ನೆಲದ ಮಾತು

ಭಾನುವಾರದ ಸುಂದರ ಸಂಜೆ…

Posted in ನಮ್ಮ ನಮ್ಮ ನಡುವೆ by Chakravarty on February 18, 2008

ನಿಜಕ್ಕೂ ಫೆಬ್ರವರಿ ಹದಿನೇಳರ ಭಾನುವಾರದ ಸಂಜೆ ನನಗೆ ಅವಿಸ್ಮರಣೀಯವಾದ ಭಾವ ಜಾಗೃತಿಯ ಸಾರ್ಥಕ ಸಮಯವಾಗಿತ್ತು. ಅತ್ಯಂತ ಉಲ್ಲಾಸದಾಯಕವಾಗಿತ್ತು.
ಹೀಗೆ ನನ್ನನ್ನು ಆಳವಾಗಿ ತಟ್ಟಿದ ಕಾರ್ಯಕ್ರಮದ ಹೆಸರು- “ವಂದೇ ಮಾತರಂ ಗೀತ ಸಂಧ್ಯಾ”
ಮೈತ್ರಿ ಸಂಸ್ಕೃತಿ ಪ್ರತಿಷ್ಟಾನದ ಸಂಸ್ಕೃತೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮಕ್ಕೆ ‘ಭಾರತ ವೈಭವ’ ಶೀರ್ಷಿಕೆಯಡಿಯಲ್ಲಿ ನಿರೂಪಣೆ ಮಾಡುವ ಸೌಭಾಗ್ಯ ನನ್ನ ಪಾಲಿಗೆ ಬಂದಿತ್ತು.

ವಂದೇ ಮಾತರಂ

‘ವಂದೇ ಮಾತರಂ…’ ಈ ಎರಡು ಪದಗಳು ಸಾಕು ಮಿಂಚಿನ ಸಂಚಾರಕ್ಕೆ. ಯಾವ ಎರಡು ಪದಗಳನ್ನು ಉಚ್ಚ ಕಂಠದಲ್ಲಿ ಮೊಳಗಿಸುತ್ತ ಸಾವಿರಾರು ರಾಷ್ಟ್ರ ಪ್ರೇಮಿಗಳು ಹುತಾತ್ಮರಾದರೋ, ಲಕ್ಶಾಂತರ ಜನರು ಸ್ವಾತಂತ್ರ್ಯ ಹೋರಾಟಕ್ಕೆ ಪಣ ತೊಟ್ಟೂ ನಿಂತರೋ ಅಂತಹ ಪ್ರೇರ್‍ಅಕ ರಣ ಮಂತ್ರ ಅದು!

ಬಹುಶಃ ನಿಮಗೆ ‘ವಂದೇ ಮಾತರಂ’ ಹುಟ್ಟಿದ ಬಗೆ ಗೊತ್ತಿರಬಹುದು.
ಖ್ಯಾತ ಕವಿ ಶ್ರೀ ಬಂಕಿಮ ಚಂದ್ರ ಚಟರ್ಜಿಯವರು ಒಮ್ಮೆ ರೈಲಿನಲ್ಲಿ ಪ್ರಯಾಣಿಸುವಾಗ ತಾಯಿ ಭಾರತಿಯೊಡಲಿನ ನಿಸರ್ಗ ಸೌಂದರ್ಯಕ್ಕೆ ಮಾರುಹೋದರು. ಜೊತೆಜೊತೆಗೆ ಆಕೆಗೊದಗಿದ ದುರ್ಗತಿಯನ್ನೂ, ಅದಕ್ಕೆ ಪ್ರತಿಯಾಗಿ ಧೀರಭಾರತೀಯರ ಹೋರಾಟವನ್ನೂನೆನೆಯುತ್ತ ಸಾಗಿದರು. ಅದರ ಪರಿಣಾಮ, ರಾತ್ರಿಯ ನಿದ್ರೆಯಲ್ಲೂ ಅವೆಅವೇ ಚಿತ್ರಣಗಳು. ಕನವರಿಕೆಯಲ್ಲಿ ಮೂಡಿಬಂದಿದ್ದು ‘ವಂದೇ ಮಾತರಂ’ ದಿವ್ಯಗೀತೆ!
ಬಂಕಿಮ ಚಂದ್ರರ ಸಂಬಂಧಿ ತರುಣನೊಬ್ಬ ಅವರು ಕನವರಿಸಿದ ಸಾಲುಗಳನ್ನು ಬರೆದುಕೊಂಡ. ಬಂಕಿಮ ಚಂದ್ರರು೮ ಎಚ್ಚರವಾದ ಬಳಿಕ ಅವರಿಗೆ ಅವನ್ನು ತೋರಿಸಿದ. ಸಂಭ್ರಾಂತರಾದ ಬಂಕಿಮಚಂದ್ರರು ಅದಕ್ಕೆ ಅಂತಿಮ ಸ್ಪರ್ಷ ನೀಡಿದರು. ಮುಂದೆ ಅವರ ಜನಪ್ರಿಯ ಕೃತಿ ‘ಆನಂದಮಠ’ದಲ್ಲಿ ಈ ಗೀತೆ ರಣ ಮಂತ್ರವಾಗಿ ಹರಿಯಿತು.

೧೯೦೫ರಲ್ಲಿ ಆಂಗ್ಲರು ಕೇಕು ಕತ್ತರಿಸಿದ ಹಾಗೆ ಬಂಗಾಳವಿಭಜನೆ ಮಾಡಹೊರಟಿದ್ದರಲ್ಲ, ಆಗ ಅದರ ವಿರುದ್ಧ ಹಿಂದೂ ಮುಸ್ಲಿಮರೆನ್ನದೆ ಎಲ್ಲರನ್ನೂ ಒಗ್ಗೂಡಿಸಿ ಹೋರಾಟಕ್ಕೆ ಹಚ್ಚಿದ್ದು ಈ ‘ವಂದೇ ಮಾತರಂ’ ಘೋಷ. ಬಂಗಾಳ ವಿಭಜನೆಯ ಮೂಲಕ ಯಾರ ನಡುವೆ ಬಿರುಕು ಮೂಡಿಸಬೇಕೆಂದು ಅವರು ಅಲೋಚಿಸಿದ್ದರೋ ಅದೇ ಹಿಂದೂ ಮುಸ್ಲಿಮರು ಜಾತಿ ಭೇದ ಮರೆತು ವಂದೇ ಮಾತರಂ ಘೋಷಣೇಯಡಿಯಲ್ಲಿ ಒಟ್ಟಾದರು, ಆಂಗ್ಲರ ಕುತಂತ್ರಕ್ಕೆ ಮಾರುತ್ತರ ನೀಡಿದರು!

ಬಿಡಿ. ಸ್ವಾತಂತ್ರ್ಯ ಹೋರಾಟದುದ್ದಕ್ಕೂ ಸ್ಫೂರ್ತಿ ವಾಕ್ಯವಾಗಿ ಹರಿದುಬಂದು ರಾಷ್ಟ್ರ ಗೀತೆಯಾಗಬೇಕಿದ್ದ ‘ವಂದೇ ಮಾತರಂ’ಆ ಸ್ಥಾನಕ್ಕೆ ಆಯ್ಕೆಯಾಗದೆಹೋಗಿದ್ದು, “ಅದು ಪಾಶ್ಚಾತ್ಯರ ಬ್ಯಾಂಡ್ ಸೆಟ್ಟಿಗೆ ಹೊಂದೋಲ್ಲ” ಅನ್ನುವ ಕಾರಣಕ್ಕೆ! ಈ ಬಾಲಿಶ, ಅಸಹ್ಯಕರ ಕಾರಣ ನೀಡಿದವರ್ಯಾರು ಗೊತ್ತಾ? ನಮ್ಮ ದೇಶದ ಮೊದಲ ಪ್ರಧಾನಿ ಜವಹರ ಲಾಲ ನೆಹರೂ!!

ಕ್ಷಮಿಸಿ. ಹೇಳಹೊರಟಿದ್ದು ವಂದೇ ಮಾತರಂ ‘ಕಾರ್ಯಕ್ರಮ’ದ ಬಗ್ಗೆ.ಏನು ಮಾಡಲಿ?  ಆ ದಿವ್ಯ ಮಂತ್ರ ಸ್ಮರಣೆಗೆ ಬಂದಾಗಲೆಲ್ಲ ಈ ವಿವರಗಳು ಹಿಂಬಾಲಿಸಿ ಬಂದುಬಿಡುತ್ತವೆ.

ಗೀತ ಸಂಧ್ಯಾ

ಶಂಕರ ಶಾನುಭಾಗ್ ಉತ್ತಮ ಸಂಸ್ಕಾರ ಹೊಂದಿರುವ ಸಹೃದಯಿ ಸಂಗೀತ ಕಲಾವಿದರು. ಅವರ ಕಂಠವನ್ನ ‘ಕಂಚಿನ ಕಂಠ’ ಎಂದರೆ ಕ್ಲೀಷೆಯಲ್ಲ ಅನ್ನೋದು, ಅವರ ವಿಶಿಷ್ಟ ಶೈಲಿಯ ವಂದೇ ಮಾತರಂ ಗೀತೆಯ ಗಾಯನದಲ್ಲೇ ಗೊತ್ತಾಗಿಹೋಗುತ್ತದೆ.
ಭಾವಾವಿಶ್ಟರಾಗಿ ಶಾನುಭಾಗ್ ‘ಹೂ ಹರೆಯದ ಹೊಂಗನಸುಗಳೇ… ಏಳಿ ಏಳೀ ಏಳಿ ಎಚ್ಚರಾಗಿ ಕನಸುಕಂಗಳೇ’ ಹಾಡುವಾಗ ಶ್ರೋತೃಗಳ ಮುಖದಲ್ಲಿನ ಹುಮ್ಮಸ್ಸು ನೋದಬೇಕು ನೀವು!
ಶಂಕರರ ತಂಡದಲ್ಲಿನ ಪ್ರತಿಯೊಬ್ಬ ಗಾಯಕ- ಗಾಯಕಿಯೂ ಹೀಗೇ. ಮನದುಂಬಿ, ಅಂತರಾಳದಿಂದ ಹಾಡುತ್ತರೆ. ರಾಷ್ಟ್ರಭಕ್ತಿಯ ಗೀತೆಗಳನ್ನು ಹಾಡುವಾಗ ಅಕ್ಷರಶಃ ಕಣ್ಣೀರುಮಿಡಿಯುತ್ತಾರೆ.

ಭಾನುವಾರದ ಸಂಜೆಯ ಈ ಸುಂದರ ಕಾರ್ಯಕ್ರಮದಲ್ಲಿ ವಿಶೇಷ ಆಕರ್ಶಣೆಯಾಗಿದ್ದವರು ದಿವಂಗತ ಕರ್ನಲ್ ವಸಂತರ ತಾಯಿ ಮತ್ತು ಪತ್ನಿ. ಜೊತೆಗೆ, ವಯೋವೃದ್ಧರಾದ ನಿವೃತ್ತ ಕರ್ನಲ್ ಶ್ರೀ ಕಾತ್ಕರ್ ಅವರು.

“ನೀವೆಲ್ಲ ನಿಮ್ಮ ನಿಮ್ಮ ಕುಟುಂಬಕ್ಕಾಗಿ ದುಡಿಯುತ್ತೀರಿ. ಅಲ್ಲಿ ನಿಮ್ಮದೇ ಕುಟುಂಬದ ರಕ್ಷಣೆಗಾಗಿ ಯೋಧರು ಜೀವದ ಹಂಗು ತೊರೆದು ನಿಂತಿದ್ದಾರೆ. ಸದಾ ಇದನ್ನು ನೆನಪಿಡಿ. ದಯವಿಟ್ಟು ಯೋಧ ಕುಟುಂಬಗಳೊಡನೆ ಸಹಕರಿಸಿ ಮಾನವೀಯತೆ ತೋರಿ” ಎಂದು ವಿನಂತಿಸುತ್ತ ನಮಗೆ ನಮ್ಮ ಕರ್ತವ್ಯದ ಪಾಠ ಹೇಳಿದವರು ದಿ. ಕರ್ನಲ್ ವಸಂತರ ಪತ್ನಿ.

ಇನ್ನು, ಕರ್ನಲ್ ಕಾಟ್ಕರ್…
ಅವರಂತೂ ಕಾರ್ಯಕ್ರಮದ ಭಾವುಕ ವಾತಾವರಣದಲ್ಲಿ ಸಂಪೂರ್ಣ ಅಮಿಮರೆತಿದ್ದರು.
ಎಂಭತ್ತು ಮೀರಿದ ಈ ವಯಸ್ಸಿನಲ್ಲೂ ಅವರ ಚೀನಾ ಯುದ್ಧದ ಪ್ರತಿ ಕ್ಷಣಗಳು ತಾಜಾ ಆಗಿವೆ. ಅವುಗಳಾಲ್ಲಿ ಕೆಲವನ್ನು ಅವರು ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಹಂಚಿಕೊಂಡರು.

ಕರ್ನಲ್ ಹೇಳಿದ ಒಂದು ಘಟನೆ…

“ಲಡಾಖ್ ನಲ್ಲಿ ಶೂನ್ಯಕ್ಕಿಂತ ಅತ್ಯಂತ ಕೆಳಗಿನ ಉಷ್ಣಾಂಶದಲ್ಲಿ ಮಂಜುಗಟ್ಟಿದ ವಾತಾವರಣಾಲ್ಲಿ ಸೂಕ್ತ ಸೌಲಭ್ಯಗಳಿಲ್ಲದೆಯೂ  ನಾವು ಚೀನೀಯರ ವಿರುದ್ಧ ಸೆಟೆದು ನಿಂತಿದ್ದೆವು. ನಮಮ್ ಪ್ಲಟೂನ್ ನಲ್ಲಿ ಪ್ರಮೋದ್ ಎನ್ನುವ ತೀರ ಚಿಕ್ಕ ವಯಸ್ಸಿನ ತರುಣ ಸೈನಿಕನಿದ್ದ. ಸದಾಚಟುವಟಿಕೆಯ ಆತ, ವಿಧವೆ ತಾಯಿಯ ಏಕಮಾತ್ರ ಮಗನಾಗಿದ್ದ.
ಅತ್ತ ನಾವು ಮರಗಟ್ಟಿಸುವ ಚಳಿಯಲ್ಲಿ ಹಗಲಿರುಳು ಬಂದೂಕು ಹಿಡಿದು ನಿಂತಿದ್ದಾಗ ಪ್ರಮೋದನ ತಾಯಿಯಿಂದ ಒಂದು ಪತ್ರ ಬಂದಿತು. ಪಾಪ, ಅವರು ಅದನ್ನು ಬರೆದು ಅದೆಷ್ಟು ದಿನವಗಿತ್ತೋ, ಹಿಮದ ಹಾದಿಯಲ್ಲಿ ನಡುಗುತ್ತ, ಕೊನೆಗೂ ಅದು ಅವನ ಕೈ ತಲುಪಿತ್ತು. ಆ ಹೊತ್ತಿಗಾಗಲೇ ಚೀನೀಯರು ನಮಗೆ ತೀರ ಹತ್ತಿರ ಬಂದುಬಿಟ್ಟಿದ್ದರು.
ಅಂತಹ ಉತ್ಕಟ ಕ್ಷಣದಲ್ಲಿ ಆ ತಾಯಿ ಬರೆದ ಸಾಲುಗಳು ಎಂಥವಿತ್ತು ಗೊತ್ತೇ?
“ಮಗೂ, ಚೀನೀಯರು ದೇಶದ ಗಡಿ ದಾಟಲಿದ್ದಾರೆಂದು ಸುದ್ದಿ ಇದೆ. ನೀನದಕ್ಕೆ ಬಿಡಕೂಡದು. ಹಾಗೇನಾದರೂ ಅವರು ದಾಟುವುದೇ ಆದರೆ, ಪ್ರಮೋದನ ಹೆಣದ ಮೇಲೆ ದಾಟಿಕೊಂಡು ಒಳಬರಬೇಕು!”
ನಮ್ಮ ಕೆಚ್ಚು ಹೆಚ್ಚಲಿಕ್ಕೆ ಇನ್ನೇನು ಬೇಕಿತ್ತು? ಕೂಡಲೆ ನಾವೆಲ್ಲ ಸೇರಿ ಆ ತಾಯಿಗೆ ಪತ್ರ ಬರೆದೆವು. “ಅಮ್ಮಾ, ಹಾಗೇನಾದರೂ ಚೀನೀಯರು ದೇಶದೊಳಕ್ಕೆ ನುಗ್ಗುವರೆನ್ನುವುದೇ ಆದರೆ, ಒಬ್ಬನಲ್ಲ, ಆರು ಪ್ರಮೋದರ ಹೆಣ ದಾಟಿ ಬರಬೇಕು. ಹೆದರಬೇಡ, ನಾವು ಜೀವದ ಹಂಗು ತೊರೆದು ಕಾದುತ್ತೇವೆ!”

~

ಹ್ಹ್! ನಮ್ಮ ನಮಮ್ ಕಲ್ಪನೆಯ ಸುಖದ ದ್ವೀಪಗಳಲ್ಲಿ ಬದುಕುತ್ತಿರುವ ನಮಗೆ, ದೇಶಕ್ಕಾಗಿ ಸಾಯೋದು ಅಂದರೇನು ಗೊತ್ತೇ?
ಬೇಡ. ದೇಶಕ್ಕಾಗಿ ಬದುಕಲಿಕ್ಕಾದರೂ….?

ಇತಿಹಾಸದ ಪುಟಗಳಲ್ಲಿ ಮುಲಾಜಿನ ಗೋಜಲು

Posted in ದಿಲ್ ಹೈ ಹಿಂದೂಸ್ಥಾನಿ by Chakravarty on February 7, 2008

shri_ram-20050507-103342.jpg

ರಾಮಾಯಣದ ಅತ್ಯಂತ ಮಹತ್ವದ ತಿರುವ ಕಂಡ ಪ್ರಸಂಗ ಅದು. ದಶರಥ ತಾನು ಕೈಕೇಯಿಗೆ ಯಾವಗಲೋ ಕೊಟ್ಟ ಮಾತನ್ನು ಈಡೇರಿಸಲಿಕ್ಕಾಗಿ ಪಟ್ಟಾಭಿಷಕ್ತನಾಗಬೇಕಿದ್ದ ರಾಮನನ್ನು ಹದಿನಾಲ್ಕು ವರ್ಷ ವನವಾಸಕ್ಕೆ ತೆರಳುವಂತೆ ಕೇಳಿಕೊಳ್ಳುತ್ತಾನೆ. ರಾಮನೇನೋ ತಂದೆಯ ಆಜ್ಞಾಪಾಲನೆಗೆ ಸಿದ್ಧನಾಗಿಬಿಟ್ಟ. ಆದರೆ ಲಕ್ಷ್ಮಣನ ಮುಖ ಕೆಂಪುಕೆಂಪಾಯಿತು. “ಅಣ್ಣ, ಅಪ್ಪನನ್ನು ಕೊಂದು ರಾಜ್ಯ ವಶಪಡಿಸಿಕೊಳ್ಳೋಣ” ಎಂದ. ರಾಮ ತಮ್ಮನನ್ನು ಸಂತೈಸುತ್ತ, ” ತಂದೆಯ ಮಾತನ್ನು ನಡೆಸಿಕೊದುವುದೆ ಪುತ್ರಧರ್ಮ. ಅದರಲ್ಲಿಯೆ ನಮಗೆ ಶ್ರೇಯಸ್ಸು” ಎಂದುಬಿಟ್ಟ. ತಂದೆಯ ಮಾತಿಗಾಗಿ ರಾಜ್ಯಬಿಟ್ಟು ತೆರಳಿದ ರಾಮ, ಮರಳಿ ಬರುವ ವೇಳೆಗೆ ಜಗ ಬೆಳಗುವ ರಾಮನಾಗಿ ಬಂದ. ಆದರೆ ಪತ್ನಿಯ ದಾಕ್ಷಿಣ್ಯಕ್ಕೆ ಒಳಗಾಗಿ ಮಗನನ್ನೇ ಕಾಡಿಗೆ ಅಟ್ಟಿದ ದಶರಥ, ಪುತ್ರವ್ಯಾಮೋಹದಲ್ಲಿಯೇ ಕೊನೆಯುಸಿರೆಳೆದ.

~

ಯಾರದೋ ಮರ್ಜಿಗೆ, ಮುಲಾಜಿಗೆ ಒಳಗಾಗಿ ಕೈಗೊಂಡ ನಿರ್ಣಯಗಳು ಮತ್ತೆಲ್ಲೋ ಒಳ್ಳೆಯ ಕೆಲಸ ಮಾಡಿದರೆ ಪುಣ್ಯ. ಅನೇಕ ವೇಳೆ ಅವು ಭವಿಷ್ಯವನ್ನೇ ಮೊಟಕುಗೊಳಿಸುವಂಥಹ ನಿರ್ಣಯಗಳಾಗಿಬಿಡುತ್ತವೆ.
ಧೃತರಾಷ್ಟ್ರ ತನ್ನ ಮಕ್ಕಳಿಗೇ ರಾಜ್ಯ ಸಿಗಬೆಕೆಂದು ಹಟ ಹಿದಿದು ಪಾಂದವರಿಗೆ ಅನ್ಯಾಯ ಮಾಡಿದನಲ್ಲ, ಪರಿಣಾಮ ಏನಾಯ್ತು ಗೊತ್ತ? ಯುದ್ಧ ಮತ್ತು ಸರ್ವನಾಶ! ಧರ್ಮರಾಜ್ಯ ಸ್ಥಾಪನೆಯಾಗಲಿಕ್ಕೆ ಕೃಷ್ಣ ಕಾರಣನಾದ ಎನ್ನುವುದನ್ನು ಬಿಟ್ಟರೆ ಇಡಿಯ ಮಹಾಭಾರತ ಅನೇಕ ತುಮುಲಗಳ ಆಗರವಾಗಿ ಕಾಣುವುದಿಲ್ಲವೇ? ಅತ್ತ ಧೃತರಾಷ್ಟ್ರ ತನ್ನ ಪುತ್ರ ವ್ಯಾಮೋಹದ ಮುಲಾಜಿಗೆ ಒಳಗಾದರೆ, ಅವನ ಮಗ ದುರ್ಯೋಧನ ತನ್ನದೇ ಅಹಂಕಾರದ ದಾಕ್ಷಿಣ್ಯಕ್ಕೆ ಒಳಗಾಗಿದ್ದ. ಕೃಷ್ಣ ಬಂದು ಧರ್ಮೋಪದೇಶ ಮಾಡಿದರೆ,
ಜಾನಾಮಿ ಧರ್ಮಂ ನ ಚ ಮೇ ಪ್ರವೃತ್ತಿಃ
ಜಾನಾಮ್ಯಧರ್ಮಂ ನ ಚ ಮೇ ನಿವೃತ್ತಿಃ
ಎಂದುಬಿಟ್ಟ.  “ಧರ್ಮ ಗೊತ್ತಿದ್ದರೂ ಆಚರಿಸುವ  ಮನಸಿಲ್ಲ, ಅಧರ್ಮವೆಮ್ದು ತಿಳಿದರೂ ಬಿಡಲು ಮನಸಿಲ್ಲ” ಎಂಡು ತನ್ನ ಅಹಂಕಾರಕ್ಕೆ ಶರಣಾಗಿಬಿಟ್ಟ! ಅಬ್ಬಬ್ಬ… ಈ ಪರಿಯ ದಾಸ್ಯ ಅದೆಷ್ಟು ಕಷ್ಟ, ನಿಕೃಷ್ಟ!?

ಹಲವು ಬಾರಿ ನಂಬಿಕೊಂಡ ಆದರ್ಶಗಳೂ ದಾಕ್ಷಿಣ್ಯವಾಗಿಯೇ ಕಾಡುತ್ತವೆ. ಬಹುಶಃ ಆದರ್ಶಗಳ ಮರ್ಜಿಗೆ ಒಳಗಾಗುವುದು ಅಂದರೆ ಅದೇ ಇರಬೇಕು.

~

ಪೃಥ್ವಿರಾಜ್ ಚೌಹಾನನ ಮೇಲೆ ಮಹಮದ್ ಘೋರಿ ದಾಳಿ ಮಾಡಿದ್ದು ನೆನಪಿಸಿಕೊಳ್ಳಿ. ನಮ್ಮ ಇತಿಹಾಸದ ಅತ್ಯಂತ ಪ್ರಮುಖ ಘಟ್ಟ ಅದು. ತರೈನ್ ಎನ್ನುವ ಪ್ರದೇಶದಲ್ಲಿ ಅವರಿಬ್ಬರಿಗೂ ಮುಖಾಮುಖಿಯಾಯ್ತು. ಪೃಥ್ವಿರಾಜನ ಸೇನೆಯೆದುರು ಘೋರಿಯ ಸೇನೆ ಪತರಗುಟ್ಟಿ ಹೋಯಿತು. ಆಮೆಲೇನು?  ಘೋರಿ ಪೃಥ್ವಿರಾಜನ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿದ. ಕ್ಷಮೆ ಯಾರಿಗೆ? ಅದನ್ನು ಪಾತ್ರರಿಗೆ ನೀಡಬೇಕು. ಘೋರಿಯಂತಹ ಅಪಾತ್ರರಿಗಲ್ಲ. ಆದರ್ಶಗಳ ಮುಲಾಜಿಗೆ ಬಿದ್ದ ಪೃಥ್ವಿರಾಜ್ ಚೌಹಾಣ್ ಘೋರಿಯನ್ನು ಕ್ಷಮಿಸಿದ್ದಷ್ಟೇ ಅಲ್ಲ, ಗೌರವಯುತವಾಗಿ ಮರಳಲು ಅನುವು ಮಾಡಿಕೊಟ್ಟ ಕೂಡ!
ಮರು ವರ್ಷವೇ ತರೈನ್ ನಲ್ಲಿ ಮತ್ತೆ ದಾಳಿಯಾಯ್ತು. ಈ ಬಾರಿ ತನ್ನವರೇ ಮೋಸ ಮಾಡಿದುದರ ಫಲವಾಗಿ ಚೌಹಾನನ ಸೇನೆ ಸೋತಿತು. ಘೋರಿಯ ಕೈ ಮೇಲಾಯ್ತು. ಆತ ಚೌಹಾನನನ್ನು ಬಂಧಿಸಿ, ತನ್ನೂರಿಗೆ ಕರೆದೊಯ್ದ. ಅಲ್ಲಿ ಅವನ ಎರಡೂ ಕಣ್ಣೂಗಳನ್ನು ಕೀಳಿಸಿ ಬರ್ಬರ ಕೊಲೆ ಮಾಡಿಸಿದ.
ಅದಕ್ಕೇ ಹೇಳೋದು. ಅಯೋಗ್ಯರಿಗೆ ಒಳ್ಳೆಯದನ್ನು ಮಾಡಬಾರದೆಂಬುದೂ ಒಂದು ಆದರ್ಶ. ಏನಂತೀರಿ?

ray_sirajuddaula.jpg

೧೭೫೭ರಲ್ಲೂ ಹಾಗೇ ಆಯಿತು. ಸಿರಾಜುದ್ದೌಲ ಬಂಗಾಳಾದ ನವಾಬನಾಗಿದ್ದಾಗ ಆಂಗ್ಲರ ವಿರುದ್ಧ ತಿರುಗಿ ಬಿದ್ದ. ಪೋರ್ಟ್ ವಿಲಿಯಂ ಮೇಲೆ ಏರಿ ಹೋದ. ಪತರಗುಟ್ಟಿದ ರಾಬರ್ಟ್ ಕ್ಲೈವ್, ಸಿರಾಜುದ್ದೌಲನ ವಿರುದ್ಧ ಕತ್ತಿ ಮಸೆಯುತ್ತಿದ್ದ ಮೀರ್  ಜಾಫರನನ್ನು ಒಲಿಸಿಕೊಂಡ. ರಾಜ್ಯದ ಆಮಿಷ ತೋರಿದ. ಈ ಬಾರಿ ಮೀರ್ ಜಾಫರ್ ಯುದ್ಧಕ್ಕೆ ಮುನ್ನ ನವಾಬನ ಬಳಿ ಹೋಗಿ, “ನನ್ನಂತಹ ಸೇನಾಪತಿ ಇರುವಾಗ ನವಾಬರೇ ಯುದ್ಧಕ್ಕೆ ಬರುವುದು ಸರಿಯಲ್ಲ, ಹಾಗೆ ಮಾಡಿದರೆ ಅದು ನನ್ನ ಸಾಮರ್ಥ್ಯಕ್ಕೆ ಅವಮಾನ ಮಾಡಿದಂತೆ. ಬೆರಳೆಣಿಕೆಯಷ್ಟಿರುವ ಆಂಗ್ಲರನ್ನು ಸೋಲಿಸಿ ಬರುತ್ತೇನೆ” ಎಂದ. ನವಾಬನಿಗೂ ಹೌದೆನ್ನಿಸಿತು. ತನ್ನ ಸೇನಾಪತಿಗೆ ಅವಮಾನ ಮಾಡುವುದು ಸರಿಯೇ ಅನ್ನುವ ದ್ವಂದ್ವ ಅವನನ್ನು ಕಾಡಿತು. ಮೀರ್ ಜಾಫರನ ಮುಲಾಜಿಗೆ ಒಳಗಾದ. ಭಾರತದ ಇತಿಹಾಸವೇ ಬದಲಾಯ್ತು. ರಾಬರ್ಟ್ ಕ್ಲೈವ್ ಕದನದಲ್ಲಿ ಸಲೀಸಾಗಿ ಗೆದ್ದ. ನವಾಬನನ್ನು ಪದಚ್ಯುತಗೊಳಿಸಿ ಮೀರ್ ಜಾಫರನನ್ನು ಪಟ್ಟಕ್ಕೇರಿಸಲಾಯ್ತು. ಬ್ರಿಟನ್ನಿನ ಪ್ರಭುತ್ವ ಭಾರತದಲ್ಲಿ ಸ್ಥಿರವಾಗಲು ಅದೊಂದು ಹೆದ್ದಾರಿಯಾಯ್ತು. ಒಂದು ನಿರ್ಧಾರ ಇತಿಹಾಸ ಬದಲಿಸುವ ಎಂತಹ ಕೆಲಸ ಮಾಡಿತು ನೋಡಿ!

~

ಗಾಂಧೀಜಿಯೂ ಇಂತಹ, ಇತರರಿಂದ ಪ್ರಭಾವಿತರಾದ ನಿರ್ಣಯ ಕೈಗೊಳ್ಳುತ್ತಲೇ ಇದ್ದರು. ಅವರು ನೆಹರೂರನ್ನು ತಮ್ಮ ಉತ್ತರಾಧಿಕಾರಿ ಎಂದು ಕರೆದಿದ್ದು ಏಕೆ ಎಂಬ ಪ್ರಶ್ನೆ ಒಂದು ಹಂತದ ನಂತರ ಅವರನ್ನೇ ಕಾಡಿರಲಿಕ್ಕೆ ಸಾಕು. ಮೋತೀಲಾಲ ನೆಹರೂ ಕಾಂಗ್ರೆಸ್ ಪಾರ್ಟಿಗೆ ತುಂಬಾ ದುಡಿದಿದ್ದರು ಎಂಬ ದಾಕ್ಷಿಣ್ಯವ? ಅಥವಾ ಶೋಕೀಲಾಲನಾಗಿದ್ದ ಯುವಕ ತನ್ನ ಚಿಂತನೆಗಳಿಗೆ ಮನಸೋತು ಬಂದಿದ್ದಾನೆಂಬ ಮುಲಾಜಿಗೋ? ದೇವರೇ ಬಲ್ಲ. ಹಾಗೆ ನೋದಿದರೆ ಯಾವ ಕಾರಣಕ್ಕೂ ನೆಹರೂ ಗಾಂಧೀಜಿಯ ಉತ್ತರಾಧಿಕಾರಿಯಾಗುವ ಯೋಗ್ಯತೆ ಹೊಂದಿರಲಿಲ್ಲ. ಗಾಂಧೀಜಿಯ ಸ್ವದೇಶೀ ಚಿಂತನೆಗಳು ಯೋಚಿಸಲಿಕ್ಕೂ ಅನರ್ಹ ಎಂದವರು ನೆಹರೂ. ಗಾಂಧೀಜಿಯಷ್ಟು ಸತ್ಯಪರಾಯಣತೆ, ಆದರ್ಶಗಳಿಗೆ ಬದ್ಧತೆ, ಇವ್ಯಾವುವೂ ಅವರಿಗಿರಲಿಲ್ಲ. ಅಷ್ಟಾದರೂ ಗಾಂಧೀಜಿ ಮೈಮರೆತು ನೆಹರೂಗೆ ಅಷ್ಟು ಮಹತ್ವದ ಸ್ಥಾನ ಕೊಟ್ಟರು. “ನನ್ನ ನಂತರ ನೆಹರೂ ನನ್ನ ಮಾತಾಡುತ್ತಾರೆ” ಎಂದುಬಿಟ್ಟರು. ಕಾಂಗ್ರೆಸ್ಸಿನ ಸೆಂಟ್ರಲ್ ಕಮಿಟಿ ಪಟೇಲರೇ ದೇಶದ ಪ್ರಧಾನಿಯಾಗಲಿ ಎಂದು ಘಂಟಾಘೋಷವಾಗಿ ಹೇಳಿದರೂ ಗಾಂಧೀಜಿ ಮನಸ್ಸು ಮಾಡಲಿಲ್ಲ.

ಪ್ರಧಾನ ಮಂತ್ರಿಗಿರಿ ಪಡೆದು ಆಳುವ ಖುರ್ಚಿಯೇರಿದ ನೆಹರೂ, ಖುರ್ಚಿ ತಪ್ಪಿಸಿಕೊಂಡ ನೆಹರೂನಷ್ಟು ಅಪಾಯಕಾರಿಯಲ್ಲ ಅಂತ ಗಾಂಧೀಜಿಗೆ ಅನಿಸಿತ್ತಾ? ಅಥವಾ ಅವರಪ್ಪನಿಗೆ ಮಾತು ಕೊಟ್ಟಿದ್ದೇನೆಂಬ ಒಂದೇ ಕಾರಣಕ್ಕೆ, ಆ ದರ್ದಿಗೆ ಅವರನ್ನು ಪ್ರಧಾನಿಯಾಗಲು ಬಿಟ್ಟರಾ?
ಏನೇ ಆಗಲಿ, ಆ ನಿರ್ಣಯ ರಾಷ್ಟ್ರದ ಪಾಲಿಗೆ ಭಯಾನಕವಾಗಿದ್ದನ್ನು ಮಾತ್ರ ಯಾರೂ ಅಲ್ಲಗಳೆಯಲಾರರು.

withnehru.gif

ಈ ನಡುವೆ ಪಟೇಲರಿಗೆ ಯಾವ ಮುಲಾಜಿತ್ತು ಎಂಬುದೂ ಪ್ರಶ್ನೆಯೇ. ಉಗ್ರ ಪ್ರತಾಪಿಯಾಗಿದ್ದ ಪಟೇಲರು ಗಾಂಧೀಜಿಯನ್ನು ಧಿಕ್ಕರಿಸದೆ ಉಳಿದ ಕಾಅರ್ಣವೆನು? ಗಾಂಧೀಜಿಯ ಸಮಸ್ಯೆಗಳ ಅರಿವು ಪಟೇಲರಿಗಿತ್ತಾ? ಪಟೇಲರೂ ಗಾಂಧೀಜಿಯ ದಾಕ್ಷಿಣ್ಯಕ್ಕೆ ಒಳಗಾಗಿದ್ದರಾ? ಪ್ರಶ್ನೆ ಆಳಕ್ಕಿಳಿಯುತ್ತಲೇ ಹೋಗುತ್ತದೆ. ಅಲ್ಲವೇ?

ಈ ಕಾರಣಗಳಿಂದಾಗಿ ದೇಶ ದಾರಿ ತಪ್ಪಿತೆಂದಷ್ಟೇ ಹೇಳಬಹುದು. ದೇಶ ವಿಭಜನೆಯ ಸಂದರ್ಭದಲ್ಲಿ ಲಕ್ಷಾಂತರ ಜನರ ಆಹುತಿಯಾಯ್ತು. ಆನಂತರದ ಪಂಚವಾರ್ಷಿಕ ಯೋಜನೆಗಳ ಭಾರದಲ್ಲಿ ದೇಶ ನಲುಗಿತು. ಹಳಿ ತಪ್ಪಿದ್ದ ಶಿಕ್ಷಣ ವ್ಯವಸ್ಥೆ, ನ್ಯಾಯ ವ್ಯವಸ್ಥೆ, ಕೃಷಿ ವ್ಯವಸ್ಥೆ, ಯಾವುವೂ ಮತ್ತೆ ಸರಿದಾರಿಗೆ ಬರಲೇ ಇಲ್ಲ. ಒಂದು ತಪ್ಪು ನಿರ್ಣಯ ಭಾರತವನ್ನು ಎರಡನೇ ಬಾರಿಗೆ  ಗುಲಾಮಗಿರಿಗೆ ನೂಕಿತೆಂದರೆ ತಪ್ಪಿಲ್ಲ.

ದಾಕ್ಷಿಣ್ಯಕ್ಕೆ ಬಸಿರಾಗುವ ಈ ಪ್ರಕ್ರಿಯೆ ಸ್ವಾತಂತ್ರ್ಯಾನಂತರವೂ ನಿಲ್ಲಲಿಲ್ಲ. ನಮ್ಮ ಮೇಲೆ ದಾಳಿ ಮಾಡಿ ನಮ್ಮ ಭೂಮಿಯನ್ನೇ ವಶಪಡಿಸಿಕೊಂಡ ಚೀನಾದ ವಿರುದ್ಧ ನಾವು ಮಾತಾಡಲೂ ಇಲ್ಲ. ದೇಸದೊಳಗಿನ ಚೀನಾ ನಿಷ್ಠ ಕಮ್ಯುನಿಸ್ಟರು ಬೇಸರಗೊಂಡರೆ!? ಎಂಬ ನೋವು ನಮಗೆ.

~

ಕಳೆದ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನ ಸೇನೆಯನ್ನು ಬಡಿದೆವಲ್ಲ, ಆಗಲೂ ನಮ್ಮದು ದಾಕ್ಷಿಣ್ಯವೇ. ಆರಂಭದಲ್ಲಿ ನಾವು ಕೆಳಗಿದ್ದೆವು, ಉಗ್ರರು ಮೇಲಿದ್ದರು. ಆಗ ಸಂಧಾನದ ಮಾತಿರಲಿಲ್ಲ. ನಮ್ಮ ಸೈನಿಕರು ಸಾಹಸಗೈದು ಮೇಲೇರುತ್ತಿದ್ದಂತೆ ಪಾಕ್ ಸೈನ್ಯ ತತ್ತರಿಸಿಬಿಟ್ಟಿತು. ಎಂದಿನಂತೆ ನಮ್ಮ ಸರ್ಕಾರ ಅಮೆರಿಕದ ಮುಲಾಜಿಗೆ ಒಳಗಾಗಿ ಪಾಕ್ ಸೈನಿಕರಿಗೆ ಮುಕ್ತಮಾರ್ಗ ತೋರಿಸಿತು. ನಮಮ್ ಸೈನಿಕರೇ ಅವರ ರಕ್ಷಣೆಗೆ ನಿಂತು ಅವರನ್ನು ಅವರ ದೇಶಕ್ಕೆ ಕಲೀಸಬೇಕಾಯ್ತು! ಇದಕ್ಕಿಂತ ಹೀನ ಸ್ಥಿತಿ ಯಾವುದೂ ಇಲ್ಲ ಅಂದ್ಕೊಂಡ್ರಾ?

ಖಂಡಿತ ಇದೆ. ಮೌಲಾನಾ ಮಸೂದ್ ಅಜರ್ ಬಿಡುಗಡೆಗೆಂದು ಉಗ್ರರು ವಿಮಾನಾಪಹರಣ ಮಾಡಿದ್ದು ನೆನಪಿಸಿಕೊಳ್ಳಿ. ಅವತ್ತು ವಿಮಾನದಲ್ಲಿದ್ದ ಆ ಪ್ರಯಾಣಿಕರ ಮನೆಯವರು ಗಲಾಟೆ ಮಾಡಿದರೆಂಬ ಕಾರಣಕ್ಕೆ ಈ ದೇಶದ ವಿದೇಶಾಂಗ ಸಚಿವರು ವಿಮಾನದಲ್ಲಿ ಆ ಉಗ್ರಗಾಮಿಯನ್ನು ತಮ್ಮೊಂದಿಗೆ ಕುಳ್ಳರಿಸಿಕೊಂಡು ಬಿಟ್ಟು ಬಂದರಲ್ಲ, ಅದು ಯಾವ ಮಟ್ಟದ ಕೃತ್ಯ, ನೀವೇ ಹೇಳಿ…  ಪ್ರತಿ ಬಾರಿಯೂ ಹೀಗೇ ಆದರೆ?

ಇವೆಲ್ಲಕ್ಕೂ ಕಿರೀಟಪ್ರಾಯವಾದಂಥದ್ದು, ಸಂಸತ್ತಿನ ಮೇಲೆ ದಾಳಿ ಮಾಡಿದ ಅಫ್ಜಲ್ ಗುರುವಿನ ಕಥೆ. ಬರಿಯ ಓಟಿನ ದಾಕ್ಷಿಣ್ಯಕ್ಕೆ ಬಿದ್ದು ಅವನನ್ನು ನೇಣಿಗೇರಿಸದೆ ಕುಳಿತಿದ್ದಾರಲ್ಲ, ಈ ನಿರ್ಣಯ ಸರಿಯಾ?

ಹುಡುಕುತ್ತ ಹೋದರೆ ಅಸಂಖ್ಯ ಘಟನೆಗಳಿವೆ. ಯಾವುದೇ ನಿರ್ಧಾರದ ಹಿಂದೆ ದೂರಾಲೋಚನೆ ಇರಬೇಕು. ಹಾಗಾಗಬೇಕೆಂದರೆ ಆ ನಿರ್ಧಾರಕ್ಕೆ ದಾಕ್ಷಿಣ್ಯದ ಸೋಂಕು ತಾಕಬಾರದು. ಯಾರದೋ ಮುಲಾಜಿಗೆ, ಮರ್ಜಿಗೆ, ದರ್ದಿಗೆ ಒಳಗಾದರೆ ಅಂದುಕೊಂಡ ಕಾರ್ಯ ಯಶಸ್ವಿಯಾಗಲಾರದು. ಅಲ್ಲವೇ?

ಗಾಂಧಿ ಎಂಬ ‘ಮಹಾತ್ಮ’

Posted in ದಿಲ್ ಹೈ ಹಿಂದೂಸ್ಥಾನಿ by Chakravarty on February 2, 2008

ಸೋಮನಾಥ ದೇವಾಲಯ ಹಿಂದೂಗಳ ಮೇಲಿನ ಅತ್ಯಾಚಾರದ ಪ್ರತೀಕವಾಗಿ ನಿಂತಿತ್ತು. ಅದನ್ನು ಮತ್ತೆ ನಿರ್ಮಣ ಮಡಿ, ದಾಳಿಕೋರರ ಅತ್ಯಾಚಾರದ ನೆನಪುಗಳನ್ನು ಮೆಟ್ಟಿನಿಲ್ಲುವ ಕೆಲಸ ಆಗಬೇಕಿತ್ತು. ವಿಷಯ ಪ್ರಧಾನಿ ನೆಹರೂ ಬಳಿ ಬಂದಾಗ, ಸರ್ಕಾರ ಒಂದು ಪೈಸೆ ಕೊಡಲಾರದು ಎಂದುಬಿಟ್ಟರು. ಸೋಮನಾಥ ಮಂದಿರ ಕಟ್ಟುವುದರಿಂದ ಮುಸಲ್ಮಾನರಿಗೆ ನೋವಾದೀತೆಂಬ ಭಯ ಅವರಿಗಿತ್ತು. ಗೃಹ ಮಂತ್ರಿ ಪಟೇಲರು ಕಂಗಾಲಾದರು, ಗಾಂಧೀಜಿ ಬಳಿ ಓಡಿದರು. ನೆಹರೂಗೆ ಬುದ್ಧಿ ಹೇಳುವಂತೆ ಗೋಗರೆದರು. ಆಗ ‘ಸೋಮನಾಥ ದೇವಾಲಯ ಹಿಂದೂಗಳ ಶ್ರದ್ಧೆಯ ತಾಣ. ಅದರ ನಿರ್ಮಾಣಕ್ಕೆ ಸರ್ಕಾರ ಹಣ ಕೊಡಲಾರದೆಂದರೆ ತಿರಸ್ಕರಿಸೋಣ. ಒಬ್ಬೊಬ್ಬ ಹಿಂದೂವಿನಿಂದಲೂ ಹಣ ಸಂಗ್ರಹಿಸೋಣ. ಅಲ್ಲಿನ ಒಂದೊಂದು ಇಟ್ಟಿಗೆಯೂ ಹಿಂದೂವಿನದೇ ಆಗಿರಲಿ’ ಎಂದವರು ಗಾಂಧೀಜಿ! ಪಟೇಲರ ಶಕ್ತಿ ನೂರ್ಮಡಿಯಾಯಿತು. ಸೋಮನಾಥ ದೇವಾಲಯದ ನಿರ್ಮಾಣಕ್ಕೆ ಮುಂದಡಿಯಿಟ್ಟರು.

ಸ್ವಾತಂತ್ರ್ಯ ಹೋರಾಟದ ಅಂತಿಮ ಹಂತದ ಸಮಯ. ನೌಖಾಲಿಯಲ್ಲಿ ಇದ್ದಕ್ಕಿದ್ದ ಹಾಗೆ ದೊಂಬಿಗಳು ಶುರುವಿಟ್ಟವು. ಮುಸಲ್ಮಾನರು ಹಿಂದೂಗಳ ಮೇಲೆ ಆಘಾತಕಾರಿ ದಾಳಿ ನಡೆಸಿದರು. ಅದಕ್ಕೆ ಪ್ರತಿಯಾಗಿ ಹಿಂದೂಗಳು ತಿರುಗಿಬೀಳುವ ಹೊತ್ತಿಗೆ ಸರಿಯಾಗಿ ಈಗಿನ ಬಾಂಗ್ಲಾ ಪ್ರಾಂತ್ಯದಲ್ಲಿ ಬಹು ಸಂಖ್ಯಾತ ಮುಸಲ್ಮಾನರು ಹಿಂದೂಗಳನ್ನು ಕೊಲ್ಲತೊಡಗಿದರು. ಮೌಂಟ್ ಬ್ಯಾಟನ್ ೧೫ ಸಾವಿರ ಸೈನಿಕರನ್ನು ಅತ್ತ ಕಳಿಸಿಕೊಟ್ಟ. ನೌಖಾಲಿಗೆ ಗಾಂಧೀಜಿ ಒಬ್ಬಂಟಿ ಹೊರಟರು. “ಅಲ್ಲಿನ ಹಿಂದೂಗಳನ್ನು ನೀವು ರಕ್ಷಿಸಿ, ಇಲ್ಲಿನ ಮುಸಲ್ಮಾನರನ್ನು ರಕ್ಷಿಸುವ ಹೊಣೆ ನನಗಿರಲಿ” ಎಂದರು. ರಕ್ತಪಾತ ನಿಲ್ಲುವವರೆಗೆ ಉಪವಾಸ ಕುಳೀತುಕೊಳ್ಳುತ್ತೇನೆ ಎಂದರು. ಸೇಡಿನ ಕಿಚ್ಚಿನಿಂದ ಹಪಹಪಿಸುತ್ತಿದ್ದವರೂ ಗಾಂಧೀಜಿಯ ಮುಂದೆ ಮಂಡಿಯೂರಿ ಕುಳಿತರು. ಮೌಂಟ್ ಬ್ಯಾಟನ್ ಉದ್ಗರಿಸಿದ. “ದಂಗೆ ನಿಯಂತ್ರಿಸಿದ್ದು ಎರಡು ಸೇನೆಗಳು. ಒಂದೆಡೆ ೧೫ಸಾವಿರ ಸೈನಿಕರ ಸಮೂಹ, ಇನ್ನೊಂದೆಡೆ ಸಿಂಗಲ್ ಮ್ಯಾನ್ ಆರ್ಮಿ- ಗಾಂಧೀ!!”

 ಇವು ಅಷ್ಟಾಗಿ ಚರ್ಚೆಗೆ ಬರದ ಗಾಂಧೀಜಿಯವರ ಚಿತ್ರಣಗಳು. ಗಾಂಧೀಜಿಗೆ ಹಿಂದೂ ಧರ್ಮ ಗ್ರಂಥಗಳ ಬಗ್ಗೆ ಅಪಾರ ಗೌರವ. ಗೀತೆಯ ಬಗ್ಗೆ ಅವರು ಸೊಗಸಾಗಿ ಬರೆದಿದ್ದಾರೆ. ರಾಷ್ಟ್ರದ ಸಮಸ್ಯೆಗಳಿಗೆ ಅದರಿಂದಲೇ ಪರಿಹಾರ ಹೇಳುತ್ತಾರೆ. ಇಷ್ಟಾಗಿಯೂ ಹಿಂದೂಗಳು ಅವರನ್ನು ತಮ್ಮ ನಾಯಕರೆಂದು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಅತ್ತ ಮುಸಲ್ಮಾನರು ಗಾಂಧೀಜಿಯನ್ನು ಹಿಂದೂಗಳ ನಾಯಕರೆಂದು ದೂರೀಕರಿಸುತ್ತಾರೆ. ಯಾವ ಹರಿಜನರ ಉದ್ಧಾರಕ್ಕಾಗಿ ತಮ್ಮ ಬದುಕಿನ ಪ್ರತಿಯೊಂದು ಹನಿ ಬೆವರನ್ನೂ ಸುರಿಸಿದರೋ, ಅದೇ ಹರಿಜನರ ಪಾಲಿಗೆ ಗಾಂಧೀಜಿ ಮೆಚ್ಚಿನ ನಾಯಕರಲ್ಲ. ಇತ್ತ ಮೇಲ್ವರ್ಗದ ಜನ ಕೂಡ ಅವರನ್ನು ಆರಾಧಿಸುವುದಿಲ್ಲ. ಸಮಾಜದ ಎಲ್ಲ ವರ್ಗದವರಿಗೂ ಗಾಂಧೀಜಿಯೇ ಅಸ್ಪೃಶ್ಯರಾಗಿಬಿಟ್ಟರು!

ದೇಶ- ಧರ್ಮಗಳ ಚಿಂತನೆ ಮಾಡದೇ, ಅನ್ಯಾಯವನ್ನು ಪ್ರತಿಭಟಿಸದೇ ಎಲ್ಲರಂತೆ ಇದ್ದುಬಿಟ್ಟಿದ್ದರೆ ಅವರೊಬ್ಬ ಶ್ರೀಮಂತ ಬ್ಯಾರಿಸ್ಟರ್ ಆಗಿರುತ್ತಿದ್ದರು. ಹಾಗಾಗಲಿಲ್ಲ. ಶ್ರೀಮಂತಿಕೆಯ ಬದುಕಿಗೊಂದು ಸಲಾಮು ಹೊಡೆದು, ತುಂಡು ಧೋತಿ ಧರಿಸಿ ರಾಷ್ಟ್ರ ಸೇವೆಗೆ ಧುಮುಕಿದರು. ಯಾವ ವರ್ಗವನ್ನು ವಿವೇಕಾನಂದರ ನಂತರ ಯಾರೂ ಪ್ರತಿನಿಧಿಸಿರಲಿಲ್ಲವೋ ಅಂಥಹ ಬಡ- ದರಿದ್ರರ ದನಿಯಾದರು. ವಿದೇಶದಲ್ಲಿರುವಾಗಲೇ ಬಿಳಿಯರು ಕರಿಯರ ಮೇಲೆ ನಡೆಸುತ್ತಿದ್ದ ದಬ್ಬಾಳಿಕೆಯನ್ನು ವಿರೋಧಿಸಿದರು. “ಹೊಡೆದರೆ ಹೊಡೆಸಿಕೊಳ್ಳಿ. ಬಡಿದರೆ ಬಡಿಸಿಕೊಳ್ಳಿ. ಬಡಿಯುವವರು ಎಷ್ಟೂಂತ ಬಡಿದಾರು? ” ಎಂಬ ಸಿದ್ಧಾಂತವನ್ನು ಹೋರಾಟಗಾರರ ಕೈಗಿತ್ತರು. ದಬ್ಬಾಳಿಕೆಗೆ ಒಳಗಾದವರೂ ಮೊದಲು ಇವರನ್ನು ವಿರೋಧಿಸಿದರು. ಆಮೇಲೆ ಅಪಹಾಸ್ಯಗೈದರು. ಇಷ್ಟಾದರೂ ಆಸಾಮಿ ಜಗ್ಗದಿದ್ದಾಗ ಅವರನ್ನೇ ಅನುಸರಿಸಿದರು! ತಮ್ಮ ನಾಯಕನಾಗಿ ಸ್ವೀಕರಿಸಿದರು. ದೂರ ದೇಶದಿಂಡ ಬಂದವನೊಬ್ಬ ನೊಂದವರ ಕಣ್ಣೀರೊರೆಸುವುದು ತಮಾಷೆಯ ಕೆಲಸವಲ್ಲ. ಇಡೀ ಬ್ರಿಟಿಷ್ ಸಮುದಾಯ ಹೋರಾಟಾದ ಈ ಹೊಸ ಅಸ್ತ್ರಕ್ಕೆ ಬೆದರಿತು. ಇಂಗ್ಲೆಂಡಿನ ಪತ್ರಿಕೆಗಳೂ ಅವರನ್ನು ಹಾಡಿ ಹೊಗಳಿದವು. ನೋಡನೋಡುತ್ತಿದ್ದಂತೆಯೇ ಗಾಂಧೀಜಿ ಕಣ್ಣೂಕೋರೈಸುವಷ್ಟು ಎತ್ತರಕ್ಕೆ ಬೆಳೆದುಬಿಟ್ಟಿದ್ದರು.

ಇದೇ ಜಾಗತಿಕ ಖ್ಯಾತಿಯೊಂದಿಗೆ ಅವರು ಭಾರತಕ್ಕೆ ಬಂದಾಗ ಇಲ್ಲಿನ ಎಲ್ಲ ವರ್ಗಗಳೂ ಆಸಕ್ತಿಯಿಂದ ಕಾದಿದ್ದವು. ಗಾಂಧೀಜಿ ಅದ್ಭುತ ವಾಗ್ಮಿಯೇನಲ್ಲ. ಆದರೂ ಅವರು ಮಾತಾಡಲಿಕ್ಕೆ ನಿಂತರೆ ಜನಸ್ತೋಮವಿಡೀ ನಿಶ್ಶಬ್ದವಾಗುತ್ತಿತ್ತು. ಗಾಂಧೀಜಿಯವರ ಒಂದೊಂದು ಮಾತನ್ನೂ ವ್ಯರ್ಥವಾಗಲು ಬಿಡದೆ ಕೇಳಿಸಿಕೊಳ್ಳುವ ಶ್ರದ್ಧೆಯಿರುತ್ತಿತ್ತು. ಅದು, ಗಾಂಧೀಜಿ ವ್ಯಕ್ತಿತ್ವದ ತಾಖತ್ತು.

ಕ್ರಾಂತಿಕಾರಿಗಳ ಹೋರಾಟ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿದ್ದಾಗ, ಗಾಂಧೀಜಿ ರಾಷ್ಟ್ರೀಯ ಚಳುವಳಿಯನ್ನು ಅತಿ ಕೆಳ ವ್ಯಕ್ತಿಯವರೆಗೂ ಕೊಂಡೊಯ್ದಿದ್ದರು. ಅಸಹಕಾರ ಚಳುವಳಿಗೆಂದು ಗಾಂಧೀಜಿ ನೀದಿದ ಒಂದೇ ಕರೆಗೆ ದೇಶದ ಎಲ್ಲ ವರ್ಗದ ಜನ ಸೆಟೆದು ನಿಂತಿದ್ದರು. ತಿಲಕರು ಸ್ವರಾಜ್- ಸ್ವದೇಶ್ ಪದಗಳನ್ನು ಹುಟ್ಟುಹಾಕಿದರು. ನಿಜ. ಗಾಂಧೀಜಿ ಅವುಗಳ ಕಲ್ಪನೆಯನ್ನು ಸಾಕಾರಗೊಳಿಸುವ ಮಾರ್ಗವನ್ನು ಜನರ ಮುಂದಿಟ್ಟರು.

ಗಾಂಧೀಜಿ ಮತ್ತು ಸುಭಾಷರ ಬಾಂಧವ್ಯದ ಬಗ್ಗೆಯೂ ಒಂದಷ್ಟು ವಿಷಯಗಳನ್ನು ಬೇಕೆಂದೇ ಮುಚ್ಚಿಡಲಾಗುತ್ತದೆ. ಅವರಿಬ್ಬರ ಸಂಬಂಧ ತಂದೆ- ಮಗನಂತಿತ್ತು ಅನ್ನೋದು ಬಹಳ ಜನರಿಗೆ ಗೊತ್ತೇ ಇಲ್ಲ. ಪತ್ರ ಬರೆವಾಗಲೆಲ್ಲ ಗಾಂಧೀಜಿ “ನಮ್ಮಲ್ಲಿನ ವೈಚಾರಿಕ ಭೇದ ನಮ್ಮ ಸಂಬಂಧಕ್ಕೆ ಧಕ್ಕೆ ತರಬಾರದು” ಎನ್ನುತ್ತಿದ್ದರು. ಒಮ್ಮೆಯಂತೂ ಪತ್ರದಲ್ಲಿ “ನನ್ನ ನಿನ್ನ ವಿಚಾರಗಳು ವಿಮುಖವಾದವು. ನಾನು ಮುದುಕ, ನೀನು ತರುಣ. ನಿನ್ನ ಚಿಂತನೆ- ವಾದಗಳೇ ಸರಿಯಾಗಿರಲಿ ಎಂದು ಆಶಿಸುತ್ತೆನೆ. ನಿನ್ನ ವಾದದಿಂದಲೇ ದೇಶಕ್ಕೆ ಲಾಭ ಎನ್ನುವುದಾದರೆ ನಾನು ಮಾಜಿ ಸತ್ಯಾಗ್ರಹಿಯಾಗಿ ನಿಷ್ಠೆಯಿಂದ ನಿನ್ನನ್ನು ಅನುಸರಿಸುತ್ತೇನೆ” ಎಂದಿದ್ದರು. ನಮ್ಮ ಸುಭಾಷ್ ದೇಶಭಕ್ತರ ಗುಂಪಿನಲ್ಲಿ ಮಿಂಚುವ ವೀರ ಎಂದು ಹೆಮ್ಮೆಪಡುತ್ತಿದ್ದರು. ಇನ್ನೊಂದೆಡೆ ಸುಭಾಷರು ಗಾಂಧೀಜಿ ರಾಷ್ಟ್ರಕ್ಕೇ ತಂದೆಯಿದ್ದಂತೆ, ಅವರೇ ‘ರಾಷ್ಟ್ರ ಪಿತ’ ಎಂದು ಹೇಳಿದ್ದರು!

ನಮ್ಮ ಕ್ರಾಂತಿಕಾರಿಗಳೆಲ್ಲ ಫ್ರಾನ್ಸು, ಅಮೆರಿಕ, ಜರ್ಮನಿ, ಇಟಲಿಗಳಿಂದ ಸ್ಫೂರ್ತಿಪಡೆದವರು, ಅಲ್ಲಿನ ಹೋರಾಟ ಕ್ರಮವನ್ನು ಅನುಸರಿಸಿದವರು. ಆದರೆ ಗಾಂಧೀಜಿ ಮಾತ್ರ ಈ ದೇಶದ ಸಂಸ್ಕೃತಿಯ ಆಳದಿಂದೆದ್ದು ಬಂದ ಸತ್ಯ- ಅಹಿಂಸೆಗಳೊಂದಿಗೆ ಹೋರಾಟ ಸಂಘಟಿಸಿದವರು. ಅದನ್ನು ಜಗತ್ತಿಗೆ ತೋರಿಸಿಕೊಟ್ಟವರು!

ಅವರ ಆತ್ಮ ಕಥೆಯಲ್ಲಿ ಗಾಂಧೀಜಿ ಬರೆದುಕೊಂಡಿದ್ದಾರೆ, “ತಂದೆಸಾವಿನ ಜೊತೆ ಸೆಣಸುತ್ತಿದ್ದಾಗ, ನಾನು ಅವರ ಕಾಲು ಒತ್ತುವುದು ಬಿಟ್ಟು ಹೆಂಡತಿಯೊಡನೆ ಸರಸದಲ್ಲಿದ್ದೆ. ತಂದೆ ಸತ್ತ ವಿಷಯ ತಿಳಿದಿದ್ದೂ ಆಗಲೇ! ನನಗೆ ಅಂದು ನನ್ನ ಮೇಲೇ ಅಸಹ್ಯವಾಗಿತ್ತು” ಅಂತ. ಆ ಪರಿ ಎತ್ತರಕ್ಕೇರಿರುವ ಮನುಷ್ಯ ಈ ಪರಿಯ ಸತ್ಯಗಳನ್ನು ಹೇಳಬಹುದು ಅನ್ನಿಸುತ್ತಾ? ಯೋಚಿಸಿ. ಅದು ಗಾಂಧೀಜಿಗೆ ಮಾತ್ರ ಸಾಧ್ಯ. ಅದಕ್ಕೇ, ಅವರು ‘ಮಹಾತ್ಮ’!