಲಿ ತನ್ನ ತಮ್ಮನ ವಿರುದ್ಧ ಸ್ಪರ್ಧಿಸಿ ಗೆದ್ದಿದ್ದ ರಾಜುಪಾಲ್‌ನನ್ನು ಈತ ಶೂಟ್ಔಟ್‌ನಲ್ಲಿ ಕೊಂದಿದ್ದ. ಪ್ರತ್ಯಕ್ಷವಾಗಿ ಇದನ್ನು ನೋಡಿದ್ದ ಉಮೇಶ್ ಪಾಲ್ ಪೊಲೀಸರಿಗೆ ಎಲ್ಲ ವಿವರಗಳನ್ನೂ ಕೊಟ್ಟಮೇಲೆ, ಅಂದಿನ ಡಿಜಿಪಿ ಓಪಿಸಿಂಗ್ ಇವನ ಠಾಣ್ಯವನ್ನು ಹುಡುಕಿ ತನ್ನ ಪಡೆಯೊಂದಿಗೆ ಸುತ್ತುವರೆದು ನಿಂತಿದ್ದರು. ಕೆಲವೇ ನಿಮಿಷಗಳಲ್ಲಿ ಪೊಲೀಸರ ಸುತ್ತಲೂ ಆತಿಕ್ನ ಪಡೆ ಆಧುನಿಕ ಶಸ್ತ್ರಾಸ್ತ್ರಗಳೊಂದಿಗೆ ತೊಡೆ ತಟ್ಟಿಕೊಂಡು ನಿಂತುಬಿಟ್ಟಿತು. ಓಪಿಸಿಂಗ್ ನೇರವಾಗಿ ಆತಿಕ್‌ನನ್ನೇ ಹಿಡಿದು, ಪೊಲೀಸರ ಮೈಗೆ ಕೆರೆದ ಗಾಯವಾದರೂ ಇವನನ್ನು ಉಡಾಯಿಸಿಬಿಡುತ್ತೇನೆ ಎಂದಿದ್ದರು. ಎಲ್ಲವೂ ಥೇಟು ಸಿನಿಮಾದಂತೆಯೇ. ಆತನನ್ನು ಬಂಧಿಸಿ ಎಳೆದು ತರಬೇಕೆನ್ನುವಷ್ಟರಲ್ಲಿ ಸರ್ಕಾರದ ಪ್ರಮುಖ ಹುದ್ದೆಯಲ್ಲಿರುವ ಮಂದಿ ಒತ್ತಡ ತಂದು ಆತಿಕ್‌ನನ್ನು ಬಿಡಿಸಿಕೊಂಡರು! ಇತ್ತೀಚೆಗೆ ಓಪಿಸಿಂಗ್ ಇವೆಲ್ಲವನ್ನೂ ವಿವರವಾಗಿ ಹೇಳಿದ್ದಾರೆ. ತನ್ನ ವಿರುದ್ಧ ಇರಬಹುದಾಗಿದ್ದ ಸಾಕ್ಷಿ ಉಮೇಶ್ ಪಾಲ್‌ನನ್ನು ಮರುಕ್ಷಣವೇ ಅಪಹರಿಸಿ ತಂದ ಆತಿಕ್ ಹೊಡೆದು-ಬಡಿದು ಪೊಲೀಸರಿಗೆ ಆತ ಕೊಟ್ಟ ಹೇಳಿಕೆಗೆ ವಿರುದ್ಧವಾದ ಹೇಳಿಕೆಯನ್ನು ಬರೆಸಿಕೊಂಡ. ಉಮೇಶ್ ಪಾಲ್ ಕೂಡ ಕಡಿಮೆ ಆಸಾಮಿಯಲ್ಲ. ಅವರಿಂದ ಬಿಡುಗಡೆಯಾಗಿ ಬಂದವನೇ ನೇರ ಪೊಲೀಸರ ಬಳಿಸಾರಿ ನಡೆದುದೆಲ್ಲವನ್ನೂ ಹೇಳಿ ಆತಿಕ್‌ನ ಕೊರಳಿಗೆ ಉರುಳನ್ನು ಗಟ್ಟಿಯಾಗಿಯೇ ಬಿಗಿದ. 

ಕಳೆದ ಫೆಬ್ರವರಿ ತಿಂಗಳಲ್ಲಿ ಉಮೇಶ್ ಪಾಲ್‌ನ ಹೇಳಿಕೆಯಿಂದಾಗಿ ಅತ್ಯಂತ ಕಠಿಣ ಶಿಕ್ಷೆಗೆ ಗುರಿಯಾಗಿರುವ ಆತಿಕ್‌ನ ಇಂದಿನ ಪರಿಸ್ಥಿತಿಗೆ ಪ್ರತೀಕಾರವಾಗಿ ಅವನ ಮಗ ಅಸದ್ ಉಮೇಶ್‌ನನ್ನು ಮುಗಿಸುವ ಸಂಚು ರೂಪಿಸಿದ. ಪೊಲೀಸರು ಆನಂತರ ಇವರೆಲ್ಲರನ್ನೂ ಬಂಧಿಸಿದಾಗ ಇವರ ಯೋಜನೆಯ ಒಟ್ಟಾರೆ ರೂಪುರೇಷೆಗಳು ಹೊರಬಂದಿದೆ. 12 ಐಫೋನ್‌ಗಳನ್ನು ಆತಿಕ್‌ನ ಹೆಂಡತಿ ಯೋಜನೆಯಲ್ಲಿ ಭಾಗಿಯಾದವರಿಗೆಲ್ಲ ಕೊಡಿಸಿದ್ದಳು. ಪ್ರತಿಯೊಬ್ಬರೂ ತಮಗೆ ಪ್ರತ್ಯೇಕ ಗುಪ್ತನಾಮ ಕೊಟ್ಟುಕೊಂಡಿದ್ದರು. ಸಲ್ಮಾನ್ ಖಾನನ ಆರಾಧಿಸುತ್ತಿದ್ದ ಅಸದ್ ತನ್ನ ಹೆಸರನ್ನು ರಾಧೆ ಎಂದಿಟ್ಟುಕೊಂಡಿದ್ದನಂತೆ. ಸಲ್ಮಾನನ ಇತ್ತೀಚಿನ ಸಿನಿಮಾದ ಹೆಸರು ಅದು. ಇವರೆಲ್ಲರೂ ಐ ಮೆಸೇಜ್‌ಗಳ ಮೂಲಕ ಮಾತ್ರ ಚರ್ಚೆ ನಡೆಸುತ್ತಿದ್ದರು. ಗುಂಡು ಹೊಡೆಯುವವ, ಬಾಂಬ್ ಎಸೆಯುವವ, ಚಲನ-ವಲನಗಳ ಮಾಹಿತಿ ನೀಡುವವ, ಹೀಗೆ ಎಲ್ಲರಿಗೂ ಪ್ರತ್ಯೇಕವಾದ ಜವಾಬ್ದಾರಿ ನೀಡಲಾಗಿತ್ತು. ಉಮೇಶ್‌ಪಾಲ್‌ನ ಮೇಲೆ ಇವರು ದಾಳಿ ಮಾಡುವಾಗ ಎಲ್ಲ ಎಚ್ಚರಿಕೆಯನ್ನೂ ಇಟ್ಟುಕೊಂಡಿದ್ದರಾದರೂ ಸಿಕ್ಕ ಸಿಸಿಟಿವಿ ಕಡತಗಳ ಆಧಾರದ ಮೇಲೆ ಪೊಲೀಸರು ಇವರ ವಿರುದ್ಧ ಬಲೆ ಬೀಸಿದರು. ಸದನದಲ್ಲಿ ಈ ಕುರಿತಂತೆ ಕೋಲಾಹಲವೆದ್ದಿತು. ಮಾಫಿಯಾ ಡಾನ್‌ಗಳನ್ನು ಸಾಕಿ ಸಲಹಿದ ಸಮಾಜವಾದಿ ಪಕ್ಷಕ್ಕೆ ಸರಿಯಾಗಿಯೇ ತಪರಾಕಿ ಕೊಟ್ಟ ಯೋಗಿ, ಪ್ರತಿಯೊಬ್ಬ ಗೂಂಡಾನನ್ನು ಹುಡುಹುಡುಕಿ ಕೊಲ್ಲಲಾಗುವುದು ಎಂದಿದ್ದರು. ಆದಷ್ಟು ಬೇಗ ಈ ಸಾವಿಗೆ ಕಾರಣರಾದ ಗೂಂಡಾಗಳನ್ನು ಹಿಡಿಯುವುದು, ಅಗತ್ಯವಿದ್ದರೆ ಮುಗಿಸಿಬಿಡುವುದು ಅತ್ಯವಶ್ಯಕವಾಗಿತ್ತು. ಪೊಲೀಸರು ಚುರುಕಾದರು. ಭಿನ್ನ-ಭಿನ್ನ ತಂಡಗಳನ್ನು ರಚಿಸಿಕೊಂಡು 40 ದಿನಗಳ ಕಾಲ ಈ ಗೂಂಡಾಗಳನ್ನು ಅಟ್ಟಿಸಿಕೊಂಡು ಹೋದರು. ಇತರರನ್ನು ಕೊಲ್ಲುವಾಗ ಮೆರೆದಾಡುತ್ತಿದ್ದ ಅಸದ್ ಮತ್ತವನ ಸಹಚರರು ಪೊಲೀಸರು ಅಟ್ಟಿಸಿಕೊಂಡು ಬಂದಾಗ ನೀರಲ್ಲದ್ದಿದ ಬೆಕ್ಕಿನಂತಾಗಿಬಿಟ್ಟಿದ್ದರು. ಈ ತಂಡದ ಸದಸ್ಯರನೇಕರ ಮನೆಗಳನ್ನು ಬುಲ್ಡೋಜ್ ಮಾಡಿದ ಬಾಬಾ ಗೂಂಡಾಗಳ ಎದೆಯಲ್ಲಿ ಭಯ ಅವತರಿಸುವಂತೆ ಮಾಡಿಬಿಟ್ಟರು. ಈ ವೇಳೆಗಾಗಲೇ ಆತಿಕ್‌ನ ಅನೇಕ ಸೋದರ ಸಂಬಂಧಿಗಳು ಜೈಲು ಸೇರಿಯಾಗಿತ್ತು. ಆತಿಕ್‌ನ ಹೆಂಡತಿ ಮತ್ತು ತಮ್ಮನ ಹೆಂಡತಿಯರು ಉಟ್ಟಬಟ್ಟೆಯಲ್ಲಿ ಊರುಬಿಟ್ಟು ಓಡಿ ಹೋಗಿದ್ದರು. ಒಂದು ಕಾಲದಲ್ಲಿ ಉತ್ತರಪ್ರದೇಶವೇ ತಮ್ಮದೆಂದು ಮೆರೆದಾಡುತ್ತಿದ್ದವರೆಲ್ಲ ಈಗ ಬದುಕಿದೆಯಾ ಬಡಜೀವವೇ ಎಂಬಂತಾಗಿದ್ದರು. ಇಂತಹ ಒಂದು ಹೊತ್ತಲ್ಲಿಯೇ ಪೊಲೀಸರ ಕೈಗೆ ಸಿಕ್ಕುಬಿದ್ದ ಅಸದ್ ಎರ್ರಾಬಿರ್ರಿ ಗುಂಡು ಹಾರಿಸತೊಡಗಿದ. ಪೊಲೀಸರು ಮುಲಾಜು ನೋಡದೇ ಅಸದ್ ಮತ್ತು ಗುಲಾಮ್ ಇಬ್ಬರನ್ನೂ ನಡುರಸ್ತೆಯಲ್ಲಿಯೇ ಹೆಣವಾಗಿಸಿಬಿಟ್ಟರು! ಇತ್ತ ಜೈಲಿನಲ್ಲಿದ್ದ ಆತಿಕ್, ‘ಈ ಕೃತ್ಯದಲ್ಲಿ ಭಾಗಿಯಾದ ಪೊಲೀಸರನ್ನು ನಾನು ಬಿಡುವುದಿಲ್ಲ. ಒಮ್ಮೆ ಜೈಲಿನಿಂದ ಹೊರಬಂದಮೇಲೆ ಗದ್ದಿಜಾತಿಯ ತಾಕತ್ತನ್ನು ತೋರಿಸುತ್ತೇನೆ’ ಎಂದಿದ್ದ. ಗಮನಿಸಬೇಕಾದ ಸಂಗತಿ ಇದು. ಸ್ವತಃ ವೈರ್ನ ಸಂಪಾದಕಿ ಅರ್ಫಾ ಖನ್ನುಂ ಆತಿಕ್ ಅಹ್ಮದ್‌ನನ್ನು ನಡೆಸಿಕೊಳ್ಳುತ್ತಿರುವ ರೀತಿ ಮುಸಲ್ಮಾನರಲ್ಲಿಯೇ ಹಿಂದುಳಿದ ಜಾತಿಯಾದ ಗದ್ದಿ ಜನಾಂಗದವರಿಗೆ ಮಾಡುತ್ತಿರುವ ಅವಮಾನ ಎಂದಿದ್ದಳು. ‘ನಾವೆಲ್ಲ ಒಂದೆ ಜಾತಿ, ಒಂದೆ ಕುಲ’ ಎನ್ನುವ ಮುಸಲ್ಮಾನರು ಇಂತಹ ಸಂದರ್ಭಗಳಲ್ಲಿ ಜಾತಿಯ ಕಾರ್ಡ್ ಬಳಸಲು ಹಿಂದೆ-ಮುಂದೆ ನೋಡುವುದಿಲ್ಲ. ಕೆಲವು ಪತ್ರಕರ್ತರು ಅದೆಷ್ಟು ಲಜ್ಜೆಗೆಟ್ಟವರೆಂದರೆ, ರಾಜ್‌ದೀಪ್ ಸರ್‌ದೇಸಾಯಿ ಲಲ್ಲನ್‌ಟಾಪ್‌ನ ಸಂದರ್ಶನವೊಂದರಲ್ಲಿ ಆತಿಕ್ ಮನೆಯಲ್ಲಿ ತಿಂದ ತಂದೂರಿ ಎಷ್ಟು ಚೆನ್ನಾಗಿತ್ತು ಎಂದು ವರ್ಣಿಸಿದ್ದ. ಮಾಫಿಯಾ ಡಾನ್‌ಗೂ ಒಂದೊಳ್ಳೆ ಮುಖವಿದೆ ಎಂದು ಹೇಳುವ ಪ್ರಯತ್ನ ಅದು. 

ಇಲ್ಲಿಯವರೆಗೂ ಎಲ್ಲವೂ ಸರಿಯೇ. ಆದರೆ ಆತಿಕ್‌ನ ಹತ್ಯೆಯಾದದ್ದು ಮಾತ್ರ ಗಾಬರಿ ಹುಟ್ಟಿಸುವಂಥದ್ದು. ಮಾಧ್ಯಮದ ಎದುರಿಗೆ, ಪೊಲೀಸರ ನಡುವೆಯೇ ಅತ್ಯಾಧುನಿಕ ಶಸ್ತ್ರ ಹಿಡಿದುಬಂದು ಆಕ್ರಮಣ ಮಾಡುತ್ತಾರೆಂದರೆ ಇದರ ಹಿಂದೆ ದೊಡ್ಡದೊಂದು ಪಿತೂರಿ ಇರಲೇಬೇಕು. ಇಷ್ಟಕ್ಕೂ ಭಾರತದಲ್ಲಿ ನಾಯಕತ್ವ ಬದಲಾವಣೆಗೆ ಅನೇಕ ರಾಷ್ಟ್ರಗಳು ಪ್ರಯತ್ನಿಸುತ್ತಿವೆ. ಇದಕ್ಕೆ ಪೂರ್ವಭಾವಿಯಾಗಿ ಅಮೇರಿಕಾ ಎರಿಕ್ ಗಾರ್ಸಿಟಿಯನ್ನು ರಾಯಭಾರಿಯಾಗಿ ಭಾರತಕ್ಕೆ ಕಳಿಸಿತು. ಆತನನ್ನು ಈ ಹುದ್ದೆನೀಡಿ ಕಳಿಸಬೇಕೆಂದು 2021ರ ಮಧ್ಯಭಾಗದಲ್ಲಿಯೇ ನಿಶ್ಚಯಿಸಲಾಗಿತ್ತು. ಆದರೆ ಅಮೇರಿಕಾದ ಸೆನೆಟ್‌ನಲ್ಲಿ ಬಹುಮತವಿರದಿದ್ದುದರಿಂದ ಬೈಡನ್ ತಡೆ ಹಿಡಿದಿದ್ದ. ಬಹುಮತ ಖಾತ್ರಿಯಾದೊಡನೆ ಭಾರತಕ್ಕೆ ಕಳಿಸುವ ನಿಶ್ಚಯ ಮಾಡಿದ. ಈ ಎರಿಕ್ ಲಾಸ್ ಏಂಜಲೀಸ್‌ನ ಮೇಯರ್ ಆಗಿದ್ದವ ಮತ್ತು ಅಲ್ಲಿನ ಬುದ್ಧಿಜೀವಿಗಳ ಕಣ್ಮಣಿ. ಆತನ ಪತ್ನಿಯೊಂದಿಗೆ ಸೇರಿ ಅನೇಕ ಪ್ರತಿಭಟನೆಗಳಲ್ಲಿ ಆತ ಪಾಲ್ಗೊಂಡಿದ್ದಾನೆ. ಸಿಎಎ ವಿರುದ್ಧ ಭಾರತದಲ್ಲಿ ಪ್ರತಿಭಟನೆ ನಡೆಯುವಾಗ ಗಂಡ-ಹೆಂಡತಿ ಇಬ್ಬರೂ ಪ್ರತ್ಯಕ್ಷ-ಪರೋಕ್ಷವಾಗಿ ಅದರಲ್ಲಿ ಭಾಗಿಯಾಗಿದ್ದರು. ಆತನನ್ನು ರಾಯಭಾರಿ ಎಂದು ಘೋಷಿಸಿದೊಡನೆ ಆತ ಹೇಳಿದ್ದೇನು ಗೊತ್ತೇ? ‘ನನ್ನ ಅತ್ಯಂತ ಪ್ರಮುಖವಾದ ಕೆಲಸವೇ ಸಿಎಎ ಬಗೆಯ ಕಾನೂನುಗಳನ್ನು ವಿರೋಧಿಸಿ ಭಾರತದಲ್ಲಿ ಮಾನವ ಹಕ್ಕುಗಳ ಸ್ಥಾಪನೆ ಮಾಡುವುದು. ಯಾರು ಮಾನವ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೋ ಅಂಥವರೊಡನೆ ನೇರವಾಗಿ ಮಾತುಕತೆಯಲ್ಲಿ ತೊಡಗುವುದು’ ಎಂದಿದ್ದ. ಇದರರ್ಥ ನೇರವಾಗಿ ಭಾರತದ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದು ಮತ್ತು ಮೋದಿ ವಿರೋಧಿಗಳನ್ನೆಲ್ಲ ತನ್ನ ದೂತಾವಾಸದ ಛತ್ರಛಾಯೆಯಲ್ಲಿ ಒಂದುಗೂಡಿಸುವುದು ಅಂತ! ಉಕ್ರೇನ್‌ನಲ್ಲಿ ಅಮೇರಿಕಾ ತನ್ನ ಪ್ರಭಾವ ಬಳಸಿ ಅಲ್ಲಿನ ರಾಷ್ಟ್ರೀಯವಾದಿ ಅಧ್ಯಕ್ಷನನ್ನು ಅಧಿಕಾರದಿಂದ ಕೆಳಗಿಳಿಸಿ ಕೈಗೊಂಬೆಯಾಗಿರುವ ಶತಮೂರ್ಖ ಜೆಲ್ಸೆಂಕಿಯನ್ನು ಕೂರಿಸಿತಲ್ಲ, ಭಾರತದಲ್ಲೂ ಹಾಗೆ ಮಾಡುವ ಯೋಜನೆ ಅದರದ್ದು. ಮೋದಿಯನ್ನು ಕೆಳಗಿಳಿಸಿದ ನಂತರ ಜೆಲ್ಸೆಂಕಿಯಷ್ಟೇ ಮೂರ್ಖನೂ ಮತ್ತು ಕೈಗೊಂಬೆಯೂ ಆಗಬಲ್ಲ ನಾಯಕ ಯಾರಿರಬಹುದು ಹೇಳಿ?

ಅಮೇರಿಕಾ ಭಾರತದಲ್ಲಿ ದೊಡ್ಡ ತಳಮಳವನ್ನು ಸೃಷ್ಟಿಸುವ ಧಾವಂತದಲ್ಲಿದೆ. ಸಿಎಎ ವಿರುದ್ಧದ ಹೋರಾಟ ಅದಕ್ಕೊಂದು ಅಸ್ತ್ರವಾಗಿ ದೊರಕಿತ್ತು. ಸರ್ಕಾರ ಅದನ್ನು ನಿಭಾಯಿಸಿದ ರೀತಿ ಮತ್ತು ಅದನ್ನು ಜಾರಿಗೆ ತರುವಲ್ಲಿ ಅನುಸರಿಸುತ್ತಿರುವ ವಿಳಂಬ ನೀತಿಯಿಂದಾಗಿ ಅಮೇರಿಕಾ ಪತರಗುಟ್ಟಿದೆ. ಹೀಗಾಗಿಯೇ ಅನವಶ್ಯಕವಾಗಿ ರಾಮನವಮಿಯ ಮೆರವಣಿಗೆಯ ಮೇಲೆ ಕಲ್ಲೆಸೆದು ಹಿಂದೂಗಳನ್ನು ಭಡಕಾಯಿಸುವ ಯೋಜನೆ ರೂಪಿಸುತ್ತಿರೋದು. ಪಿಎಫ್ಐ ನಿಷೇಧದ ನಂತರ ಈ ಯೋಜನೆಗಳನ್ನೆಲ್ಲ ನೇರವಾಗಿ ಕಾರ್ಯರೂಪಕ್ಕೆ ತರುವ ಒಂದು ಸಂಸ್ಥೆ ಇಲ್ಲವಾಗಿ ಅಮೇರಿಕಾ ಚಡಪಡಿಸುತ್ತಿದೆ. ಹೀಗಾಗಿಯೇ ಮೂರ್ಖರಂತಿರುವ ಈ ಮಂದಿಯನ್ನು ಭಡಕಾಯಿಸಲು ಭಿನ್ನ-ಭಿನ್ನ ಪ್ರಯತ್ನಗಳನ್ನು ಮಾಡುತ್ತಿರೋದು. ಅದರ ಒಂದು ಭಾಗವೇ ಆತಿಕ್‌ನ ಹತ್ಯೆ! 

ಅದಾಗಲೇ ಓವೈಸಿ, ಸರ್ಕಾರ ಬೇಕಂತಲೇ ಈ ಕೆಲಸವನ್ನು ಮಾಡಿಸಿದೆ ಎಂದು ಹೇಳಿಕೆ ನೀಡಿಬಿಟ್ಟಿದ್ದಾನೆ. ಮುಸಲ್ಮಾನರ ಪರವಾಗಿ ಸದಾ ನಿಲ್ಲುತ್ತಿದ್ದ ಆತಿಕ್‌ನಂಥವನನ್ನು ಪರಿವಾರ ಸಮೇತವಾಗಿಯೇ ಮುಗಿಸುತ್ತಾರೆಂದರೆ ಇನ್ನು ಸಾಮಾನ್ಯ ಮುಸಲ್ಮಾನನ ಕಥೆಯೇನು? ಎಂಬ ಪ್ರಶ್ನೆಯನ್ನು ಹಿಂಸೆ ತುರುಕುವ ಮಸೀದಿಗಳಲ್ಲಿ ಕೇಳಲಾಗುತ್ತದೆ. ಉತ್ತರ ಪ್ರದೇಶದಲ್ಲಿ ಈ ಕೋಮು ಶಾಂತಿಯಿಂದ ಕೂಡಿರಬಹುದೇನೊ. ಆದರೆ ಇತರೆ ರಾಜ್ಯಗಳಲ್ಲಿ ಇದು ತೀವ್ರಸ್ವರೂಪ ಪಡೆದುಕೊಳ್ಳುತ್ತದೆ, 2024ರ ವೇಳೆಗೆ ಸಾಕಪ್ಪ, ಸಾಕು ಎನಿಸುವಷ್ಟರಮಟ್ಟಿಗೆ. ಇದಕ್ಕೆ ಪೂರಕವಾಗಿ ನ್ಯಾಯ ವ್ಯವಸ್ಥೆಯನ್ನೂ ಕೂಡ ಇವರು ಬಳಸಿಕೊಳ್ಳುತ್ತಿದ್ದಾರೆ. ಅದಾನಿಯ ವಿರುದ್ಧ ಅನವಶ್ಯಕವಾಗಿ ಸುಪ್ರೀಂಕೋರ್ಟು ರೂಪಿಸಿರುವ ತಂಡವನ್ನು ನೋಡಿದರೆ ಗೊತ್ತಾಗುತ್ತದೆ. ಇತ್ತೀಚೆಗೆ ನ್ಯಾಯಾಧೀಶರೊಬ್ಬರು ಪ್ರಧಾನಿಯ ವಿರುದ್ಧ ಕ್ರಮ ತೆಗೆದುಕೊಳ್ಳುವ ಶಕ್ತಿ ನಮಗೆ ಬೇಕು ಎಂದು ಕೇಳಿಕೊಂಡಿದ್ದು ಗಮನಿಸಬೇಕಾದ್ದೇ. ಮುಖ್ಯ ನ್ಯಾಯಾಧೀಶರು ‘ಇನ್ನು ಮುಂದೆ ಯಾರಾದರೂ, ಯಾವ ಕ್ಷಣದಲ್ಲಾದರೂ ಮನೆ ಉರುಳಿಸುವ, ಸರ್ಕಾರ ತೊಂದರೆ ಕೊಡುವ ವಿಚಾರದ ಕುರಿತಂತೆ ನೇರವಾಗಿ ನಮ್ಮ ಬಾಗಿಲು ಬಡಿಯಬಹುದು’ ಎಂದು ಹೇಳಿಕೆ ಕೊಟ್ಟಿರುವುದು ಸ್ಪಷ್ಟವಾಗಿ ಈ ಪ್ರತ್ಯೇಕತಾವಾದಿಗಳಿಗೆ ಶಕ್ತಿ ತುಂಬುವ ಪ್ರಕ್ರಿಯೆಯೇ. ಮುಸಲ್ಮಾನರನ್ನೇ ಮುಂದಿಟ್ಟುಕೊಂಡರೆ ಹಿಂದೂಗಳು ಒಟ್ಟಾಗಿ ನರೇಂದ್ರಮೋದಿಗೆ ವೋಟು ಹಾಕುವ ಸಂಭವವಿರುವುದರಿಂದ ಖಾಲಿಸ್ತಾನಿಗಳಿಗೆ ವಿಶೇಷ ಬೆಂಬಲವನ್ನು ಕೊಟ್ಟಿದ್ದು ಅಮೇರಿಕಾ-ಯುರೋಪುಗಳು. ಆದರೆ ಸರ್ಕಾರ ಅದನ್ನು ಸಂಭಾಳಿಸಿದ ರೀತಿ ಮಾತ್ರ ಮೆಚ್ಚಬೇಕಾದ್ದು. ಓಡಿ ಹೋದ ಖಾಲಿಸ್ತಾನೀ ನಾಯಕ ಅಮೃತ್‌ಪಾಲ್‌ಸಿಂಗ್ ತನ್ನ ತಾನು ಜನರ ನಡುವಿನ ಶ್ರೇಷ್ಠ ನಾಯಕ ಎಂದು ಬೊಗಳೆ ಕೊಚ್ಚಿಕೊಳ್ಳುತ್ತಿದ್ದ. ಅವನು ಕಾಣೆಯಾಗಿ ಇಷ್ಟು ದಿನ ಕಳೆದರೂ ಪಂಜಾಬಿನಲ್ಲಿ ಆತನ ಕುರಿತಂತೆ ನಯಾಪೈಸೆ ಚರ್ಚೆಯಿಲ್ಲ ಎಂದಾಗಲೇ ಇವನ ಯೋಗ್ಯತೆ ಅರಿವಾಗಿರಬೇಕು. 

ಆತಿಕ್ ಅಹ್ಮದ್ ತನ್ನ ಬಳಿ ಆಯುಧಗಳಿಗೆ ಬರವಿಲ್ಲವೆಂದೂ ಪಾಕಿಸ್ತಾನ ಡ್ರೋಣ್ ಮೂಲಕ ಪಂಜಾಬ್ ಗಡಿಗೆ ಅದನ್ನು ತಲುಪಿಸುವುದೆಂದೂ, ಕಾಶ್ಮೀರಿಗಳು ಅದನ್ನೇ ಬಳಸುತ್ತಾರೆ ಎಂದೂ ಹೇಳಿಕೆ ಕೊಟ್ಟಿದ್ದ. ಶತಾಯ-ಗತಾಯ ಪಂಜಾಬಿನಲ್ಲಿ ಅಧಿಕಾರ ನಡೆಸಬೇಕೆಂದು ಕೇಜ್ರಿವಾಲ್ ಪಣತೊಟ್ಟಿದ್ದೇಕೆಂದು ಅರ್ಥವಾಯ್ತೇನು? ಇನ್ನು ಕರ್ನಾಟಕದಲ್ಲೂ ಕಾಂಗ್ರೆಸ್ ಅಧಿಕಾರ ಹಿಡಿಯಲು ಹಾತೊರೆಯುತ್ತಿದೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಸಿದ್ದರಾಮಯ್ಯನವರ ಐದು ವರ್ಷದ ಸರ್ಕಾರದ ನಂತರ ಭಾಜಪ ಅಧಿಕಾರಕ್ಕೆ ಬರದೇ ಹೋಗಿದ್ದರೆ, ಸಿದ್ದರಾಮಯ್ಯನವರೇ ಮತ್ತೊಮ್ಮೆ ಕುರ್ಚಿಯ ಮೇಲೆ ಕುಳಿತಿದ್ದರೆ, ಪಿಎಫ್ಐ ಇಲ್ಲೂ ಕೆಲವು ಆತಿಕ್ ಅಹ್ಮದ್‌ರನ್ನು ಸೃಷ್ಟಿಸುತ್ತಿತ್ತು! 

ಮತದಾನ ಮಾಡುವ ಮುನ್ನ ಇಡೀ ರಾಷ್ಟ್ರವನ್ನು ಕಣ್ಮುಂದೆ ತಂದುಕೊಳ್ಳಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s